ಮುಂದಿನ ಚುನಾವಣೆ: ಸಿದ್ದರಾಮಯ್ಯ ಬಹುತೇಕ ಇಲ್ಲಿಂದಲೇ ಸ್ಪರ್ಧೆ?
ಅಭಿವೃದ್ದಿ, ಭ್ರಷ್ಟಾಚಾರ ಮುಂತಾದ ವಿಚಾರದ ಬಗ್ಗೆ ಚರ್ಚೆ ನಡೆಯದೇ, ಮೊಟ್ಟೆ, ಮಾಂಸ, ಸಾರ್ವಕರ್ ಮುಂತಾದ ವಿಷಯದ ಬಗ್ಗೆ ರಾಜ್ಯದಲ್ಲಿ ಚರ್ಚೆ, ವಾದವಿವಾದ ನಡೆಯುತ್ತಿದೆ. ಜೆಡಿಎಸ್ ಮಾತ್ರ ಈ ವಿಚಾರದಿಂದ ದೂರವಿದ್ದಂತಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕೊಡಗು ಪ್ರವಾಸದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯ ನಂತರ, ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದರು ಎನ್ನುವ ಚರ್ಚೆಯೂ ಆರಂಭವಾಯಿತು.
Recommended Video
ಇವೆಲ್ಲದರ ನಡುವೆ ಆಗಸ್ಟ್ 26ರಂದು ಬಿಜೆಪಿ ಮತ್ತು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ/ಜನಜಾಗೃತಿ ಕಾರ್ಯಕ್ರಮವನ್ನು ಸೆಕ್ಷನ್ 144 ಹಿನ್ನಲೆಯಲ್ಲಿ ಹಿಂದಕ್ಕೆ ಪಡೆದುಕೊಂಡಿದೆ. ಈಗ, ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರ ಮತ್ತೆ ಮುನ್ನಲೆಗೆ ಬರಲಾರಂಭಿಸಿದೆ.
ಕೆಲವು ತಿಂಗಳ ಹಿಂದೆ ಜಮೀರ್ ಅಹ್ಮದ್ ಖಾನ್ ಅವರು ಚಾಮರಾಜಪೇಟೆಯಿಂದ ಸಿದ್ದರಾಮಯ್ಯನವರು ಸ್ಪರ್ಧಿಸಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ದ ಎನ್ನುವ ಮಾತಿನ ನಂತರ ಈ ವಿಚಾರ ವೇಗ ಪಡೆದುಕೊಂಡಿತ್ತು. ಈಗ ಮತ್ತೆ ಈ ವಿಚಾರದ ಬಗ್ಗೆ ಚರ್ಚೆ ಆರಂಭವಾಗಿದೆ.
2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 2018ರ ಚುನಾವಣೆಗೆ ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಸೋತರು ಮತ್ತು ಬಾದಾಮಿಯಲ್ಲಿ 67,599 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ವಿರುದ್ಧ ಗೆಲುವು ಸಾಧಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರ ವಿರುದ್ದ ಸೋಲು
ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಜಿ.ಟಿ.ದೇವೇಗೌಡರ ವಿರುದ್ದ ಸೋಲು ಕಂಡ ನಂತರ ಸಿದ್ದರಾಮಯ್ಯ ಬಹಳಷ್ಟು ಬಾರಿ ನೋವಿನ ಮಾತನ್ನು ಆಡಿದ್ದರು. ಹಾಗಾಗಿ, ಅವರ ಪುತ್ರ ಡಾ.ಯತೀಂದ್ರ ಪ್ರತಿನಿಧಿಸುವ ಪಕ್ಕದ ವರುಣ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಗುಸುಗುಸು ಮಾತುಗಳು ಕೇಳಿ ಬರುತ್ತಿದ್ದವು. ಖುದ್ದು, ಸಿದ್ದರಾಮಯ್ಯನವರಿಗಾಗಿ ಕ್ಷೇತ್ರ ಬಿಟ್ಟು ಕೊಡಲು ಸಿದ್ದ ಎಂದು ಯತೀಂದ್ರ ಕೂಡಾ ಹೇಳಿದ್ದರು. ಆದರೆ, ಇಲ್ಲಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಡೌಟು ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಿಂದ ಬಾದಾಮಿ ಬಹಳ ದೂರ ಎನ್ನುವ ಸಿದ್ದರಾಮಯ್ಯ ಮಾತು
ಬೆಂಗಳೂರಿನಿಂದ ಬಾದಾಮಿ ಬಹಳ ದೂರ ಎನ್ನುವ ಮಾತನ್ನು ಸಿದ್ದರಾಮಯ್ಯ ಹೇಳುತ್ತಲೇ ಬರುತ್ತಿದ್ದಾರೆ. ಜೊತೆಗೆ, ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ ಚಿಮ್ಮನಕಟ್ಟಿ ಕೂಡಾ ಸಿದ್ದರಾಮಯ್ಯನವರ ಸ್ಪರ್ಧೆಗೆ ವಿರೋಧವನ್ನು ಬಹಿರಂಗವಾಗಿಯೇ ವ್ಯಕ್ತ ಪಡಿಸಿದ್ದರು. ಇದರ ಜೊತೆಗೆ, ಹುಣಸೂರಿನಿಂದ ಸ್ಪರ್ಧಿಸಿ ಎಂದು ಹಾಲೀ ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್ ಅವರು ಒತ್ತಾಯಿಸುತ್ತಿದ್ದಾರೆ. ಆದರೆ, ಇದ್ಯಾವ ಕ್ಷೇತ್ರದಿಂದಲೂ ಸಿದ್ದರಾಮಯ್ಯ ಸ್ಪರ್ಧಿಸದೇ ಕೋಲಾರದಿಂದ ಸ್ಪರ್ಧಿಸಬಹುದು ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ.

ರಮೇಶ್ ಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಬಣ ರಾಜಕೀಯ
ರಮೇಶ್ ಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಬಣ ರಾಜಕೀಯ ಜೋರಾಗಿರುವ ಕೋಲಾರದಲ್ಲಿ ಸಿದ್ದರಾಮಯ್ಯನವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದನ್ನು ರಮೇಶ್ ಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೋಲಾರದ ಹಾಲೀ ಶಾಸಕ ಶ್ರೀನಿವಾಸ ಗೌಡ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಕೆಯನ್ನು ನೀಡಿದ್ದಾಗಿದೆ. ಜೊತೆಗೆ, ಕೋಲಾರದಲ್ಲಿ ಮೂರು ಸಮುದಾಯದ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸಲಿದೆ.

ಸಿದ್ದರಾಮಯ್ಯ ಸ್ಪರ್ಧೆ, ರಮೇಶ್ ಕುಮಾರ್ ಪ್ರತಿಷ್ಠೆ
ಕೋಲಾರದಲ್ಲಿ ಎಸ್ ಸಿ, ಮುಸ್ಲಿಂ ಮತ್ತು ಕುರುಬ ಸಮುದಾಯದ ಮತಗಳು ಮಹತ್ವದ ಪಾತ್ರವನ್ನು ವಹಿಸಲಿದೆ. ಜೊತೆಗೆ, ಬೆಂಗಳೂರಿಗೆ ಈ ಕ್ಷೇತ್ರ ಹತ್ತಿರವೂ ಆಗಿರುವುದರಿಂದ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಬಹುತೇಕ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸಿದರೆ ಮುನಿಯಪ್ಪ ಬಣ ಮತ್ತು ಜೆಡಿಎಸ್ ನಿಂದ ತೀವ್ರ ಪೈಪೋಟಿ ಎದುರಿಸಬೇಕಾಗಿ ಬರಬಹುದು.












Click it and Unblock the Notifications