ಗುರ್ ಗಾಂವ್ ಕನ್ನಡಿಗರ ವಿನೂತನ ವರ್ಷಾಚರಣೆ
ಈ ವರ್ಷದ ಮೊದಲನೇ ದಿನವಾದ ಬೆಳಗ್ಗೆ 11 ಗಂಟೆಗೆ, ಗುರ್ ಗಾಂವ್ ನ ಸೆಕ್ಟರ್-39ನ, ಜಾರ್ಸಾ ಹಳ್ಳಿಯಲ್ಲಿರುವ ನಿರ್ಗತಿಕ, ಬಡ ಮಕ್ಕಳ ಶಾಲೆಗೆ ತೆರಳಿ ಮಕ್ಕಳಿಗೆ ನೂತನ ವರ್ಷದ ಶುಭಾಶಯಗಳನ್ನು ಹೇಳಿ, ಅವರಿಗೆ ಸಿಹಿ ಹಂಚಿದೆವು. ಬಸ್ತಿ(ಸ್ಲಂ ಪ್ರದೇಶ)ಗಳಲ್ಲಿ ವಾಸ ಮಾಡುವ ಈ ಮಕ್ಕಳಿಗೆ ಹೊಸವರ್ಷವೆಂದರೆ ಏನು ಎಂಬ ಅರಿವು ಇರುವುದಿಲ್ಲ, ನಮ್ಮ ಆಗಮನ ಮತ್ತು ಸಿಹಿತಿಂಡಿ ತಿನ್ನುವುದೆ ಇವರಿಗೆ ಹೊಸವರ್ಷದ ಹರ್ಷ.
ಈ ಮಕ್ಕಳ ವಿಧ್ಯಾಭ್ಯಾಸಕ್ಕೆ ಬೇಕಾಗುವ ಪೆನ್, ಪೆನ್ಸಿಲ್, ಇರೇಸರ್, ಶಾರ್ಪನರ್, ಕಲರ್ ಪೆನ್ಸಿಲ್ಗಳು, ಸ್ಕೆಚ್ ಪೆನ್ಗಳು, ಜಾಮಿಟ್ರಿ ಬಾಕ್ಸ್ಗಳು ಮತ್ತು ನೋಟ್ ಪುಸ್ತಕಗಳನ್ನು ಪೂರ್ತಿ ವರ್ಷಕ್ಕಾಗುವಷ್ಟು ಸಾಮಗ್ರಿಗಳನ್ನು ಹಂಚಿದೆವು. ಅವರ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿ, ಅವರಿಗೆ ಕೆಲವು ಹಿತನುಡಿಗಳನ್ನು ಹೇಳಿ, ಅವರ ಆತ್ಮಸ್ಥೈರ್ಯ ಹೆಚ್ಚಿಸುವ ವಿಷಯಗಳನ್ನು ಹೇಳಿದೆವು. ಇದರಿಂದ ಬಡ ಮಕ್ಕಳು ಬಹಳಷ್ಟು ಸಂತೋಷಗೊಂಡರು.
AID(Association of India"s Development)GURGAON, ಈ ಸ್ವಯಂಸೇವ ಸಂಸ್ಥೆಯ ವತಿಯಿಂದ ನೆಡೆಯುತ್ತಿರುವ, ಈ ನರ್ಸರಿಶಾಲೆಗೆ ಸರ್ಕಾರದಿಂದ ಯಾವುದೆ ಅನುದಾನವಿಲ್ಲ, ಆದ್ದರಿಂದ ಪ್ರತಿವರ್ಷ ನಾವುಗಳು ಇಲ್ಲಿಗೆ ಬೇಟಿ ನೀಡಿ ಮಕ್ಕಳೊಂದಿಗೆ ಬೆರೆತು ನವವರ್ಷ ಆಚರಿಸುತ್ತೇವೆ ಎಂದು ಗುರ್ ಗಾವ್ ಕನ್ನಡ ಸಂಘದ ಸದಸ್ಯ ಸತೀಶ ಬಸವಾರಾಧ್ಯ ಹೇಳಿದರು.
ಹೀರೊಹೊಂಡಾ ಮತ್ತು ಹೊಂಡಾ ಸ್ಕೂಟರ್ಸ್ ಸಂಸ್ಥೆಯ ಕನ್ನಡಿಗರಾದ ನಾಗಭೂಷಣ್, ಕೃಷ್ಣಪ್ಪ, ಚಂದ್ರಶೇಖರ್, ಗಜಾನನ ಶರ್ಮ, ಮಂಜುನಾಥ್, ಸತೀಶ ಬಸವಾರಾಧ್ಯ, ಹಾಗೂ ಶ್ರೀಮತಿ ಇಂದಿರಾಸತೀಶ್, ಲಕ್ಷ್ಮಿ ಚಂದ್ರಶೇಖರ್, ಮತ್ತು ಪುಷ್ಪ ಕೃಷ್ಣಪ್ಪನವರು ಮತ್ತು ಪುಟಾಣಿಗಳಾದ ಕುಮಾರಿ ಸ್ನೇಹ, ನವ್ಯ, ಚೇತನ, ಮೇಘನ ಮತ್ತು ಮಾಸ್ಟರ್ ತರುಣ್ ಉಪಸ್ಥಿತರಿದ್ದರು.
ನವ ವರ್ಷವೆಂದರೆ ಮಧ್ಯ ಮತ್ತು ಮದಿರೆಯ ಅಮಲಿನಲ್ಲಿ ದುಂದುವೆಚ್ಚ ಮಾಡುವ ಈ ಸಮಾಜದಲ್ಲಿ ಗುರ್ಗಾಂವ್ನ ಈ ಕನ್ನಡಿಗರು ವಿನೂತನ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ, ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ. [ಹೊಸವರ್ಷ]