2017ರಲ್ಲಿ ಸದ್ದು ಮಾಡಿದ ವ್ಯಕ್ತಿ: 'ಕರ್ನಾಟಕದ ಸಿಂಗಂ' ರವಿ ಡಿ. ಚನ್ನಣ್ಣನವರ್
ಇನ್ನೇನು ಹೊಸ ವರ್ಷ ಬಂದೆ ಬಿಟ್ಟಿತು. ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. 2017ರಲ್ಲಿ ಸದ್ದು ಮಾಡಿ 'ನ್ಯೂಸ್ ಮೇಕರ್ ಆಫ್ ಕರ್ನಾಟಕ' ಎನಿಸಿಕೊಂಡ ವ್ಯಕ್ತಿಯನ್ನು ನಿಮಗೆ ಪರಿಚಯಿಸುವ ಪ್ರಯತ್ನ ಒನ್ಇಂಡಿಯಾ ಕನ್ನಡ ಮಾಡುತ್ತಿದೆ.
ರಾಜ್ಯದಲ್ಲಿ 2017ರಲ್ಲಿ ಸದ್ದು ಮಾಡಿದ ವ್ಯಕ್ತಿಗಳ ಪೈಕಿ ಸದ್ಯ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ರವಿ ಡಿ. ಚನ್ನಣ್ಣನವರ್ ಒಬ್ಬರು. ಇವರ ಕರ್ತವ್ಯ ನಿಷ್ಠೆ, ಜನಪರ ಕಾರ್ಯಕ್ರಮ, ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿ-ನೀತಿಗಳನ್ನು ಕಂಡು ಒನ್ ಇಂಡಿಯಾ ಕನ್ನಡ 2017ರ ವರ್ಷದ ವ್ಯಕ್ತಿಯಾಗಿ ಖಡಕ್ ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಅವರನ್ನು ಆಯ್ಕೆ ಮಾಡಿದೆ.
ರೌಡಿ, ಪುಂಡ-ಪೋಕರಿಗಳಿಗೆ ಸಿಂಹ ಸ್ವಪ್ನವಾಗಿರುವ ಖಡಕ್ ಪೊಲೀಸ್ ಅಧಿಕಾರಿಯಾಗಿರುವ ರವಿ.ಡಿ.ಚನ್ನಣ್ಣನವರ್, 'ಮಲೆನಾಡ ಹುಲಿ', 'ಕರ್ನಾಟಕದ ಸಿಂಗಂ' ಎಂದೇ ಖ್ಯಾತಿ ಗಳಿಸಿದ್ದಾರೆ.
2011ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರವಿ ಅವರು, ಹೊಸಪೇಟೆ, ಬೆಂಗಳೂರು, ದಾವಣೆಗೆರೆ, ಹಾಸನ, ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮೈಸೂರು ಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ಜಿಲ್ಲೆಗಳಲ್ಲೂ ಎಸ್.ಪಿ ಆಗಿ ರವಿ.ಡಿ.ಚನ್ನಣ್ಣನವರ್ ಇಟ್ಟ ದಿಟ್ಟ ಹೆಜ್ಜೆಗಳು ಪ್ರಶಂಸನೀಯ.
ರವಿ.ಡಿ.ಚನ್ನಣ್ಣನವರ್ ಕೇವಲ ಒಬ್ಬ ಪೊಲೀಸ್ ಮಾತ್ರವಲ್ಲದೇ ಅವರು ಆಡುವ ಒಂದೊಂದು ಮಾತುಗಳು ಇತರರಿಗೆ ಸ್ಫೂರ್ತಿದಾಯಕ. ಅವರ ಕರ್ತವ್ಯ ನಿಷ್ಠೆ, ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿ-ನೀತಿ ಇದೆಯಲ್ಲ ನಿಜಕ್ಕೂ ಇತರರಿಗೆ ಮಾದರಿ.
"ಐ ಹ್ಯಾವ್ ಮೈ ಓನ್ ಪ್ಲಾನ್, ದಟ್ ಇಸ್ ಮೈ ಲೈಫ್ ಸ್ಟೈಲ್'' ಎನ್ನುವ ರವಿ ಚನ್ನಣ್ಣನವರ್ ಹೆಸರು ಕೇಳಿದ್ರೆ ಸಾಕು ರೌಡಿ, ಪುಂಡ-ಪೋಕರಿಗಳಿಗೆ ಚಳಿಗಾಲದಲ್ಲೂ ಬೆವರು ಇಳಿಯುತ್ತೆ.
ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರ ಕರ್ತವ್ಯದ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಯಾವೊಬ್ಬ ಮಾಡದ ಕಾರ್ಯವನ್ನು ರವಿ ಚನ್ನಣ್ಣನವರ್ ಮಾಡಿ ರಾಜ್ಯದ ಜನಮೆಚ್ಚುಗೆ ಗಳಿಸಿದ್ದಾರೆ.
2015 ರಲ್ಲಿ ಶಿವಮೊಗ್ಗದಲ್ಲಿ ಗಣೇಶ ಹಬ್ಬದ ಬಂದೋಬಸ್ತ್ ನ ಚಾಣಾಕ್ಷತನದಿಂದ ನಿರ್ವಹಿಸಿ ಕರ್ನಾಟಕದ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೇ ಇತ್ತೀಚೆಗೆ ಮೈಸೂರಿನಲ್ಲಿ ಹನುಮ ಜಯಂತಿ ಆಚರಣೆ ವೇಳೆ ನಡೆದ ಗಲಾಟೆಯನ್ನು ಅಲ್ಲಿಗೆ ಸಮಾಪ್ತಿ ಮಾಡಿ ಯಾವುದೇ ಅಹಿತಕರ ಘಟನೆಗಳಾಗದಂತೆ ತಡೆದಿದ್ದರು.
ಜಿಲ್ಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಿ ಯಾವುದೇ ಗಲಭೆ, ಗಲಾಟೆಗಳಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ರವಿ.ಡಿ.ಚನ್ನಣ್ಣನವರ್ ಕೇವಲ ಪೊಲೀಸ್ ಅಧಿಕಾರಿಯಾಗಿ ಸೀಮಿತವಾಗದೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಉಂಟು.
ರವಿ.ಡಿ.ಚನ್ನಣ್ಣನವರ್ ಅವರ ಜನಪರ ಕಾರ್ಯಕ್ರಮಗಳು: ಹೆಣ್ಣುಮಕ್ಕಳ ರಕ್ಷಣೆಗೆ 'ಓಬವ್ವ ಪಡೆ', 'ಸ್ವಯಂ ರಕ್ಷಣಾ ತರಬೇತಿ' ಕಾರ್ಯಕ್ರಮ, 'ಜನ ಸ್ನೇಹಿ ಪೊಲೀಸ್', 'ಗ್ರಾಮ ವಾಸ್ತವ್ಯ', ಪೊಲೀಸ್ ಸಿಬ್ಬಂದಿ ಸಹಾಯಕ್ಕೆ 'ಪೊಲೀಸ್ ಕ್ಯಾಂಟೀನ್' ಹಾಗೂ 'ಪೊಲೀಸ್ ಮೆಡಿಕಲ್', ರೈತರಿಗೆ ಸಹಕಾರಿಯಾಗಲು 'ನಮ್ಮೂರಲ್ಲೊಬ್ಬ ಸಾಧಕ', ಯುವಕರಿಗೆ ಸಹಕಾರಿ ಆಗಲು ಉಚಿತ 'ಯು.ಪಿ.ಎಸ್.ಸಿ ಕಾರ್ಯಗಾರ' ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನ ಜಾರಿಗೆ ತಂದು ಇಡೀ ರಾಜ್ಯಕ್ಕೆ ಒಬ್ಬ ಬೆಸ್ಟ್ ಎವರ್ ಗ್ರೀನ್ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದಾರೆ.
ಬಿ.ಎ' ಪದವಿ ಮುಗಿಸಿದ ಬಳಿಕ, 'ಪಬ್ಲಿಕ್ ಆಡ್ಮಿನಿಸ್ಟ್ರೇಷನ್' ನಲ್ಲಿ ಎಂ.ಎ ಪದವಿ ಪಡೆದ ರವಿ.ಡಿ.ಚನ್ನಣ್ಣನವರ್, 'ಮಾಸ್ ಕಮ್ಯೂನಿಕೇಷನ್ ಮತ್ತು ಜರ್ನಲಿಸಂ' ನಲ್ಲಿ ಪಿ.ಜಿ ಡಿಪ್ಲೋಮಾ ಮುಗಿಸಿ 2008 ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ, ತಮ್ಮ 23ನೇ ವಯಸ್ಸಿನಲ್ಲಿಯೇ ಐಪಿಎಸ್ ತೇರ್ಗಡೆಯಾಗಿದ್ದರು.