ಬೆಂಗಳೂರಿನ ಸದಾಶಿವನಗರಕ್ಕೆ ಆ ಹೆಸರು ಬರಲು ಕಾರಣರಾದ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ತಿಳಿಯಿರಿ
ಬೆಂಗಳೂರಿನ ಸದಾಶಿವ ನಗರ ಯಾರಿಗೆ ಗೊತ್ತಿಲ್ಲ ಹೇಳಿ. ಬೆಂಗಳೂರಿನ ಬಹುತೇಕ ಜನರಿಗೆ ಸದಾಶಿವ ನಗರ ಗೊತ್ತಿದೆ. ಹಲವು ಪ್ರತಿಷ್ಠಿತ ವ್ಯಕ್ತಿಗಳ ನಿವಾಸ ಇರುವುದು ಸದಾಶಿವನಗರದಲ್ಲಿ. ಸದಾಶಿವ ನಗರ ಹೆಸರು ಬರಲು ಏನು ಕಾರಣ, ಸದಾಶಿವ ಯಾರು ಗೊತ್ತಾ?.
ದಕ್ಷಿಣ ಭಾರತದ ಗಾಂಧಿ ಎಂದೇ ಕರೆಯುವ ಕಾರ್ನಾಡ್ ಸದಾಶಿವ ರಾವ್ ಅವರ ನೆನಪಿಗಾಗಿ ಸದಾಶಿವ ನಗರ ಹೆಸರು ಇಡಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ, ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡ ಮಹಾನ್ ವ್ಯಕ್ತಿ ಕಾರ್ನಾಡ್ ಸದಾಶಿವ ರಾವ್.
1881ರಲ್ಲಿ ಮಂಗಳೂರಿನ ಕಾರ್ನಾಡ್ ಎಂಬಲ್ಲಿ ಶ್ರೀಮಂತ ಕುಟುಂಬದಲ್ಲಿ ರಾಮಚಂದ್ರ ರಾವ್ ಹಾಗೂ ರಾಧಾಭಾಯಿ ದಂಪತಿಯ ಏಕೈಕ ಪುತ್ರರಾಗಿ ಜನಿಸಿದ ಸದಾಶಿವರಾವ್ ಕಾರ್ನಾಡ್ ಎಂದೇ ಚಿರಪರಿಚಿತರು. ಮದ್ರಾಸಿನಲ್ಲಿ ಪದವಿ ಶಿಕ್ಷಣ ಪಡೆದ ಕಾರ್ನಾಡರು ನಂತರ ಮುಂಬೈಗೆ ತೆರಳಿ ಕಾನೂನು ಪದವಿ ಗಳಿಸಿದರು. ಕಾನೂನು ಪದವಿ ಪಡೆದ ನಂತರ ಮಂಗಳೂರಿಗೆ ವಾಪಸ್ ಬಂದ ಅವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸಮಾಜದಲ್ಲಿ ಪ್ರತಿಷ್ಠೆಯ ಕೆಲಸ, ಶ್ರೀಮಂತ ಮನೆತನ, ಒಂದೊಳ್ಳೆ ಹಾಯಾದ ಬದುಕನ್ನು ಬದುಕುವ ಅವಕಾಶ ಇದ್ದಾಗಲೂ ಕಾರ್ನಾಡ್ ಸದಾಶಿವರಾವ್ ಆರಿಸಿಕೊಂಡಿದ್ದು ಹೋರಾಟದ ಬದುಕನ್ನು. ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಕರೆ ಸದಾಶಿವರಾವ್ ಕಾರ್ನಾಡರಲ್ಲಿ ಹೋರಾಟದ ಕಿಚ್ಚು ಹಚ್ಚಿತ್ತು. ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಸದಾಶಿವರಾವ್ ಕಾರ್ನಾಡರು ಜೀವನದ ಅಂತ್ಯದವರೆಗೂ ದೇಶಕ್ಕಾಗಿ ಹೋರಾಡಲು ತಮ್ಮ ಬದುಕನ್ನು ಮುಡುಪಾಗಿಟ್ಟರು.

ಜಲಿಯನ್ ವಾಲಾಭಾಗ್ ಹತ್ಯಾಕಾಂಡ
ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಮೆಚ್ಚಿದ್ದ ಕಾರ್ನಾಡ್ ಸದಾಶಿವರಾವ್ 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆಯ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದರು.
ಆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ನ ಸ್ವಾತಂತ್ರ್ಯ ಹೋರಾಟ ಚಳವಳಿ ಜನಪ್ರಿಯವಾಯಿತು. ಪ್ರತಿ ಗ್ರಾಮ, ಗ್ರಾಮಗಳಲ್ಲೂ ಸ್ವಾತಂತ್ರ್ಯದ ಕಹಳೆ ಮೊಳಗಿತು. ಸ್ವತಃ ಸದಾಶಿವರಾವ್ ಕಾರ್ನಾಡರ ಮನೆಯೇ ಕಾಂಗ್ರೆಸ್ ಚಟುವಟಿಕೆಯ ಕೇಂದ್ರಸ್ಥಾನವಾಯಿತು. ಮಹಾತ್ಮ ಗಾಂಧಿ, ಕಸ್ತೂರ್ ಬಾ, ಸಿ.ಆರ್.ದಾಸ್, ಜವಾಹರಲಾಲ್ ನೆಹರು, ಅಲಿ ಸಹೋದರರು ಸೇರಿದಂತೆ ಹಲವು ಸದಾಶಿವರಾವ್ ಮನೆಗೆ ಭೇಟಿ ನೀಡತೊಡಗಿದರು.

ಜಾತಿ ತಾರತಮ್ಯದ ವಿರುದ್ಧ ಹೋರಾಟ
ಕಾರ್ನಾಡ್ ಸದಾಶಿವರಾವ್ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ, ಸಮಾಜ ಸುಧಾರಕರೂ ಹೌದು. ಸಮಾಜದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದ್ದ ಜಾತಿ ಪದ್ಧತಿಯನ್ನು ಬಲವಾಗಿ ವಿರೋಧಿಸಿದರು. ಮೂಢ ನಂಬಿಕೆಗಳ ವಿರುದ್ಧ ಹೋರಾಡಿದರು. ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ತೊಲಗಿಸಲು ಕೊನೆಯವರೆಗೂ ಹೋರಾಟ ಮಾಡಿದ್ದರು.
ಹಿಂದುಳಿದ ವರ್ಗದವರು ಕೂಡ ದೇವಾಲಯಕ್ಕೆ ಹೋಗುವಂತಾಗಬೇಕು, ಅವರಿಗೆ ಪ್ರವೇಶ ನೀಡಬೇಕು ಎಂದು ಹೋರಾಟ ನಡೆಸಿದ್ದರು. ಕಾಳಿ ದೇವಾಲಯಗಳಲ್ಲಿ ಭಕ್ತಿಯ ಹೆಸರಿನಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ವಿರೋಧಿಸಿದ್ದರು. ಅವರು ಅಸ್ಪೃಶ್ಯತೆಯನ್ನು ತೊಡೆದುಹಾಕಲು ದಕ್ಷಿಣ ಕನ್ನಡದ ಅಸ್ಪೃಶ್ಯ ವರ್ಗದ ಇನ್ನೊಬ್ಬ ಸಾಮಾಜಿಕ ಕಾರ್ಯಕರ್ತ ಕುದ್ಮುಲ್ ರಂಗ ರಾವ್ ಅವರೊಂದಿಗೆ ಕೆಲಸ ಮಾಡಿದರು.

ಮಹಿಳೆಯ ಸಬಲೀಕರಣಕ್ಕೆ ಆದ್ಯತೆ
ಮಹಿಳೆಯರು, ವಿಶೇಷವಾಗಿ ವಿಧವೆಯರು ಮತ್ತು ಕೆಳವರ್ಗದ ಜನರು, ಮುಖ್ಯವಾಗಿ ಹರಿಜನರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಇವರ ಹೋರಾಟಕ್ಕೆ ಪತ್ನಿ ಶಾಂತಾಭಾಯಿ ಕೂಡ ಬೆಂಬಲ ನೀಡಿದ್ದರು.
ವಿಧವೆ ಮಹಿಳೆಯರಿಗೆ ನೆರವು ನೀಡುವ ಸಲುವಾಗಿ ಮಹಿಳಾ ಸಭಾ ಸ್ಥಾಪಿಸಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡಲು ಶ್ರಮಿಸಿದರು. ಮಹಿಳೆಯರಿಗೆ ತಮ್ಮ ಸ್ವಂತ ಹಣವನ್ನು ಗಳಿಸಲು ಸಾಧ್ಯವಾಗುವಂತೆ ಹೊಲಿಗೆ ಮತ್ತು ಬುಟ್ಟಿ ತಯಾರಿಕೆಯಂತಹ ಉಪಯುಕ್ತ ಕೌಶಲ್ಯಗಳನ್ನು ಕಲಿಸಿದರು. ಅವರು ಮಹಿಳೆಯರಿಗೆ ಪ್ರಾಥಮಿಕ ಶಿಕ್ಷಣವನ್ನೂ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರನ ದುರಂತ ಅಂತ್ಯ
ಸ್ವಾತಂತ್ರ್ಯ ಹೋರಾಟದಲ್ಲಿ ಹುಮ್ಮಸ್ಸಿನಿಂದ ತೊಡಗಿಸಿಕೊಂಡಿದ್ದಾಗಲೇ 1921ರಲ್ಲಿ ಅವರ ಏಕೈಕ ಪುತ್ರಿ ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪಿದರು. ಮಗಳ ಸಾವಿನಿಂದ ಸದಾಶಿವರಾವ್ ಕುಸಿದುಹೋದರು. ಇದರಿಂದ ಜರ್ಝರಿತರಾದ ಅವರು ಅಹಮದಬಾದ್ಗೆ ತೆರಳಿ ಮಹಾತ್ಮ ಗಾಂಧೀಜಿ ಜೊತೆ ಕಾಲ ಕಳೆದರು. ಕರ್ನಾಟಕದಲ್ಲಿ ಪ್ರವಾಹದಿಂದ ಆದ ಅನಾಹುತದ ಬಗ್ಗೆ ತಿಳಿದು ಮತ್ತೆ ಮಂಗಳೂರಿಗೆ ಆಗಮಿಸಿ ಜನರಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿದರು.
ದಂಡಿ ನಡಿಗೆ, ಉಪವಾಸ ಸತ್ಯಾಗ್ರಹದಲ್ಲಿ ಸತತವಾಗಿ ಭಾಗವಹಿಸಿದ ಬಳಿಕ ಅವರ ಆರೋಗ್ಯ ಹದಗೆಟ್ಟಿತು. ಅನಾರೋಗ್ಯದ ನಡುವೆಯೂ 1936ರಲ್ಲಿ ಫೈಜಾಬಾದ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಮುಂಬೈಗೆ ವಾಪಸಾದ ಕಾರ್ನಾಡರು 1937 ಜನವರಿ 9ರಂದು ಸಾವನ್ನಪ್ಪಿದರು. ಇಡೀ ಜೀವನವನ್ನೇ ಹೋರಾಟಕ್ಕಾಗಿ ಮುಡಿಪಿಟ್ಟವರು ಕಾರ್ನಾಡ್ ಸದಾಶಿವರಾಯರು. ತನ್ನೆಲ್ಲಾ ಸಂಪತ್ತನ್ನು ಬಡವರು, ದೀನ, ದಲಿತರ ಉದ್ಧಾರಕ್ಕಾಗಿ ಖರ್ಚು ಮಾಡಿದ್ದರು. ಅವರು ಮೃತಪಟ್ಟಾಗ ಅವರ ಶವಸಂಸ್ಕಾರಕ್ಕೂ ಹಣ ಇಲ್ಲದಂತಾಗಿತ್ತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ಡಾ.ಶಿವರಾಮ ಕಾರಂತರು ಕಾರ್ನಾಡ್ ಸದಾಶಿವರಾವ್ ಅವರನ್ನು 'ಧರ್ಮರಾಜ' ಎಂದು ಕರೆದಿದ್ದಾರೆ. ಬೆಂಗಳೂರಿನ ಸದಾಶಿವನಗರ ಪ್ರದೇಶ, ಮಂಗಳೂರಿನ ಕೆಎಸ್ ರಾವ್ ರಸ್ತೆ ಮತ್ತು ಮಂಗಳೂರಿನ ಕೇಂದ್ರ ಗ್ರಂಥಾಲಯಕ್ಕೆ ಕಾರ್ನಾಡ್ ಸದಾಶಿವ ರಾವ್ ಅವರ ಹೆಸರನ್ನು ಇಡಲಾಗಿದೆ. ಇಂತಹ ಹೋರಾಟಗಾರರ ಜೀವನದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುವ ಕಾರ್ಯ ಆಗಬೇಕಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications