ಗುಜರಾತ್ ಗಲಭೆ: ಮೋದಿಗೆ ಕ್ಲೀನ್ಚಿಟ್; ಏನಿದು ಪ್ರಕರಣ?
ಬೆಂಗಳೂರು, ಜೂನ್ 24: ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ಕೋಮುಗಲಭೆಗಳಲ್ಲಿ 2002ರ ಗುಜರಾತ್ ಗಲಭೆ ಪ್ರಮುಖವಾದುದು. ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಆ ಪ್ರಕರಣದಲ್ಲಿ ಸರಕಾರವೇ ಹಿಂಸೆಗೆ ಪ್ರಚೋದನೆ ನೀಡಿತೆಂಬುದು ಬಹುದೊಡ್ಡ ಆರೋಪ.
ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿರುದ್ಧ ಆರೋಪವೂ ಇದೆ. ಗಲಭೆ ಘಟನೆಗಳ ತನಿಖೆ ನಡೆಸಿದ್ದ ಎಸ್ಐಟಿ ಮೋದಿಗೆ ಕ್ಲೀನ್ ಚಿಟ್ ನೀಡಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಜಾಕಿಯಾ ಜಫ್ರಿ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಗುಜರಾತ್ ಗಲಭೆಯಲ್ಲಿ ಮೃತಪಟ್ಟವರಲ್ಲಿ ಸಂಸದ ಎಹ್ಸಾನ್ ಜಫ್ರಿಯೂ ಒಬ್ಬರು. ಅವರ ಪತ್ನಿಯೇ ಝಾಕಿಯಾ ಜಫ್ರಿ. ಎಸ್ಐಟಿ ತಂಡ 2012ರಲ್ಲಿ ಈ ಪ್ರಕರಣದಲ್ಲಿ ಪರಿಸಮಾಪ್ತಿ ವರದಿ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ಜಾಕಿಯಾ ಜಫ್ರಿ ಸುಪ್ರೀಂ ಕೋರ್ಟ್ನಲ್ಲಿ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಆ ಗಲಭೆ ಘಟನೆಯಲ್ಲಿ ದೊಡ್ಡ ಸಂಚು ಇದೆ ಎಂದು ಅವರು ತಮ್ಮ ಅರ್ಜಿಯಲ್ಲಿ ಶಂಕಿಸಿದ್ದರು.
ಗುಜರಾತ್ ಗಲಭೆ 2002: ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾ
ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಿಟಿ ರವಿ ಕುಮಾರ್ ಅವರಿರುವ ಸುಪ್ರೀಂ ನ್ಯಾಯಪೀಠ ಈ ಅರ್ಜಿಯನ್ನು ವಜಾಗೊಳಿಸಿದೆ. ಕುತೂಹಲವೆಂದರೆ ಜಫ್ರಿ ಬಿಟ್ಟರೆ ಬೇರೆ ಯಾರೂ ಕೂಡ ತನಿಖೆಯನ್ನು ಪ್ರಶ್ನಿಸಿಲ್ಲ.
ಗೋಧ್ರ ರೈಲು ದುರಂತದಿಂದ ಬೆಂಕಿ
2002, ದೇಶದ ವಿವಿಧೆಡೆಯಿಂದ ಅಯೋಧ್ಯೆಗೆ ಕರಸೇವಕರು ಹೋಗಿ ಬರುತ್ತಿದ್ದ ವರ್ಷ. 2002ರ ಪೆಬ್ರವರಿ 27ರಂದು ಅಯೋಧ್ಯೆಯಿಂದ ಕರಸೇವಕರನ್ನು ಹೊತ್ತು ಬಂದ ಸಬರಮತಿ ಎಕ್ಸ್ಪ್ರೆಸ್ ರೈಲು ಗುಜರಾತ್ನ ಗೋಧ್ರಾ ರೈಲ್ವೆ ನಿಲ್ದಾಣದ ಬಳಿಕ ನಿಲ್ಲಿಸಿತ್ತು. ಆಗ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ತಗುಲಿ 59 ಮಂದಿ ಸಜೀವ ದಹನವಾದರು. ಯಾವುದರಿಂದ ಬೆಂಕಿ ತಗುಲಿತು ಎಂಬುದಕ್ಕೆ ಈಗಲೂ ಉತ್ತರ ಸಿಕ್ಕಿಲ್ಲ. ಇನ್ನೂ ದುರಂತವೆಂದರೆ ಸತ್ತವರಲ್ಲಿ 25 ಮಹಿಳೆಯರು ಮತ್ತು 25 ಮಕ್ಕಳು ಸೇರಿದ್ದರು.
ಈ ಘಟನೆಯ ತನಿಖೆ ನಡೆದಿದೆ. ಬೋಗಿಯೊಳಗಿನಿಂದಲೇ ಬೆಂಕಿ ತಗುಲಿರಬಹುದು. ಬಹುತೇಕ ಇದು ಆಕಸ್ಮಿಕ ಘಟನೆ ಆಗಿರಬಹುದು ಎಂಬುದು ತನಿಖಾಧಿಕಾರಿಗಳ ಅನಿಸಿಕೆ.
ಗುಜರಾತ್ ಗಲಭೆ 2002 Timeline: ಮೋದಿ v/s ಜಾಫ್ರಿ ಕಾನೂನು ಸಮರ, ಹತ್ಯಾಕಾಂಡ - ಕ್ಲೀನ್ ಚಿಟ್
ಗುಜರಾತ್ನಾದ್ಯಂತ ಭೀಕರ ಗಲಭೆ
ಗೋಧ್ರಾ ರೈಲು ದರುಂತ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಮತ್ತಿತರ ಬಲಪಂಥೀಯ ಸಂಘಟನೆಗಳು ಬಲವಾಗಿ ಖಂಡಿಸಿದವು. ಗುಜರಾತ್ ಬಂದ್ಗೆ ಕರೆಕೊಡಲಾಯಿತು. ಫೆಬ್ರವರಿ 28ರಂದು ಗುಜರಾತ್ನಾದ್ಯಂತ ಕೋಮುಗಲಭೆಗಳು ನಡೆದವು. ಅಂದು ಸಂಜೆ 27 ನಗರ ಮತ್ತು ಪಟ್ಟಣಗಳಲ್ಲಿ ಕರ್ಫ್ಯೂ ಹಾಕಲಾಯಿತು.
ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಈ ಗಲಭೆ ತಡೆಯಲು ಮನಃಪೂರ್ವಕವಾಗಿ ಕೆಲಸ ಮಾಡಲಿಲ್ಲ ಎಂಬ ಆರೋಪ ಇದೆ. ರಾಜ್ಯ ಸರಕಾರದ ಮುಂದಾಳುಗಳು ನೀಡಿದರೆನ್ನಲಾದ ಪ್ರಚೋದನಕಾರಿ ಹೇಳಿಕೆಗಳು ಗಲಭೆಕೋರರಿಗೆ ಇನ್ನಷ್ಟು ಪ್ರಚೋದನೆ ನೀಡಿದವು. ಮುಸ್ಲಿಮ್ ಸಮುದಾಯದವರನ್ನು ಗುರಿ ಮಾಡಿ ಹಲವೆಡೆ ಭೀಕರ ಹತ್ಯಾಕಾಂಡವೇ ನಡೆದವು ಎಂದು ಹೇಳಲಾಗುತ್ತಿದೆ.
ಸಾವಿನ ಸಂಖ್ಯೆ
ಒಂದು ವರ್ಷದವರೆಗೆ ನಡೆದ ಗಲಭೆಗಳಲ್ಲಿ 1044 ಮಂದಿ ಸಾವನ್ನಪ್ಪಿರುವುದು ಅಧಿಕೃತವಾಗಿ ದಾಖಲಾಗಿರುವ ಮಾಹಿತಿ. 2500 ಜನರು ಗಾಯಗೊಂಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಸಾವನ್ನಪ್ಪಿದ ಸಾವಿರ ಮಂದಿ ಪೈಕಿ ಮುಸ್ಲಿಮರು 790 ಮತ್ತು ಹಿಂದೂಗಳು 254 ಮಂದಿ ಎಂಬುದು ಅಧಿಕೃತ ಲೆಕ್ಕ. ಕೆಲವೊಂದು ವರದಿಗಳ ಪ್ರಕಾರ ಹತ್ಯೆಯಾದವರ ಸಂಖ್ಯೆ 2 ಸಾವಿರಕ್ಕೂ ಹೆಚ್ಚು.
ಎಹ್ಸಾನ್ ಜಫ್ರಿ ಹತ್ಯೆಯಾದದ್ದು
ಅಹ್ಮದಾಬಾದ್ನ ಗುಲ್ಬರ್ಗ್ ಸೊಸೈಟಿಯಲ್ಲಿ ಫೆಬ್ರವರಿ 28ರಂದು 69 ಮಂದಿ ಹತ್ಯೆಯಾಗಿದ್ದರು. ಅದರಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಂಸದರಾಗಿದ್ದ ಎಹ್ಸಾನ್ ಜಫ್ರಿ ಕೂಡ ಸೇರಿದ್ದರು.
ಜಫ್ರಿ ಹತ್ಯೆ ಘಟನೆ ಬಗ್ಗೆ ಬಂದ ಒಂದು ವರದಿ ಪ್ರಕಾರ ಗಲಭೆಕೋರರು ಮಹಿಳೆಯರನ್ನು ಗುರಿ ಮಾಡುತ್ತಿದ್ದಾಗ ಜಾಫ್ರಿ ಮಧ್ಯಪ್ರವೇಶಿಸಿ ಮಹಿಳೆಯರಿಗೆ ಏನು ಮಾಡಬಾರದು ಮನವಿ ಮಾಡಿದರಂತೆ. ಆಗ ಇನ್ನಷ್ಟು ಉದ್ರಿಕ್ತಗೊಂಡ ಗುಂಪು, ಎಹ್ಸಾನ್ ಜಫ್ರಿಯನ್ನು ಬೀದಿಗೆ ಎಳೆದು ಬೆತ್ತಲೆಗೊಳಿಸಿದರಂತೆ. ಜೈ ಶ್ರೀರಾಮ್ ಹೇಳಲು ಒಪ್ಪದ ಅವರ ತಲೆಯನ್ನು ಕತ್ತರಿಸಿ ಬೆಂಕಿಗೆ ಎಸೆದಂತೆ. ಅಷ್ಟು ಸಾಲದೆಂಬಂತೆ ಜಾಫ್ರಿಯವರ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಹಲವರನ್ನು ಬೆಂಕಿಯಿಂದ ಸುಟ್ಟುಹಾಕಲಾಯಿತು. ಇದು ಡಯೋನೆ ಬುನ್ಷಾ ಎಂಬ ಬ್ರಿಟಿಷ್ ಪರಿಸರವಾದಿಯೊಬ್ಬರು ನೀಡಿದ ಆ ಘಟನೆಯ ವಿವರ.
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಷ್ಟೇ ಭೀಕರವಾದ ಹಲವು ಹತ್ಯಾಕಾಂಡಗಳು ಗುಜರಾತ್ನ ವಿವಿಧೆಡೆ ಸಂಭವಿಸಿವೆ. ಬೆಸ್ಟ್ ಬೇಕರಿ, ಬಿಲ್ಕಿಸ್ ಬಾನೋ, ಅವಧೂತ್ನಗರ್, ದನಿಲಿಮಡಾ, ಎರಾಲ್, ಪವಗಡ್ ಧಿಕ್ವಾ, ದಿಪ್ಡ ದರವಾಜ, ನರೋಡ ಪಾಟಿಯಾ ಹತ್ಯಾಕಾಂಡಗಳು ಒಂದೊಂದೂ ಘೋರ ದುರಂತದ ಘಟನೆಗಳಾಗಿವೆ.
ತನಿಖೆಗಳು
2003ರಲ್ಲಿ ಗುಜರಾತ್ ಸರಕಾರ ಗಲಭೆ ಘಟನೆಗಳ ತನಿಖೆಗೆ ನಾನಾವತಿ ಆಯೋಗ ರಚಿಸಿತು. ಸರಕಾರಿ ಯಂತ್ರದಿಂದ ಗಲಭೆಕೋರರಿಗೆ ನೆರವು ಸಿಕ್ಕಿದ್ದಕ್ಕೆ ಯಾವ ಪುರಾವೆಯೂ ಇಲ್ಲ ಎಂದು ಈ ಆಯೋಗ ತೀರ್ಮಾನಿಸಿತು. 2008ರಲ್ಲಿ ಸುಪ್ರೀಂ ಕೋರ್ಟ್ನಿಂದ ಎಸ್ಐಟಿ ತಂಡ ರಚಿಸಿ ತನಿಖೆ ಮಾಡಿಸಲಾಯಿತು. ಮೂವರು ಸದಸ್ಯರಿದ್ದ ಈ ವಿಶೇಷ ತಂಡ ಕೂಡ 2012ರಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿತು. ಈಗ ಅದನ್ನು ಪ್ರಶ್ನಿಸಿ ಎಹ್ಸಾನ್ ಜಾಫ್ರಿ ಪತ್ನಿ ಝಾಕಿಯಾ ಜಾಫ್ರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ನರೇಂದ್ರ ಮೋದಿ ಮತ್ತು ಗುಜರಾತ್ ಸರಕಾರಕ್ಕೆ ನ್ಯಾಯಾಲಯ ಕ್ಲೀನ್ ಚಿಟ್ ಕೊಟ್ಟಿದೆ.
(ಒನ್ಇಂಡಿಯಾ ಸುದ್ದಿ)