ಮೋದಿ ಪ್ರತಿನಿಧಿಸುವ ಹಿಂದೂಗಳ ಪವಿತ್ರ ಶಕ್ತಿಕೇಂದ್ರ ವಾರಣಾಸಿ: ಅಂದು ಮತ್ತು ಇಂದು
ಹಿಂದೆಲ್ಲಾ ಮಾತುಗಳಿದ್ದವು ಕಾಶಿಗೆ ಹೋದರೆ ವಾಪಸ್ ಬರುವುದು ಗ್ಯಾರಂಟಿ ಇಲ್ಲ ಎಂದು. ಬಹಳ ಹಿಂದಿನ ವಿಚಾರವೂ ಬೇಡ 2014ರ ವೇಳೆ ಇದ್ದ ಕಾಶಿಯೇ ಬೇರೆ, ಈಗಿನ ನವನಿರ್ಮಾಣಗೊಂಡಿರುವ ಕಾಶಿಯೇ ಬೇರೆ. ವಾರಣಾಸಿ, ಬನಾರಸ್ ಎಂದೂ ಕರೆಯಲ್ಪಡುವ ಹಿಂದೂಗಳ ಪೂಜಾಕೇಂದ್ರ, ಶಕ್ತಿಕೇಂದ್ರ ಕಾಶಿಯ ಗಲ್ಲಿಗಲ್ಲಿಗಳೂ ಬದಲಾವಣೆಯ ದ್ಯೋತಕವಾಗಿದೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಬದಲಾವಣೆ ಆಗಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಬಹಳಷ್ಟು ಚರ್ಚೆ/ಟೀಕೆಗಳು ನಡೆಯುತ್ತಿವೆ. ಆದರೆ, ಅವರು ಪ್ರತಿನಿಧಿಸುವ ವಾರಣಾಸಿಯಲ್ಲಂತೂ ಬದಲಾವಣೆಯಾಗಿಲ್ಲ ಎಂದರೆ ತಪ್ಪಾದೀತು.
ಉ.ಪ್ರ ಚುನಾವಣಾಪೂರ್ವ ಸಮೀಕ್ಷೆ: ಎಲ್ಲಾ 6 ಪ್ರಶ್ನೆಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ
2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯವರ ಹವಾ ದೇಶದಲ್ಲಿ ಯಾವರೀತಿ ಇತ್ತು ಎನ್ನುವುದನ್ನು ಮತ್ತೆ ಇಲ್ಲಿ ವಿವರಿಸುವುದು ಅನಾವಶ್ಯಕ. ಆದರೆ, ಮೋದಿಯವರು ಆಯ್ಕೆಮಾಡಿಕೊಂಡ ಕ್ಷೇತ್ರದಿಂದಾಗಿ ಮತ್ತಷ್ಟು ಹಿಂದೂ ಮತಗಳು ಬಿಜೆಪಿ ಬುಟ್ಟಿಗೆ ಬೀಳುವುದು ಖಾತ್ರಿಯಾಗಿತ್ತು.
ಯಾವ ಧಾರ್ಮಿಕ ಕೇಂದ್ರವನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕೆಂದು ಆಸ್ತಿಕರು ಬಯಸುವ ವಾರಣಾಸಿಯಿಂದ ಮೋದಿ ಕಣಕ್ಕಿಳಿದಿದ್ದರು ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ದ ದಾಖಲೆಯ 3.37ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಲ್ಲಿಂದ, ವಾರಣಾಸಿಯಲ್ಲಿ ಬದಲಾವಣೆಯ ಪರ್ವ ಆರಂಭವಾಯಿತು.
ಉತ್ತರ ಪ್ರದೇಶ ಚುನಾವಣೆ: ಏನಿದು ಬಿಜೆಪಿಯ ವಿಶೇಷ 'ಧಾರ್ಮಿಕ' ರಣತಂತ್ರ?
ಕಿರಿದಾದ ರಸ್ತೆ/ಗಲ್ಲಿಗಳು, ಸದಾ ಜನಜಂಗುಳಿ, ಭೂಕಬಳಿಕೆ
ಮೋದಿಯವರು ಸಂಸದರಾದ ನಂತರ ವಾರಣಾಸಿಯಲ್ಲಿ ಆಗಬೇಕಾಗಿರುವ ಬದಲಾವಣೆಗಳೇನು ಎನ್ನುವ ವಿಚಾರದಲ್ಲಿ ತಜ್ಞರು, ಇಂಜಿನಿಯರ್, ಸ್ಥಳೀಯರ ಜೊತೆ ಚರ್ಚೆ ನಡೆಸಿದ ನಂತರ, ಒಂದೊಂದೇ ಪ್ರಾಜೆಕ್ಟ್ ಗಳು ಕಾರ್ಯಾರಂಭಗೊಂಡಿತು. ಕಿರಿದಾದ ರಸ್ತೆ/ಗಲ್ಲಿಗಳು, ಸದಾ ಜನಜಂಗುಳಿ, ಭೂಕಬಳಿಕೆ, ಎಲ್ಲೆಂದರಲ್ಲಿ ಹಾದು ಹೋಗಿರುವ ವಿದ್ಯುತ್ ಲೈನುಗಳು, ಕೆಟ್ಟ ನಿರ್ವಹಣೆಯ ರಸ್ತೆಗಳು, ಕಲುಷಿತಗೊಂಡ ಗಂಗಾ ನದಿ, ಗಬ್ಬು ನಾರುತ್ತಿದ್ದ ಘಾಟುಗಳು, ಗಂಗೆಯಲ್ಲಿ ಸಾಗಿಬರುವ ಅರೆಬೆಂದ ಹೆಣಗಳು.. ಹೀಗೆ..ದಶಕಗಳ ಹಿಂದಿನ ವಾರಣಾಸಿ, ಈಗ ಬದಲಾವಣೆಯ ನವವಧುವಿನಂತೆ ಕಂಗೊಳಿಸುತ್ತಿದೆ.
ಜಪಾನಿನ ಧಾರ್ಮಿಕ ನಗರವಾದ ಕ್ಯೋಟೋ ನಗರದಂತೆ ವಾರಣಾಸಿ
ಜಪಾನಿನ ಧಾರ್ಮಿಕ ನಗರವಾದ ಕ್ಯೋಟೋ ನಗರದಂತೆ ವಾರಣಾಸಿಯಲ್ಲೂ ಬದಲಾವಣೆ ತರಲಾಗುವುದು ಎಂದು ಕಳೆದ ಲೋಕಸಭಾ ಚುನಾವಣೆಯ ವೇಳೆ ಮೋದಿ ಜನರಿಗೆ ವಾಗ್ದಾನ ನೀಡಿದ್ದರು. ಅವರ ಕನಸಿನ ಯೋಜನೆಗಳು ಕಾಶಿಯಲ್ಲಿ ಒಂದೊಂದಾಗಿ ಆರಂಭಗೊಂಡಿತು. ಭೂಕಬಳಿಕೆದಾರರನ್ನು ಹೆಡೆಮುರಿ ಕಟ್ಟಲಾಯಿತು, ವಿದ್ಯುತ್ ಲೈನುಗಳನ್ನು ಅಂಡರ್ ಗ್ರೌಂಡ್ ಮೂಲಕ ಎಳೆಯಲಾಯಿತು. ಗಂಗಾ ನದಿಯನನ್ನು ಶುಚಿತ್ವಗೊಳಿಸುವ ಕೆಲಸ ವೇಗ ಪಡೆದುಕೊಂಡಿತು. ಬಹುಪಯೋಗಿ ಟರ್ಮಿನಲ್ ಅನ್ನು ಸ್ಥಾಪಿಸಿ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ವಾರಣಾಸಿಯಿಂದ ಕೋಲ್ಕತ್ತಾಗೆ ಒಳನಾಡು ಜಲಮಾರ್ಗದ ಮೂಲಕ ಕಂಟೇನರ್ ಕಳುಹಿಸಲಾಯಿತು.
ಕೊಳಚೆ ನೀರು ಗಂಗಾ ನದಿ ಸೇರದಂತೆ ಯೋಜನೆ ಕಾರ್ಯಗತ
1,572 ಕೋಟಿ ರೂಪಾಯಿ ವೆಚ್ಚದಲ್ಲಿ ವಾರಣಾಸಿಯ 34 ಕಿಲೋಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲಾಯಿತು. ಫ್ಲೈಓವರ್, ರಿಂಗ್ ರಸ್ತೆಗಳು ನಿರ್ಮಾಣಗೊಂಡವು. ಇಲ್ಲಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳು ಹೊಸರೂಪವನ್ನು ಪಡೆದುಕೊಂಡವು. ನಮಾಮಿ ಗಂಗೆ ಪ್ರಾಜೆಕ್ಟ್ ಮೂಲಕ 913 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಂಡವು. ಜೆನರ್ಮ್, ಅಮೃತ್ ಸ್ಕೀಂ ಅಡಿಯಲ್ಲಿ 703 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಳಚೆ ನೀರು ಗಂಗಾ ನದಿ ಸೇರದಂತೆ ಯೋಜನೆ ಕಾರ್ಯಗತಗೊಂಡವು. ಇದಕ್ಕಾಗಿ, ಒಳಚರಂಡಿ ಸಂಸ್ಕರಣಾ ಘಟಕ ಯೋಜನೆ ತರಲಾಯಿತು.
ಪ್ರತ್ಯೇಕ ಪವರ್ ಗ್ರಿಡ್ ಅನ್ನು ಹಾಕಲಾಯಿತು
ವಾರಣಾಸಿ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ನೆಟ್ವರ್ಕ್ ಕಾರ್ಯಾರಂಭಗೊಂಡಿತು. ಇದು ನಗರದ ಮನೆಗಳು, ಸಾರಿಗೆ ವಲಯ ಮತ್ತು ಕೈಗಾರಿಕೆಗಳಿಗೆ ಪರಿಸರ ಸ್ನೇಹಿ ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ. 86 ವರ್ಷಗಳ ನಂತರ, ವಾರಣಾಸಿಯಲ್ಲಿ 16 ಚದರ ಕಿಲೋಮೀಟರ್ಗಿಂತಲೂ ಹೆಚ್ಚು ಅಂಡರ್ ಗ್ರೌಂಡ್ ಮೂಲಕ ಕೇಬಲ್ ಹಾಕಿ, ಓವರ್ಹೆಡ್ ವಿದ್ಯುತ್ ಕೇಬಲ್ಗಳನ್ನು ಕಿತ್ತುಹಾಕಲಾಯಿತು. ಪ್ರತ್ಯೇಕ ಪವರ್ ಗ್ರಿಡ್ ಅನ್ನು ಹಾಕಲಾಯಿತು.
ಜಪಾನ್ ಸಹಯೋಗದೊಂದಿಗೆ ಆಧುನಿಕ ಸಮಾವೇಶ ಕೇಂದ್ರ
ಹೋಮಿ ಬಾಬಾ ಕ್ಯಾನ್ಸರ್ ಆಸ್ಪತ್ರೆಯನ್ನು ವಾರಣಾಸಿಯಲ್ಲಿ ತೆರೆಯಲಾಯಿತು. ಜಪಾನ್ ಸಹಯೋಗದೊಂದಿಗೆ ಆಧುನಿಕ ಸಮಾವೇಶ ಕೇಂದ್ರವನ್ನು ತೆರೆಯಲಾಯಿತು. ಇಂದು (ಡಿ 13) ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ. ಸಾಂಸ್ಕೃತಿಕತೆಯ ಜೊತೆಗೆ ಆಧುನಿಕತೆಯನ್ನೂ ಸೇರಿಸಿ ಈ ಕಾರಿಡಾರ್ ನಿರ್ಮಾಣಗೊಂಡಿದೆ. ಐದು ಲಕ್ಷ ಚದರಡಿಯಲ್ಲಿ ನಿರ್ಮಾಣಗೊಂಡಿರುವ ಈ ಕಾರಿಡಾರ್ ನಿಂದಾಗಿ ದೇವಾಲಯದೊಳಗೆ ಏಕಕಾಲಕ್ಕೆ ಐದು ಸಾವಿರಕ್ಕೂ ಹೆಚ್ಚು ಜನರು ಕೂರಬಹುದಾಗಿದೆ.
ಏಳು ವರ್ಷಗಳಲ್ಲಿ ವಾರಣಾಸಿ ಹತ್ತುಹಲವು ಬದಲಾವಣೆ/ಅಭಿವೃದ್ದಿ
ವಿಶ್ವದ ಅತಿ ಹಳೆಯ ನಗರವಾದ ವಾರಣಾಸಿಯಲ್ಲಿ ಎಲ್ಲೆಲ್ಲೂ ಬದಲಾವಣೆಯ ಗಾಳಿ ಎನ್ನುವುದು ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂತಹ ಮಾತು. ಕಾಶಿ ಒಬ್ಬ ಹಿಂದೂ ಆದವನು ಜೀವಿತಾವಧಿಯಲ್ಲಿ ಹೋಗಲೇ ಬೇಕಾದಂತಹ ಕ್ಷೇತ್ರ ಎನ್ನಲಾಗುತ್ತದೆ. ಕೆಲವೊಂದು ಯೋಜನೆಗಳಿಗೆ 2018ರಲ್ಲಿ ಹಾಕಿದ ಅಡಿಪಾಯ 2021ರೊಳಗೆ ಪೂರ್ಣಗೊಳಿಸಲಾಗುತ್ತಿದೆ. ಒಟ್ಟಿನಲ್ಲಿ, ಕಳೆದ ಏಳು ವರ್ಷಗಳಲ್ಲಿ ವಾರಣಾಸಿ ಹತ್ತುಹಲವು ಬದಲಾವಣೆ/ಅಭಿವೃದ್ದಿಯನ್ನು ಕಂಡಿದ್ದಂತೂ ಹೌದು.