ಈ ಯುಗಾದಿಗೆ ನನ್ನ ಸಾವಿರದ ಒಂದು ಕನಸು

ಈ ವರ್ಷವಾದರೂ ನಾನು ಬದಲಾಗಬೇಕು. ಗುರುತ್ವಾಕರ್ಷಣೆ ಕಳೆದುಕೊಂಡ ಉಪಗ್ರಹದಂತೆ ಅಂಕೆತಪ್ಪಿ ಸುತ್ತುವ ಮನಸ್ಥಿತಿಗೆ ಲಗಾಮು ಹಾಕಬೇಕು. ಒಂದೆತ್ತರ ಹಾರಿದ ಚಿಟ್ಟೆಯೊಂದು ಆಕಾಶವೇ ತನ್ನದೆಂಬಂತೆ ವರ್ತಿಸುವ ಆಹಂ ಕಿತ್ತೆಸಯಬೇಕು. ಮುಖವಾಡ ಕಳಚಿಕೊಳ್ಳಬೇಕು.
ನೆಟ್ಟುಲೋಕದಲ್ಲಿ ದಿಕ್ಕೆಟ್ಟುಕುಳಿತುಕೊಳ್ಳದೇ ಕನಿಷ್ಠ ಎಂಟುಗಂಟೆಯಾದರೂ ಅನ್ನಕೊಡುವ ಕಂಪನಿಗಾಗಿ ಹಠಮಾರಿಯಾಗಿ ದುಡಿಯಬೇಕು. ಪ್ರತಿದಿನ ಹೊಸತು ಹೊಸತು ಕಲಿಯಬೇಕು. ಬದುಕಿಗಿಷ್ಟು ಸಾಲದು, ಇನ್ನಷ್ಟು ಬೇಕು ಎನ್ನುವ ಹಸಿವು ಹೆಚ್ಚಿಸಿಕೊಳ್ಳಬೇಕು. ಮುಖ್ಯವಾಗಿ ಮೌನದ ಕಪ್ಪೆಚಿಪ್ಪಿನಿಂದ ಹೊರಬರಬೇಕು.
ಈ ವರ್ಷಕ್ಕೆ ಈ ಮೊಬೈಲ್ ಸಾಕು. ತ್ರಿಜಿ, ಆಂಡ್ರಾಯ್ಡ್ ಬೇಡ. ಆದಷ್ಟು ಬೇಗ ಒಂದು ಲ್ಯಾಪಿ, ಡಿಜಿಟಲ್ ಕ್ಯಾಮರಾ ಖರೀದಿಸ್ಬೇಕು. ಈ ವರ್ಷ ಬೈಕು ಬೇಡ. ಮರೆತುಬಿಟ್ಟಿದ್ದಾನೆ ಪಾಪಿ, ಎನ್ನುತ್ತಿರುವ ಸ್ನೇಹಿತ, ಸ್ನೇಹಿತೆಯರಿಗೆ ಕರೆಮಾಡಿ ಹ್ಯಾಪಿಯಾಗಿ ಈ ಯುಗಾದಿಯಿಂದ ಮಾತನಾಡಬೇಕು.
ಎರಡು ತಿಂಗಳಿಗೊಮ್ಮೆಯಾದರೂ ಊರಿಗೆ ಹೋಗಬೇಕು. ಅಪ್ಪಅಮ್ಮನ ಜೊತೆ ಹೆಚ್ಚು ಸಮಯ ಕಳೆಯಬೇಕು. ಅಲ್ಲಿ ತೆಂಗು ಹತ್ತಿ ಒಂದೇ ಸರ್ತಿ ನಾಲ್ಕು ಎಳೆನೀರಾದರೂ ಕುಡಿಯಬೇಕು. ಪೋಲಿ ಸ್ನೇಹಿತರೊಂದಿಗೆ ಕಾಡುಮೇಡು ಸುತ್ತಬೇಕು. ಹಳೆಯ ನೆನಪುಗಳನ್ನು ಕೆದಕಬೇಕು.
ಜಂಜಡಗಳಿಂದ ಮುಕ್ತವಾದ ಕನಸುಕಂಗಳ ಆ ದಿನಗಳಿಗೆ ಮತ್ತೆ ತೆರಳಬೇಕು. ಹಸಿದ ಹುಲಿಯಂತೆ ಸಿಕ್ಕಸಿಕ್ಕದೆಲ್ಲವನ್ನೂ ಓದುವ ಆರಂಭದ ದಿನಗಳಿಗೆ ತೆರೆದುಕೊಳ್ಳಬೇಕು. ಓದಿಮರೆತ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಬೆಟ್ಟದ ಜೀವ, ದಾಟು, ದ್ವೀಪ, ಚಿದಂಬರ ರಹಸ್ಯ, ಕರ್ವಾಲೊ, ಅಲೆಮಾರಿಯ ಅಂಡಮಾನ್ ಮತ್ತೆ ಓದಬೇಕು. ಚೇತನ್ ಭಗತ್ ಬರೆದದ್ದು ಓದಲು ಬಾಕಿಯಿದೆಯೇ ಹುಡುಕಬೇಕು.
ಈ ಎಲ್ಲಾ ನೆಪಗಳಾಚೆ ಸದ್ದಿಲ್ಲದೇ ಹೃದಯ ಪ್ರವೇಶಿಸಿ ಹೃದಯ ಕವಾಟ ಹಿಸುಕುವ ಅವಳ ನೆನಪು ಬಾರದಂತೆ ನಾನು ಬ್ಯುಸಿಯಾಗಬೇಕು ಎನ್ನುವುದೇ ನನ್ನ ಸಾವಿರದ ಒಂದನೆಯ ಕನಸು! ನನಗೆ ಆಲ್ ದಿ ಬೆಸ್ಟ್ ಹೇಳಿರಿ.












Click it and Unblock the Notifications