ಅಕ್ಕಿಯಲ್ಲಿ ಇಲ್ಲ ಆರೋಗ್ಯ: ಹೆಚ್ಚು ಅನ್ನ ತಿನ್ಬೇಡಿ, ನಿಮ್ಮ ಹೃದಯ ಬಡಿತ ನಿಲ್ಲಬಹುದು ಎಚ್ಚರ!
ಭಾರತದ ಪ್ರಧಾನ ಆಹಾರ ಅನ್ನ ಮತ್ತು ಚಪಾತಿ. ಪ್ರತಿಯೊಬ್ಬ ಭಾರತೀಯರು ತಮ್ಮ ಆಹಾರದಲ್ಲಿ ಪ್ರತಿದಿನ ಅನ್ನ ಮತ್ತು ಚಪಾತಿಯನ್ನು ನಿಯಮಿತವಾಗಿ ಸೇರಿಸುತ್ತಾರೆ.
ಒಂದು ವೇಳೆ ಚಪಾತಿ ತಿಂದಿಲ್ಲವಾದರೂ ಒಂದು ಹೊತ್ತಿನ ಅನ್ನವನ್ನಾದರೂ ತಿಂದೇ ತಿನ್ನುತ್ತಾರೆ. ಬಿಳಿ ಅಕ್ಕಿಯನ್ನು ಕೆಟ್ಟ ಆಹಾರವೆಂದು ಪರಿಗಣಿಸದಿದ್ದರೂ, ಹೆಚ್ಚು ಸಂಸ್ಕರಿಸಿದ ಬಿಳಿ ಅಕ್ಕಿಯನ್ನು ಸೇವಿಸುವುದರಿಂದ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಇದು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಒಂದು ಅಧ್ಯಯನದಲ್ಲಿ, ಬಿಳಿ ಅಕ್ಕಿಯ ಹೆಚ್ಚಿನ ಸೇವನೆಯು ಹೃದಯಾಘಾತದಂತಹ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಬಿಳಿ ಅಕ್ಕಿಯಲ್ಲಿರುವ ಆರ್ಸೆನಿಕ್ ಇದಕ್ಕೆ ಕಾರಣ ಎನ್ನಲಾಗುತ್ತದೆ.
ಅಕ್ಕಿಯು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ. ಇದು ಕ್ಯಾಲೋರಿಗಳು ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಆದರೆ ಇದು ಆರ್ಸೆನಿಕ್-ಭರಿತ ಆಹಾರವಾಗಿದೆ. ಪ್ರತಿ ವರ್ಷ ವಿಶ್ವದಾದ್ಯಂತ 50,000 ಅಕಾಲಿಕ ಮರಣಗಳಿಗೆ ಇದು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.
ಅಕ್ಕಿಯಲ್ಲಿ ಆರ್ಸೆನಿಕ್
ಆರ್ಸೆನಿಕ್ ಮಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ಆರ್ಸೆನಿಕ್ ಆಧಾರಿತ ಸಸ್ಯನಾಶಕಗಳನ್ನು ಬಳಸಿದ ಪ್ರದೇಶಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಹೀಗಿರುವಾಗ ಜಲಾವೃತ ಪ್ರದೇಶಗಳಲ್ಲಿ ಭತ್ತ ಬೆಳೆದಾಗ ಮಣ್ಣಿನಲ್ಲಿ ನೀರಿನಲ್ಲಿ ಆರ್ಸೆನಿಕ್ ಬೆರೆತು ನೀರು ಭತ್ತದ ಬೆಳೆಗಳು ಹೀರಿಕೊಂಡು ಆ ಭತ್ತದ ಬೆಳೆಯಿಂದ ಸಿಗುವ ಅಕ್ಕಿಯಲ್ಲಿ ಹೆಚ್ಚು ಆರ್ಸೆನಿಕ್ ಇರುತ್ತದೆ.

ಬಿಳಿ ಅಕ್ಕಿ ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಸಕ್ಕರೆಯನ್ನು ಸಾಮಾನ್ಯವಾಗಿ ಹೃದಯ ಮತ್ತು ದೇಹದ ಇತರ ಅಂಗಗಳಿಗೆ ಶತ್ರು ಎಂದು ಪರಿಗಣಿಸಲಾಗಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಜನರು ತಿನ್ನುತ್ತಿರುವ ಅನ್ನವೂ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಹೃದಯ ತಜ್ಞರು. ಆದ್ದರಿಂದ ನೀವು ಹೆಚ್ಚು ಅನ್ನವನ್ನು ಸೇವಿಸುತ್ತಿದ್ದರೆ, ನಿಮ್ಮ ಹೃದಯದ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಸಂಸ್ಕರಿಸಿದ ಧಾನ್ಯಗಳ ಹೆಚ್ಚಿನ ಸೇವನೆಯು ಅಕಾಲಿಕ ಪರಿಧಮನಿಯ ಕಾಯಿಲೆಗೆ (ಪಿಸಿಎಡಿ) ಸಂಬಂಧಿಸಿದೆ. ಪ್ರಪಂಚದಾದ್ಯಂತ ಹೆಚ್ಚಿನ ಮರಣಕ್ಕೆ ಇದು ಪ್ರಮುಖ ಕಾರಣವಾಗಿದೆ. ಆದ್ದರಿಂದ ಹೆಚ್ಚು ಅಕ್ಕಿ ಮತ್ತು ಸಕ್ಕರೆ ತಿನ್ನುವುದನ್ನು ತಪ್ಪಿಸಿ.
ನೀವು ಬಿಳಿ ಅಕ್ಕಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕೇ?
ಧಾನ್ಯಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಆದರೆ ಆ ಧಾನ್ಯಗಳನ್ನು ಹಿಟ್ಟಾಗಿ ಸಂಸ್ಕರಿಸಿದಾಗ, ಅಗತ್ಯವಾದ ಪೋಷಕಾಂಶಗಳು ನಾಶವಾಗುತ್ತವೆ. ಸಂಸ್ಕರಿಸಿದ ಧಾನ್ಯಗಳಲ್ಲಿ ಬಿಳಿ ಅಕ್ಕಿ ಕೂಡ ಒಂದು. ಈ ಅಕ್ಕಿಯಲ್ಲಿ ಫೈಬರ್ ಇಲ್ಲದಿರುವುದರಿಂದ, ಇದು ದೇಹದಿಂದ ಸುಲಭವಾಗಿ ವಿಭಜನೆಯಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.
ರಕ್ತದಲ್ಲಿ ಸಕ್ಕರೆ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾದಾಗ ಅದು ರಕ್ತನಾಳಗಳು ಮತ್ತು ನರಗಳನ್ನು ಹಾನಿಗೊಳಿಸುತ್ತದೆ. ಇದು ಅಪಧಮನಿಯಲ್ಲಿ ಸಮಸ್ಯೆಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ಅದಕ್ಕಾಗಿ ಅನ್ನವನ್ನು ಸಂಪೂರ್ಣವಾಗಿ ಬಿಡಬೇಡಿ. ಬದಲಿಗೆ ಆರ್ಸೆನಿಕ್ ಕಡಿಮೆ ಇರುವ ಬಾಸುಮತಿ ಅಕ್ಕಿಯಂತಹ ಆರೋಗ್ಯಕರ ಅನ್ನವನ್ನು ಬೇಯಿಸಿ ತಿನ್ನಿ. ಇದರಿಂದ ಹೃದ್ರೋಗ, ಮಧುಮೇಹ ಇತ್ಯಾದಿಗಳ ಅಪಾಯ ಕಡಿಮೆಯಾಗಿ ಒಟ್ಟಾರೆ ಆರೋಗ್ಯ ಉತ್ತಮವಾಗಿರುತ್ತದೆ.

ದಿನಕ್ಕೆ ಎಷ್ಟು ಅನ್ನ ತಿನ್ನಬಹುದು?
ಆರೋಗ್ಯವಾಗಿರಲು ದಿನಕ್ಕೆ 1/2 ಕಪ್ನಿಂದ 1 ಕಪ್ ಬಿಳಿ ಅಕ್ಕಿಯನ್ನು ಸೇವಿಸಬಹುದು. ಆ ಅನ್ನಕ್ಕೆ ತರಕಾರಿಯನ್ನೂ ಸೇರಿಸಬೇಕು. ಹೀಗೆ ಸೇವಿಸಿದಾಗ ದೇಹವು ದೀರ್ಘಕಾಲ ಆರೋಗ್ಯವಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications