ದೇಶದ ಜನರಿಗೆ ಒಳ್ಳೆಯದಾಗಲಿ : ರಾಷ್ಟ್ರಪತಿ
ನವದೆಹಲಿ, ಆ. 24 : ಗೋಪಿಲೋಲ ಶ್ರೀಕೃಷ್ಣನ ಜನ್ಮಾಷ್ಠಮಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಈ ಮಧ್ಯೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗೋಕುಲಾಷ್ಟಮಿ ನಿಮಿತ್ತ ದೇಶದ ಎಲ್ಲ ಜನರಿಗೆ ಶ್ರೀಕೃಷ್ಣ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಶ್ರೀಕೃಷ್ಣ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶ್ರೀಕೃಷ್ಣನು ಸರ್ವಧರ್ಮಗಳನ್ನು ಏಕತೆಯಿಂದ ಬಾಳುವ ಸಂದೇಶ ನೀಡಿದ್ದಾನೆ. ಶ್ರೀಕೃಷ್ಣ ಅನುಯಾಯಿಗಳಾದ ನಾವು ಆತನ ಸಂದೇಶವನ್ನು ಪಾಲಿಸಬೇಕಿದೆ. ಆಧುನಿಕ ಜೀವನದಲ್ಲಿಯೂ ಕೂಡಾ ಶ್ರೀಕೃಷ್ಣ ಆದರ್ಶ ವ್ಯಕ್ತಿಯಾಗಿದ್ದಾನೆ. ಶಾಂತಿ ಸಾಮರಸ್ಯದಿಂದ ಬಾಳಲು ಉತ್ತಮ ನೀತಿವನ್ನು ಸಮಾಜಕ್ಕೆ ನೀಡಿದ್ದಾನೆ ಎಂದು ಉಭಯ ನಾಯಕರು ನೀಡಿರುವ ತಮ್ಮ ಸಂದೇಶದಲ್ಲಿ ಕೃಷ್ಣನನ್ನು ಕೊಂಡಾಡಿದ್ದಾರೆ.
ಶಿಷ್ಟ ರಕ್ಷಕನಾಗಿ ದುಷ್ಟ ಸಂಹಾರಕ್ಕಾಗಿ ಕಾರಾಗೃಹದಲ್ಲಿ ಕೃಷ್ಣ ಜನಿಸಿದ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ಮುಂಜಾವಿನ ಶುಭದಿನ ಗಳಿಗೆಯಲ್ಲಿ ಮನೆಮನೆಗಳಲ್ಲಿ ಕೃಷ್ಣನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಗುಡಿ ಗುಂಡಾರಗಳಲ್ಲಿ ತೊಟ್ಟಿಲಿನಲ್ಲಿ ಕೃಷ್ಣನನ್ನು ಮಲಗಿಸಿ ತೂಗಿರೆ ಕೃಷ್ಣನ ತೂಗಿರೆ ರಂಗನ ಎಂದು ಭಕ್ತಾಧಿಗಳು ಹರಿಸಿ ಹಾಡಿದರು.
ಬೆಳೆದ ಕೃಷ್ಣನಿಗಿಂತ ಬೆಣ್ಣೆಕದಿಯುವ, ಬಾಲಲೀಲೆಗಳನ್ನು ತೋರಿಸುವ, ರಾಕ್ಷಸರನ್ನು ಸಂಹರಿಸುವ, ರಾಧೆಯರ ಸೀರೆ ಕದ್ದು ಅವರನ್ನು ಕಾಡುವ ಬಾಲಕೃಷ್ಣನೇ ಎಲ್ಲರಿಗೂ ಪ್ರಿಯ, ಆತ್ಮೀಯ. ಆದ್ದರಿಂದ ಇಂದು ಕಣ್ಣಿಗೆ ಕಾಣುವ ಪ್ರತಿ ಪುಟಾಣಿಗಳೆಲ್ಲ ಪುಟ್ಟ ಕೃಷ್ಣ ರಾಧೆಯರೇ. ಪುಟಾಣಿಗಳಿಗೆ ರಾಧೆ ಕೃಷ್ಣರ ವೇಷ ತೊಡಿಸಿ ಆನಂದಪಡುವ ದೃಶ್ಯಗಳು ದೇಶದೆಲ್ಲಡೆ ಕಂಡು ಬಂದವು.
(ದಟ್ಸ್ ಕನ್ನಡ ವಾರ್ತೆ)