World Mental Health Day 2022 ; ಈ ವರ್ಷ ಮಾನಸಿಕ ಆರೋಗ್ಯವು ಜಾಗತಿಕ ಆದ್ಯತೆ
1992ರಿಂದಲೂ ಪ್ರತೀ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ದೈಹಿಕ ಆರೋಗ್ಯದಂತೆ ಮಾನಸಿಕ ಸ್ವಾಸ್ಥ್ಯವೂ ಬಹಳ ಮುಖ್ಯ. ಆದರೆ, ಮಾನಸಿಕ ಆರೋಗ್ಯದ ಬಗ್ಗೆ ಅರಿವು ಹೊಂದಿರುವ ಜನರ ಸಂಖ್ಯೆ ಕಡಿಮೆ. ಈ ಮನೋಭಾವನೆಯನ್ನು ಹೋಗಲಾಡಿಸಲು ವರ್ಲ್ಡ್ ಮೆಂಟಲ್ ಹೆಲ್ತ್ ಡೇ ಸೂಕ್ತ ವೇದಿಕೆಯಾಗಿದೆ.
ಕೋವಿಡ್ ರೋಗ ಬಂದ ನಂತರ ಮಾನಸಿಕ ಕ್ಷೋಭೆ ತೀವ್ರ ಗತಿಯಲ್ಲಿ ಹೆಚ್ಚಾಗಿದೆ. ಅದರಲ್ಲೂ ಮೊದಲ ವರ್ಷ, ಅಂದರೆ 2020-21ರ ಅವಧಿಯಲ್ಲಿ ಶೇ. 25ಕ್ಕಿಂತ ಹೆಚ್ಚು ಜನರಲ್ಲಿ ಆತಂಕ, ಖಿನ್ನತೆ ಇತ್ಯಾದಿ ಮಾನಸಿಕ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.
ಕೋವಿಡ್ ಬರುವ ಮುನ್ನ ಪ್ರತೀ ಎಂಟು ಮಂದಿಯಲ್ಲಿ ಒಬ್ಬರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇತ್ತು. ಆದರೆ, ಸಾಂಕ್ರಾಮಿಕ ಸ್ಥಿತಿ ಉದ್ಭವಿಸಿದ ಬಳಿಕ ಪ್ರತೀ ನಾಲ್ವರಲ್ಲಿ ಒಬ್ಬರು ಮಾನಸಿಕವಾಗಿ ಅರೋಗ್ಯ ಕೆಡಿಸಿಕೊಂಡಿರುವುದು ತಿಳಿದುಬಂದಿದೆ.
"ಮಾನಸಿಕ ಅರೋಗ್ಯ ಸಮಸ್ಯೆಗಳ ವಿಚಾರದಲ್ಲಿ ಕಾರ್ಯನಿರತವಾಗಿರುವ ಜನರು ತಮ್ಮ ಕೆಲಸದ ಬಗ್ಗೆ ಮಾತನಾಡಲು, ಹಾಗೂ ಮಾನಸಿಕ ಅರೋಗ್ಯ ಚಿಕಿತ್ಸೆಯನ್ನು ವಿಶ್ವಾದ್ಯಂತ ಜನರಿಗೆ ತಲುಪಿಸಲು ಏನು ಮಾಡಬಹುದು ಎಂಬುದನ್ನು ತಿಳಿಸಲು ಇದು ಅವಕಾಶ ಮಾಡಿಕೊಡುತ್ತದೆ" ಎಂದು ವಿಶ್ವ ಆರೋಗ್ಯ ದಿನದ ಬಗ್ಗೆ ಡಬ್ಲ್ಯೂಎಚ್ಒ ಹೇಳಿದೆ.

ವಿಶ್ವ ಮಾನಸಿಕ ಅರೋಗ್ಯ ದಿನದ ಇತಿಹಾಸ
1992ರಲ್ಲಿ ಮೊದಲ ಬಾರಿಗೆ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು. 1948ರಲ್ಲಿ ಲಂಡನ್ನಲ್ಲಿ ಅರಂಭಗೊಂಡ ವರ್ಲ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ಎಂಬ ಎನ್ಜಿಒ ಈ ದಿನದ ಆಚರಣೆಯನ್ನು ಮೊದಲುಗೊಳ್ಳುವಂತೆ ಮಾಡಿತು.

2022ರ ಥೀಮ್
2022ರ ವಿಶ್ವ ಮಾನಸಿಕ ಅರೋಗ್ಯ ದಿನಕ್ಕೆ "ಪ್ರತಿಯೊಬ್ಬರ ಮಾನಸಿಕ ಆರೋಗ್ಯವು ಜಾಗತಿಕ ಆದ್ಯತೆಯಾಗಬೇಕು" ಎಂಬ ಪರಿಕಲ್ಪನೆ ಇಡಲಾಗಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಒತ್ತಡ
ಇಂದು ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮೇಲೆ ಅಪರಿಮಿತ ಒತ್ತಡ ಹೇರಲಾಗುತ್ತಿದೆ. ಶಾಲಾಪೂರ್ವದಿಂದಲೇ (ಪ್ರೀಸ್ಕೂಲ್) ಮಕ್ಕಳನ್ನು ಟ್ಯೂಷನ್ಗೆ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಶಾಲೆ, ಟ್ಯೂಷನ್, ಹೋಮ್ ವರ್ಕ್ ಆ ಆ್ಯಕ್ಟಿವಿಟಿ, ಈ ಆ್ಯಕ್ಟಿವಿಟಿ ಎಂದು ಮಕ್ಕಳ ಮೇಲೆ ಹೆಣಭಾರವೇ ಬೀಳುತ್ತಿದೆ. ಇದು ಮಕ್ಕಳ ಮುಗ್ಧ ಮನಸಿನ ಮೇಲೆ ಅದೆಂಥ ಘಾಸಿ ಮಾಡಬಹುದು...! ಮಕ್ಕಳ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಶಿಕ್ಷಕರು ಮತ್ತು ಪೋಷಕರು ಕಾಳಜಿ ವಹಿಸಬೇಕಾದ ಅವಶ್ಯತೆ ಇದೆ. ಅಂಕಗಳೇ ಸರ್ವಸ್ವ ಎನ್ನುವಂಥ ಶಿಕ್ಷಣ ಪದ್ಧತಿಯ ಕ್ರಮವನ್ನು ಹೊಸ ಎನ್ಇಪಿ ಮೂಲಕ ಬದಲಾಯಿಸಲು ಸರಕಾರ ಹೊರಟಿದೆ. ಇದರಿಂದ ಮಕ್ಕಳ ಮೇಲಿನ ಹೊರೆ ಇಳಿಯಬಹುದು ಎಂದು ಕೆಲ ಶಿಕ್ಷಣ ತಜ್ಞರು ಹೇಳುತ್ತಾರೆ.

ಉದ್ಯೋಗ ಸ್ಥಳದಲ್ಲಿ ಒತ್ತಡ
ಶಿಕ್ಷಣ ಮತ್ತು ಕೆಲಸ... ಒಬ್ಬ ವ್ಯಕ್ತಿಯ ಇಡೀ ಜೀವನ ಇವೆರಡರಲ್ಲೇ ಕಳೆದುಹೋಗುತ್ತದೆ. ಹಾಗೂ ಹೀಗೂ ಕಷ್ಟಪಟ್ಟು ಓದು ಮುಗಿಸಿ ಕೆಲಸಕ್ಕೆ ಸೇರಿದರೆ ಅಲ್ಲೊಂದು ರೀತಿಯ ಒತ್ತಡ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪನಿಗಳಿಗೂ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ. ಪರಿಣಾಮವಾಗಿ ಉದ್ಯೋಗಿಗಳ ಮೇಲೂ ಒತ್ತಡ. ಇಂದಿನ ಬಹುತೇಕ ಖಾಸಗಿ ಕಂಪನಿಗಳಲ್ಲಿ ಹೆಚ್ಚಿನ ನೌಕರರು ಮಾನಸಿಕ ಕಾಳಜಿ ಅಗತ್ಯತೆ ಹೊಂದಿರುವವರೇ ಆಗಿದ್ದಾರೆಂದು ಹೇಳಲಾಗುತ್ತದೆ. ಅನೇಕ ಕಂಪನಿಗಳಲ್ಲಿ ಉದ್ಯೋಗಿಗಳ ಮಾನಸಿಕ ತೊಂದರೆಗಳನ್ನು ಸರಿಪಡಿಸಲು ವ್ಯವಸ್ಥೆ ಮಾಡಲಾಗಿದೆಯಾದರೂ ಅದರ ಉಪಯೋಗ ಆಗುತ್ತಿರುವುದು ಕಡಿಮೆ. ಐಬಿಎಂನಂಥ ಕಂಪನಿಗಳಲ್ಲಿ ಈಗೀಗ ಪರಿಸ್ಥಿತಿ ಬದಲಾಗುತ್ತಿದೆ. ಹೆಚ್ಚೆಚ್ಚು ಉದ್ಯೋಗಿಗಳು ಆಪ್ತ ಸಮಾಲೋಚನೆಯ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಮಾನಸಿಕವಾಗಿ ನಿರಾಳರಾಗಿ, ಒತ್ತಡದಿಂದ ಹೊರಬರುತ್ತಿದ್ದಾರೆ ಎಂದು ಕೆಲ ಸಮೀಕ್ಷೆಗಳು ಹೇಳುತ್ತವೆ.
ಕೆಲ ಕಂಪನಿಗಳಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಗೂ ಉದ್ಯೋಗಿಗಳಿಗೆ ಇನ್ಷೂರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಪೊರೇಟ್ ಕಂಪನಿಗಳು ಈಗ ತಮ್ಮ ಉದ್ಯೋಗಿಗಳ ಮಾನಸಿಕ ಆರೋಗ್ಯದ ಕಡೆಗೂ ಗಮನ ಕೊಡುತ್ತಿರುವುದು ಸ್ವಾಗತಾರ್ಹ.
(ಒನ್ಇಂಡಿಯಾ ಸುದ್ದಿ)












Click it and Unblock the Notifications