ಭೀಮನಮಾವಾಸ್ಯೆ .. ಮದಿರೋಪಾಸನೆಯ ಮಹೋತ್ಸವ
ಕಾರವಾರ ಇನ್ಫೋ ಪ್ರತಿನಿಧಿಯಿಂದ
ವಿಕ್ರಮನಾಮ ಸಂವತ್ಸರದ ಆಷಾಢದ ಕೊನೆಯ ದಿನದ ಅಮಾವಾಸ್ಯೆಯ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸಲಾಯಿತು. ನಾಡಿನಾದ್ಯಂತ ನಡೆದ ಭೀಮನ ಅಮಾವಾಸ್ಯೆಯ ನಾನಾ ಬಗೆಯ ಆಚರಣೆಯ ಬಗ್ಗೆ ನಮಗೆ ಹತ್ತಾರು ವರದಿಗಳು ಬಂದಿವೆ. ಅದರಲ್ಲಿ ಸ್ವಾರಸ್ಯಕರವಾಗಿರುವ ಕಾರವಾರದ ಒಂದು ವರದಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಹಬ್ಬ , ಉತ್ಸವ ಎಂದರೆ ಪೂಜೆ, ಪುನಸ್ಕಾರಗಳಂತಹ ಸಂಪ್ರದಾಯಗಳಿರಲೇಬೇಕೆ ಎಂಬ ಪ್ರಶ್ನೆಗೆ ವಿರುದ್ಧವಾಗಿದೆ ಕಾರವಾರದ ಭೀಮನ ಅಮಾವಸ್ಯೆಯ ಆಚರಣೆ . ಶ್ರಾವಣವನ್ನು ಕೈ ಹಿಡಿದು ಕರೆತರುವ ಅಮಾವಾಸ್ಯೆಯನ್ನು ಎಲ್ಲೆಡೆ ಭೀಮನ ಅಮಾವಾಸ್ಯೆ, ಅಳಿಯನ ಅಮಾವಾಸ್ಯೆ ಎಂದು ಆಚರಿಸಿದರೆ, ಕಾರವಾರದಲ್ಲಿ ಮಾತ್ರ ಅದಕ್ಕೆ ಗಟಾರದ ಅಮಾವಾಸ್ಯೆ ಎಂದು ಕರೆಯುತ್ತಾರೆ. ಅದು ಮದಿರೋಪಾಸಕರ ಮಹೋತ್ಸವ.
ಉತ್ಸವ, ಹಬ್ಬ ಎಂದಾಕ್ಷಣ ಪೂಜೆ - ಪುನಸ್ಕಾರಗಳಿದ್ದಾವೆಂದು ಅಪ್ಪಿ ತಪ್ಪಿಯೂ ಅಂದುಕೊಳ್ಳಬೇಡಿ. ಅದೇನಾದರೂ ಇದ್ದರೆ, ಅದು ಶಾಸ್ತ್ರಕ್ಕೆ ಅಥವಾ ನೆಪಕ್ಕೆ ಮಾತ್ರ. ಮದಿರೆ, ಮಾಂಸವೇ ಇಲ್ಲಿನ ಹಬ್ಬದಾಚರಣೆಗೆ ಪ್ರಧಾನ. ಇವೆರಡರ ಸೇವನೆಗಂತೂ ಮಿತಿಯೇ ಇಲ್ಲ. ನಿಶೆಯೇರುತ್ತಿದ್ದಂತೆ ನಶೆಯೇರುವವರೆಗೂ ಕುಡಿತ. ಕೆಲವರಿಗೆ ಹಾಡು ಹಗಲೇ ರಾತ್ರಿಯಾದಂತೆ ಭಾಸವಾಗುತ್ತದೆ. ವಿಪರೀತವಾದಾಗ ಗಟಾರವೇ ಮಲಗುವ ಮಂಚ. ಹೀಗಾಗಿ ಈ ಹಬ್ಬಕ್ಕೆ ಅನ್ವರ್ಥಕ ಹೆಸರು ಗಟಾರದ ಅಮಾವಾಸ್ಯೆ. ಒಟ್ಟಿನಲ್ಲಿ ಮುಕ್ತ ಹಾಗೂ ಬಹಿರಂಗ ಕುಡಿತಕ್ಕೆ ಪರ್ಮಿಟ್ ಕೊಡುವ ಹಬ್ಬ ಇದು.
ಈ ಹಬ್ಬದಲ್ಲಿ ವೈದಿಕ ಸಂಪ್ರದಾಯಗಳೇನೂ ಕಂಡು ಬರದಿದ್ದರೂ, ಅವುಗಳಿಂದಾಗಿಯೇ ರೂಪಿತವಾದ ಹಬ್ಬ ಎಂದು ಹೇಳಲು ಅಡ್ಡಿಯೇನೂ ಇಲ್ಲ. ಶ್ರಾವಣದಲ್ಲಿ ಹಲವರು ಮದ್ಯ ಸೇವಿಸುವುದಿಲ್ಲ. ಮಾಂಸ ತಿನ್ನುವುದಿಲ್ಲ. ಈ ಅನುಷ್ಠಾನ ಶ್ರಾವಣ ಮಾಸದ ಬಳಿಕ ಬರುವ ಗಣಪತಿ ಹಬ್ಬದವರೆಗೂ ಪಾಲಿಸಿಕೊಂಡು ಬರಲೇ ಬೇಕು. ಅಂದರೆ ಒಟ್ಟು 45ಕ್ಕೂ ಹೆಚ್ಚು ದಿನಗಳು. ಈ ಹವ್ಯಾಸವನ್ನು ಅಷ್ಟು ದೀರ್ಘ ಕಾಲ ಬಿಡುವುದು ಕಷ್ಟವಾಗುವುದರಿಂದ, ಶ್ರಾವಣ ಮಾಸದ ಆರಂಭಕ್ಕೆ ಮುನ್ನವೇ ಮನಃತೃಪ್ತಿಯಾಗುವಷ್ಟು ಹಾಗೂ ಮುಂದಿನ 45 ದಿನಕ್ಕೂ ಸಾಕಾಗುವಷ್ಟು ಕುಡಿದು ತಿನ್ನಲು ಈ ಹಬ್ಬ ಆಚರಿಸಲಾಗುತ್ತದೆ ಎಂದರೆ ತಪ್ಪೇನಿಲ್ಲ.
ಶ್ರಾವಣದಲ್ಲಿ ಮಾಂಸ ತಿನ್ನುವುದುಂಟೆ: ಶ್ರಾವಣ ಮಾಸದಲ್ಲಿ ಮದಿರೆ, ಮಾಂಸಗಳನ್ನಷ್ಟೇ ಅಲ್ಲ, ಕೆಲ ಸಂಪ್ರದಾಯಸ್ಥರು ಬೆಳ್ಳುಳ್ಳಿ , ಈರುಳ್ಳಿ ಸೇವನೆಯನ್ನೂ ಬಿಡುತ್ತಾರೆ. ಅಂತಹವರು ಅಮಾವಸ್ಯೆಯಂದೇ ಇವುಗಳಿಂದ ತಯಾರಾದ ವಿಶೇಷ ಭಕ್ಷ್ಯಗಳಿಗೆ ನ್ಯಾಯ ಒದಗಿಸುತ್ತಾರೆ.
ಮೂಲತಃ ಶ್ರಾವಣ ಮಾಸ ಆರಂಭವಾದಾಗ, ನಮ್ಮಲ್ಲಿನ ದುರ್ಗುಣ, ಕೆಟ್ಟ ಹವ್ಯಾಸಗಳನ್ನು ಗಟಾರಕ್ಕೆಸೆದು ಹೊಸ ಮನುಷ್ಯರಾಗಿ ಸ್ವಚ್ಛ ಸಮಾಜ ನಿರ್ಮಾಣ ಮಾಡಬೇಕು ಎಂಬುದೇ ಈ ಉತ್ಸವದ ಹಿಂದಿನ ಉದ್ದೇಶ. ಆದರೆ, ಅದರ ಗೂಢಾರ್ಥವನ್ನು ತಿಳಿಯದೆ ಎಲ್ಲವನ್ನೂ ತಪ್ಪಾಗಿ ಅರ್ಥೈಸಲಾಗುತ್ತದೆ. ಇದೊಂದು ಪ್ರಕ್ಷಿಪ್ತ ಆಚರಣೆ ಎಂದು ಹೇಳುವವರೂ ಇದ್ದಾರೆ.
ಮಹಾರಾಷ್ಟ್ರದಲ್ಲಿ ಹೆಚ್ಚು ಆಚರಣೆಯಲ್ಲಿದೆ ಎನ್ನಲಾಗುವ ಈ ಹಬ್ಬ ಮೂಲತಃ ಮರಾಠ ಅರ್ಥಾತ್ ಕ್ಷತ್ರಿಯರದ್ದು. ಮದ್ಯ, ಮಾಂಸ ಕ್ಷತ್ರಿಯರ ಆಹಾರಾಭ್ಯಾಸವಾದರೂ, ಅವರು ಕಟ್ಟಾ ಸಂಪ್ರದಾಯವಾದಿಗಳು. ಹಿಂದೆ ಅವರು ಈ ಹಬ್ಬವನ್ನು ಆಚರಿಸುತ್ತಿದ್ದರಂತೆ, ಇದೀಗ ಇದು ಶ್ರಮ ಜೀವಿಗಳ ಹಬ್ಬವಾಗಿ ಮಾರ್ಪಟ್ಟಿದೆ. ಬದಲಾದ ವಾತಾವರಣದಲ್ಲಿ ಇದು ಎಲ್ಲರ ಹಬ್ಬವಾಗಿಬಿಟ್ಟಿದೆ. ಈ ಹಬ್ಬ ಮಾಡಿದವರೆಲ್ಲಾ, ಮುಂದಿನ ಆರು ವಾರಗಳ ಕಾಲ ಕುಡಿತ ಬಿಡುತ್ತಾರೆಂದೇನೂ ಅಲ್ಲ. ಅಮಿತ ಕುಡಿತಕ್ಕೆ ಇದೂ ಒಂದು ನೆಪ ಅಷ್ಟೇ.
ಅಂತೂ ಎಂತೆಂಥ ಹಬ್ಬಗಳು ನಮ್ಮಲ್ಲಿವೆ, ನೋಡಿ. ಅಲ್ಲದೇ, ನಮ್ಮ , ಎಲ್ಲ ಬಗೆಯ ಹವ್ಯಾಸಗಳಿಗೂ ಇಂತಹ ಹಬ್ಬಗಳ ಮೂಲಕ ಮಾನ್ಯತೆ ನೀಡಿದ್ದಾರೆ ಎಂಬುದನ್ನೂ ಕಂಡರೆ, ಆಶ್ಚರ್ಯವಾದೀತು. ಏನಾದರಾಗಲೀ, ಪಾನಪ್ರಿಯರಿಗಂತೂ ನಿತ್ಯವೂ ಅಮಾವಾಸ್ಯೆಯೇ.