ಇಂದು ವಿಶ್ವ ಆನೆ ದಿನ: ಆನೆಗಳ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರು, ಆ. 12: ಮನುಷ್ಯರಂತೆಯೆ ಕುಟುಂಬ ಜೀವನ ಮಾಡುವ ಪ್ರಾಣಿ ಎಂದರೆ ಆನೆ. ಸಾಮಾನ್ಯವಾಗಿ ಆನೆಗಳು ತಮ್ಮದೇ ಆದ ಸಾಮಾಜಿಕ ನಿಯಮದಡಿ ಬದುಕುತ್ತವೆ. ಮನುಷ್ಯರಂತೆಯೆ ಗಂಡು ಮತ್ತು ಹೆಣ್ಣಾನೆಗಳ ಸಾಮಾಜಿಕ ಜೀವನ ಬೇರೆ ಬೇರೆ ಯಾಗಿರುತ್ತದೆ. ಹೆಣ್ಣು ಆನೆಗಳು ತಮ್ಮ ಜೀವನವನ್ನು ಸಂಪೂರ್ಣವಾಗಿ ಕುಟುಂಬ ವ್ಯವಸ್ಥೆಯಲ್ಲಿಯೇ ಕಳೆಯುತ್ತವೆ. ಆನೆಗಳ ಪ್ರಪಂಚದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಿದೆ.
ಹೀಗೆ ಆನೆಗಳ ಮಾತೃ ಪ್ರಧಾನ ಕುಟುಂಬದಲ್ಲಿ ತಾಯಿ, ಮಗಳು, ಸಹೋದರಿ, ಸೋದರತ್ತೆ, ಚಿಕ್ಕಮ್ಮ, ಸೇರಿದಂತೆ ಬಹುತೇಕ ಎಲ್ಲ ಆನೆಗಳೂ ಇರುತ್ತವೆ. ಗುಂಪಿನಲ್ಲಿನ ಹೆಚ್ಚು ಯವಸ್ಸಾದ ಆನೆ ಯಜಮಾನಿಯಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ವಯಸ್ಕ ಗಂಡಾನೆಗಳು ಸಾಮಾನ್ಯವಾಗಿ ಒಂಟಿಯಾಗಯೇ ಜೀವನ ಪರ್ಯಂತ ಬದುಕುತ್ತವೆ. ಆದರೆ ಹೆಣ್ಣಾನೆಗಳು ತಮ್ಮ ಗುಂಪಿನ ಆನೆಗಳನ್ನು ಹೊರತು ಪಡಿಸಿ ಸಂಪರ್ಕಕ್ಕೆ ಬರುವ ಗಂಡಾನೆ ಹಾಗೂ ಇತರ ಗುಂಪುಗಳೊಂದಿಗೆ ಸಂಪರ್ಕಕ್ಕೆ ಬರುತ್ತವೆ.
ಸಾಮಾನ್ಯವಾಗಿ ಆನೆಗಳ ಕುಟುಂಬಗಳು 5 ರಿಂದ 15 ಆನೆಗಳನ್ನು ಒಳಗೊಂಡಿರುತ್ತವೆ. ಅನೇಕ ಎಳೆಯ ಮರಿ ಆನೆಗಳನ್ನು ಈ ಆನೆಗಳ ಗುಂಪು ಹೊಂದಿರುತ್ತದೆ. ಜೊತೆಗೆ ಹೆಣ್ಣಾನೆಗಳು ತಮ್ಮ ಗುಂಪಿನಿಂದ ಹೊರಗೆ ಬಂದು ತಮ್ಮದೇ ಕುಟುಂಬವನ್ನು ಕಟ್ಟಿಕೊಳ್ಳುತ್ತವೆ. ಆನೆಗಳ ಕುಟುಂಬಗಳಿಗೆ ಸಂಬಂಧಿಕ ಆನೆಗಳು ಹಾಗೂ ಸಂಬಂಧವಿಲ್ಲದ ಆನೆಗಳ ಬಗ್ಗೆ ಸ್ಪಷ್ಟ ಅರಿವು ಇರುತ್ತದೆ. ಹೀಗೆ ಮನುಷ್ಯರಂತೆಯೆ ಕೌಟಂಬಿಕ ಜೀವನ ಮಾಡುವ ಆನೆಗಳ ದಿನ ಇವತ್ತು. ಪ್ರತಿ ವರ್ಷ ಆಗಷ್ಟ್ 12 ರಂದು 'ವಿಶ್ವ ಆನೆ ದಿನ' ಆಚರಿಸಲಾಗುತ್ತಿದೆ.

ಆನೆ ಬಗೆಗಿನ ಕೌತುಕಗಳು
ಆನೆಗಳಲ್ಲಿ ಪ್ರಮುಖವಾಗಿ ಎರಡು ತಳಿಗಳಿವೆ. ಒಂದು ಆಫ್ರಿಕನ್ ಆನೆ ಹಾಗೂ ಮತ್ತೊಂದು ಏಷ್ಯನ್ ಆನೆ. ಹೀಗೆ ಎರಡೂ ತಳಿಗಳಿದ್ದರೂ ಬಹಳಷ್ಟು ಸಾಮ್ಯೆತೆಯಿದೆ. ಆನೆ ಭೂಮಿಯ ಮೇಲಿನ ದೈತ್ಯ ಪ್ರಾಣಿ. ಜೊತೆಗೆ ಬಹಳಷ್ಟು ಕೌತುಕಗಳಿಗೂ ಆನೆ ಕಾರಣ. ಜೊತೆಗೆ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಆನೆ ಗರ್ಭಾವಸ್ಥೆ ಕಾಲ ಎಲ್ಲಕ್ಕಿಂದ ಅತ್ಯಂತ ದೀರ್ಘ ಅಂದರೆ 22 ತಿಂಗಳುಗಳು.
ಆಗ ತಾನೇ ಜನಿಸಿದ ಆನೆ ಮರಿ ಬರೊಬ್ಬರಿ 120 ಕೆಜಿ ವರೆಗೂ ತೂಗುತ್ತದೆ. ಆನೆಗಳು ದೀರ್ಘಾಯುಷಿ. ಅಂದರೆ ಸುಮಾರು 70 ವರ್ಷಗಳ ಕಾಲ ಆನೆ ಬದುಕುತ್ತವೆ. ದಂತಗಳಿಗಾಗಿ ಆನೆಗಳನ್ನು ಹತ್ಯೆ ಮಾಡುವುದರಿಂದ ಸರಾಸರಿ ಆಯುಸ್ಸು ಕಡಿಮೆಯಾಗುತ್ತಿದೆ. ಹೀಗಾಗಿ ಜಗತ್ತಿನೆಲ್ಲೆಡೆ ಆನೆಗಳನ್ನು ಸಂರಕ್ಷಿತ ಜೀವಿ ಎಂದು ಪರಿಗಣಿಸಿ, ಕಾಪಾಡಿಕೊಳ್ಳಲಾಗುತ್ತಿದೆ. ಆನೆಗಳನ್ನು ಹಿಡಿಯುವುದು, ಪಳಗಿಸುವುದು ಹಾಗೂ ದಂತದ ವ್ಯಾಪಾರವನ್ನು ನಿರ್ಬಂಧಿಸಲಾಗಿದೆ.
ಆನೆಗಳ ಹತ್ಯೆಯನ್ನು ತಡೆಯಲು 1992ರಲ್ಲಿಯೇ ಎಲೆಫಂಟ್ ಪ್ರಾಜೆಕ್ಟ್ ಯೋಜನೆ ಆರಂಭಿಸಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ 2010ರಲ್ಲಿ ಕೇಂದ್ರ ಸರ್ಕಾರ ಎಲಿಫಂಟ್ ಟಾಸ್ಕ್ ಫೋರ್ಸ ರಚನೆ ಮಾಡಿದೆ. ಭಾರತದಲ್ಲಿ ಅಂದಾಜು 28 ಸಾವಿರ ಆನೆಗಳಿವೆ. ಜಗತ್ತಿನಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ನಾಡು ನಮ್ಮದು.

ಆನೆಗಳ ಸಂರಕ್ಷಣೆ
ಆನೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 1991-92ರಲ್ಲಿ ಯೋಜನೆ ಆರಂಭಿಸಲಾಗಿದೆ. ಯೋಜನೆಯಡಿ ನಮ್ಮ ರಾಜ್ಯದ ದಾಂಡೇಲಿ ಹಾಗೂ ಮೈಸೂರು ಆನೆ ಸಂರಕ್ಷಿತ ಪ್ರದೇಶಗಳಲ್ಲಿ ಕಾಡಾನೆಗಳು ವಾಸಿಸಲು ರಕ್ಷಣೆ ಹಾಗೂ ಸಂರಕ್ಷಣೆ ಮಾಡಲು ಒತ್ತು ಕೊಡಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ನಗರ-ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ 8056.81 ಚ.ಕಿ.ಮೀ ಪ್ರೇದೇಶವನ್ನು ಮೈಸೂರು ಆನೆ ರಕ್ಷಿತ ಪ್ರದೇಶ ಹಾಗೂ 6724.87 ಚ.ಕಿ.ಮೀ ಪ್ರದೇಶವನ್ನು ದಾಂಡೇಲಿ ಆನೆ ರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಜೊತೆಗೆ ಭದ್ರಾ ಅಭಯಾರಣ್ಯ ಮತ್ತು ಸಂಬಂಧಿಸಿದ ಪ್ರದೇಶವನ್ನು ಆನೆ ರಕ್ಷಿತ ಪ್ರದೇಶಕ್ಕೆ ಸೇರಿಸಲಾಗಿದೆ.

ಕರ್ನಾಟಕದಲ್ಲಿ ಆನೆಗಳು
2012ರ ಆನೆ ಗಣಿತಿಯಂತೆ ರಾಜ್ಯದಲ್ಲಿ ಒಟ್ಟು ಸುಮಾರು 6072 ಆನೆಗಳಿದ್ದುದು ಕಂಡು ಬಂದಿದೆ. ಇದು ದೇಶದಲ್ಲಿರುವ ಆನೆಗಳ ಶೇಕಡಾ 25ರಷ್ಟು ಎಂದು ಅಂದಾಜಿಸಲಾಗಿದೆ. ಇನ್ನು 2017-18ರಲ್ಲಿ ಮೈಸೂರು ಹಾಗೂ ಭದ್ರಾ ಆನೆ ಸಂರಕ್ಷಿತ ಪ್ರದೇಶಗಳಲ್ಲಿ ಆನೆ ಗಣಿತಿ ಕೈಗೊಳ್ಳಲಾಗಿದೆ. ಅದರಂತೆ 6049 ಆನೆಗಳನ್ನು ಗುರುತಿಸಿದ್ದು, ದೇಶದ ಒಟ್ಟು 27,000 ಸಾವಿರ ಆನೆಗಳ ಶೇಕಡಾ 25ರಷ್ಟು ಆನೆಗಳು ರಾಜ್ಯದಲ್ಲಿವೆ ಎಂಬುದು ವಿಶೇಷ.
ಆನೆಗಳ ರಕ್ಷಣಾ ಕಾರ್ಯ ಇಡೀ ವರ್ಷ ನಡೆದಿರುತ್ತದೆ. ಆನೆಗಳ ಕಳ್ಳ ಬೇಟೆ ತಡೆ ಶಿಬಿರಗಳ ಸ್ಥಾಪನೆ, ಬೇಸಿಗೆ ಕಾಲದಲ್ಲಿ ಬೆಂಕಿ ವಾಚರ್ಗಳನ್ನು ನೇಮಕ ಮಾಡಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಆನೆಗಳ ರಕ್ಷಣೆಗೆ ಕೈಗೊಳ್ಳಲಾಗಿದೆ.

ಆಹಾರ ಕೊರತೆ
ಇನ್ನು ಆನೆಗಳಿಗೆ ಆಹಾರದ ಕೊರತೆ ಉಂಟಾಗಲು ಪ್ರಮುಖ ಕಾರಣ ಅರಣ್ಯ ಪ್ರದೇಶದಲ್ಲಿ ದಟ್ಟವಾಗಿ ಬೆಳೆಯುವ ಲಂಟಾನ ಮತ್ತು ಯುಪಟೋರಿಯಂ ಕಳೆ. ಇವುಗಳ ಬೆಳವಣಿಗೆಯಿಂದ ಹುಲ್ಲಿನ ಬೆಳವಣಿಗೆ ಆಗುವುದಿಲ್ಲ. ಹೀಗಾಗಿ ಆನೆಗಳಿಗೆ ಪ್ರಮುಖ ಆಹಾರ ಹುಲ್ಲು ಸಿಗದಂತಾಗಿ, ಅರಣ್ಯದಿಂದ ಹೊರಗೆ ಬರುವ ಸಾಧ್ಯತೆಗಳಿರುತ್ತವೆ. ಹುಲ್ಲು ಬೆಳೆಯುವ ಅರಣ್ಯ ಪ್ರದೇಶಗಳಲ್ಲಿ ಬೆಳೆಯುವ ಲಂಟಾನ ಮತ್ತು ಯುಪಟೋರಿಯಂ ಕಳೆ ತೆಗೆಯಲು ಯೋಜನೆಯಿದೆ.
ಕಳೆಯನ್ನು ಕಿತ್ತು ಅಲ್ಲಿ ಹುಲ್ಲು ಬೆಳೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಅದರಿಂದ ಆನೆಗಳಿಗೆ ಸಾಕಷ್ಟು ಆಹಾರ ಸಿಗುತ್ತದೆ.

ಆನೆ-ಮನುಷ್ಯ ಸಂಘರ್ಷ
ಉಪಯೋಗಿಸಿದ ರೈಲು ಹಳಿಗಳಿಂದ ಆನೆ-ಮನುಷ್ಯನ ಸಂಘರ್ಷ ನಿಯಂತ್ರಣ ಎಂಬ ಯೋಜನೆ ರೂಪಿಸಲಾಗಿದೆ. ಅದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಆನೆ-ಮಾನವ ಸಂಘರ್ಷ ತಪ್ಪಿಸಲು 3 ವರ್ಷಗಳ ಅವಧಿಯ ರೈಲ್ ಬ್ಯಾರಿಕೇಡ್ ಯೋಜನೆ ಜಾರಿಗೆ ತರಲಾಗುತ್ತಿದೆ. ಜೊತೆಗೆ ಕಾಡ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಯೋಜನ ರೂಪಿಸಿದೆ.
ಜೊತೆಗೆ ಆನೆ ಸಂಘರ್ಷದಿಂದ ಮೃತಪಟ್ಟವರಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ಸರ್ಕಾರ ಕೊಡುತ್ತಿದೆ. ಆನೆ ದಾಳಿಗೆ ಒಳಗಾಗಿ ವ್ಯಕ್ತಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 5 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳ ಮಾಶಾಸನ ನೀಡಲಾಗುತ್ತಿದೆ.

ವಿಶ್ವ ಆನೆ ದಿನ
ಏಷ್ಯನ್ ಹಾಗೂ ಆಫ್ರಿಕನ್ ಆನೆಗಳ ಸಂರಕ್ಷಣೆಗಾಗಿ 2012ರ ಆಗಷ್ಟ್ 12 ರಂದು ವಿಶ್ವ ಆನೆ ದಿನವನ್ನು ಆರಂಭಿಸಲಾಗಿದೆ. ಉಳಿದ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಜನರು ಆನೆಯನ್ನು ಪ್ರೀತಿಸುತ್ತಾರೆ, ಪೂಜೆ ಮಾಡುತ್ತಾರೆ ಹಾಗೆ ಗೌರವವನ್ನೂ ಕೊಡುತ್ತಾರೆ.
ಆದರೂ ಆನೆಗಳನ್ನು ಬೇಟೆಯಾಡುವುದು, ಅವುಗಳ ವಾಸಸ್ಥಾನಗಳನ್ನು ಹಾಳು ಮಾಡುವುದರಿಂದ ಆನೆಗಳ ಭವಿಷ್ಯಕ್ಕೆ ಅಪಾಯವಿದೆ. ಪರಿಸರ ಸಮತೋಲನಕ್ಕೆ ಆನೆಯ ಸಂರಕ್ಷಣೆ ಅತಿ ಅಗತ್ಯವಾಗಿದೆ. ಕಾಡುಗಳ್ಳ ವೀರಪ್ಪನ್ ಸಾವಿನ ಬಳಿಕ ಆನೆ ಕಳ್ಳ ಬೇಟೆಗೆ ಬಹಳಷ್ಟು ತಡೆ ಹಾಕಲಾಗಿದೆ. ಆದರೂ ಕಳ್ಳಬೇಟೆ ಸಂಪೂರ್ಣವಾಗಿ ನಿಂತಿಲ್ಲ ಎಂಬುದು ಆಗಾಗ ಸಂಭವಿಸುವ ಆನೆಗಳ ಸಾವಿನಿಂದ ಕಂಡು ಬಂದಿದೆ.
ಹೀಗಾಗಿ ಆನೆಗಳನ್ನು ರಕ್ಷಣೆ ಮಾಡಿ, ಸಂರಕ್ಷಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ.












Click it and Unblock the Notifications