ಗಾರ್ಮೆಂಟ್ಸ್ ಕೆಲಸದ ಜೊತೆ ಟ್ರಾವೆಲ್ಸ್ ; 16ನೇ ವಯಸ್ಸಿಗೆ ಊರು ಬಿಟ್ಟವನ ಯಶಸ್ಸಿನ ಕಥೆ!
ಪ್ರಾಣ, ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದು ಬದುಕನ್ನು ಕಟ್ಟಿಕೊಳ್ಳುವುದಕ್ಕೆ. ಅದೇ ರೀತಿಯಲ್ಲಿ ಮನುಷ್ಯನು ಸಹ ಉತ್ತಮವಾದ ಬದುಕನ್ನು ಅರಸಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ, ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ ಹೋಗುತ್ತಾನೆ.
ಅನಾದಿಕಾಲದಿಂದಲೂ ವಲಸೆ ಹೋಗುವುದ ಸಹಜವಾದ ಪ್ರಕ್ರಿಯೆಯಾಗಿದೆ. ಆದರೆ, ಇಂದು ವಲಸೆ ಹೋಗಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ, ಒಳ್ಳೆ ಉದ್ಯೋಗ ಸಿಕ್ಕ ಬಳಿಕ ವಲಸೆ ಹೋದರೆ ಸಮಸ್ಯೆಯಾಗುವುದಿಲ್ಲ. ಕೆಲಸ ಮತ್ತು ಪರಿಚಯ ಏನೂ ಇಲ್ಲದೆ ಊರಿಂದ ಊರಿಗೆ ಬಂದು ಉದ್ದಾರ ಆಗುವುದು ಸುಲಭವಲ್ಲ. 16ನೇ ವಯಸ್ಸಿನಲ್ಲೇ ಲಾರಿ ಹತ್ತಿ ಬೆಂಗಳೂರಿಗೆ ಬಂದು ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಯ ಕತೆ ಇದು.

ಸತೀಶ್, 16ನೆ ವಯಸ್ಸಿನಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಬಂದ ಹುಡುಗ. ಹೋಟೆಲ್, ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಲೇ ಟ್ರಾವೆಲ್ಸ್ ಆರಂಭಿಸುವ ಮೂಲಕ ಸ್ವಂತ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರ ಕತೆ ಇಂದಿನ ಯುವಜನತೆಗೆ ಸ್ಪೂರ್ತಿಯಾಗುತ್ತದೆ.
30 ರೂಪಾಯಿ ಸಂಬಳದ ಕೆಲಸ
ಸತೀಶ್ ಮನೆಯಲ್ಲಿ ಕಡುಬಡುತನ. 1999ರಲ್ಲಿ ಎಸೆಸೆಲ್ಸಿ ಮುಗಿಯುತ್ತಲೆ ಫಲಿತಾಂಶವನ್ನು ನೋಡದೆ, ಲಾರಿ ಹಿಡಿದು ಬೆಂಗಳೂರು ಸೇರುತ್ತಾನೆ. ಮೆಜೆಸ್ಟಿಕ್ನಲ್ಲಿ ಹೋಟೆಲ್ವೊಂದಕ್ಕೆ ಹೋಗಿ ಕೆಲಸ ಕೇಳುತ್ತಾನೆ. ಹೊಟ್ಟೆಗೆ ಮೂರು ಹೊತ್ತು ಊಟ, ದಿನಕ್ಕೆ 30 ರೂಪಾಯಿ ಸಂಬಳ ಸಿಗುತ್ತದೆ.
ಹೋಟೆಲ್ನಲ್ಲಿ ತಟ್ಟೆ ತೊಳೆಯುತ್ತಾ, ಅಡುಗೆಯವರಿಗೆ ಸಹಾಯ ಮಾಡುತ್ತಲೆ ಹೋಟೆಲ್ನಲ್ಲಿ ತಯಾರಾಗುತ್ತಿದ್ದ ಎಲ್ಲ ಅಡುಗೆಯನ್ನು ಕಲಿತುಕೊಳ್ಳುತ್ತಾನೆ. ಅಡುಗೆಯವರು ಬರದಿದ್ದಾಗ ಈತನೆ ಅಡುಗೆ ಮಾಡುವ ಹಂತಕ್ಕೆ ತಲುಪುತ್ತಾನೆ. ಇನ್ನೇನು ಒಂದು ವರ್ಷ ಮುಗಿಯುತ್ತಿದ್ದಂತೆ ಹೋಟೆಲ್ ಮಾಲೀಕರು ಈತನಿಗೆ ದಿನಕ್ಕೆ ನೂರು ಕೊಟ್ಟು, ಅಲ್ಲಿಯೇ ಉಳಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ, ಸತೀಶ್ಗೆ ಅಡುಗೆಯ ಕೆಲಸ ಬೇಸರ ಎನಿಸಿ ಬೇರೆ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುತ್ತಾನೆ.
ಇದೇ ಸಂದರ್ಭದಲ್ಲಿ ಹೋಟೆಲ್ಗೆ ಗಾರ್ಮೆಂಟ್ಸ್ ಮಾಲೀಕರೊಬ್ಬರ ಜೊತೆ ಐದಾರು ಮಂದಿ ಊಟ ಆರ್ಡರ್ ಮಾಡಿ, ಗಾರ್ಮೆಂಟ್ಸ್ ಕೆಲಸದ ಕುರಿತು ಮಾತುಕತೆ ನಡೆಸುತ್ತಿರುತ್ತಾರೆ. ಇವರ ಮಾತುಕತೆಯನ್ನು ಕೇಳಿದ ಸತೀಶ್, ನಾನು ಗಾರ್ಮೆಂಟ್ಸ್ ಕೆಲಸಕ್ಕೇ ಸೇರಬೇಕೆಂದು ನಿರ್ಧರಿಸುತ್ತಾರೆ. ಅವರಿಗೆ ಊಟ ಬಡಿಸುತ್ತಲೇ ಗಾರ್ಮೆಂಟ್ಸ್ ಮಾಲೀಕರನ್ನು ಪರಿಚಯ ಮಾಡಿಕೊಂಡು ಕೆಲಸ ಕೊಡುವಂತೆ ಕೇಳುತ್ತಾನೆ, ಅವರು ಸಂತೀಶ್ಗೆ ಗಾರ್ಮೆಂಟ್ಸ್ ಕಂಪೆನಿಯ ವಿಳಾಸ, ಪೋನ್ ಕೊಟ್ಟು ಹೋಗುತ್ತಾರೆ. ಅಲ್ಲಿಂದ ಸತೀಶ್ ಗಾರ್ಮೆಂಟ್ಸ್ ಕ್ಷೇತ್ರದತ್ತ ಹೋಗುತ್ತಾರೆ.
ಕೆಲಸದ ಜೊತೆಗೆ ಹೋಟೆಲ್ ಆರಂಭ
ಹೊಸೂರು ರಸ್ತೆಯ ಬೊಮ್ಮನಹಳ್ಳಿಯಲ್ಲಿದ್ದ ಗಾರ್ಮೆಂಟ್ಸ್ ಕಂಪೆನಿಯ ಮಾಲೀಕನನ್ನು ಭೇಟಿ ಮಾಡಿ ತನ್ನ ಕಷ್ಟ ಹೇಳಿಕೊಳ್ಳುತ್ತಾರೆ. ಸತೀಶ್ ಅವರ ಮಾತು ಕೇಳಿದ ಗಾರ್ಮೆಂಟ್ಸ್ ಮಾಲೀಕರು, 'ಈ ಗಾರ್ಮೆಂಟ್ಸನ್ನು ಈಗಷ್ಟೆ ಪ್ರಾರಂಭಿಸಿದ್ದೇನೆ. ನಾನು ಹಲವು ಕನಸುಗಳನ್ನು ಕಟ್ಟಿಕೊಂಡು, ಸಾಲ ಮಾಡಿ ಪ್ರಾರಂಭಿಸಿದ್ದೇನೆ. ನಿನ್ನ ದುಡಿಮೆಗೆ ನಾನು ಮೋಸ ಮಾಡುವುದಿಲ್ಲ. ಚೆನ್ನಾಗಿ ಕೆಲಸ ಕಲಿ. ಗಾರ್ಮೆಂಟ್ಸ್ ಉದ್ಯಮದಲ್ಲಿ ಉತ್ತಮ ಅವಕಾಶಗಳನ್ನು ನಾನು ದೊರಕಿಸಿಕೊಡುತ್ತೇನೆಂದು' ಎಂದು ಭರವಸೆ ನೀಡುತ್ತಾರೆ.
ಸತೀಶ್ಗೆ ಕೆಲಸವೇನೊ ಸಿಕ್ಕಿತು. ಉಳಿದುಕೊಳ್ಳುವುದು ಹೇಗೆಂದು ಚಿಂತಿಸುತ್ತಿರುವಾಗ ಅದೇ ಗಾರ್ಮೆಂಟ್ಸ್ನಲ್ಲಿ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಹುಡುಗರು ಸತೀಶ್ ಅವರ ಕಷ್ಟ ಕೇಳಿ ನಮ್ಮ ರೂಮ್ನಲ್ಲೇ ಉಳಿದುಕೊಳ್ಳಲು ಹೇಳುತ್ತಾರೆ.
ಒಳ್ಳೆಯ ಹಾದಿಯಲ್ಲಿದ್ದರೆ ಅವಕಾಶಗಳು ಹೇಗೆ ತೆರೆದುಕೊಳ್ಳುತ್ತವೆ ಎಂಬಂತೆ ಸತೀಶ್ಗೆ ಕೆಲಸ, ಉಳಿದುಕೊಳ್ಳಲು ಸ್ಥಳ ಸಿಕ್ಕಿತು. ಹೀಗೆ ಒಂದೆರಡು ತಿಂಗಳು ಕಳೆದ ನಂತರ ಮಳೆಗಾಲದ ಒಂದು ದಿನ ತನ್ನ ಮನೆಯ ನೆನಪಾಗುತ್ತದೆ. ನಿದ್ದೆ ಮಾಡಲಾಗದೆ ಎದ್ದು ಕೂರುತ್ತಾನೆ. ಮುಂದಿನ ಒಂದು ವರ್ಷದಲ್ಲೆ ಒಂದು ಮನೆಯನ್ನು ಕಟ್ಟಬೇಕೆಂದು ನಿರ್ಧರಿಸುತ್ತಾನೆ. ಹಾಗೂ ಗಾರ್ಮೆಂಟ್ಸ್ ಜೊತೆಗೆ ಇನ್ನೇನಾದರು ಮಾಡಬೇಕೆಂದು ನಿರ್ಧಾರ ಮಾಡುತ್ತಾನೆ.
ಮುಂದಿನ ದಿನವೇ ಸಂಜೆ ಗಾರ್ಮೆಂಟ್ಸ್ ಮುಗಿಯುತ್ತಗಿದ್ದಂತೆ ಸಂಜೆ ಮನೆಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಹೊಸೂರು ಹೆದ್ದಾರಿ ಪಕ್ಕದಲ್ಲಿದ್ದ ಹೋಟೆಲ್ವೊಂದಕ್ಕೆ ರಾತ್ರಿ ಪಾಳೆಯ ಕೆಲಸಕ್ಕೆ ಸೇರುತ್ತಾನೆ. ತಿಂಗಳಿಗೆ ಗಾರ್ಮೆಂಟ್ಸ್ನಲ್ಲಿ ₹1500 ಸಂಬಳ, ಹೋಟೆಲ್ನಲ್ಲಿ ₹1000 ಸಂಬಳ ಬರುತ್ತಿದ್ದಂತೆ ಊರಿನಲ್ಲಿ ಚೀಟಿ ಹಾಕುತ್ತಾನೆ. ಕಷ್ಟಪಟ್ಟು ಹಣ ಉಳಿಸಿ, ಜೊತೆಗೆ ಸಾಲ ಮಾಡಿ ಊರಲ್ಲೊಂದು ಮನೆ ಕಟ್ಟುತ್ತಾರೆ.
ಗಾರ್ಮೆಂಟ್ಸ್ ಜೊತೆಗೆ ಟ್ರಾವೆಲ್ಸ್ ಪ್ರಾರಂಭ
ವರ್ಷದಿಂದ ವರ್ಷಕ್ಕೆ ಗಾರ್ಮೆಂಟ್ಸ್ನಲ್ಲಿ ಅನುಭವ ಹೆಚ್ಚಾಗುತ್ತಿದ್ದಂತೆ ವೇತನ ಕೂಡ ಹೆಚ್ಚುತ್ತದೆ. ಟೀಂ ಲೀಡರ್, ಸೂಪರ್ವೈಸರ್ ಹುದ್ದೆಗೆ ಏರುತ್ತಾನೆ. ಕಾರೊಂದನ್ನು ಖರೀದಿಸಿ ಚಾಲಕನೊಬ್ಬನನ್ನು ನೇಮಿಸಿ ಇನ್ಫೋಸಿಸ್ಗೆ ಬಿಡುತ್ತಾರೆ. ಅದರಿಂದಲೂ ತಿಂಗಳಿಗೆ ಎಲ್ಲ ಕಡೆದು ₹20 ಸಾವಿರ ಆದಾಯ ಗಳಿಸುತ್ತಾರೆ. ಈ ಲಾಭದಿಂದಲೇ ಮುಂದಿನ ವರ್ಷದಲ್ಲಿ ಮತ್ತೊಂದು ಕಾರನ್ನು ಖರೀದಿಸುತ್ತಾನೆ. ಹೀಗೆ ಮೂರು ನಾಲ್ಕು ಕಾರು, ಸ್ವಂತ ಮನೆ ಕಟ್ಟಿಕೊಂಡು ನಂತರ ಮದುವೆಯಾಗುತ್ತಾನೆ. ಸಾಧಿಸುವ ಛಲ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಸತೀಶ್ ಸಾಕ್ಷಿ.












Click it and Unblock the Notifications