ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ 'ರಾಜಾಹುಲಿ'
ಕೆಲವು ತಾಸುಗಳ ಕರ್ನಾಟಕ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿದ್ದರು. ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ಎನ್ಎಂಪಿಎ ಮತ್ತು ಎಂಆರ್ಪಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಬಿಜೆಪಿ ನಾಯಕ ದಂಡೇ ಉಪಸ್ಥಿತರಿದ್ದರು.
ಈ ವೇಳೆ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಯಡಿಯೂರಪ್ಪನವರಿಗೆ ವಿಶೇಷ ಆದ್ಯತೆ ಸಿಕ್ಕಿದ್ದು ರಾಜ್ಯ ಬಿಜೆಪಿ ನಾಯಕರ ಹುಬ್ಬೇರಿಸುವಂತೆ ಮಾಡಿದೆ. ಮಾಜಿ ಮುಖ್ಯಮಂತ್ರಿಗೆ ಸಾರ್ವಜನಿಕರಿಂದಲೂ ಭಾರಿ ಕರತಾಡನ ವ್ಯಕ್ತವಾಗಿತ್ತು.
ಇತ್ತೀಚೆಗೆ, ಯಡಿಯೂರಪ್ಪನವರನ್ನು ಬಿಜೆಪಿ ತನ್ನ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಆಯ್ಕೆ ಮಾಡಿತ್ತು. ಇದಾದ ನಂತರ, ಬಿಎಸ್ವೈ ತಮ್ಮ ಎಂದಿನ ಲವಲವಿಕೆಯಿಂದ ಪಕ್ಷ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಚುನಾವಣಾ ವರ್ಷದಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ರಾಜ್ಯಕ್ಕೆ
ಚುನಾವಣಾ ವರ್ಷದಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಅಭಿವೃದ್ದಿ ಅಜೆಂಡಾ ಮುಂದಿಟ್ಟುಕೊಂಡು ಭಾಷಣ ಮಾಡಿದ್ದಾರೆ. ಯೋಗ ದಿನದಂದು ಪ್ರಧಾನಿ ಮೈಸೂರಿಗೆ ಆಗಮಿಸಿದ್ದರು. ಪ್ರಧಾನಿಯವರ ಮೈಸೂರು ಮತ್ತು ಮಂಗಳೂರು ಭೇಟಿ ಪರೋಕ್ಷವಾಗಿ ಮತಯಾಚನೆಯ ಕಾರ್ಯಕ್ರಮಗಳು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿಯ ಭದ್ರಕೋಟೆ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಆಗಮಿಸಿದ್ದು ಮತ್ತು ತಮ್ಮ ಜೊತೆಗೆ ಯಡಿಯೂರಪ್ಪನವರನ್ನೂ ಜೊತೆಜೊತೆಯಾಗಿ ಮೋದಿ ಕರೆದುಕೊಂಡಿದ್ದು ವಿಶೇಷ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ಯಡಿಯೂರಪ್ಪನವರು ಸಭಾ ವೇದಿಕೆಗೆ ಆಗಮಿಸುವ ಮುನ್ನ
ಯಡಿಯೂರಪ್ಪನವರು ಸಭಾ ವೇದಿಕೆಗೆ ಆಗಮಿಸುವ ಮುನ್ನ ರಾಜ್ಯಪಾಲರು ಮತ್ತು ಸಿಎಂ ಬೊಮ್ಮಾಯಿ ಉಪಸ್ಥಿತರಿದ್ದರು. ಇದಾದ ನಂತರ ಯಡಿಯೂರಪ್ಪನವರು ವೇದಿಕೆಗೆ ಆಗಮಿಸಿದರು. ವೇದಿಕೆಯಲ್ಲಿದ್ದ ಎಲ್ಲರೂ ಎದ್ದು ನಿಂತು ಯಡಿಯೂರಪ್ಪನವರನ್ನು ಸ್ವಾಗತಿಸಿದರೆ, ನೆರೆದಿದ್ದ ಜನಸ್ತೋಮದಿಂದ ಭಾರೀ ಕರತಾಡನ ವ್ಯಕ್ತವಾಯಿತು. ಇದು, ಯಡಿಯೂರಪ್ಪನವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಯಡಿಯೂರಪ್ಪ
ಮಂಗಳೂರಿಗೆ ಬಂದಿಳಿದ ಮೋದಿಯವರನ್ನು ಸ್ವಾಗತಿಸಲು ಯಡಿಯೂರಪ್ಪ ಕೂಡಾ ಹೋಗಿದ್ದರು. ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಯಡಿಯೂರಪ್ಪನವರನ್ನು ಅಷ್ಟೇ ಗೌರವದಿಂದ ಮೋದಿ ಕೂಡಾ ಮಾತನಾಡಿಸಿದರು. ಬಿಜೆಪಿಯ ಕೋರ್ ಕಮಿಟಿಯಲ್ಲಿ ನಿಮ್ಮನ್ನು ಭೇಟಿಯಾಗುವೆ ಎಂದು ಹೊರಡಲು ಮುಂದಾದ ಬಿಎಸ್ವೈ ಅವರನ್ನು ತಾವು ಭಾಗವಹಿಸುವ ಕಾರ್ಯಕ್ರಮಕ್ಕೆ ಮೋದಿ ಕರೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.

ಮೋದಿ ಬಲಭಾಗದ ಮೂರನೇ ಸ್ಥಾನದಲ್ಲಿ ಯಡಿಯೂರಪ್ಪನವರು ಆಸೀನ
ಮೋದಿಯವರ ಸರಕಾರೀ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರಿಗೆ ಆಹ್ವಾನವಿರಲಿಲ್ಲ, ಆದರೂ ಮೋದಿಯವರ ಒತ್ತಾಯಕ್ಕೆ ಆ ಕಾರ್ಯಕ್ರಮದಲ್ಲಿ ಬಿಎಸ್ವೈ ಭಾಗವಹಿಸಿದ್ದರು. ಇನ್ನು ವೇದಿಕೆಯ ಕಾರ್ಯಕ್ರಮದಲ್ಲಿ ಮೋದಿ ಬಲಭಾಗದ ಮೂರನೇ ಸ್ಥಾನದಲ್ಲಿ ಯಡಿಯೂರಪ್ಪನವರು ಆಸೀನರಾಗಿದ್ದರು. ಒಟ್ಟಿನಲ್ಲಿ ಚುನಾವಣಾ ವರ್ಷದಲ್ಲಿ ಯಡಿಯೂರಪ್ಪನವರ ಮಹತ್ವ ಬಿಜೆಪಿ ಹೈಕಮಾಂಡಿಗೆ ಅರಿವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.











Click it and Unblock the Notifications