ಶನಿವಾರವೇ ವೈಕುಂಠ ಏಕಾದಶಿ: ಇಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ನಾಡಿನೆಲ್ಲೆಡೆ ಇಂದು ಭಗವಾನ್ ಶ್ರೀವಿಷ್ಣುವಿನ ಆರಾಧನೆಗೆ ಪವಿತ್ರವಾದ ದಿನ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಬೆಂಗಳೂರಿನಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು, ಶುಕ್ರವಾರ ರಾತ್ರಿಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಆರಂಭವಾಗಿದೆ.
ಈ ಬಾರಿ ಇಂದು ಡಿಸೆಂಬರ್ 23 ರಂದು ಶನಿವಾರದಂದು ವೈಕುಂಠ ಏಕಾದಶಿ ಬಂದಿದ್ದು, ಡಿಸೆಂಬರ್ 22ರಂದು ಆರಂಭವಾಗುವ ವೈಕುಂಠ ಏಕಾದಶಿಯ ಮೂಹರ್ತ ಡಿಸೆಂಬರ್ 23 ರಂದು ಅಂತ್ಯವಾಗಲಿದೆ. ಹೀಗಾಗಿ ನಿನ್ನೆಯಿಂದಲೇ ದೇವಾಲಯಗಳಲ್ಲಿ ಪೂಜೆ ಆರಂಭಗೊಂಡಿದೆ.

ಬೆಂಗಳೂರು ನಗರದ ಮಲ್ಲೇಶ್ವರದಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತವಾಗಿ ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಆರಂಭವಾಗಿದೆ. ವೆಂಕಟೇಶ್ವರನಿಗೆ ಪಂಚಾಭಿಷೇಕ ಮಾಡಿ, ಪುಷ್ಪಾಭಿಷೇಕ ಮಾಡಿ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನು ಬೆಳಗ್ಗೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ವಿಶೇಷ ಪೂಜೆ, ಹೊಮ, ಹವನಗಳು ನೆರವೇರಲಿದ್ದು, ಮಧ್ಯರಾತ್ರಿಯವರೆಗೂ ಭಕ್ತಾಧಿಗಳು ದೇವಸ್ಥಾನಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ. ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ಇರಲಿದ್ದು, ಭಕ್ತಾಧಿಗಳು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ.
ವೈಕುಂಠ ಏಕಾದಶಿಯ ಮಹತ್ವ
ಮಹತ್ವ ವೈಕುಂಠ ಏಕಾದಶಿಯು ಹಿಂದೂ ಧರ್ಮದಲ್ಲಿ ದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಏಕಾದಶಿಯನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಲಕ್ಷಾಂತರ ಭಕ್ತರು ಇಂದು ತಿರುಪತಿಗೆ ಭೇಟಿ ನೀಡುತ್ತಿದ್ದಾರೆ. ವೈಕುಂಠ ಏಕಾದಶಿಯ ದಿನ ವಿಷ್ಣುವಿನ ಆಶೀರ್ವಾದವನ್ನು ಪಡೆದವರು ನೇರವಾಗಿ ವೈಕುಂಠ ಧಾಮಕ್ಕೆ ಹೋಗುತ್ತಾರೆ ಎಂದು ನಂಬಲಾಗುತ್ತದೆ. ಅಲ್ಲದೇ ಅವರು ಜನನ ಮತ್ತು ಮರಣದ ಚಕ್ರದಿಂದ ವಿಮೋಚನೆಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ವೈಕುಂಠ ಏಕಾದಶಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ವೈಕುಂಠ ಏಕಾದಶಿಯ ಉಪವಾಸವನ್ನು ಅರ್ಧಕ್ಕೆ ಮುರಿಯಬೇಡಿ. ಉಪವಾಸ ಆಚರಿಸದೇ ದೇವರನ್ನು ಪ್ರಾರ್ಥನೆ ಮಾಡಬಹುದು. ಆದರೆ ಅರ್ಧಕ್ಕೆ ಉಪವಾಸವನ್ನು ಮುರಿಯಬಾರದು.
ವೈಕುಂಠ ಏಕಾದಶಿಯ ದಿನ ಅಕ್ಕಿ ಹಾಗೂ ಧಾನ್ಯಗಳಿಂದ ಮಾಡಿದ ಖಾದ್ಯವನ್ನು ಸೇವಿಸಬೇಡಿ.
ವೈಕುಂಠ ಏಕಾದಶಿಯ ದಿನ ಈರುಳ್ಳಿ, ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸಬೇಡಿ ಹಾಗೂ ಮಾಂಸಹಾರವನ್ನು ಮಾಡಬಾರದು.
ಇಂದು ಯಾರೊಂದಿಗೂ ಜಗಳ ಮಾಡುವುದು, ಕೆಟ್ಟ ಪದಗಳನ್ನು ಬಳಸುವುದು ಮಾಡಬೇಡಿ. ಶಾಂತಿಯುತವಾಗಿ ದಿನ ಕಳೆಯಿರಿ.
ವೈಕುಂಠ ಏಕಾದಶಿಯ ದಿನ ಮದ್ಯಪಾನ ಹಾಗೂ ಮಾಂಸಾಹಾರ ಸೇವನೆಯನ್ನು ಮಾಡಬಾರದು.












Click it and Unblock the Notifications