2018- ಭಾರತಕ್ಕೆ ಒಂದಷ್ಟು ಸಿಹಿ, ಒಂದಷ್ಟು ಕಹಿ
ನವದೆಹಲಿ, ಡಿಸೆಂಬರ್ 27: ಅನೇಕ ಸಿಹಿ-ಕಹಿಯ ಸಂಗತಿಗಳನ್ನು ನೀಡಿದ 2018 ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ.
ಪ್ರಕೃತಿ ವಿಕೋಪ, ಉಗ್ರರ ದಾಳಿ, ರಾಜಕೀಯ ಚಟುವಟಿಕೆಗಳು, ಸುಪ್ರೀಂಕೋರ್ಟ್ ತೀರ್ಪುಗಳು, ಸರ್ಕಾರದ ಯೋಜನೆಗಳು, ಗಣ್ಯರ ನಿಧನ ಮುಂತಾದವು ವಿವಾದ, ನೋವಿನ ಕ್ಷಣಗಳನ್ನು ದಾಖಲಿಸಿವೆ.
ಅದರ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು, ಅಭಿವೃದ್ಧಿ ಚಟುವಟಿಕೆಗಳು, ಚುನಾವಣೆ ಮುಂತಾದ ಸಂಗತಿಗಳು ಚರ್ಚೆ, ನಲಿವಿನ ಗಳಿಗೆಗಳಿಗೂ ಸಾಕ್ಷಿಯಾಗಿವೆ.
ರಾಜಕೀಯ, ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳಾಗಿವೆ. ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾದವು.
ಸಾವು-ನೋವು, ಸುಪ್ರೀಂಕೋರ್ಟ್ ತೀರ್ಪು ಮುಂತಾದ ಘಟನೆಗಳಾಚೆ ದೇಶದ ಗಮನವನ್ನು ಸೆಳೆದ 2018ರ ಕೆಲವು ಪ್ರಮುಖ ಘಟನಾವಳಿಗಳತ್ತ ಒಂದು ಹಿನ್ನೋಟ...

ಬಾನ್ದಳಕ್ಕೆ ಇಸ್ರೋ ಉಪಗ್ರಹಗಳು
ಜನವರಿ 12ರಂದು ಇಸ್ರೋ ಒಂದೇ ಪೋಲಾರ್ ಉಪಗ್ರಹ ಉಡಾವಣಾ ವಾಹನದ ಮೂಲಕ (ಪಿಎಸ್ಎಲ್ ವಿ) ಒಮ್ಮೆಲೆ 31 ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಪಗ್ರಹ ಉಡ್ಡಯನ ಕೇಂದ್ರದಿಂದ ಹಾರಿದ ಈ ಉಪಗ್ರಹಗಳಲ್ಲಿ 28 ವಿದೇಶಿ ಮತ್ತು 3 ಭಾರತದ ಉಪಗ್ರಹಗಳಿದ್ದವು. ಈ ಮೂಲಕ ಭಾರತ ತನ್ನ ಒಟ್ಟಾರೆ ಉಪಗ್ರಹಗಳ ಸಂಖ್ಯೆಯಲ್ಲಿ ಶತಕದ ಗಡಿ ದಾಟಿತು. ಇದರಲ್ಲಿ ಹವಾಮಾನದ ಬಗ್ಗೆ ಮಾಹಿತಿ ನೀಡುವ ಕಾರ್ಟೊಸ್ಯಾಟ್ 2 ಸರಣಿಯ ಉಪಗ್ರಹವೂ ಸೇರಿದೆ.

'ಪ್ರಜಾಪ್ರಭುತ್ವ ಅಪಾಯದಲ್ಲಿ'
ನ್ಯಾಯಮೂರ್ತಿ ಚಲಮೇಶ್ವರ್ ನೇತೃತ್ವದಲ್ಲಿ ಸುಪ್ರೀಂಕೋರ್ಟ್ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನ್ಯಾಯಾಂಗದಲ್ಲಿನ ಅವ್ಯವಸ್ಥೆ ಬಗ್ಗೆ ಮತ್ತು ಮುಖ್ಯ ನ್ಯಾಯಮೂರ್ತಿ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದು ಭಾರಿ ಚರ್ಚೆಗೆ ಕಾರಣವಾಯಿತು. ನ್ಯಾಯಾಂಗದ ಇತಿಹಾಸದಲ್ಲಿಯೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ್ದು ಇದೇ ಮೊದಲು. ಈಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಕುರಿಯನ್ ಜೋಸೆಫ್ ಮತ್ತು ಮದನ್ ಲೋಕುರ್ ಸಹ ಅವರ ಜೊತೆಗೆ ಭಾಗವಹಿಸಿದ್ದರು.

'ಸಲಿಂಗಕಾಮ ಅಪರಾಧವಲ್ಲ'
ಅತ್ಯಂತ ಮಹತ್ವದ ತೀರ್ಪಿನಲ್ಲಿ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ, ಸೆಕ್ಷನ್ 377ಅನ್ನು ರದ್ದುಗೊಳಿಸಿತು. ಈ ಮೂಲಕ ಸಲಿಂಗಕಾಮ ಅಪರಾಧವಲ್ಲ ಎಂದು ಹೇಳಿತು.
ಬ್ರಿಟಿಷರ ಕಾಲದಲ್ಲಿ ಕಾನೂನಿನ ರೂಪ ಪಡೆದುಕೊಂಡಿದ್ದ ಅನೈಸರ್ಗಿಕ ಲೈಂಗಿಕ ಕ್ರಿಯೆ ಅಪರಾಧ ಎಂಬ ನಿಯಮವನ್ನು ಸುಪ್ರೀಂಕೋರ್ಟ್ ಬದಲಾವಣೆ ಮಾಡಿತು. ಸಹಮತದ ಸಲಿಂಕಕಾಮ ತಪ್ಪಲ್ಲ ಎಂದು ಅದು ಸೆ.6ರಂದು ತೀರ್ಪು ನೀಡಿತು.

ಸರ್ದಾರ್ ಪ್ರತಿಮೆ ನಿರ್ಮಾಣ
ವಿಶ್ವದಲ್ಲಿಯೇ ಅತ್ಯಂತ ಎತ್ತರದ (182 ಮೀಟರ್) ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತೆಯ ಪ್ರತಿಮೆ ಯನ್ನು ಅಕ್ಟೋಬರ್ 31ರನ್ನು ಉದ್ಘಾಟಿಸಲಾಯಿತು. ಗುಜರಾತ್ನ ನರ್ಮದಾ ನದಿ ತೀರದಲ್ಲಿ ಸ್ಥಾಪನೆಯಾದ ಈ ಪ್ರತಿಮೆಯನ್ನು 33 ತಿಂಗಳಲ್ಲಿ ನಿರ್ಮಿಸಲಾಗಿದೆ. 70 ಸಾವಿರ ಟನ್ ಸಿಮೆಂಟ್, 18,500 ರೀಇನ್ಫೋರ್ಟ್ಮೆಂಟ್ ಉಕ್ಕು, 6,000 ಟನ್ ಸ್ಟ್ರಕ್ಚರಲ್ ಉಕ್ಕು ಮತ್ತು 1,700 ಟನ್ ಕಂಚು ಬಳಸಿ ಪ್ರತಿಮೆ ತಯಾರಿಸಲಾಗಿದೆ.

ಮೊದಲ ಮಹಿಳಾ ಸಾಧಕಿ
ವಾಯುಪಡೆಯ ಅಧಿಕಾರಿ ಅವನಿ ಚತುರ್ವೇದಿ ಯುದ್ಧವಿಮಾನವನ್ನು ಏಕಾಂಗಿಯಾಗಿ ಚಾಲನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ದಾಖಲೆ ಬರೆದರು.
ಫೆ.19ರಂದು ಗುಜರಾತ್ನ ಜಾಮ್ನಗರ್ದ ಭಾರತೀಯ ವಾಯುನೆಲೆಯಿಂದ ಅವನಿ ಯುದ್ಧ ವಿಮಾನವನ್ನು ಚಾಲನೆ ಮಾಡಿದರು. ಮಹಿಳಾ ಪೈಲಟ್ಗಳ ಮೊದಲ ಬ್ಯಾಚ್ನ ಮೂವರು ಅಧಿಕಾರಿಗಳಲ್ಲಿ ಒಬ್ಬರಾದ ಅವನಿ ಇತರ ಮಹಿಳೆಯರಿಗೆ ಸ್ಫೂರ್ತಿಯಾದರು.

ರೈತರ ಪ್ರತಿಭಟನೆ
ಸಾಲಮನ್ನಾ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆಗಳು ನಡೆದವು. ಮಾರ್ಚ್ 12ರಂದು ಮುಂಬೈನಲ್ಲಿ 30 ಸಾವಿರಕ್ಕೂ ಅಧಿಕ ರೈತರು ಕೆಂಪು ಬಾವುಟ ಹಿಡಿದು ರಾಜಧಾನಿಯತ್ತ ತೆರಳಿದ್ದರು. ಇದೇ ರೀತಿಯ ಪ್ರತಿಭಟನೆ ನವೆಂಬರ್ 29 ರಂದು ದೆಹಲಿಯಲ್ಲಿಯೂ ನಡೆಯಿತು. ರಾಮಲೀಲಾ ಮೈದಾನಕ್ಕೆ ಸಾವಿರಾರು ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಶಬರಿಮಲೆ ವಿವಾದ
ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಆವರಣದೊಳಗೆ 10-50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬ ದೇವಸ್ಥಾನದ ಆಡಳಿತ ಮಂಡಳಿಯ ನಿಯಮವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ಎಲ್ಲ ವಯಸ್ಸಿನ ಮಹಿಳೆಯರೂ ದೇವಾಲಯದೊಳಗೆ ಪ್ರವೇಶಿಸಬಹುದು ಎಂದು ತೀರ್ಪು ನೀಡಿತು. ಇದು ತೀವ್ರ ವಿವಾದ, ಪ್ರತಿಭಟನೆಗಳಿಗೆ ಕಾರಣವಾಯಿತು. ಸುಪ್ರೀಂಕೋರ್ಟ್ನ ಆದೇಶದ ಬೆನ್ನಲ್ಲೇ ತೃಪ್ತಿ ದೇಸಾಯಿ ಸೇರಿದಂತೆ ಕೆಲವು ಮಹಿಳೆಯರು ಶಬರಿಮಲೆ ಪ್ರವೇಶಿಸಲು ಪ್ರಯತ್ನಿಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಯಿತು. ಈ ವಿವಾದ ಇನ್ನೂ ಶಮನವಾಗುವ ಲಕ್ಷಣ ಕಾಣಿಸುತ್ತಿಲ್ಲ.

ಅವನಿ ಹುಲಿಯ ಹತ್ಯೆ
ನರಹಂತಕಿಯಾಗಿ ಪರಿವರ್ತನೆಯಾಗಿದ್ದ ಮಹಾರಾಷ್ಟ್ರದ ಯವತ್ಮಲ್ ಪ್ರದೇಶದಲ್ಲಿನ ಹೆಣ್ಣು ಹುಲಿ 'ಅವನಿ'ಯನ್ನು ಹತ್ಯೆ ಮಾಡಿದ ಘಟನೆ ವ್ಯಾಪಕ ಪರ-ವಿರೋಧದ ಚರ್ಚೆಗೆ ಕಾರಣವಾಯಿತು. 10ಕ್ಕೂ ಅಧಿಕ ಮಂದಿಯನ್ನು ಅವನಿ ಕೊಂದಿದೆ ಎನ್ನಲಾಗಿತ್ತು. ಹೀಗಾಗಿ ಅದನ್ನು ಕೊಲ್ಲಲು ನಿರ್ದರಿಸಲಾಗಿತ್ತು. ಸುಪ್ರೀಂಕೋರ್ಟ್ ಕೂಡ ಅವನಿಯನ್ನು ಕಂಡಲ್ಲಿ ಗುಂಡಿಕ್ಕುವಂತೆ ಆದೇಶಿಸಿತ್ತು. ಆದರೆ, ಅದನ್ನು ಜೀವಂತವಾಗಿ ಸೆರೆಹಿಡಿಯಬೇಕಿತ್ತು ಎಂದು ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಎರಡು ಮರಿಗಳನ್ನು ರಕ್ಷಿಸಲಾಗಿದೆ.

ಆರ್ ಬಿಐ ಗದ್ದಲ, ಪಟೇಲ್ ರಾಜೀನಾಮೆ
ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಣ ಮನಸ್ತಾಪ ದೇಶದೆಲ್ಲೆಡೆ ಸುದ್ದಿಯಾಯಿತು.
ಆರ್ ಬಿಐ ಸ್ವಾಯತ್ತ ಸಂಸ್ಥೆಯಾದರೂ ಕೇಂದ್ರ ಸರ್ಕಾರ ಅದರ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತು. ಅಲ್ಲದೆ, ಆರ್ ಬಿಐನಲ್ಲಿನ ಮೀಸಲು ನಿಧಿಯನ್ನು ಸರ್ಕಾರಕ್ಕೆ ನೀಡಬೇಕೆಂಬ ಬೇಡಿಕೆಗೆ ಆರ್ ಬಿಐ ಒಪ್ಪಲಿಲ್ಲ. ಈ ವಿವಾದ ಕೊನೆಗೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಗೆ ಕಾರಣವಾಯಿತು.

ಸಿಬಿಐ ನಿರ್ದೇಶಕರ ವಿವಾದ
ಸಿಬಿಐನ ಉನ್ನತ ಅಧಿಕಾರಿಗಳಿಬ್ಬರ ಕಿತ್ತಾಟ ಮತ್ತು ಅವರ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳೆರಡೂ ವಿರೋಧ ಪಕ್ಷಗಳ ಆಕ್ಷೇಪಕ್ಕೆ ಕಾರಣವಾಯಿತು. ಲಂಚ ಪ್ರಕರಣ ಎದುರಿಸುತ್ತಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ನಡುವೆ ಕಿತ್ತಾಟ ನಡೆದಿತ್ತು. ಇದು ಮುಂದುವರಿದಾಗ ಕೇಂದ್ರ ಸರ್ಕಾರ ರಾತ್ರೋರಾತ್ರಿ ಇಬ್ಬರನ್ನೂ ಕಡ್ಡಾಯ ರಜೆಯ ಮೇಲೆ ಕಳುಹಿಸಿತು. ಕೇಂದ್ರದ ಈ ಕ್ರಮದ ವಿರುದ್ಧ ಪ್ರತಿಭಟನೆ ವ್ಯಕ್ತವಾಯಿತು. ಸದ್ಯ ಈ ವಿವಾದ ಸುಪ್ರೀಂಕೋರ್ಟ್ನಲ್ಲಿದೆ.

ಪ್ರವಾಹದ ಹಾವಳಿ
ಆಗಸ್ಟ್ ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ ಸುರಿದ ಭಾರಿ ಮಳೆ ನೂರಾರು ಜನರ ಜೀವಹಾನಿಗೆ ಕಾರಣವಾಯಿತು. ಅದರಲ್ಲಿಯೂ ಕರ್ನಾಟಕ ಮತ್ತು ಕೇರಳದಲ್ಲಿ ಜನರು ಅಕ್ಷರಶಃ ತತ್ತರಿಸಿದರು. ಮಳೆ, ಭೂಕುಸಿತಗಳಿಂದ ಪ್ರವಾಹ ಉಂಟಾಗಿ ಜನರು ನೆಲೆ ಕಳೆದುಕೊಂಡರು. ಕೇರಳದಲ್ಲಿಯೇ 500ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಕೊಡಗಿನಲ್ಲಿಯೂ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದರು. ಮನೆ, ಕಟ್ಟಡಗಳು ಕುಸಿದುಹೋದವು. ಎರಡೂ ಕಡೆ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತು.
-
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ












Click it and Unblock the Notifications