ಆಟೋ ಚಾಲಕನಿಗೆ 15 ಸಾವಿರ ರೂ. ಕಳುಹಿಸಿದ ಸಿಇಒ, ಪ್ರಾಮಾಣಿಕತೆ ಇನ್ನೂ ಇದೆ ಅನ್ನೋದಕ್ಕೆ ನೋಡಿ ಇಲ್ಲಿದೆ ಸಾಕ್ಷಿ
ಮುಂಬೈ: ಡಿಜಿಟಲ್ ಪೇಮೆಂಟ್ ಮಾಡುವಾಗ ಒಂದು ಸಣ್ಣ ತಪ್ಪು ಮಾಡಿದರು ಅದು ನಮಗೆ ಎಷ್ಟು ದೊಡ್ಡ ತೊಂದರೆ ಎದುರಿಸಬಹುದು ಎಂಬುದು ನಮಗೆ ಗೊತ್ತು. ಮುಂಬೈನಲ್ಲಿ ನಡೆದ ಅಂಥದ್ದೊಂದು ತಪ್ಪಿಗೆ, ಆಟೋ ಚಾಲಕನೊಬ್ಬ ನಡೆದು ಕೊಂಡ ರೀತಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆಟೋ-ರಿಕ್ಷಾ ಚಾಲಕರೊಬ್ಬರು ಪ್ರಯಾಣಿಕನಿಂದ ತಪ್ಪಾಗಿ ತಮ್ಮ ಖಾತೆಗೆ ಬಂದ 15,682 ಹಣವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ರೀತಿ ಈಗ ಇಂಟರ್ನೆಟ್ನಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಅಷ್ಟಕ್ಕೂ ನಡೆದಿದ್ದೇನು?
ವೃತ್ತಿಯಲ್ಲಿ ಸಿಇಒ ಆಗಿರುವ ವ್ಯಕ್ತಿಯೊಬ್ಬರು ಮುಂಬೈನಲ್ಲಿ ಎಂದಿನಂತೆ ಆಟೋ ರಿಕ್ಷಾ ಹತ್ತಿದ್ದಾರೆ, ಪ್ರಯಾಣ ಮುಗಿದ ನಂತರ ಡಿಜಿಟಲ್ ಪೇಮೆಂಟ್ (UPI) ಮೂಲಕ ಆಟೋ ಬಾಡಿಗೆ ಪಾವತಿಸುವಾಗ ಗಡಿಬಿಡಿಯಲ್ಲಿ ತಪ್ಪು ಮೊತ್ತವನ್ನು ಟೈಪ್ ಮಾಡಿದ್ದಾರೆ. ಹಣ ಕಟ್ ಆದ ಮೆಸೇಜ್ ಬಂದಾಗಲೇ ಅವರಿಗೆ ಶಾಕ್ ಕಾದಿತ್ತು. ಕೇವಲ ನೂರರ ಆಸುಪಾಸಿನಲ್ಲಿರಬೇಕಾಗಿದ್ದ ಬಾಡಿಗೆ ಹಣದ ಬದಲಾಗಿ ಅವರ ಖಾತೆಯಿಂದ ಬರೋಬ್ಬರಿ 15,682 ಆಟೋ ಚಾಲಕನ ಖಾತೆಗೆ ಜಮಾ ಆಗಿತ್ತು!

ಮರಳಿ ಸಿಗುತ್ತಾ ಹಣ? ಹೆಚ್ಚಾದ ಆತಂಕ!
ಟ್ರಾನ್ಸಾಕ್ಷನ್ ಮುಗಿದ ತಕ್ಷಣವೇ ಸಿಇಒಗೆ ತಮ್ಮ ತಪ್ಪು ಅರಿವಾಗಿದೆ. ಇಂದಿನ ದಿನಗಳಲ್ಲಿ ಒಮ್ಮೆ ಅಪರಿಚಿತರ ಖಾತೆಗೆ ಹಣ ಹೋದರೆ ಅದು ವಾಪಸ್ ಸಿಗುವುದು ಎಷ್ಟು ಕಷ್ಟ ಎಂಬ ಆತಂಕ ಅವರಲ್ಲಿ ಶುರುವಾಗಿತ್ತು. ತಕ್ಷಣವೇ ಅವರು ಹೇಗೋ ಕಷ್ಟಪಟ್ಟು ಆಟೋ ಚಾಲಕನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.
ಹೃದಯ ಗೆದ್ದ ಆಟೋ ಚಾಲಕನ ಪ್ರಾಮಾಣಿಕತೆ
ಆದರೆ ಇಲ್ಲಿ ನಡೆದಿದ್ದೇ ಬೇರೆ. ಸಿಇಒ ಸಂಪರ್ಕಿಸಿದ ತಕ್ಷಣವೇ ಆಟೋ ಚಾಲಕ, "ಹೌದು ಸಾಬ್, ನಿಮ್ಮಿಂದ ಹೆಚ್ಚು ಹಣ ಬಂದಿದೆ" ಎಂದು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಹೂಹೂ-ಬಾಹೂ ಎನ್ನದೆ, ಒಂದು ರೂಪಾಯಿಯನ್ನೂ ಇಟ್ಟುಕೊಳ್ಳದೆ ಪೂರ್ತಿ 15,682 ಹಣವನ್ನು ತಕ್ಷಣವೇ ಆ ಸಿಇಒ ಖಾತೆಗೆ ಮರುವರ್ಗಾವಣೆ ಮಾಡಿದ್ದಾರೆ! ಆಟೋ ಚಾಲಕನ ಈ ದಿಢೀರ್ ನಿರ್ಧಾರ ಮತ್ತು ಪ್ರಾಮಾಣಿಕತೆ ಸಿಇಒಗೆ ಅಚ್ಚರಿ ಮೂಡಿಸಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಇದನ್ನು ಇಂದಿನ ಕಾಲದಲ್ಲಿ ಅಪರೂಪವಾಗಿ ಕಾಣುವ ಪ್ರಾಮಾಣಿಕತೆಯ ಉದಾಹರಣೆ ಎಂದು ಕೊಂಡಾಡಿದ್ದಾರೆ. ಕೆಲವರು ಈ ಘಟನೆ ಮಾನವೀಯತೆ ಮತ್ತು ನಂಬಿಕೆಯ ಮೇಲೆ ತಮ್ಮ ವಿಶ್ವಾಸವನ್ನು ಮತ್ತಷ್ಟು ನಂಬಿಕೆ ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಲಿಂಕ್ಡ್ಇನ್ನಲ್ಲಿ (LinkedIn) ವೈರಲ್ ಆದ ಸ್ಟೋರಿ
ತಮಗೆ ಎದುರಾದ ಈ ಅದ್ಭುತ ಅನುಭವವನ್ನು ಆ ಪ್ರಯಾಣಿಕರು ಲಿಂಕ್ಡ್ಇನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅವರು ಬರೆದ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ.
ನೆಟ್ಟಿಗರ ಪ್ರತಿಕ್ರಿಯೆ: "ಇಂತಹ ಘಟನೆಗಳು ಮಾನವೀಯತೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಮಾಡುತ್ತವೆ" ಎಂದು ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ಯಾವುದೇ ಕಾನೂನಿನ ಭಯವಿಲ್ಲದಿದ್ದರೂ, ಕೇವಲ ತಮ್ಮ ಅಂತಃಸಾಕ್ಷಿಗೆ ಹೆದರಿ ಹಣ ವಾಪಸ್ ಮಾಡಿದ ಆಟೋ ಚಾಲಕ ಈಗ ಸೋಶಿಯಲ್ ಮೀಡಿಯಾದ ರಿಯಲ್ ಹೀರೋ ಆಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ವಿಷಯಗಳೇ ಹೆಚ್ಚಾಗಿ ವೈರಲ್ ಆಗುವ ಈ ಇಂತಹ ಕಾಲದಲ್ಲಿ, ಒಬ್ಬ ಸಾಮಾನ್ಯ ಆಟೋ ಚಾಲಕನ ಪ್ರಾಮಾಣಿಕತೆ ಲಕ್ಷಾಂತರ ಜನರ ಮನ ಗೆದ್ದಿದೆ. ಅವರ ಈ ಸರಳ ಆದರೆ ಮಹತ್ವದ ಕಾರ್ಯ, ಸತ್ಯನಿಷ್ಠೆ ಮತ್ತು ಮಾನವೀಯತೆ ಇನ್ನೂ ಜೀವಂತವಾಗಿವೆ ಎಂಬುದನ್ನು ನೆನಪಿಸುವಂತಾಗಿದೆ.














Click it and Unblock the Notifications