Get Updates
Get notified of breaking news, exclusive insights, and must-see stories!

ರಾಷ್ಟ್ರಪತಿ ಕೋವಿಂದ್‌ರಿಂದ ಒಬ್ಬರಿಗೂ ಇಲ್ಲ ಕ್ಷಮೆ; ಆರು ಕ್ಷಮಾದಾನ ಅರ್ಜಿ ತಿರಸ್ಕಾರ

ನವದೆಹಲಿ, ಜುಲೈ 7: ಮರಣದಂಡನೆ ಶಿಕ್ಷೆಗೊಳಗಾದ ಕೈದಿಗಳು ರಾಷ್ಟ್ರಪತಿಗಳಿಗೆ ಕ್ಷಮಾದಾನಕ್ಕೆ ಮನವಿ ಮಾಡಿಕೊಳ್ಳುವುದು ಸಾಮಾನ್ಯ. ಎಂಥ ಘೋರ ಕೊಲೆ ಅಪರಾಧ ಎಸಗಿದವರೂ ಪ್ರಾಣದಿಂದ ಉಳಿಯಲು ಕ್ಷಮಾದಾನಕ್ಕೆ ಮೊರೆ ಹೋಗುತ್ತಾರೆ. ಈ ಹಿಂದೆ ಹಲವರಿಗೆ ಈ ರೀತಿ ಕ್ಷಮಾದಾನ ಸಿಕ್ಕಿದ್ದಿದೆ.

ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಐದು ವರ್ಷದ ಅಧಿಕಾರಾವಧಿಯಲ್ಲಿ ಒಬ್ಬರಿಗೂ ಕ್ಷಮಾದಾನ ನೀಡಿಲ್ಲ. ಆರು ಕ್ಷಮಾದಾನ ಅರ್ಜಿಗಳನ್ನು ಅವರು ತಿರಸ್ಕರಿಸಿದ್ದಾರೆ. ಇನ್ನೂ ನಾಲ್ಕು ಕ್ಷಮಾದಾನ ಅರ್ಜಿಗಳು ಬಾಕಿ ಉಳಿದಿವೆ.

ಹತ್ತು ವರ್ಷಗಳ ಹಿಂದೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ 2012ರ ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿಗಳೂ ಕೂಡ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರು. ಆದರೆ, ಇವರನ್ನು ಕ್ಷಮಿಸದಿರಲು ಕೋವಿಂದ್ ನಿರ್ಧರಿಸಿದ್ದಾರೆ.

ಇನ್ನೂ ವಿಲೇವಾರಿ ಆಗದ ನಾಲ್ವರ ಕ್ಷಮಾದಾನ ಅರ್ಜಿಗಳಲ್ಲಿ ಪಂಜಾಬ್ ಸಿಎಂ ಬೇಯಾಂತ್ ಸಿಂಗ್ ಹಂತಕ ಬಲವಂತ್ ಸಿಂಗ್ ರಾಜೋನಾ ಅರ್ಜಿಯೂ ಇದೆ. ಈತ ಕಳೆದ 25 ವರ್ಷಗಳಿಂದಲೂ ಜೈಲಿನಲ್ಲಿದ್ದಾನೆ.

 ಅರು ಮಂದಿ ಯಾರು?

ಅರು ಮಂದಿ ಯಾರು?

ಸಂಜಯ್, ಜಗತ್ ರಾಯ್, ಮುಕೇಶ್ ಕುಮಾರ್, ವಿನಯ್ ಶರ್ಮಾ, ಅಜಯ್ ಠಾಕೂರ್, ಪವನ್ ಕುಮಾರ್ ಗುಪ್ತಾ ಅವರ ಕ್ಷಮಾದಾನ ಅರ್ಜಿಗಳು ತಿರಸ್ಕಾರಗೊಂಡಿವೆ.

ಇವರಲ್ಲಿ ಕೊನೆಯ ನಾಲ್ಕು ಮಂದಿ, ಅಂದರೆ ಮುಕೇಶ್ ಕುಮಾರ್, ವಿನಯ್ ಶರ್ಮಾ, ಅಜಯ್ ಠಾಕೂರ್, ಪವನ್ ಕುಮಾರ್ ಗುಪ್ತಾ ಅವರು 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಾಗಿದ್ದಾರೆ. ಈ ನಾಲ್ವರಿಗೆ 2017ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. 2020ರಲ್ಲಿ ಇವರು ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಹಾಕಿದ್ದರು.

2012ರಲ್ಲಿ ಈ ನಾಲ್ವರು ಸೇರಿ ಆರು ಮಂದಿ ದುರುಳರು ಸೇರಿ ಯುವತಿಯೊಬ್ಬಳ ಮೇಲೆ ಭೀಕರ ರೀತಿಯಲ್ಲಿ ಅತ್ಯಾಚಾರ ಎಸಗಿದ್ದರು. ಕೆಲ ದಿನಗಳ ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಆ ಯುವತಿ ಸಾವನ್ನಪ್ಪಿದ್ದಳು. ಈ ಆರು ಆರೋಪಿಗಳ ಪೈಕಿ ಒಬ್ಬ ಅಪ್ರಾಪ್ತನಾದ್ದರಿಂದ ಕಠಿಣ ಶಿಕ್ಷೆ ಕೊಡಲಾಗಿಲ್ಲ. ರಾಮ್ ಸಿಂಗ್ ಎಂಬ ಒಬ್ಬ ಆರೋಪಿ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನುಳಿದ ನಾಲ್ವರು ಅರೋಪಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು.

ಸಂಜಯ್ ಎಂಬಾತನಿಗೆ 2006ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. 2020ರಲ್ಲಿ ಅವರು ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅದು ತಿರಸ್ಕೃತವಾಗಿದೆ.

 ಏಳು ಮಂದಿ ಸಜೀವ ದಹನ ಮಾಡಿದ್ದ ಅಪರಾಧಿ

ಏಳು ಮಂದಿ ಸಜೀವ ದಹನ ಮಾಡಿದ್ದ ಅಪರಾಧಿ

ಇನ್ನು, ಜಗತ್ ರಾಯ್ ಬಿಹಾರದಲ್ಲಿ 2006ರಲ್ಲಿ ವಿಜೇಂದ್ರ ಮಹತೋ ಮನೆಗೆ ಬೆಂಕಿ ಹಚ್ಚಿ ಏಳು ಮಂದಿಯ ಸಜೀವ ದಹನ ಮಾಡಿದ್ದರು. ಆ ಘಟನೆಯಾಗುವ ಒಂದು ವರ್ಷದ ಮುಂಚೆ ವಿಜೇಂದ್ರ ಮಹತೋ ತಮ್ಮ ಮನೆಯ ಎಮ್ಮೆ ಕಳುವಾಗಿದೆ ಎಂದು ದೂರು ಕೊಟ್ಟಿದ್ದರು. ಅದರಲ್ಲಿ ಜಗತ್ ರಾಯ್, ವಾಜಿರ್ ರಾಯ್ ಮತ್ತು ಅಜಯ್ ರಾಯ್ ವಿರುದ್ಧ ಆರೋಪ ಮಾಡಲಾಗಿತ್ತು. ದೂರು ಹಿಂಪಡೆಯುವಂತೆ ಆರೋಪಿಗಳು ಸಾಕಷ್ಟು ಒತ್ತಡ ಹಾಕಿದ್ದರೂ ವಿಜೇಂದ್ರ ಮಹತೋ ಮಣಿದಿರಲಿಲ್ಲ. ಆಗ ಜಗತ್ ರಾಯ್ ವಿಜೇಂದ್ರ ಮಹತೋರ ಮನೆಗೆ ಬೆಂಕಿ ಹಚ್ಚಿದ್ದ.

ಆ ಘಟನೆಯಲ್ಲಿ ವಿಜೇಂದ್ರ ಮಹತೋ ಅವರ ಪತ್ನಿ ಮತ್ತು ಐವರು ಮಕ್ಕಳು ಕೂಡಲೇ ಬೆಂಕಿಗೆ ಬಲಿಯಾಗಿಹೋಗಿದ್ದರು. ವಿಜೇಂದ್ರ ಮಹತೋ ಗಂಭೀರವಾಗಿ ಗಾಯಗೊಂಡು ತಿಂಗಳುಗಟ್ಟಲೆ ಸಾವು ಬದುಕಿನ ಹೋರಾಟ ಮಾಡಿ ಅಸುನೀಗಿದ್ದರು.

 ಬೇರೆ ರಾಷ್ಟ್ರಪತಿಗಳ ಅವಧಿಯಲ್ಲಿ ಕ್ಷಮೆ ಪ್ರಮಾಣ ಎಷ್ಟು?

ಬೇರೆ ರಾಷ್ಟ್ರಪತಿಗಳ ಅವಧಿಯಲ್ಲಿ ಕ್ಷಮೆ ಪ್ರಮಾಣ ಎಷ್ಟು?

1987-92ರಲ್ಲಿ ರಾಷ್ಟ್ರಪತಿಯಾಗಿದ್ದ ಆರ್ ವೆಂಕಟರಾಮನ್ 45 ಮಂದಿಯ ಕ್ಷಮಾದಾನ ಮನವಿಯನ್ನು ತಿರಸ್ಕರಿಸಿದ್ದು. ಅಷ್ಟೊಂದು ಅರ್ಜಿ ತಿರಸ್ಕರಿಸಿರುವ ಏಕೈಕ ರಾಷ್ಟ್ರಪತಿ ಅವರಾಗಿದ್ದಾರೆ.

1997-2002ರ ಅವಧಿಯಲ್ಲಿ ಕೆಆರ್ ನಾರಾಯಣನ್ ರಾಷ್ಟ್ರಪತಿಯಾಗಿದ್ದಾಗ ಯಾವ ಕ್ಷಮಾದಾನ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ.

ಅಬ್ದುಲ್ ಕಲಾಂ 2002-2007ರ ಅವಧಿಯಲ್ಲಿ ರಾಷ್ಟ್ರಪತಿ ಆಗಿದ್ದಾಗ ಎರಡು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. 2007ರಲ್ಲಿ ರಾಷ್ಟ್ರಪತಿಯಾದ ಪ್ರತಿಭಾ ಪಾಟೀಲ್ ಐದು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದರು. ಆದರೆ, 34 ಮಂದಿಯ ಶಿಕ್ಷೆ ಪ್ರಮಾಣವನ್ನು ಇಳಿಸಲು ನಿರ್ಧರಿಸಿದ್ದರು.

2012-2017ರವರೆಗೆ ರಾಷ್ಟ್ರಪತಿ ಆಗಿದ್ದ ಪ್ರಣಬ್ ಮುಖರ್ಜಿ ಅವರು 34 ಅರ್ಜಿಗಳ ವಿಲೇವಾರಿ ಮಾಡಿದ್ದರು. ಅದರಲ್ಲಿ ನಾಲ್ವರಿಗೆ ಕ್ಷಮಾದಾನ ನೀಡಿದರೆ ಉಳಿದ 30 ಮಂದಿಯ ಅರ್ಜಿಯನ್ನು ತಿರಸ್ಕರಿಸಿದ್ದರು. ಅದರಲ್ಲಿ ಅಜ್ಮಲ್ ಕಸಬ್, ಅಫ್ಜಲ್ ಗುರು, ಯಾಕುಬ್ ಮೆಮನ್ ಮೊದಲಾದವರಿದ್ದರು.

 ಕ್ಷಮಾದಾನ ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಕ್ಷಮಾದಾನ ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ಕೈದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ ಸಲ್ಲಿಸುವ ಅರ್ಜಿ ಇದು. ಕೆಳಗಿನ ಕೋರ್ಟ್‌ನಲ್ಲಿ ಮರಣದಂಡನೆ ಶಿಕ್ಷೆಯಾಗಿದ್ದು, ಅದನ್ನು ಹೈಕೋರ್ಟ್ ಎತ್ತಿಹಿಡಿದಿರಬೇಕು. ಇವರು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದು.

ಸುಪ್ರೀಂ ಕೋರ್ಟ್ ಕೂಡ ಮರಣದಂಡನೆ ಶಿಕ್ಷೆ ಎತ್ತಿಹಿಡಿದಲ್ಲಿ ಅಪರಾಧಿಗಳು ಬೇಕಾದರೆ ರಾಷ್ಟ್ರಪತಿ ಅಥವಾ ರಾಜ್ಯಪಾಲರಲ್ಲಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಬಹುದು. ಭಾರತೀಯ ಸಂವಿಧಾನದ ಆರ್ಟಿಕಲ್ 72 ಮತ್ತು ಆರ್ಟಿಕಲ್ 161ರಲ್ಲಿ ಇದಕ್ಕೆ ಅವಕಾಶ ಇದೆ.

ಕ್ಷಮಾದಾನ ಅರ್ಜಿಯನ್ನು ಪುರಸ್ಕರಿಸವುದೋ ಅಥವಾ ತಿರಸ್ಕರಿಸುವುದೋ ಅದು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟಿದ್ದು. ಅವರು ಕ್ಷಮಿಸಲು ನಿರ್ಧರಿಸಿದರೆ ಅಪರಾಧಿ ಎಲ್ಲಾ ಶಿಕ್ಷೆಯಿಂದ ವಿಮುಕ್ತಿಗೊಂಡು ಬಂಧನದಿಂದಲೂ ಬಿಡುಗಡೆಗೊಳ್ಳಬಹುದು.

ರಾಷ್ಟ್ರಪತಿಗಳು ಅಪರಾಧಿಯ ಶಿಕ್ಷೆಯನ್ನು ಕಡಿಮೆ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಲಬಹುದು. ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಸೀಮಿತಗೊಳಿಸಬಹುದು. ಕಠಿಣ ಸಜೆ ಶಿಕ್ಷೆಯನ್ನು ಸರಳ ಶಿಕ್ಷೆಯಾಗಿ ಪರಿವರ್ತಿಸಬಹುದು.

ರಾಷ್ಟ್ರಪತಿಗಳು ಹೇಳಿದ್ದೇ ಅಂತಿಮ ಎಂಬಂತಿಲ್ಲ. ಒಂದು ವೇಳೆ ರಾಷ್ಟ್ರಪತಿಗಳ ನಿರ್ಧಾರ ಸೂಕ್ತವಾಗಿಲ್ಲ ಎಂದು ಅನಿಸಿದರೆ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ವಿಮರ್ಶಿಸುವ ಅಧಿಕಾರ ಹೊಂದಿದೆಯಂತೆ. ಆದರೆ, ಅಂಥ ಪರಿಸ್ಥಿತಿ ಭಾರತದಲ್ಲಿ ಇನ್ನೂವರೆಗೂ ಉದ್ಭವಿಸಿಲ್ಲ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+