ತೆಲಂಗಾಣ ಉಪ ಚುನಾವಣೆ: ಬಿಜೆಪಿ ಹೊಡೆತಕ್ಕೆ ಟಿಆರ್ಎಸ್,ಕಾಂಗ್ರೆಸ್ ಬೇಸ್ತು
ಹೈದರಾಬಾದ್, ನ 2: ಇತ್ತೀಚೆಗೆ ಸಿವೋಟರ್ ಸರ್ವೇ ಒಂದನ್ನು ಮಾಡಿತ್ತು. ದೇಶದ ಕೆಟ್ಟ ಮುಖ್ಯಮಂತ್ರಿ ಯಾರು ಎನ್ನುವ ಸರ್ವೇಯಲ್ಲಿನ ಒಂದು ಪ್ರಶ್ನೆಗೆ ಉತ್ತರ ಬಂದಿದ್ದು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರದ್ದು.
ದಕ್ಷಿಣ ಭಾರತದಲ್ಲಿ ಕರ್ನಾಟಕದ ನಂತರ ಬಿಜೆಪಿಗೆ ಒಂದು ಆಶಾಕಿರಣವಾಗಿ ಕಾಣಿಸುತ್ತಿರುವುದು ತೆಲಂಗಾಣ, ಅದರಲ್ಲೂ ಪ್ರಮುಖವಾಗಿ ರಾಜಧಾನಿ ಹೈದರಾಬಾದ್ ಮತ್ತು ಅಲ್ಲಿಗೆ ಹೊಂದಿಕೊಂಡಿರುವ ಪ್ರದೇಶಗಳು.
ಹಾನಗಲ್ ನಲ್ಲಿ ಬಿಜೆಪಿ ಸೋಲು: ಬೊಮ್ಮಾಯಿ ಆಡಳಿತ ವಿರುದ್ಧ ಸಿಡಿದೇಳಲಿದೆಯಾ ಮೂಲ ಬಿಜೆಪಿ ನಾಯಕರು?
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಊಹಿಸಲೂ ಅಸಾಧ್ಯವಾದ ಸಾಧನೆಯನ್ನು ಮಾಡಿದ ನಂತರ, ನೆಮ್ಮದಿ ಹಾಳಾಗಿದ್ದು ಸ್ಥಳೀಯ ಪಕ್ಷಗಳಾದ ಟಿಆರ್ಎಸ್ ಮತ್ತು ಓವೈಸಿಯ ಪಕ್ಷಕ್ಕೆ. ಬಿಜೆಪಿಗೆ ರುಚಿ ತೋರಿಸಬಾರದು ಎಂದು ಟಿಆರ್ಎಸ್ ಮತ್ತು ವೈ.ಎಸ್.ಆರ್ ಕಾಂಗ್ರೆಸ್ ಒಪ್ಪಂದವನ್ನು ಮಾಡಿಕೊಂಡಿತ್ತು ಎನ್ನುವ ಸುದ್ದಿಯಿದೆ.
ಈಗ, ತೆಲಂಗಾಣದ ಒಂದು ಅಸೆಂಬ್ಲಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ, ಸಿಎಂ ಚಂದ್ರಶೇಖರ ರಾವ್ ಅವರ ನೆಮ್ಮದಿಯನ್ನು ಇನ್ನಷ್ಟು ಕೆಡಿಸಿದೆ. ಬಿಜೆಪಿ ಅಭ್ಯರ್ಥಿ ಅಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಒಂದು ಗೆಲುವು ರಾಜಕೀಯ ಪಕ್ಷಗಳಿಗೆ ಹಲವು ಸಂದೇಶವನ್ನು ರವಾನಿಸಿದೆ.
ಮತದಾರರಿಗೆ ಲಂಚ: ಟಿಆರ್ಎಸ್ ಸಂಸದೆ ಕವಿತಾಗೆ ಜೈಲು ಶಿಕ್ಷೆ
ಹುಜುರಾಬಾದ್ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆ
ಕರೀಂನಗರ ಲೋಕಸಭಾ ವ್ಯಾಪ್ತಿಗೆ ಬರುವ ಹುಜುರಾಬಾದ್ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಇಂದು (ನ 2) ಹೊರ ಬಿದ್ದಿದೆ. ಬಿಜೆಪಿ ಮತ್ತು ಟಿಆರ್ಎಸ್ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ಬಾರಿ ಅಂದರೆ 2018ರ ಅಸೆಂಬ್ಲಿ ಚುನಾವಣೆಯಲ್ಲಿ ನೋಟಾಗಿಂತಲೂ ಕಮ್ಮಿ ಮತ ಪಡೆದಿದ್ದ ಬಿಜಿಪಿ, ಭರ್ಜರಿ ಗೆಲುವು ಸಾಧಿಸುವ ಮೂಲಕ, 2023ರಲ್ಲಿ ನಡೆಯುವ ಅಲ್ಲಿನ ಚುನಾವಣೆಗೆ ಸಂದೇಶವನ್ನು ಇಲ್ಲಿಂದ ರವಾನಿಸಿದೆ.
ಸಿಎಂ ಚಂದ್ರಶೇಖರ್ ರಾವ್ ಆಪ್ತ ಈಟಲ ರಾಜೇಂದರ್ ಜಯಭೇರಿ
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರ ಪರಮಾಪ್ತರಾಗಿದ್ದ ಈಟಲ ರಾಜೇಂದರ್, ಪಕ್ಷ ತೊರೆದು ಬಿಜೆಪಿಯನ್ನು ಸೇರಿದ್ದರು. ಇವರು 1,06,780 ಮತಗಳನ್ನು ಪಡೆದಿದ್ದರೆ, ಟಿಆರ್ಎಸ್ ಅಭ್ಯರ್ಥಿಯಾಗಿದ್ದ ಗೆಲ್ಲು ಶ್ರೀನಿವಾಸ ಯಾದವ್ 82,712 ಮತಗಳನ್ನು ಪಡೆಯುವ ಮೂಲಕ, ಬಿಜೆಪಿ ವಿರುದ್ದ 24,068 ಮತಗಳ ಅಂತರದಿಂದ ಮಂಡಿಯೂರಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಲ್ಮೋರ ವೆಂಕಟ ನರಸಿಂಗ್ ರಾವ್ ಅವರು ಕೇವಲ 3,012 ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಬೇಸ್ತು
ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿಗೆ ಶೇ. 51.96, ಟಿಆರ್ಎಸ್ ಅಭ್ಯರ್ಥಿಗೆ ಶೇ. 40.38 ಮತಗಳು ಬಂದಿವೆ. ಒಟ್ಟು ಇಪ್ಪತ್ತು ಮಂದಿ ಪಕ್ಷೇತರರು ಕಣದಲ್ಲಿದ್ದರು. ಇನ್ನು, ವೈ.ಎಸ್.ಆರ್ ಪಾರ್ಟಿಯ ಅಭ್ಯರ್ಥಿಗೆ 122 ಮತಗಳು ಮಾತ್ರ ಬಿದ್ದಿವೆ. ಚಂದ್ರಶೇಖರ ರಾವ್ ಅವರ ಪಕ್ಷಕ್ಕಾದ ಈ ಸೋಲಿನಿಂದಾಗಿ, ಸರಕಾರಕ್ಕೆ ಏನೂ ತೊಂದರೆಯಿಲ್ಲದಿದ್ದರೂ, ಬಿಜೆಪಿ ಸ್ಪಷ್ಟ ಸಂದೇಶವನ್ನಂತೂ ಸಾರುವಲ್ಲಿ ಯಶಸ್ವಿಯಾಗಿದೆ.
ಜಗನ್ ತಂಗಿ ವೈ.ಎಸ್.ಶರ್ಮಿಳಾ ಅವರ ತೆಲಂಗಾಣ ಪಾದಯಾತ್ರೆ
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಟಿಆರ್ಎಸ್ 56, ಬಿಜೆಪಿ 48 ಮತ್ತು ಓವೈಸಿ ಪಕ್ಷ 44 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಇದಾದ ನಂತರ, ಬಿಜೆಪಿಯನ್ನು ತೆಲಂಗಾಣದಲ್ಲಿ ಬೆಳೆಯಲು ಬಿಡಬಾರದು ಎಂದು ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಮತ್ತು ತೆಲಂಗಾಣದ ಸಿಎಂ ಚಂದ್ರಶೇಖರ್ ರಾವ್ ಮಾತುಕತೆ ನಡೆಸಿ ಅಲ್ಲಿ ವೈ.ಎಸ್.ಆರ್ ಪಕ್ಷವನ್ನು ಬೆಳೆಸುವ ನಿರ್ಧಾರಕ್ಕೆ ಬರಲಾಯಿತು, ಅದರ ಮುಂದುವರಿದ ಭಾಗವೇ ವೈ.ಎಸ್.ಆರ್ ಪಕ್ಷದ ನಾಯಕಿ, ಜಗನ್ ತಂಗಿ ವೈ.ಎಸ್.ಶರ್ಮಿಳಾ ಅವರ ತೆಲಂಗಾಣ ಪಾದಯಾತ್ರೆ ಎಂದು ಹೇಳಲಾಗುತ್ತಿದೆ.