ರಸ್ತೆಯೇ ಇಲ್ಲ, ರೈಲು ಹಳಿಯೇ ಎಲ್ಲ: ನಮಗೆ ದಯಾಮರಣ ನೀಡಿ ಎನ್ನುವ ಜನರು
ಊರೇನೋ ಅಭಿವೃದ್ದಿಯಾಗ್ಬೇಕು. ಹಾಗಂತ ಇರೋ ಮೂಲವ್ಯವಸ್ಥೆಯನ್ನು ಕಿತ್ತು ಕೊಡೋದಾ? ಇಂತಹದೊಂದು ಪರಿಸ್ಥಿತಿ ಮಂಗಳೂರು ಹೊರವಲಯದ ಗ್ರಾಮ ಒಂದಕ್ಕೆ ಎದುರಾಗಿದೆ. ಈ ಗ್ರಾಮದ ಮಂದಿಗೆ ಅಭಿವೃದ್ಧಿಯೇ ಮಾರಕ ಅನ್ನೋ ಹಾಗಾಗಿದೆ. ನೆಟ್ಟಗೆ ಸಂಚರಿಸುವುದಕ್ಕೆ ರಸ್ತೆಯೂ ಇಲ್ಲದೇ ಈ ಭಾಗದ ಮಂದಿ ಕಂಗಾಲಾಗಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳಿಂದ ಪರಿತಪಿಸುತ್ತಿರುವ ಇಲ್ಲಿಯ ಜನ ಒಂದೋ ರಸ್ತೆ ಕೊಡಿ, ಇಲ್ಲದೊದ್ದರೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಸರಕಾರಕ್ಕೆ ಮೊರೆಯಿಡುತ್ತಿದ್ದಾರೆ. ಈ ಗ್ರಾಮದ ಜನರ ಸಮಸ್ಯೆ ತಿಳಿದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಬಡಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆಯೇ? ರೈಲ್ವೆ ಇಲಾಖೆ ಅಧಿಕಾರಿಗಳ ದರ್ಪಕ್ಕೆ ಸಂಸದರೂ ಮೌನ ವಹಿಸಿದ್ದಾರಾ? ಇಂತಹ ಪ್ರಶ್ನೆ ಉದ್ಭವಿಸೋದು ಸಹಜ.
ಕತ್ತೆ ಹಾಲು ಮಾರುವ ಸರೋಜಮ್ಮ ಹೇಳಿಕೊಂಡ ಅನ್ನ ನೀಡುವ 'ಲಕ್ಷ್ಮಿ'ಯ ಕಥೆ
ಅಭಿವೃದ್ದಿ ಅಂದರೆ ಅದು ಜನಸಾಮಾನ್ಯರನ್ನು ಒಕ್ಕಲೆಬ್ಬಿಸೋದು ಅಂತಾನೇ ಅರ್ಥ. ಕರಾವಳಿಯಲ್ಲಿ ಆಗೋ ಪ್ರತಿಯೊಂದು ಅಭಿವೃದ್ಧಿ ಹಿಂದೆಯೂ ರಾಜಕೀಯ ಹಿತಾಸಕ್ತಿ ಇರುತ್ತದೆ. ಆದರೆ ಜನಸಾಮಾನ್ಯ ಮಾತ್ರ ಬಡಪಾಯಿ ಆಗುತ್ತಾನೆ. ಇಲ್ಲಿ ನಡೆದಿರೋದು ಅಷ್ಟೇ, ಕಳೆದ ಏಳು ವರುಷಗಳಿಂದ ಮಂಗಳೂರು ಹೊರವಲಯದ ಪುಟ್ಟ ಗ್ರಾಮ ಮರವೂರಿನಲ್ಲಿ ಇಂತಹದ್ದೇ ಸಮಸ್ಯೆ ತಲೆದೋರಿದೆ.
ಕಲ್ಲು-ಕಬ್ಬಿಣ ಮೆಟ್ಟಿಕೊಂಡು ನಡೆದಾಡಬೇಕು
ಇಲ್ಲಿ ಅದ್ಯಾವಾಗ ಎರಡನೇ ಹಂತದ ರೈಲ್ವೆ ಹಳಿಯ ವಿಸ್ತರಣೆ ಕಾಮಗಾರಿ ನಡೆಯಲು ಆರಂಭವಾಯಿತೋ ಅಲ್ಲಿಗೆ ಈ ಗ್ರಾಮದ ಮಂದಿ ನಡೆದಾಡುತ್ತಿದ್ದ ರಸ್ತೆಯನ್ನು ನುಂಗಿ ನೀರು ಕುಡಿಯಲಾಯಿತು. ಆರು ವರುಷಗಳಿಂದ ರಸ್ತೆ ಸಂಪರ್ಕವಿಲ್ಲದೆ ಈ ಭಾಗದ ಸುಮಾರು 55 ಮನೆಯ ಮಂದಿ ಕಾಮಗಾರಿ ನಡೆಯುತ್ತಿರುವ ರೈಲ್ವೆ ಹಳಿಯಲ್ಲೇ, ಕಲ್ಲು-ಕಬ್ಬಿಣ ಮೆಟ್ಟಿಕೊಂಡು ನಡೆದಾಡುತ್ತಿದ್ದಾರೆ. ಇಲ್ಲಿಯ ಜನರಿಗೆ ಈ ರೈಲ್ವೆ ಹಳಿಗಳೇ ರಸ್ತೆಯಾಗಿವೆ. ಬೇರೆ ರಸ್ತೆ ಸಂಪರ್ಕ ಈ ಗ್ರಾಮಕ್ಕಿಲ್ಲ. ಇದ್ದ ರಸ್ತೆ ರೈಲ್ವೆ ಇಲಾಖೆ ಕಬಳಿಸಿದೆ.
ಅನಾರೋಗ್ಯ ಕಾಡಿದರೆ ಬಹಳ ಕಷ್ಟ
ಇನ್ನು ಈ ಗ್ರಾಮಕ್ಕೆ ಯಾವುದೇ ವಾಹನ ಬರುವಂತಿಲ್ಲ. ಹಾಗೂ ಬರಬೇಕಾದರೆ ಈ ರೈಲ್ವೆ ಹಳಿ ದಾಟಿಯೇ ಬರಬೇಕು. ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಬರಲು ಸಾಧ್ಯವಾಗದ ಪರಿಸ್ಥಿತಿ. ಅನಾರೋಗ್ಯ ಪೀಡಿತರನ್ನು ಹೊತ್ತು ರೈಲ್ವೆ ಹಳಿಗಳನ್ನು ದಾಟಿ ನಂತರ ಆಸ್ಪತ್ರೆಗೆ ಸಾಗಿಸಬೇಕು. ಇನ್ನು ಶಾಲಾ ಮಕ್ಕಳು ಈ ರೈಲ್ವೆ ಹಳಿಗಳ ಮೇಲೆ ಸಾಗಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಶಾಲಾ ಮಕ್ಕಳು ಮನೆಯಿಂದ ಹೊರಟು ಮತ್ತೆ ಮನೆ ಸೇರುವವರೆಗೂ ಮನೆಯಲ್ಲಿ ಪೋಷಕರಿಗೆ ನೆಮ್ಮದಿ ಇರೋದಿಲ್ಲ. ಯಾವಾಗ ಏನಾಗುತ್ತೋ ಎನ್ನುವ ಭಯ ಸದಾ ಕಾಡುತ್ತಿರುತ್ತದೆ.
ದೇಶಕ್ಕೆ ಮಾದರಿಯಾದ ಧಾರವಾಡದ ಮುಗದ ರೈಲು ನಿಲ್ದಾಣ
ಹೊಲ-ಗದ್ದೆಗಳು ಪಾಳು ಬಿದ್ದಿವೆ
ಇನ್ನು ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನ ಸೆಳೆಯಲಾಗಿದೆ. ಆದರೆ ಸಂಸದರು ಎರಡು ಬಾರಿ ಬಂದು ಫೋಟೋಕ್ಕೆ ಪೋಸು ಕೊಟ್ಟಿದ್ದು ಬಿಟ್ರೆ ಯಾವುದೇ ಸ್ಪಂದನೆ ನೀಡಿಲ್ಲ ಅನ್ನೋ ಆರೋಪ ಇಲ್ಲಿಯ ನಿವಾಸಿಗಳದ್ದು. ರೈಲ್ವೆ ಅಧಿಕಾರಿಗಳನ್ನು ಕೇಳಿದರೆ ಒಂದೂವರೆ ಕೋಟಿ ರುಪಾಯಿ ಕೊಡಿ ರಸ್ತೆ ನಿರ್ಮಿಸಿ ಕೊಡ್ತೀವಿ ಅಂತಾರೆ. ಆದರೆ ಈಗಾಗಲೇ ಈ ಭಾಗದ ಹಲವು ಮಂದಿ ಮನೆ ಖಾಲಿ ಮಾಡಿದ್ದಾರೆ. ಒಂದೊಮ್ಮೆ ಎಕರೆಗಟ್ಟಲೆ ಕೃಷಿ ಚಟುವಟಿಕೆ ನಡೆಯುತ್ತಿದ್ದ ಹೊಲ ಗದ್ದೆಗಳು ಪಾಳು ಬಿದ್ದಿವೆ.
ಎಲೆಕ್ಟ್ರಿಕ್ ರೈಲು ಓಡಾಟ ಆರಂಭವಾದರೆ ಇನ್ನಷ್ಟು ಕಷ್ಟ
ಮುಂದಿನ ಫೆಬ್ರವರಿ ವೇಳೆ ಕಾಮಗಾರಿ ನಡೆಯುತ್ತಿರುವ ಹಳಿಯಲ್ಲಿ ಎಲೆಕ್ಟ್ರಿಕ್ ರೈಲು ಓಡಾಟ ಆರಂಭಿಸುತ್ತದೆ. ಸದ್ಯ ಆ ಹಳಿ ಮೇಲೆಯೇ ಓಡಾಡುವ ಶಾಲಾ ಮಕ್ಕಳು, ವೃದ್ಧರು ಅದೆಷ್ಟು ಸುರಕ್ಷಿತ ಅನ್ನೋ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ರೈಲ್ವೆ ಅಧಿಕಾರಿಗಳ ಧೋರಣೆ ಖಂಡಿಸಿ ಹಿಂದೊಮ್ಮೆ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರನ್ನು ಬಂಧಿಸಿ, ಮೂರು ದಿನಗಳ ಕಾಲ ಕೂಡಿ ಹಾಕಿದ್ದೂ ಇದೆ. ಈ ಕಾರಣದಿಂದ ದಿಕ್ಕು ಕಾಣದಾಗಿರುವ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಸಂಸದರ ನಿರ್ಲಕ್ಷ್ಯದಿಂದ ಬೇಸತ್ತು ದಯಾಮರಣ ನೀಡಿ ಎಂದು ರಾಜ್ಯ ಸರಕಾರವನ್ನು ಕೇಳತೊಡಗಿದ್ದಾರೆ.