ನಾಡಿನಾದ್ಯಂತ ಸಂಭ್ರಮದ ಕೃಷ್ಣಜನ್ಮಾಷ್ಟಮಿ ಆಚರಣೆ
ಬೆಂಗಳೂರು, ಆ. 23 : ದೈವಾಂಶ ಸಂಭೂತನಾದರೂ ಸಾಮಾನ್ಯ ಮಾನವನಂತೆ ಜೀವಿಸಿ ಸರಳ ಜೀವನದ ಸಂದೇಶ ಸಾರಿದ ಕೃಷ್ಣ ಪರಮಾತ್ಮ ಹುಟ್ಟಿದಿನ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಲುಲಾಷ್ಟಮಿಯನ್ನು ರಾಜ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಶಿಷ್ಟ ರಕ್ಷಕನಾಗಿ ದುಷ್ಟ ಸಂಹಾರಕ್ಕಾಗಿ ಕಾರಾಗೃಹದಲ್ಲಿ ಕೃಷ್ಣ ಜನಿಸಿದ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ಮುಂಜಾವಿನ ಶುಭದಿನ ಗಳಿಗೆಯಲ್ಲಿ ಮನೆಮನೆಗಳಲ್ಲಿ ಕೃಷ್ಣನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಗುಡಿ ಗುಂಡಾರಗಳಲ್ಲಿ ತೊಟ್ಟಿಲಿನಲ್ಲಿ ಕೃಷ್ಣನನ್ನು ಮಲಗಿಸಿ ತೂಗಿರೆ ಕೃಷ್ಣನ ತೂಗಿರೆ ರಂಗನ ಎಂದು ಭಕ್ತ ಭಕ್ತೆಯರು ಲಾಲಿ ಹಾಡುತ್ತಾರೆ.
ಬೆಳೆದ ಕೃಷ್ಣನಿಗಿಂತ ಬೆಣ್ಣೆಕದಿಯುವ, ಬಾಲಲೀಲೆಗಳನ್ನು ತೋರಿಸುವ, ರಾಕ್ಷಸರನ್ನು ಸಂಹರಿಸುವ, ರಾಧೆಯರ ಸೀರೆ ಕದ್ದು ಅವರನ್ನು ಕಾಡುವ ಬಾಲಕೃಷ್ಣನೇ ಎಲ್ಲರಿಗೂ ಪ್ರಿಯ, ಆತ್ಮೀಯ. ಆದ್ದರಿಂದ ಇಂದು ಕಣ್ಣಿಗೆ ಕಾಣುವ ಪ್ರತಿ ಪುಟಾಣಿಗಳೆಲ್ಲ ಪುಟ್ಟ ಕೃಷ್ಣ ರಾಧೆಯರೇ. ಪುಟಾಣಿಗಳಿಗೆ ರಾಧೆ ಕೃಷ್ಣರ ವೇಷ ತೊಡಿಸಿ ಆನಂದಪಡುತ್ತಾರೆ.
ಮಧ್ವಾಚಾರ್ಯರು ಸ್ಥಾಪಿಸಿದ ಶಾಮಲ ವರ್ಣದ ಕಡಗೋಲು ಹಿಡಿದ ಉಡುಪಿ ಕೃಷ್ಣನಿಗೆ ಅಷ್ಟಮಿಯಂದು ವಿಶೇಷವಾಗಿ ಪೂಜೆ ಅರ್ಪಿಸಲಾಗುತ್ತಿದೆ. ಬೆಂಗಳೂರಿನ ಇಸ್ಕಾನ್ ನಲ್ಲಿ ಆಗಸ್ಟ್ 23ರ ಸಂಜೆ 5ರಿಂದ 24ರ ಮಧ್ಯರಾತ್ರಿಯವರೆಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಈ ಪ್ರಯುಕ್ತ ಪೂಜೆ, ಭಜನೆ, ಪ್ರಸಾದ ಸಂತರ್ಪಣೆಯ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕಳ್ಳ ಕೃಷ್ಣನಿಗೆ ಬೆಣ್ಣೆ ಅತ್ಯಂತ ಪ್ರೀತಿಯ ತಿನಿಸಾಗಿತ್ತೆಂದು ಎಲ್ಲರಿಗೂ ಗೊತ್ತೇ ಇದೆ. ಕೈಗೆ ಸಿಗಬಾರದೆಂದು ನೇತುಹಾಕಿದ್ದ ಬೆಣ್ಣೆಯನ್ನು ಕೃಷ್ಣ ಸ್ನೇಹಿತರ ಸಹಾಯದಿಂದ ಕದಿಯುತ್ತಿದ್ದ. ಆದ್ದರಿಂದ ಕೃಷ್ಣನಿಗೆ ಪ್ರೀತಿಪಾತ್ರವಾದ ಬೆಣ್ಣೆ ಕಾಯಿಸಿದ ತುಪ್ಪದಿಂದಲೇ ಮಾಡಿದ ಖಾದ್ಯಗಳನ್ನು ಇಂದು ಅರ್ಪಿಸಲಾಗುತ್ತದೆ. ಇಂದು ಮಧ್ಯರಾತ್ರಿ ಆಗುವರೆಗೂ ಉಪವಾಸ ಕೈಗೊಂಡು ತುಪ್ಪದಿಂದ ತಯಾರಿಸಿದ ಅರಳಿನ ಉಂಡೆ, ಕಡಲೆಕಾಳು ಪುಟಾಣಿ ಉಂಡೆ, ಕೋಡುಬಳೆ, ಚಕ್ಕುಲಿ, ಕೃಷ್ಣನಿಗೆ ಅತಿ ಪ್ರಿಯವಾದ ಗೊಜ್ಜವಲಕ್ಕಿಗಳನ್ನು ತಯಾರಿಸಿ ಕೃಷ್ಣನಿಗೆ ನೈವೇದ್ಯ ತೋರಿಸಿದ ನಂತರವೇ ಸಂತರ್ಪಣೆ ಮಾಡಲಾಗುತ್ತದೆ.