ದೇಶದ್ರೋಹ ಕಾಯ್ದೆ ತಿದ್ದುಪಡಿಗೆ ಸರಕಾರ ಇರಾದೆ; ಏನಿದು ಕಾನೂನು?
ದೇಶದ್ರೋಹ ಕಾಯ್ದೆ ಇತ್ತೀಚಿನ ಕೆಲ ವರ್ಷಗಳಿಂದ ಬಹಳ ದೊಡ್ಡ ಸದ್ದು ಮಾಡುತ್ತಿದೆ. ಸರಕಾರದ ವಿರುದ್ಧ ಹೇಳಿಕೆ ಕೊಡುವವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವ ಕ್ರಮ ಹೆಚ್ಚಾಗುತ್ತಿದೆ. ಇದರಿಂದ ಕೆಲ ಮಾಧ್ಯಮಗಳು ಸರಕಾರಿ ವಿರೋಧಿ ವರದಿಗಳನ್ನು ಪ್ರಕಟಿಸಲು ಹಿಂಜರಿಯುವಂಥ ಸನ್ನಿವೇಶಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಕಾಯ್ದೆಯು ವಾಕ್ ಸ್ವಾತಂತ್ರ್ಯ ಕಸಿದುಕೊಳ್ಳುತ್ತದೆ ಎಂಬ ಆತಂಕ ಇದೆ. ಈ ಹಿನ್ನಲೆಯಲ್ಲಿ ದೇಶದ್ರೋಹ ಕಾಯ್ದೆ ವಿರುದ್ಧ ಬಹಳ ಮಂದಿ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಹಲವು ವಿರೋಧಗಳ ನಂತರ ಇದೀಗ ಕೇಂದ್ರ ಸರಕಾರ ಈ ದೇಶದ್ರೋಹ ಕಾನೂನನ್ನು ಪರಾಮರ್ಶಿಸುವುದಾಗಿ ಹೇಳಿದೆ.
ಪಾಕಿಸ್ತಾನ್ ಜಿಂದಾಬಾದ್: ಆರ್ಎಲ್ಡಿ ಅಭ್ಯರ್ಥಿ ನೀರಜ್ ಚೌಧರಿ ವಿರುದ್ಧ ದೇಶದ್ರೋಹ ಪ್ರಕರಣ
ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಸರಕಾರ, ಈ ದೇಶದ್ರೋಹ ಕಾಯ್ದೆಯಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದಾಗಿ ಹೇಳಿದೆ. ಸುಪ್ರೀಂ ಕೋರ್ಟ್ನಲ್ಲಿ ಇಂದು ದೀರ್ಘ ಸಮಯ ಈ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಕೇಂದ್ರ ಸರಕಾರ ಈ ಕಾನೂನಿನಲ್ಲಿ ಮಾರ್ಪಾಡು ಮಾಡಲು ಒಪ್ಪಿಕೊಂಡಿತು.
ಭಾರತ ಸ್ವಾತಂತ್ರ್ಯ ಹೋರಾಟಗಾರರಿಗೆ ತಾಲಿಬಾನ್ ಹೋಲಿಕೆ: ಎಸ್ಪಿ ಸಂಸದರ ವಿರುದ್ದ ದೇಶದ್ರೋಹ ಪ್ರಕರಣ
ಈ ಕಾಯ್ದೆಗೆ ತಿದ್ದುಪಡಿ ಆಗುವವರೆಗೂ ದೇಶದ್ರೋಹ ಪ್ರಕರಣಗಳನ್ನು ಮುಂದೂಡಬಹುದೆ ಎಂದು ಕೇಳಿದೆ. ಅಷ್ಟಕ್ಕೂ ಈ ದೇಶದ್ರೋಹ ಕಾಯ್ದೆ ಏನು, ಅದರ ಸುತ್ತ ಇರುವ ವಿವಾದಗಳೇನು ಎಂಬ ವಿವರ ಇಲ್ಲಿದೆ.
ಸರಕಾರದ ನಿಲುವೇನು?
ದೇಶದ್ರೋಹ ಕಾನೂನು ತಪ್ಪಲ್ಲ. ಆದರೆ ಅದರ ದುರ್ಬಳಕೆ ಆಗುವುದನ್ನು ತಪ್ಪಿಸುವ ವ್ಯವಸ್ಥೆ ಆಗಬೇಕು ಎಂಬುದು ಸರಕಾರದ ನಿಲುವು. ಬ್ರಿಟಿಷರ ಕಾಲದಲ್ಲಿ ರೂಪುಗೊಂಡ ಕಾನೂನು ಇದು. ವಸಾಹತುಶಾಹಿ ಆಡಳಿತದ ವೇಳೆ ಮಾಡಲಾದ ಇಂಥ ಕಾನೂನುಗಳನ್ನು ವಿಮರ್ಶಿಸಿ ಬದಲಾಯಿಸುವ ಅಥವಾ ಸೂಕ್ತ ತಿದ್ದುಪಡಿ ಮಾಡುವ ಅಗತ್ಯ ಇದೆ. 2014ರಿಂದ ಹಲವು ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ, ದೇಶದ್ರೋಹ ಕಾನೂನಿನಲ್ಲಿ ಬದಲಾವಣೆ ತರಲೂ ಸಿದ್ಧವಿದ್ದೇವೆ ಎಂದು ಕೇಂದ್ರ ಸರಕಾರ ಹೇಳಿದೆ.
ದೇಶದ್ರೋಹ ಕಾನೂನು ಏನಿದೆ?
ಭಾರತೀಯ ಅಪರಾಧ ದಂಡ ಸಂಹಿತೆ (IPC) ಸೆಕ್ಷನ್ 124A ನಲ್ಲಿ ದೇಶದ್ರೋಹದ ವ್ಯಾಖ್ಯಾನ ಇದೆ. ಭಾರತದಲ್ಲಿ ಕಾನೂನುಬದ್ಧವಾಗಿ ಸ್ಥಾಪಿತವಾದ ಸರಕಾರದ ವಿರುದ್ಧ ಭಾಷಣ, ಬರಹ ಅಥವಾ ಬೇರೆ ವಿಧಾನಗಳ ಮೂಲಕ ಸ್ಥಾಪಿತವಾದ ಸರಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರ ಭಾವನೆ ಕೆರಳಿಸುವುದು ದೇಶದ್ರೋಹ ಎನಿಸುತ್ತದೆ. ಈ ಕಾನೂನಿನಲ್ಲಿ ಜೀವಾವಧಿ ಶಿಕ್ಷೆ ಕೊಡುವ ಅವಕಾಶ ಇದೆ.
ಬ್ರಿಟಿಷರು ರೂಪಿಸಿದ ಕಾನೂನು
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲೆಂದು ಬ್ರಿಟಿಷರು ರೂಪಿಸಿದ ಹಲವು ಕಾನೂನುಗಳಲ್ಲಿ ದೇಶದ್ರೋಹ ಕಾಯ್ದೆಯೂ ಒಂದು. ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮನಬಂದಂತೆ ಬಂಧಿಸಿ ಹೋರಾಟಕ್ಕೆ ಹಿನ್ನಡೆ ತರುವುದು ಬ್ರಿಟಿಷರ ಚಿತಾವಣೆ ಆಗಿತ್ತು. ಬ್ರಿಟನ್ ದೇಶದಲ್ಲಿ 1661ರಲ್ಲಿ ಮೊದಲ ಬಾರಿಗೆ ಈ ಕಾನೂನು ಜಾರಿಗೆ ಬಂದಿತ್ತು. ಅಮೆರಿಕದಲ್ಲಿ 1798ರಲ್ಲಿ ಅಳವಡಿಸಲಾಯಿತು. ಭಾರತದಲ್ಲಿ ಬ್ರಿಟಿಸರು 1870ರಲ್ಲಿ ಇದನ್ನು ಜಾರಿಗೆ ತಂದರು. ಈ ಕಾನೂನು ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಬಾಯಿ ಮುಚ್ಚಿಸುವ ಬ್ರಿಟಿಷರ ಪ್ರಯತ್ನ ಯಶಸ್ಸು ಕಂಡಿದ್ದು ನಗಣ್ಯವೇ. ಬ್ರಿಟಿಷರು ಭಾರತ ಬಿಟ್ಟು ಹೋದ ಬಳಿಕ ಅವರ ದೇಶದಲ್ಲಿ ಈ ಕಾನೂನನ್ನು ರದ್ದು ಮಾಡಿದ್ದು ಹೌದು. ಆದರೆ, ಭಾರತದಲ್ಲಿ ಮಾತ್ರ ಇದು ಮುಂದುವರಿಯುತ್ತಿರುವುದು ವಿಪರ್ಯಾಸ ಎಂಬ ಅಭಿಪ್ರಾಯ ಇದೆ.
ಸ್ವತಂತ್ರ ಭಾರತದಲ್ಲಿ ದೇಶದ್ರೋಹ ಕಾನೂನು ಯಾಕೆ ಉಳಿಯಿತು?
ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ್ರೋಹ ಕಾನೂನು ಉಳಿಸಿಕೊಳ್ಳಬೇಕಾ ಬೇಡವಾ ಎಂಬ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಬಹಳಷ್ಟು ಚರ್ಚೆಗಳು ನಡೆದಿದ್ದವು. ಈ ವಿಚಾರವಾಗಿ ಮಿಶ್ರ ಅಭಿಪ್ರಾಯಗಳು ಬಂದವು. ದೇಶದ್ರೋಹ ಕಾನೂನಿನಿಂದ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಬಹುದು ಎಂಬುದು ಈ ಸಭೆಯ ಬಹುತೇಕ ಸದಸ್ಯರ ಅನಿಸಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂವಿಧಾನದಲ್ಲಿ ಎಲ್ಲಿಯೂ ದೇಶದ್ರೋಹ ಪದ ಬಳಕೆ ಆಗಿಲ್ಲ. ಅಪರಾಧ ದಂಡ ಸಂಹಿತೆಯ ಸೆಕ್ಷನ್ 124-A ಅಲ್ಲಿ ಮಾತ್ರ ಇದನ್ನು ಸೇರಿಸಲಾಗಿದೆ.
ಕಾಂಗ್ರೆಸ್ ಪಕ್ಷದ ನಿಲುವೇನು?
ಕಾಂಗ್ರೆಸ್ ಪಕ್ಷ ಈಗ ದೇಶದ್ರೋಹ ಕಾನೂನಿನ ಬಗ್ಗೆ ಬಹಳಷ್ಟು ಟೀಕೆಗಳನ್ನು ಮಾಡುತ್ತಾ ಬರುತ್ತಿದೆ. ವಿಪರ್ಯಾಸ ಎಂದರೆ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಬಹುತೇಕ ಎಲ್ಲಾ ಸರಕಾರಗಳೂ ಈ ಕಾನೂನನ್ನು ದುರ್ಬಳಕೆ ಮಾಡಿಕೊಡಿದ್ದಿದೆ. ಸರಕಾರದ ವಿರುದ್ಧ ಧ್ವನಿ ಎತ್ತಿವವರನ್ನು ಸುಲಭವಾಗಿ ಅಡಗಿಸಲು ಈ ಕಾನೂನು ಪ್ರಬಲ ಅಸ್ತ್ರ ಎನಿಸಿದೆ. ಹೀಗಾಗಿ ಯಾವ ಪಕ್ಷವೂ ಈ ಕಾನೂನನ್ನು ರದ್ದು ಮಾಡುವ ಮನಸು ಮಾಡಲಿಲ್ಲ ಎಂಬ ಮಾತಿದೆ.
2014ಕ್ಕಿಂತ ಮುಂಚೆ ಎಷ್ಟು ಪ್ರಕರಣಗಳು ದಾಖಲಾಗಿದ್ದವು?
ಇಲ್ಲಿ ಗಮನಿಸಬೇಕಾದ ಒಂದು ಸಂಗತಿ ಇದೆ. ಭಾರತದಲ್ಲಿ ದೇಶದ್ರೋಹ ಪ್ರಕರಣಗಳನ್ನು ಅಧಿಕೃತವಾಗಿ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದ್ದು 2014ರಿಂದ. ಅದಕ್ಕಿಂತ ಮುಂಚೆ ಈ ಪ್ರಕರಣಗಳು ಎಷ್ಟು ಎಂಬ ಮಾಹಿತಿ ಅಧಿಕೃತವಾಗಿ ಇಲ್ಲ. ಮನಮೋಹನ್ ಸಿಂಗ್ ಆಡಳಿತ ಅವಧಿಯಲ್ಲಿ ಪ್ರತೀ ವರ್ಷ 62 ದೇಶದ್ರೋಹ ಪ್ರಕರಣಗಳು ದಾಖಲಾಗುತ್ತಿದ್ದವು ಎಂದು ಕೆಲ ಪೋರ್ಟಲ್ಗಳಲ್ಲಿ ಬರೆಯಲಾಗಿದೆ. ಇದು ಅಧಿಕೃತ ಅಂಶವಲ್ಲವಾದರೂ ಕೆಲವಾರು ದೇಶದ್ರೋಹ ಪ್ರಕರಣಗಳು 2014ಕ್ಕಿಂತ ಮುಂಚೆ ಮಾಧ್ಯಮಗಳಲ್ಲಿ ಜೋರು ಸದ್ದು ಮಾಡಿದ್ದವೆಂಬುದು ವಾಸ್ತವ.
2014ರ ನಂತರದ ಪ್ರಕರಣಗಳು
2014ರಿಂದ 2020ರವರೆಗೆ ದೇಶದಲ್ಲಿ ಒಟ್ಟಾರೆ 356 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 548 ಮಂದಿ ಬಂಧಿತರಾಗಿದ್ದಾರೆ. ಇಷ್ಟೂ ಪ್ರಕರಣಗಳಲ್ಲಿ 12 ಮಂದಿ ಮಾತ್ರ ಕೋರ್ಟ್ನಿಂದ ಶಿಕ್ಷೆ ಪಡೆದಿದ್ದಾರೆ. ಬಹುತೇಕ ದೇಶದ್ರೋಹ ಪ್ರಕರಣಗಳಲ್ಲಿ ಆರೋಪಿಗಳು ಬಹಳ ಬೇಗ ಆರೋಪಮುಕ್ತರಾಗಿದ್ದು ಕಂಡುಬರುತ್ತದೆ.
(ಒನ್ಇಂಡಿಯಾ ಸುದ್ದಿ)