ಎಲ್ಲರೂ ಮನೆ ಸೇರಿದ ಮೇಲೆ, ನಿರ್ಬಂಧ ಸಡಿಲು: ಗೊತ್ತು ಗುರಿಯಿಲ್ಲದ ಕಾನೂನು!
ಕೊರೊನಾ ಮೊದಲನೇ ಅಲೆ ಎದುರಾದ ನಂತರ ರಾಜ್ಯದ ಜನತೆ ಹಲವು ಲಾಕ್ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಎದುರಿಸಿಕೊಂಡು ಬಂದಿದೆ. ಆದರೆ, ಇಂದಿನಿಂದ (ಜ 8) ಆರಂಭವಾಗಿರುವ ವೀಕೆಂಡ್ ಕರ್ಫ್ಯೂವಿಗೆ ಹಿಂದೆಂದೂ ಇಲ್ಲದಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಸ್ಪಷ್ಟ..
ದಿನದ ವ್ಯಾಪಾರವನ್ನು ಬದುಕಿ ಜೀವನ ನಡೆಸುವವರು ವಾರಾಂತ್ಯದಂದೇ ಒಂದಷ್ಟು ಲಕ್ಷ್ಮೀಯನ್ನು ನೋಡುವುದು. ಈಗ, ಸರಕಾರ ಓಮಿಕ್ರಾನ್ ಹೆಸರಿನಲ್ಲಿ ನಿರ್ಬಂಧ ಹೇರಿರುವುದರಿಂದ 'ನಮ್ಮ ಹೊಟ್ಟೆಗೆ ಯಾಕೆ ಹೊಡಿಯುತ್ತಿದ್ದೀರಾ' ಎನ್ನುವ ನೋವಿನ ಕಟ್ಟೆ ಅವರಿಂದ ಒಡೆಯುತ್ತಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಹತ್ತಕ್ಕೂ ಕಮ್ಮಿಯಿರುವ ಜಿಲ್ಲೆಗಳಲ್ಲೂ ವೀಕೆಂಡ್ ಕರ್ಫ್ಯೂ ವಿಧಿಸಿರುವುದು ಸರಕಾರದ ಹಾಸ್ಯಾಸ್ಪದ ನಡೆ ಎಂದು ಕೆಲವು ವೃತ್ತಿಪರರೇ ಹೇಳುತ್ತಿದ್ದಾರೆ. ಬೊಮ್ಮಾಯಿ ಸರಕಾರದ ಕ್ಯಾಬಿನೆಟ್ ನಲ್ಲೂ ವಿರೋಧ ವ್ಯಕ್ತವಾಗಿತ್ತು ಎನ್ನುವುದೂ ಜನರಿಗೆ ಅರಿತಿದೆ.
ವಾರಾಂತ್ಯದ ಕರ್ಫ್ಯೂವಿನಿಂದ ಬಹುದೊಡ್ಡ ನಷ್ಟವಾಗುವುದು ವರ್ತಕರ ಜೊತೆ, ರೆಸಾರ್ಟ್, ಪ್ರವಾಸೀ ತಾಣ, ಟ್ರಾವೆಲ್ಸ್ ಸಂಸ್ಥೆಗಳಿಗೆ. ಕರ್ಫ್ಯೂ ಬಗ್ಗೆ ಅರಿವಿಲ್ಲದ ಪ್ರವಾಸಿಗರು, ಹಿಂದೆ ಮಾಡಿದ್ದ ಬುಕ್ಕಿಂಗ್ ಅನ್ನು ಬೇರೆ ದಾರಿಯಿಲ್ಲದೇ ಕ್ಯಾನ್ಸಲ್ ಮಾಡುತ್ತಿದ್ದಾರೆ. ಈಗ, ವೀಕೆಂಡ್ ಕರ್ಫ್ಯೂ ಆರಂಭಕ್ಕೆ ಒಂದೇ ಒಂದು ಗಂಟೆಯ ಮುನ್ನ ಸರಕಾರ ಟ್ರಾವೆಲ್ಸ್ ವಿಚಾರದಲ್ಲಿ ಪರಿಸ್ಕೃತ ಮಾರ್ಗಸೂಚಿಯನ್ನು ತಂದಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ನಿಲ್ದಾಣಗಳಲ್ಲಿ ಜನವೋ ಜನ
ವಾರಾಂತ್ಯದ ಕರ್ಫ್ಯೂವಿನಿಂದಾಗಿ ತಮ್ಮತಮ್ಮ ಊರು ಸೇರಿಕೊಳ್ಳಲು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ನಿಲ್ದಾಣಗಳಲ್ಲಿ ಜನವೋ ಜನ. ಮನೆಯಿಂದ ಕಾರಣವಿಲ್ಲದೇ ಹೊರಬಂದರೆ ಕೇಸ್ ಹಾಕಲಾಗುವುದು, ಅರೆಸ್ಟ್ ಮಾಡಲಾಗುವುದು ಎಂದು ಸರಕಾರ ಹೇಳಿತ್ತು. ಇದರಿಂದಾಗಿ, ಬೆಂಗಳೂರಿನಿಂದ ಬುಕ್ಕಿಂಗ್ ಆಗಿದ್ದ ಪ್ರವಾಸೀ ತಾಣಗಳ ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳು ಶೇ. 80ರಷ್ಟು ಕ್ಯಾನ್ಸಲ್ ಆಗಿದ್ದಾವೆ. ಇದರಿಂದಾಗಿ, ಇದನ್ನೇ ನಂಬಿಕೊಂಡ ಮಾಲೀಕರು ತಲೆಮೇಲೆ ಕೈಹೊತ್ತು ಕೂರುವಂತೆ ಮಾಡಿತ್ತು ಸರಕಾರ.

ಧರ್ಮಸ್ಥಳ, ಕುಕ್ಕೇ ಸೇರಿದಂತೆ ರಾಜ್ಯದ ಧಾರ್ಮಿಕ ಕೇಂದ್ರಗಳೂ ಭಕ್ತರಿಗೆ ಪ್ರವೇಶವಿಲ್ಲ
ವೀಕೆಂಡ್ ಎಂದ ಕೂಡಲೇ ಬಹುಪಾಲು ಪ್ರವಾಸಿಗರು ಪ್ರವಾಸೀ ತಾಣಕ್ಕೆ ಹೋಗಲು ನಂಬಿಕೊಂಡಿರುವುದು ಟ್ರಾವೆಲ್ಸ್ ಏಜೆನ್ಸಿಗಳನ್ನು. ವಾರಾಂತ್ಯದಲ್ಲಿ ಧರ್ಮಸ್ಥಳ, ಕುಕ್ಕೇ ಸೇರಿದಂತೆ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳೂ ಭಕ್ತರಿಗೆ ಪ್ರವೇಶವಿಲ್ಲ ಎಂದು ಪ್ರಕಟಿಸಿದೆ. ಹೀಗಾಗಿ, ವೀಕೆಂಡ್ ಕರ್ಫ್ಯೂವಿನಿಂದಾಗಿ ಟ್ರಾವೆಲ್ಸ್ ಏಜೆನ್ಸಿಗಳ ವ್ಯಾಪಾರಕ್ಕೆ ಕಲ್ಲುಬಿದ್ದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ನಿರ್ಬಂಧದಲ್ಲಿ ಸಡಿಲಿಕೆ ಮಾಡಿರುವುದು, ರೆಸಾರ್ಟ್ ಅಥವಾ ಟ್ರಾವೆಲ್ಸ್ ಏಜೆನ್ಸಿಯವರಿಗೆ ಹೊಸ ಮಾರ್ಗಸೂಚಿ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿದೆ.

ಸರಕಾರದ ಕೊನೆಯ ಕ್ಷಣದ ಪರಿಷ್ಕೃತ ಆದೇಶ ಏನು ಹೇಳುತ್ತದೆ
ಸರಕಾರದ ಕೊನೆಯ ಕ್ಷಣದ ಪರಿಷ್ಕೃತ ಆದೇಶ ಏನು ಹೇಳುತ್ತದೆ ಎಂದರೆ, ಈಗಾಗಲೇ ವಾರಾಂತ್ಯದಲ್ಲಿ ರೆಸಾರ್ಟ್ ಮುಂತಾದ ಕಡೆ ಬುಕ್ಕಿಂಗ್ ಮಾಡಿರುವ ಸಾರ್ವಜನಿಕರು, ಬುಕ್ಕಿಂಗ್ ಸಂಬಂಧಿಸಿದ ದಾಖಲೆಗಳನ್ನು ತೋರಿಸಿ, ಸ್ವಂತ ಕಾರು/ಟ್ರಾವೆಲ್ಸ್ ಮೂಲಕ ಹೋಗಬಹುದಾಗಿದೆ. ಹೊಟೇಲ್/ರೆಸಾರ್ಟ್ ಗಳ ಮೇಲೆ ನಿರ್ಬಂಧವಿರುವುದಿಲ್ಲ. ಈಗಾಗಲೇ ರೆಸಾರ್ಟ್/ಲಾಡ್ಜ್ ಮುಂತಾದ ಕಡೆ ಉಳಿದುಕೊಂಡಿರುವವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬಹುದಾಗಿದೆ. ಅತಿಥಿಗಳಿಗೆ ಹೊಟೇಲ್ ಚೆಕ್ ಇನ್/ಚೆಕ್ ಔಟಿಗೆ ನಿರ್ಬಂಧವಿಲ್ಲ. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ, ಸಫಾರಿ ಡ್ರೈವಿಗೂ ಅನುಮತಿಯನ್ನು ನೀಡಲಾಗಿದೆ. ಇದು ಸರಕಾರದ ಬದಲಾದ ಮಾರ್ಗಸೂಚಿ.
Recommended Video

ಕರ್ನಾಟಕ ಟ್ರಾವೆಲ್ ಆಪರೇಟರ್ ಅಸೋಶಿಯೇಶನ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ
ಆದರೂ, ಸರಕಾರದ ಹೊಸ ಮಾರ್ಗಸೂಚಿಯಿಂದ ಪ್ರವಾಸೀ ತಾಣವನ್ನು ನಂಬಿಕೊಂಡವರಿಗಾಗಲಿ/ಟ್ರಾವೆಲ್ಸ್ ಮಾಲೀಕರಿಗಾಗಲೀ ಯಾವುದೇ ಪ್ರಯೋಜನವಿಲ್ಲದಂತಾಗಿದೆ. "ವಾರಾಂತ್ಯ ಕರ್ಫ್ಯೂ ಜಾರಿಗೆ ತಂದು, ಪ್ರವಾಸಿಗರು ನಗರದಿಂದ ಹೊರಹೋಗಲು ಸಾಧ್ಯವಿಲ್ಲ ಎನ್ನುವ ಸನ್ನಿವೇಶ ನಿರ್ಮಾಣ ಆದ ಮೇಲೆ ಸರ್ಕಾರ ಮಾರ್ಗಸೂಚಿಯಲ್ಲಿ ಬದಲಾವಣೆಯನ್ನು ತಂದಿದೆ.
ವಾರಾಂತ್ಯ ಪ್ರಯಾಣ ಮಾಡುವವರು ಮುಂಚೆನೇ ತಮ್ಮ ಪ್ರವಾಸದ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಈಗ, ದಿಢೀರನೆ ಇಂತಹ ಆದೇಶಗಳಿಂದ ತೆರಿಗೆ ಕಟ್ಟಿ ಉದ್ಯಮ ನಡೆಸುವ ಟ್ರಾವೆಲ್ಸ ಉದ್ಯಮಕ್ಕೆ ಯಾವೂದೇ ಹೊಸ ಉತ್ತೇಜನ ಸಿಕ್ಕಂತಾಗುವುದಿಲ್ಲ" ಎಂದು ಕರ್ನಾಟಕ ಟ್ರಾವೆಲ್ ಆಪರೇಟರ್ ಅಸೋಶಿಯೇಶನ್ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಹೊಳ್ಳ, ಒನ್ ಇಂಡಿಯಾ ಜೊತೆ ಮಾತನಾಡುತ್ತಾ ಬೇಸರ ವ್ಯಕ್ತ ಪಡಿಸಿದ್ದಾರೆ.











Click it and Unblock the Notifications