ಈ "ಮೌನ" ಬಲು ಭಾರ; ಇಳಿಸಂಜೆಯಲಿ ಒಂಟಿತನ ಕೊಟ್ಟಿತೇ ಕೊರೊನಾ...
ಕಳೆದ ವರ್ಷ ಇದೇ ಹೊತ್ತಿಗೆ ಎಲ್ಲೆಲ್ಲೂ ಕೊರೊನಾ ಸೋಂಕಿನದ್ದೇ ಮಾತುಕತೆ. ಕೋವಿಡ್, ಲಾಕ್ಡೌನ್, ಸೀಲ್ ಡೌನ್, ಐಸೊಲೇಷನ್, ಕ್ವಾರಂಟೈನ್, ಕಂಟೇನ್ಮೆಂಟ್ ಝೋನ್... ಅಬ್ಬಾ, ಎಂದೂ ಕೇಳಿರದ ಈ ಹೊಸ ಹೊಸ ಪದಗಳು ಎಲ್ಲರ ಬಾಯಲ್ಲೂ ಹರಿದಾಡಲು ಆರಂಭಿಸಿದ್ದವು. ಭಯದಿಂದ ಒಂದಷ್ಟು ದಿನಗಳು ಮನೆಯಲ್ಲೇ ಲಾಕ್ ಆಗಿದ್ದೂ ಆಯಿತು. ಇನ್ನೇನು ಎಲ್ಲಾ ಒಂದು ಹಂತಕ್ಕೆ ಬಂತು ಎಂದು ಜನರು ನಿಟ್ಟುಸಿರುಬಿಡುವಷ್ಟರಲ್ಲೇ ಕೊರೊನಾ ಎರಡನೇ ಅಲೆ ದೇಶಕ್ಕೆ ಮತ್ತೆ ಅದೇ ಭಯವನ್ನು ತಿರುಗಿಸಿ ಕೊಟ್ಟಿದೆ.
ಈ ವರ್ಷ ಕೂಡ ಅದೇ ಪರಿಸ್ಥಿತಿ ಮುಂದುವರೆದಿದೆ. ಈ ಒಂದು ವರ್ಷದ ಹಾದಿಯಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ಮಾನಸಿಕ, ದೈಹಿಕ ಚಟುವಟಿಕೆಗಳೂ ಬದಲಾಗಿಬಿಟ್ಟಿವೆ. ಇದರೊಂದಿಗೆ ಕೊರೊನಾ ಎಷ್ಟೋ ಜನರನ್ನು ಒಂಟಿತನಕ್ಕೂ ದೂಡಿದೆ. ಅದರಲ್ಲೂ ಹಿರಿಯ ನಾಗರಿಕರನ್ನು ಅವರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯ ಆಚೆಗೂ ಮಾನಸಿಕವಾಗಿ, ದೈಹಿಕವಾಗಿ ಒಂದಿಷ್ಟು ಕುಂದುವಂತೆ ಮಾಡಿದೆ. ಅವರನ್ನು ಮೌನಿಯನ್ನಾಗಿ ಮಾಡುತ್ತಿದೆ. ಮುಂದೆ ಓದಿ...
ಕಾಲನು ಬಂದು ಬಾ ಎಂದಾಗ ಎಲ್ಲವೂ ಶೂನ್ಯ ಚಿತೆಗೇರುವಾಗ: ಬದುಕೆಷ್ಟು ನಶ್ವರ
ಸಂತೋಷ ಕೂಟಗಳಿಗೆ ಬ್ರೇಕ್ ಬಿತ್ತು
ಕೊರೊನಾ ಸೋಂಕಿನ ಕಾರಣವಾಗಿ ಲಾಕ್ ಡೌನ್ ಹೇರಿದ್ದರಿಂದ ಕೆಲವರ ಸ್ಥಿತಿ ಹೇಳದಾಯಿತು. ಸ್ನೇಹಿತರನ್ನು, ಒಡಹುಟ್ಟಿದವರನ್ನು ಭೇಟಿಯಾಗಿ, ಎಲ್ಲರೊಂದಿಗೆ ಬೆರೆಯುತ್ತಾ ಖುಷಿಖುಷಿಯಿಂದ ಕಾಲ ಕಳೆಯುತ್ತಿದ್ದ ಎಷ್ಟೋ ಹಿರಿಯರ ಸಂತೋಷಕ್ಕೂ ಬ್ರೇಕ್ ಬಿತ್ತು. ಮನೆಯಲ್ಲಿ ಮೌನವೊಂದೇ ಎದುರಾಯಿತು. ಕೊರೊನಾ ಕೊನೆಯಾಗುವುದು ಯಾವಾಗ ಎಂದು ಕಾದು ಕಾದು ಇನ್ನೇನು ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ಎರಡನೇ ಅಲೆ ಕಾಣಿಸಿಕೊಂಡು ಮತ್ತದೇ ಒಂಟಿತನಕ್ಕೆ ದೂಡಿತು. ದೇಶ ವಿದೇಶಗಳಲ್ಲಿರುವ ಮಕ್ಕಳು ಈ ವರ್ಷವಾದರೂ ನಮ್ಮನ್ನು ನೋಡಲು ಬರಬಹುದು ಎಂದು ಅಂದಾಜು ಹಾಕಿ ಕುಳಿತಿದ್ದ ಎಷ್ಟೋ ಪೋಷಕರಿಗೆ ನಿರಾಸೆಯನ್ನೇ ನೀಡಿತು.
ಕೊರೊನಾ ಸಂಕಷ್ಟ; ಜನರಿಗೆ ನೆರವಾಗುವಂತೆ ಸ್ವಪಕ್ಷದವರಿಗೆ ಸಿದ್ದರಾಮಯ್ಯ ಮನವಿ
ಲವಲವಿಕೆಯನ್ನು ಕಟ್ಟಿ ಹಾಕಿದ ಕೊರೊನಾ
ಕೊರೊನಾ ಸೋಂಕು ಹೆಚ್ಚು ಪರಿಣಾಮ ಬೀರಿರುವುದು ಹಿರಿಯ ನಾಗರಿಕರ ಮೇಲೆ. ಕೊರೊನಾದಿಂದಾಗಿ ಅವರ ದಿನನಿತ್ಯದ ಕೆಲಸ ಕಾರ್ಯಗಳಲ್ಲಿಯೂ ಬದಲಾವಣೆಯಾಗಿದೆ. ಬೆಳಿಗ್ಗೆ ಎದ್ದು ವಾಕಿಂಗ್ ಹೋಗಿ, ಮಾರುಕಟ್ಟೆ ಸುತ್ತಾಡಿ ಸ್ನೇಹಿತರನ್ನು ಭೇಟಿಯಾಗಿ ಲವಲವಿಕೆಯಿಂದ ಇದ್ದವರನ್ನೂ ಕೊರೊನಾ ಕಟ್ಟಿಹಾಕಿದಂತಾಗಿದೆ. ಹೊರಗೆ ಹೋಗಲು ಭೀತಿ. ಮನೆಗೂ ಯಾರೂ ಬರುವವರಿಲ್ಲ. ಕೊರೊನಾದಿಂದಾಗಿ ಅವರ ಮನಸ್ಸು ಒಳಗೊಳಗೇ ಮುದುಡುತ್ತಿದೆ. ಮೌನದ ಜೊತೆ ಮನಸ್ಸು ಕಾಲ ಹಾಕುತ್ತಿದೆ.
"ಕೋಪ, ಖಿನ್ನತೆ ಹೆಚ್ಚಿಸುತ್ತಿದೆ"
ವಯಸ್ಸಾಗುತ್ತಾ ಆಗುತ್ತಾ ದೊಡ್ಡವರೂ ಮಕ್ಕಳಾಗುತ್ತಾರೆ ಎಂಬ ಮಾತಿದೆ. ಆದರೆ ಈ ವಯಸ್ಸಿನಲ್ಲಿ ಒಬ್ಬರೇ ದಿನದೂಡುವುದು ಮಾನಸಿಕ ಸ್ಥಿತಿಗತಿಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತದೆ. ದೀರ್ಘಾವಧಿ ಒಂಟಿತನ ಕೋಪ, ಖಿನ್ನತೆಯನ್ನೂ ಹೆಚ್ಚಿಸುತ್ತದೆ ಎಂದು ಮನಃಶಾಸ್ತ್ರಜ್ಞ ಅಭಿಪ್ರಾಯಪಡುತ್ತಾರೆ. ಕೊರೊನಾ ಈಗಾಗಲೇ ಹಿರಿಯ ನಾಗರಿಕರಲ್ಲಿ ಸಹಜವಾಗಿ ಇರಬಹುದಾದ ಖಿನ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಹಿರಿಯ ನಾಗರಿಕರ ಕೈ ಹಿಡಿಯಬೇಕಿದೆ
ಗೊತ್ತೇ ಆಗದಂತೆ ಆವರಿಸುವ ಖಿನ್ನತೆಯಿಂದ ಹಿರಿಯರನ್ನು ರಕ್ಷಿಸುವುದು ಇಡೀ ಸಮಾಜದ ಹೊಣೆಯಾಗಿದೆ. ಈ ಸಾಮಾಜಿಕ ಹೊಣೆಗಾರಿಕೆಯಿಂದ ಕೇರಳದಲ್ಲಿ ಹಿರಿಯ ನಾಗರಿಕರಿಗೆ ಸಲಹೆ ನೀಡಲೆಂದೇ ಹೆಲ್ಪ್ಲೈನ್ ಅನ್ನು ಆರಂಭಿಸಲಾಗಿದೆ. ಕೇರಳ ರಾಜ್ಯ ಸಾಮಾಜಿಕ ನ್ಯಾಯ ಇಲಾಖೆ ಹಿರಿಯ ನಾಗರಿಕರಿಗೆ ಈ ಹೆಲ್ಪ್ ಲೈನ್ ತೆರೆದಿದ್ದು, ದಿನಕ್ಕೆ ನೂರಾರು ಕರೆಗಳು ಬರುತ್ತಿವೆ. ಅವರಲ್ಲಿ ವೈದ್ಯಕೀಯ ಹಾಗೂ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಹೆಲ್ಪ್ ಲೈನ್ ಮಾಡುತ್ತಿದೆ. ಕೇರಳ ಪೊಲೀಸ್ ಇಲಾಖೆ ಕೂಡ ಹಿರಿಯರಿಗೆಂದೇ "ಪ್ರಶಾಂತಿ" ಎಂಬ ಹೆಲ್ಪ್ ಲೈನ್ ಆರಂಭಿಸಿದೆ. ಇಂಥ ಕೆಲಸ ಎಲ್ಲಾ ಕಡೆಗಳಲ್ಲಿಯೂ ಆಗಬೇಕಿದೆ.