Get Updates
Get notified of breaking news, exclusive insights, and must-see stories!

ಅಂದು ಅಮಾವಾಸ್ಯೆ, ಇಂದು ಹುಣ್ಣಿಮೆ; ರಾಜ್ ಕುಮಾರ್ ಅಪಹರಣದ ಕತ್ತಲು

Recommended Video

      ಡಾ ರಾಜ್ ಕುಮಾರ್ ರನ್ನ ಅಪಹರಿಸಿದ ವೀರಪ್ಪನ್ ನ ಕರಾಳ ನೆನಪು | Oneindia Kannada

      18 ವರ್ಷಗಳ ಬಳಿಕ ನಟ ರಾಜ್ ಕುಮಾರ್ ಕಿಡ್ನಾಪ್ ಪ್ರಕರಣದ ಆದೇಶ ಮಂಗಳವಾರ ಪ್ರಕಟಗೊಂಡಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾ.ಕೆ ಮಣಿ ಅವರು ಆದೇಶ ಹೊರಡಿಸಿದ್ದು, 9 ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 30, 2000ನೇ ಇಸವಿಯಲ್ಲಿ ನಡೆದ ಅಪಹರಣ ಹಾಗೂ ಆ ನಂತರದ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲಾಗಿದೆ.

      ಜುಲೈ 30, 2000ನೇ ಇಸವಿ. ಅಂದು ಭೀಮನ ಅಮಾವಾಸ್ಯೆ. ತಮ್ಮ 71ನೇ ವಯಸ್ಸಿನಲ್ಲಿ ಇಂಥದ್ದೊಂದು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಬಹುದು ಎಂಬ ಸಣ್ಣ ಸುಳಿವು ಕೂಡ ಆ ಮಹಾನ್ ನಟನಿಗೆ ಇರಲಿಲ್ಲ. ಗಾಜನೂರಿನ ತಾಳವಾಡಿ ಬಳಿಯ ತೋಟದ ಮನೆಯಿಂದ ರಾಜಕುಮಾರ್ ಮತ್ತು ಇತರ ಮೂವರನ್ನು ವೀರಪ್ಪನ್ ಅಪಹರಿಸಿದ್ದ.

      ನೂರೆಂಟು ದಿನಗಳ ಕಾಲ ವನವಾಸ ಅನುಭವಿಸಿದ ರಾಜಕುಮಾರ್ ಬಿಡುಗಡೆ ಆದದ್ದು ಹೌದು. ಆದರೆ ಕಾಡು ಮೇಡು ಅಲೆದ ಸುಸ್ತು ಅವರ ದೇಹಾರೋಗ್ಯವನ್ನು ಹಾಳು ಮಾಡಿತ್ತು. ಮಂಡಿ ನೋವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ಮತ್ತೊಮ್ಮೆ ತಮ್ಮ ನೆಚ್ಚಿನ ಊರಿಗೆ ಹೋಗಲಾಗದು ಎಂದು ನೋವು ಪಡುವಂತಾಯಿತು. ಮುಂಚಿನಂತೆ ಆರಾಮವಾಗಿ ಇರಲು ಅವರಿಗೆ ಸಾಧ್ಯವಾಗಲೇ ಇಲ್ಲ.

      ಹದಿನೆಂಟು ವರ್ಷಗಳ ನಂತರ ಮತ್ತೆ ಆ ಕರಾಳ ನೆನಪು ಕಣ್ಣೆದುರು ಬರುತ್ತಿದೆ. ಅಪಹರಣ ಪ್ರಕರಣದಲ್ಲಿ ವೀರಪ್ಪನ್ ಸಹಚರರು ಖುಲಾಸೆ ಆಗಿದ್ದಾರೆ ಎಂಬ ಸುದ್ದಿ ಮಂಗಳವಾರ ಬಂದಿದೆ. ಇಡೀ ಕರ್ನಾಟಕವು ಮೂರು ತಿಂಗಳ ಕಾಲ ಆತಂಕದಲ್ಲಿ ಕಳೆದ ಅವಧಿ ಹಾಗೂ ಅಂಥ ಹಿರಿಯ-ಸಜ್ಜನ ವ್ಯಕ್ತಿಗೆ ಕುಟುಂಬದಿಂದ ದೂರ ಇರುವಂತೆ ಮಾಡಿದ ವೀರಪ್ಪನ್ ಕ್ರೌರ್ಯವೂ ನೆನಪಾಗುತ್ತಿದೆ.

      ವೀರಪ್ಪನ್ ಜತೆಗೆ ಮಾತನಾಡಲು ಸಿದ್ಧ ಎಂದರು ರಜನೀಕಾಂತ್

      ವೀರಪ್ಪನ್ ಜತೆಗೆ ಮಾತನಾಡಲು ಸಿದ್ಧ ಎಂದರು ರಜನೀಕಾಂತ್

      ತೋಟದ ಮನೆಯಿಂದ ರಾಜಕುಮಾರ್ ಮತ್ತು ಇತರರನ್ನು ಅಪಹರಿಸಿದ ವೀರಪ್ಪನ್, ಕ್ಯಾಸೆಟ್ ವೊಂದನ್ನು ಪಾರ್ವತಮ್ಮ ಅವರಿಗೆ ನೀಡಿದ್ದ. ಅದನ್ನು ಆಗಿನ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಬಳಿ ತಂದುಕೊಟ್ಟಿದ್ದರು ಆಕೆ. ಆಗ ಗೃಹ ಸಚಿವರಾಗಿದ್ದವರು ಮಲ್ಲಿಕಾರ್ಜುನ ಖರ್ಗೆ. ಇಡೀ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಯಿತು. ತಮ್ಮದೇ ಮನೆಯ ಹಿರಿಯ ಸದಸ್ಯರೊಬ್ಬರನ್ನು ಕಾಡು ಮೃಗವೊಂದು ಅಪಹರಿಸಿದೆ ಎಂಬ ಸಿಟ್ಟು ವ್ಯಕ್ತವಾಗುತ್ತಿತ್ತು. ವೀರಪ್ಪನ್ ಇದ್ದ ಕಾಡಿಗೇ ನುಗ್ಗಿ, ರಾಜಕುಮಾರ್ ರನ್ನು ವಾಪಸ್ ಕರೆದುಕೊಂಡು ಬರ್ತೀವಿ ಎಂದು ಅಭಿಮಾನಿಗಳು ಅಬ್ಬರಿಸಿದರು. ಅವರಿಗೆ ಸಣ್ಣ ಮಟ್ಟದ ಸಮಸ್ಯೆಯಾದರೂ ರಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ. ಅಷ್ಟೇ ಅಲ್ಲ, ಕರ್ನಾಟಕ-ತಮಿಳುನಾಡು ಮಧ್ಯೆ ತಣಿಸಲಾಗದ ದ್ವೇಷದ ದಳ್ಳುರಿ ಹೊತ್ತಿಕೊಳ್ಳುತ್ತದೆ ಎಂಬ ಆತಂಕ ಎದುರಾಯಿತು. "ಅವರನ್ನು ಬಿಡಿಸಿಕೊಂಡು ಬರಲು ಸ್ವತಃ ನಾನೇ ವೀರಪ್ಪನ್ ಜತೆಗೆ ಮಾತನಾಡಲು ಸಿದ್ಧ" ಎಂದರು ರಜನೀಕಾಂತ್. ಇನ್ನು ಆಗ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಎಂ.ಕರುಣಾನಿಧಿ ಅವರನ್ನು ರಾಜ್ ಕುಟುಂಬದವರ ಜತೆಗೆ ತೆರಳಿ ಎಸ್ಸೆಂ ಕೃಷ್ಣ ಭೇಟಿಯಾದರು. ಈ ಪ್ರಕರಣದ ಸುಖಾಂತ್ಯಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

      ನಾಗಪ್ಪ ಮಾರಡಗಿ ತಪ್ಪಿಸಿಕೊಂಡು ಬಂದುಬಿಟ್ಟರು

      ನಾಗಪ್ಪ ಮಾರಡಗಿ ತಪ್ಪಿಸಿಕೊಂಡು ಬಂದುಬಿಟ್ಟರು

      "ವೀರಪ್ಪನ್ ಅಣ್ಣ" ಅಂತಲೇ ಮಾತಿಗೆ ಆರಂಭಿಸಿದ ಪಾರ್ವತಮ್ಮ ಅವರು, ನನ್ನ ಮನೆಯವರನ್ನು ಬಿಡುಗಡೆ ಮಾಡಿ ಎಂದು ರೇಡಿಯೋ ಮೂಲಕ ಕೇಳಿಕೊಂಡರು. ರಾಜ್ ಮೊಮ್ಮಕ್ಕಳು ಸಹ ಮನವಿ ಮಾಡಿದರು. ಆ ನೂರೆಂಟು ದಿನಗಳ ಕಾಲವೂ ಚಿತ್ರರಂಗದ ಚಟುವಟಿಕೆ ಸ್ತಬ್ಧವಾಯಿತು. ಸರಕಾರದ ಮೇಲೆ ನಿರಂತರವಾಗಿ ಒತ್ತಡ ಬೀಳುತ್ತಲೇ ಇತ್ತು. ಜತೆಗೆ ದಿನಕ್ಕೊಂದು ವದಂತಿಗೆ ರೆಕ್ಕೆ-ಪುಕ್ಕ. ಕ್ಯಾಸೆಟ್ ಬಿಡುಗಡೆ ಮಾಡುತ್ತಾ ತನ್ನ ಬೇಡಿಕೆಯನ್ನು ಇಡುತ್ತಿದ್ದ ವೀರಪ್ಪನ್. ಆತನ ಜತೆಗೆ ಸಂಧಾನ ನಡೆಸುವುದಕ್ಕೆ ಪತ್ರಕರ್ತ ನಕ್ಕೀರನ್ ಗೋಪಾಲನ್ ನ ಕಳುಹಿಸಲಾಯಿತು. ಆದರೆ ಆ ಬಾರಿ ವೀರಪ್ಪನ್ ಬಹಳ ಷರತ್ತುಗಳನ್ನು ಹಾಕುತ್ತಲೇ ಇದ್ದ. 71ನೇ ವಯಸ್ಸಿನಲ್ಲಿ ರಾಜಕುಮಾರ್ ರ ದೇಹಾರೋಗ್ಯವೇ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಅವರನ್ನು ಅಲ್ಲಿ ನೋಡಿದರಂತೆ, ಇಲ್ಲಿ ನೋಡಿದರಂತೆ ಎಂಬ ಸುದ್ದಿಗಂತೂ ಕೊರತೆ ಇರಲಿಲ್ಲ. ಈ ಎಲ್ಲದರ ಮಧ್ಯೆ ಬೆಚ್ಚಿಬೀಳಿಸುವ ಮತ್ತೊಂದು ಘಟನೆ ನಡೆಯಿತು. ಅಪಹರಣವಾಗಿದ್ದ ನಾಲ್ವರ ಪೈಕಿ ಒಬ್ಬರಾಗಿದ್ದ ನಾಗಪ್ಪ ಮಾರಡಗಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. ಇದರಿಂದ ವೀರಪ್ಪನ್ ಗೆ ಮತ್ತೂ ಸಿಟ್ಟು ಬರಬಹುದು. ಪಟ್ಟು ಬಿಡದಂತೆ ಆಗಬಹುದು ಎಂಬ ಆತಂಕ ಶುರು ಆಯಿತು.

      ನಕ್ಕೀರನ್ ಗೋಪಾಲನ್ ಸಂಧಾನ ಸಫಲವಾಗಲಿಲ್ಲ

      ನಕ್ಕೀರನ್ ಗೋಪಾಲನ್ ಸಂಧಾನ ಸಫಲವಾಗಲಿಲ್ಲ

      ಕನ್ನಡ ಚಿತ್ರರಂಗದಿಂದ ದಿನವೂ ಹರಕೆ-ಪೂಜೆ ನಡೆಯುತ್ತಲೇ ಇತ್ತು. ಆಯಾ ದಿನದ ದುಡಿಮೆಯಿಂದಲೇ ಬದುಕುವ ಕಾರ್ಮಿಕರಿಂದ ಮೊದಲುಗೊಂಡು ದೊಡ್ಡ ನಟರ ತನಕ ಪ್ರತಿಭಟನೆ, ಆಕ್ರೋಶ, ಪೂಜೆ-ಪುನಸ್ಕಾರ ಎಲ್ಲದರಲ್ಲೂ ಪಾಲ್ಗೊಂಡರು. ನಕ್ಕೀರನ್ ಗೋಪಾಲ್ ಸಂಧಾನದ ಸಲುವಾಗಿ ಹೋಗಿಬರುತ್ತಿದ್ದದ್ದೇ ಆಯಿತು ಹೊರತು ಯಾವುದೂ ಫಲಪ್ರದ ಆಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಯಿತು. ಇನ್ನು ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ನಾಗಪ್ಪ ಮಾರಡಗಿ ಬಗ್ಗೆ ಕೆಲವರು ಸಿಟ್ಟಾದರು. ಶ್ರೀಲಂಕಾದ ಎಲ್ ಟಿಟಿಇ ಜತೆಗೆ ವೀರಪ್ಪನ್ ಸಂಪರ್ಕ ಸಾಧಿಸಿದ್ದಾನೆ. ಇನ್ನೇನು ಆತನ ಜಾಲ ವಿಸ್ತರಣೆ ಆಗಿ, ದೇಶ ಬಿಟ್ಟು ಹೋಗುವುದಕ್ಕೆ ಎಲ್ಲ ಸಿದ್ಧತೆ ಆಗಿಹೋಗಿದೆ ಎಂಬ ಚರ್ಚೆ ಶುರು ಆಯಿತು. ಆ ಸಂದರ್ಭದಲ್ಲೇ ರಾಜಕುಮಾರ್ ಬಿಡುಗಡೆ ಆದರಂತೆ ಎಂಬ ವದಂತಿ ಹಲವು ಅಲ ಹರಿದಾಡಿತು. ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿ ಹಾಳಾಗಿದೆ ಎಂಬ ಸುದ್ದಿಯೂ ದೊಡ್ಡ ಸದ್ದು ಮಾಡಿತು.

      ನೂರೆಂಟು ದಿನಗಳ ವನವಾಸ ಮುಗಿಯಿತು

      ನೂರೆಂಟು ದಿನಗಳ ವನವಾಸ ಮುಗಿಯಿತು

      ಅಂತಿಮವಾಗಿ ವೀರಪ್ಪನ್ ಜತೆಗೆ ಸಂಧಾನ ನಡೆಸುವುದಕ್ಕೆ ನೆಡುಮಾರನ್, ಡಾ.ಭಾನು ಮತ್ತಿತರರು ತೆರಳಿದರು. ಈ ಬಾರಿ ತೆರಳಿದ ಗುಂಪಿನ ಬಗ್ಗೆ ವೀರಪ್ಪನ್ ಗೆ ವಿಶೇಷವಾದ ಗೌರವ ಇತ್ತು ಎಂಬುದು ಆತ ಅವರ ಜತೆ ನಡೆದುಕೊಂಡ ರೀತಿಯಿಂದಲೇ ತಿಳಿಯುತ್ತಿತ್ತು. ನೂರೆಂಟು ದಿನಗಳನ್ನು ಕಾಡಿನಲ್ಲಿ ಕಳೆದ ಮಹಾನ್ ನಟನನ್ನು ವೀರಪ್ಪನ್ ಶಾಲು ಹೊದಿಸಿ ಕಳುಹಿಸಿಕೊಟ್ಟ. ತನ್ನ ಬಿಡುಗಡೆಗೆ ಶ್ರಮಿಸಿದ ಡಾ.ಭಾನುರನ್ನು ರಾಜಕುಮಾರ್ ಅವರು, ಶಕ್ತಿದೇವತೆ ಎಂದು ಕರೆದರು. ಬಿಡುಗಡೆ ಆಗಿ ಬಂದ ನಂತರ ರಾಜಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಪಹರಣದ ಆಘಾತ ಅವರನ್ನು ಜರ್ಝರಿತನ್ನಾಗಿ ಮಾಡಿತ್ತು. ಆ ಸಂದರ್ಭದಲ್ಲಿ ಅವರು ಆಡಿದ ಕೆಲ ಮಾತುಗಳು ವಿವಾದಕ್ಕೆ ಕಾರಣ ಆದವು. ವಯೋಸಹಜವಾಗಿ ಭಾವನಾತ್ಮಕ ಮಾತುಗಳನ್ನು ಆಡಿದ್ದರು. ಅಲ್ಲಿಂದ ಆಚೆಗೆ ಮಾಧ್ಯಮಗಳಿಂದ ಒಂದು ಅಂತರ ಶುರು ಆಯಿತು. ವೀರಪ್ಪನ್ ಬದುಕಿರುವ ತನಕ ರಾಜಕುಮಾರ್ ಮತ್ತೆ ಗಾಜನೂರಿಗೆ ಹೋಗಲಿಲ್ಲ. ಅಭಿಮಾನಿಗಳ ಜತೆಗೂ ಸಲೀಸಾಗಿ ಬೆರೆಯಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಹುಟ್ಟೂರಿನ ಜತೆಗೆ ಕರುಳುಬಳ್ಳಿ ಸಂಬಂಧ ಕೆಲ ಕಾಲ ಕಳೆಯುವಂತೆ ಮಾಡಿದ ಹಾಗೂ ಮುಂಚಿನಂತೆ ಅಭಿಮಾನಿಗಳ ಜತೆಗೆ ಸಮಯ ಕಳೆಯಲಾಗದೆ, ಸಿನಿಮಾ ಮಾಡಲಾಗದೆ ನೊಂದುಕೊಂಡರು. ಆ ಅಪಹರಣ ಪ್ರಕರಣದಲ್ಲಿ ಆರೋಪಿಗಳ ಖುಲಾಸೆಯಾಗಿದೆ. ಮತ್ತೆ ಆಗಿನ ಎಲ್ಲ ಘಟನೆ ನೆನಪಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+