ಆಷಾಢದ ಅಮಾವಾಸ್ಯೆಯಂದು ಗಂಡನ ಪೂಜೆ
ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಸತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.
ಅಮಾವಾಸ್ಯೆಯನ್ನು ಎಲ್ಲೆಡೆ ಭೀಮನ ಅಮಾವಾಸ್ಯೆ, ಅಳಿಯನ ಅಮಾವಾಸ್ಯೆ ಎಂದು ಆಚರಿಸಿದರೆ, ಕಾರವಾರದಲ್ಲಿ ಮಾತ್ರ ಅದಕ್ಕೆ ಗಟಾರದ ಅಮಾವಾಸ್ಯೆ ಎಂದು ಕರೆಯುತ್ತಾರೆ. ಅದು ಮಾಂಸ, ಮದಿರೋಪಾಸಕರ ಮಹೋತ್ಸವ.
ಈ ಹಬ್ಬದ ಆಚರಣೆ ಏಕೆ: ಯಾವುದೇ ಹಬ್ಬ, ವ್ರತ ಕೈಗೊಳ್ಳುವ ಮೊದಲು ಸಂಕಲ್ಪ ಮುಖ್ಯ. ನಾವು ಏತಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಿದ್ದೇವೆ ಎಂಬುದರ ಅರಿವು ಇರಲೇಬೇಕು. ಭೀಮನ ಅಮಾವಾಸ್ಯೆ ಯನ್ನು ಮದುವೆಯಾಗದ ಹೆಣ್ಣುಮಕ್ಕಳು ಒಳ್ಳೆ ಗಂಡ ಸಿಗಲಿ ಎನ್ನುವ ಉದ್ದೇಶದಿಂದ ಹಾಗೂ ಮದುವೆಯಾದ ಹೆಂಗಸರೂ ಕೂಡ ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ಆರಾಧ್ಯ ದೈವ ಜ್ಯೋತಿರ್ಭೀಮೇಶ್ವರನ ಪೂಜೆ ಮಾಡುತ್ತಾರೆ.
ವಿವಿಧ ರೀತಿ ಆಚರಣೆ: ವ್ರತಾಚರಣೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನತೆಯಿಂದ ಕೂಡಿದೆ. ಉದ್ದೇಶ ಒಂದೇ ಆದರೂ, ಆಚರಣೆಯಲ್ಲಿ ವಿವಿಧತೆಯನ್ನು ಕಾಣಬಹುದು. ಹೆಂಗಳೆಯರು ಕೈ ಕಂಕಣ ಕಟ್ಟಿಕೊಂಡು ಜ್ಯೋರ್ತಿರ್ಭೀಮೇಶ್ವರನ್ನು ಧ್ಯಾನಿಸಿ, ವ್ರತ ಕೈಗೊಳ್ಳುತ್ತಾರೆ. ರಾಹುಕಾಲ ಹೊರತುಪಡೆಸಿ ಬೆಳಗ್ಗೆ ಅಥವಾ ಸಂಜೆ ಯಾವುದೇ ಶುಭ ಮಹೂರ್ತದಲ್ಲಿ ವ್ರತ ಕೈಗೊಳ್ಳಬಹುದು.
ಭಂಡಾರ ಹೊಡೆಯುವುದು: ಕೆಲೆವೆಡೆ ಈ ಹಬ್ಬದಲ್ಲಿ ಸೋದರಿಯರು ಸೋದರರ ಕೈಯಿಂದ ಭಂಡಾರ ಒಡೆಸುತ್ತಾರೆ. ಭಂಡಾರ ಅಂದರೆ, ಕರಿದ ಕಡಬು(ಸಿಹಿ ಇಲ್ಲದ), ಆದರೆ ಅದರೊಳಗೆ ಲಕ್ಷ್ಮೀ ಸ್ವರೂಪಿ ನಾಣ್ಯವನ್ನು ಇಟ್ಟು ಕರೆದಿರುತ್ತಾರೆ. ಅಂತಹ ಕಡುಬನ್ನು ಮುಂಬಾಗಿಲ ಹೊಸಿಲಲ್ಲಿಟ್ಟು ಸೋದರ ಹೊಸಿಲ ಮೇಲೆ ಕೂತು ತನ್ನ ಮೊಣಕೈಯಿಂದ ಅದನ್ನು ತುಂಡರಿಸುತ್ತಾನೆ.
ಸೋದರಿ ಆ ಸಮಯದಲ್ಲಿ ಆವನ ಬೆನ್ನ ಮೇಲೆ ಪ್ರೀತಿಯಿಂದ ಗುದ್ದುತ್ತಾಳೆ. ನಂತರ ಅಣ್ಣನ ಆಶೀರ್ವಾದ ಬೇಡುವ ಸೋದರಿ, ಫಲ ತಾಂಬೂಲ ನೀಡುತ್ತಾಳೆ. ಒಂದು ರೀತಿ ರಕ್ಷಾ ಬಂಧನದ ಇನ್ನೊಂದು ರೂಪದ್ದಂತಿರುತ್ತದೆ ಈ ಆಚರಣೆ. ಸೋದರಿಯನ್ನು ಸದಾ ಸೋದರ ರಕ್ಷಣೆ ಮಾಡುತ್ತೇನೆಂದು ಸಾಂಕೇತಿಕವಾಗಿ ಸಾರುತ್ತದೆ.
ಯಾರು ಆಚರಿಸಬೇಕು? : ಮೊದಲೇ ಹೇಳಿದಂತೆ ಅವಿವಾಹಿತ ಹೆಣ್ಣು ಮಕ್ಕಳು, ವಿವಾಹಿತ ನವ ವಧು ಆಚರಿಸಬಹುದು. ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಮತ್ತೆ ಜೀವನದ ಬಂಡಿ ಹೂಡುವುದು ವಾಡಿಕೆ.