Maha Kumbh Mela 2025: ಒಂದೇ ದಿನ 10 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವ ಈ ದಿನದ ಮಹತ್ವವೇನು?
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಜಾಗತೀಕ ಮಟ್ಟದ ಹಿಂದೂ ಧರ್ಮದ ಅತ್ಯಂತ ಬೃಹತ್ ಉತ್ಸವ ಮಹಾ ಕುಂಭಮೇಳ ಹದಿನಾರು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಹದಿನೇಳನೇ ದಿನಕ್ಕೆ ಕಾಲಿಟ್ಟಿದ್ದೆ. ಈವರೆಗೂ ಶಾಂತಿಯುತವಾಗಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ಇಂದು ಅವಘಡ ಸಂಭವಿಸಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಜನವರಿ 13ರಂದು ಆರಂಭವಾದ ಈ ಮಹಾ ಕುಂಭಮೇಳವು ಫೆಬ್ರವರಿ 26ರವರೆಗೆ ನಡೆಯಲಿದೆ. ಈ ಬಾರಿ ಜಗತ್ತಿನಾದ್ಯಂತದಿಂದ 40 ಕೋಟಿ ಭಕ್ತರು ಮಹಾ ಕುಂಭಮೇಳಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಇಂದು(ಜನವರಿ 29)ರಂದು ಒಂದೇ ದಿನ ಹತ್ತು ಕೋಟಿಗೂ ಅಧಿಕ ಭಕ್ತರು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ.

ಮಹಾ ಕುಂಭಮೇಳದಲ್ಲಿ ಕೋಟಿ ಕೋಟಿ ಭಕ್ತರು ಭಾಗಿಯಾಗುತ್ತಿರುವ ಈ ದಿನದ ಮಹತ್ವವೇನು? ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ. ಇಂದು ಮಾಘ ಮಾಸದಲ್ಲಿ ಬರುವ ಮೌನಿ ಅಮವಾಸ್ಯೆಯ ಪವಿತ್ರ ದಿನವಾಗಿದೆ. ಈ ದಿನ ಗಂಗಾ ನದಿಯ ನೀರು ಅಮೃತವಾಗಿ ಬದಲಾಗುತ್ತದೆ ಎನ್ನುವ ನಂಬಿಕೆ ಇದೆ. ಮಾಘ ಮಾಸದ ಮೌನಿ ಅಮವಾಸ್ಯೆಯ ದಿನ ಪುಣ್ಯಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ಕೋಟ್ಯಂತರ ಭಕ್ತರು ಇಂದು ಪ್ರಯಾಗ್ ರಾಜ್ನ ಕುಂಭಮೇಳಕ್ಕೆ ಆಗಮಿಸುತ್ತಿದ್ದಾರೆ.
ಇನ್ನು ಒಂದೇ ದಿನ ಸುಮಾರು 10 ಕೋಟಿಗೂ ಅಧಿಕ ಭಕ್ತರು ಕುಂಭ ಸ್ನಾನ ಮಾಡುತ್ತಿರುವ ಕಾರಣ ಅಮೃತ ಸ್ನಾನ ಮಾಡಲು ತ್ರಿವೇಣಿ ಸಂಗಮದಲ್ಲಿ ಸುಮಾರು 25 ರಿಂದ 30 ಕಡೆ ಘಾಟ್ಗಳನ್ನು ನಿರ್ಮಿಸಲಾಗಿದೆ. ಜೊತೆಗೆ ತ್ರಿವೇಣಿ ಮಾರ್ಗ, ಕಾಳಿ ಮಾರ್ಗ ಸೇರಿದಂತೆ ಸಂಗಮದ ಮುಖ್ಯ ರಸ್ತೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ಇಂದು ಗಣ್ಯರಿಗೆ ಹಾಗೂ ಸಿನಿಮಾ ತಾರೆಯರಿಗೆ ಯಾವುದೇ ವಿಶೇಷ ವ್ಯವಸ್ಥೆ ಇರುವುದಿಲ್ಲ ಎಂದು ಮಹಾ ಕುಂಭ ಮೇಳದ ಆಯೋಜಕರು ಈಗಾಗಲೇ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸಿಎಂಗೆ ಪ್ರಧಾನಿ ನರೇಂದ್ರ ಮೋದಿ ಕರೆ
ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿದ್ದು, ಹತ್ತಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಇನ್ನು ಘಟನೆಯಲ್ಲಿ ಹತ್ತಾರು ಭಕ್ತರು ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಅವಘಡದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಮಹಾ ಕುಂಭಮೇಳದಲ್ಲಿ ಇನ್ನಷ್ಟು ಭದ್ರತೆ ಹೆಚ್ಚಿಸಿ ಭಕ್ತರಿಗೆ ಯಾವುದೇ ರೀತಿಯಲ್ಲೂ ಅನಾನುಕೂಲವಾಗುವಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇತ್ತ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಭದ್ರತೆಗೆ ಸೂಚಿಸಿದ್ದಾರೆ.












Click it and Unblock the Notifications