Vani Vilasa Sagara: ವಾಣಿ ವಿಲಾಸ ಸಾಗರ ಡ್ಯಾಂ ರಕ್ಷಕಿ ಬಗ್ಗೆ ನಿಮಗೆಷ್ಟು ಗೊತ್ತು?-ಮಾಹಿತಿ ತಿಳಿಯಿರಿ
ಹಿರಿಯೂರು, ಜನವರಿ, 07: ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ವಾಣಿವಿಲಾಸ ಜಲಾಶಯವು ಒಂದಾಗಿದ್ದು, ಇಲ್ಲಿನ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಅನುಕೂಲವಾಗಲಿ ಎಂಬ ದೃಷ್ಟಿಯಿಂದ 1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಾಣಿ ವಿಲಾಸ ಜಲಾಶಯವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಈ ಜಲಾಶಯದ ಕಾವಲಾಗಿರ ಅಥವಾ ರಕ್ಷಣೆಯಾಗಿ ನಿಂತಿರುವುದೇ ಈ ದೇವಸ್ಥಾನ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಲಾಶಯದ ಮುಂಭಾಗದಲ್ಲಿ ಅಂದರೆ ಮಧ್ಯದ ಭಾಗದಲ್ಲಿ ಶ್ರೀ ಕಣಿವೆ ಮಾರಮ್ಮನ ದೇವಸ್ಥಾನವನ್ನು ಕಾಣಬಹುದು. ಈ ದೇವಾಲಯವನ್ನು ಮಾರಿಕಣಿವೆ ಡ್ಯಾಂ ರಕ್ಷಿಕಿ ಎಂದು ಭಕ್ತರ ಮನದಲ್ಲಿರುವುದುಂಟು. ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವಿಯ ಪೂಜೆಯಲ್ಲಿ ಪಾಲ್ಗೊಂಡು ದರ್ಶನ ಪಡೆಯುತ್ತಾರೆ. ಅದರಲ್ಲೂ ಮಂಗಳವಾರ ಹಾಗೂ ಶುಕ್ರವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ದೇವಿಯ ಹಿನ್ನೆಲೆ: ಶ್ರೀ ಕಣಿವೆ ಮಾರಮ್ಮನ ದೇವಸ್ಥಾನದ ವಿಚಾರಕ್ಕೆ ಬಂದರೆ ಈ ದೇವಾಲಯ ಇತಿಹಾಸ ಒಳಗೊಂಡಿದೆ. ನೂರಾರು ವರ್ಷಗಳ ಇತಿಹಾಸ ಇರುವ ಕಣಿವೆ ಮಾರಮ್ಮ ದೇವಿ ವಾಣಿ ವಿಲಾಸ ಜಲಾಶಯ ಅಣೆಕಟ್ಟೆಯ ರಕ್ಷಕಿ ಎಂಬ ನಂಬಿಕೆ ಇದೆ. ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿ ವಿಲಾಸ ಜಲಾಶಯ ಅಣೆಕಟ್ಟೆಯನ್ನು ನಿರ್ಮಿಸಿದ್ದು, ಎರಡು ಗುಡ್ಡಗಳ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲ ಇರುವ ಕಾರಣ ಕಣಿವೆ ಮಾರಮ್ಮ ಎಂಬ ಹೆಸರು ಬಂದಿದೆ.
ಯಾವುದೇ ಕೆಲಸ ಪ್ರಾರಂಭಕ್ಕೂ ಮೊದಲು ದೇವರನ್ನು ನೆನೆದರೆ ಆಕೆ ಕಾಪಾಡಿಯೇ ಕಾಪಾಡುತ್ತಾಳೆ ಅನ್ನುವ ನಂಬಿಕೆ ಭಕ್ತ ಸಮೂಹದಲ್ಲಿ ಮೊದಲಿನಿಂದಲೂ ಬೆಳೆದು ಬಂದಿದೆ. ಆ ಕೆಲಸ ಚಿಕ್ಕದೇ ಆಗಲಿ ಅಥವಾ ದೊಡ್ಡದೇ ಆಗಲಿ, ಇದಕ್ಕೆ ಸಾಕ್ಷಿಯಾಗಿ ನಿಂತಿರುವುದೇ ಈ ದೇವಾಲಯ. ಇಲ್ಲಿ ತಾಯಿ ನಂಬಿಕೆನೇ ಆಣೆಕಟ್ಟು ಕಾಯೋಕೆ ನಿಂತಿದ್ದಾಳೆ. ಇದೇ ಈ ದೇವಾಲಯದ ವಿಶೇಷತೆಯಾಗಿದೆ.

ಇಲ್ಲಿ ತಾಯಿಯ ಪಾದಕ್ಕೆ ತಾಗಿ ಆಣೆಕಟ್ಟು ನಿಂತಿದೆ. ಮಾರಿಕಾಂಬೆಯೇ ತನ್ನ ಪಾದದ ಮೂಲಕ ಆ ಆಣೆಕಟ್ಟು ಹಿಡಿದು ನಿಂತಿದ್ದಾಳೆ ಅನ್ನೋದು ಭಕ್ತರ ನಂಬಿಕೆ. ಅದಕ್ಕೆ ಇಲ್ಲಿನ ಆಣೆಕಟ್ಟಿಗೆ ಮಾರಿಕಣಿವೆ ಡ್ಯಾಂ ಅಂತಾನೆ ಕರಿಯೋದು. ಇದು ಮಾರಿ ಕಣಿವೆ ಡ್ಯಾಂ ಎಂದು ಕರಿಸಿಕೊಳ್ಳುವ ವಾಣಿವಿಲಾಸ ಆಣೆಕಟ್ಟಿನ ಬಳಿಯಿರುವ ಮಾರಿಕಾಂಬ ಅಥವಾ ಕಣಿವೆ ಮಾರಮ್ಮ ದೇವಾಲಯ. ಆಣೆಕಟ್ಟಿಗೆ ತಾಗಿಕೊಂಡೇ ಈ ದೇವಾಲಯ ಇದೆ.
ಇಲ್ಲಿರುವ ಮಾರಿಕಾಂಬೆ ಈ ಡ್ಯಾಂಗೆ ಯಾವುದೇ ರೀತಿಯ ತೊಂದರೆ ಬರದ ರೀತಿಯಲ್ಲಿ ಕಾಯುತ್ತಾಳೆ ಅನ್ನೋದು ಇಲ್ಲಿಯ ಜನರ ನಂಬಿಕೆಯಾಗಿದೆ. ಬಹುತೇಕ ದೇವರ ಮುಖಗಳು ಮುಂಭಾಗದಲ್ಲಿ ಇರುತ್ತದೆ. ಇಲ್ಲಿ ಮಾತ್ರ ಮಾರಮ್ಮ ದೇವಿಯು ಬೆನ್ನು ಮಾಡಿ ಕುಳಿತಿದ್ದಾಳೆ. ಇನ್ನು ತಾಯಿಯ ಕಾಲಿನ ಹೆಬ್ಬೆರಳಗಳು ಆಣೆಕಟ್ಟೆಗೆ ಒತ್ತಿ ಹಿಡಿದಂತಿದೆ. ಹೀಗಾಗಿ ತಾಯಿ ಆಣೆಕಟ್ಟನ್ನು ತನ್ನ ಬೆರಳಿನಲ್ಲಿ ಒತ್ತಿ ಹಿಡಿದು ಕಾಯುತ್ತಿದ್ದಾಳೆ ಅನ್ನೋದು ಭಕ್ತರ ನಂಬಿಕೆ. ಇಲ್ಲಿ ತಾಯಿಯ ಬೆನ್ನಿನ ಬದಿಯ ಭಾಗಕ್ಕೆ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ.
ದೇವಾಲಯದ ಇತಿಹಾಸ: ಕಣಿವೆ ಮಾರಮ್ಮನ ದೇವಸ್ಥಾನದ ಇತಿಹಾಸ ಗಮನಿಸಿದಾಗ ಇದನ್ನು ವಿಜಯ ನಗರದ ಅರಸರು 14-15 ನೇ ಶತಮಾನದಲ್ಲಿ ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದಾದ ನಂತರ ಮೈಸೂರು ಅರಸರು ಡ್ಯಾಂ ಕಟ್ಟಿದ ಬಳಿಕ ಇದನ್ನು ಪುನರ್ ಸ್ಥಾಪಿಸಿದರು. ನವರಾತ್ರಿಯಂದು ತಾಯಿಗೆ ವಿಶೇಷ ಪೂಜೆ ಅಲಂಕಾರ ನೈವೇದ್ಯ ಸಮರ್ಪಣೆ ನಡೆಯುತ್ತದೆ. ಅಂದು ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮತ್ತಿತರರ ಭಾಗಗಳಿಂದ ಭಕ್ತರು ತಾಯಿಯ ಸನ್ನಿಧಿಗೆ ಆಗಮಿಸುತ್ತಾರೆ.












Click it and Unblock the Notifications