ಉಪ ಚುನಾವಣೆಯ ವೇಳೆ ಬಿಎಸ್ವೈ ಮೇಲೆ ಕಾಂಗ್ರೆಸ್ಸಿಗೆ ಚಿಗುರೊಡೆದ ಪ್ರೀತಿ, ಪ್ರೇಮ
ಎರಡು ಕ್ಷೇತ್ರಗಳ ಉಪ ಚುನಾವಣೆ ಮೂರೂ ಪಕ್ಷಗಳಿಗೂ ಪ್ರಮುಖವಾದದ್ದು. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಸಾಬೀತು ಪಡಿಸುವುದು, ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆಗೆ ತಯಾರಾಗುವುದು ಮತ್ತು ಜೆಡಿಎಸ್ ಪಕ್ಷಕ್ಕೆ ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸುವುದು.
ಹಾಗಾಗಿ, ಎಲ್ಲಾ ಪಕ್ಷಗಳು ಒಂದಲ್ಲಾ ಒಂದು ಕಾರ್ಯತಂತ್ರವನ್ನು ರೂಪಿಸಿ ತಮ್ಮತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದು ಸಹಜ. ಇದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಕಾಂಗ್ರೆಸ್, ತಮ್ಮ ವಿರೋಧಿ ದಳದ ನಾಯಕನ ಪರವಾಗಿ ಅನುಕಂಪದ ಮಾತನಾಡಿ, ವಿಭಿನ್ನ ರಾಜಕೀಯ ಹೆಜ್ಜೆಯನ್ನು ಇಟ್ಟಿದೆ.
"ಯಡಿಯೂರಪ್ಪನವರ ವಿರುದ್ದ ಹಿಂದಿನಿಂದಲೂ ಬಿಜೆಪಿ ಪಕ್ಷ ಮಲತಾಯಿ ಧೋರಣೆ ತಾಳುತ್ತಿದೆ" ಎಂದು ಕರ್ನಾಟಕ ಕಾಂಗ್ರೆಸ್ (ಕೆಪಿಸಿಸಿ) ಘಟಕ ಅನುಕಂಪದ ಟ್ವೀಟ್ ಮಾಡಿದೆ. ಉಪ ಚುನಾವಣೆಗೆ ಹೊಸ್ತಿಲಲ್ಲಿ ಬಿಎಸ್ವೈ ಮೇಲೆ ಕಾಂಗ್ರೆಸ್ ತೋರುತ್ತಿರುವ ಸಹಾನುಭೂತಿಯ ಹಿಂದಿನ ಮರ್ಮವೇನು ಎನ್ನುವುದು ಚರ್ಚೆಯ ವಿಷಯವಾಗಿದೆ.
ಕಣ್ಣೀರು ಇಡುತ್ತಾ ಯಡಿಯೂರಪ್ಪನವರು ತಮ್ಮ ರಾಜೀನಾಮೆಯ ವಿದಾಯ ಭಾಷಣವನ್ನು ಮಾಡಿದ್ದನ್ನು ಬಿಜೆಪಿ ಹೊರತಾಗಿ ಕಾಂಗ್ರೆಸ್ ನಾಯಕರು ಕೂಡಾ ವಿರೋಧ ವ್ಯಕ್ತ ಪಡಿಸಿದ್ದರು. ರಾಜ್ಯದಲ್ಲಿ ಪಕ್ಷ ಕಟ್ಟಿ, ಅಧಿಕಾರಕ್ಕೆ ಬರುವಂತೆ ಮಾಡಿದ ನಾಯಕನನ್ನು ಈ ರೀತಿ ನಡೆಸಿಕೊಳ್ಳುವುದೇ ಎಂದು ಕಾಂಗ್ರೆಸ್ ಮುಖಂಡರೂ ದೂರಿದ್ದರು. ಈಗ, ಚುನಾವಣೆ ಹೊಸ್ತಿಲಲ್ಲಿ ಕೆಪಿಸಿಸಿ ಮತ್ತೊಂದು ಟ್ವೀಟ್ ಅನ್ನು ಮಾಡಿದೆ.
|
ಪಕ್ಷ ಕಟ್ಟಿದವರನ್ನ ಮುಗಿಸುವುದು ಬಿಜೆಪಿಯ ಹೊಸ ಟ್ರೆಂಡ್!
ಕೆಪಿಸಿಸಿ ಮಾಡಿದ ಟ್ವೀಟ್ ಹೀಗಿದೆ, "@BSYBJP ಅವರನ್ನು ಬಿಜೆಪಿ ಸದಾ ಮಲತಾಯಿ ಮಗನಂತೆ ನಡೆಸಿಕೊಂಡಿದೆ. ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಕಾಡಿತ್ತು, ಅಧಿಕಾರ ಕಳೆದುಕೊಂಡ ಮೇಲೂ ಕಾಡುತ್ತಿದೆ. ಮುಂದಿನ ಚುನಾವಣೆಯೊಳಗೆ BSYಅವರನ್ನ ಸಂಪೂರ್ಣ ಮುಗಿಸುವ "ಟಾರ್ಗೆಟ್ BSY" ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಪಕ್ಷ ಕಟ್ಟಿದವರನ್ನ ಮುಗಿಸುವುದು ಬಿಜೆಪಿಯ ಹೊಸ ಟ್ರೆಂಡ್!".

ಸರ್ಕಾರದ ಭ್ರಷ್ಟಾಚಾರವನ್ನ, ವಿಜಯೇಂದ್ರ ಹಸ್ತಕ್ಷೇಪವನ್ನು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ
ಇನ್ನೊಂದು ಟ್ವೀಟ್ ನಲ್ಲಿ ಕೆಪಿಸಿಸಿ ಇತ್ತೀಚೆಗೆ ನಡೆದ ಆದಾಯ ತೆರಿಗೆ ದಾಳಿಯ ಬಗ್ಗೆ ಪ್ರಸ್ತಾವಿಸಿದೆ. "ನೀರಾವರಿ ಇಲಾಖೆಯ 20,000 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ @BYVijayendra
ಹಾಗೂ @BSYBJP ಅವರ ಆಪ್ತರನ್ನೇ ಗುರಿಯಾಗಿಸಿ ಐಟಿ ದಾಳಿಯಾಗಿದೆ. ಸರ್ಕಾರದ ಭ್ರಷ್ಟಾಚಾರವನ್ನ, ವಿಜಯೇಂದ್ರ ಹಸ್ತಕ್ಷೇಪವನ್ನು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ, ಅಥವಾ BSY ಅವರನ್ನು ಮುಗಿಸುವ ತಂತ್ರವೆನ್ನುತ್ತದೆಯೇ. @BJP4Karnataka ಉತ್ತರಿಸಬೇಕು" ಎಂದು ಟ್ವೀಟ್ ಮಾಡಿದೆ.

ರಾಜ್ಯದ ಪ್ರಶ್ನಾತೀತ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ
ಹಾನಗಲ್ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಇದರಿಂದಾಗಿ, ಬಿಜೆಪಿ ವರಿಷ್ಠರು ರಾಜ್ಯದ ಪ್ರಶ್ನಾತೀತ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪನವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಮೂಲಕ, ಚುನಾವಣೆಯಲ್ಲಿ ಇದನ್ನು ಅಸ್ತ್ರವನ್ನಾಗಿ ಕಾಂಗ್ರೆಸ್ ಪ್ರಯೋಗಿಸುವ ಸಾಧ್ಯತೆಯಿದೆ. ಜೊತೆಗೆ, ಉದಾಸಿ ಕುಟುಂಬಕ್ಕೆ ಟಿಕೆಟ್ ಸಿಗದೇ ಇರುವ ಹಿನ್ನಲೆಯಲ್ಲಿ ಸ್ಥಳೀಯವಾಗಿ ಬಿಜೆಪಿಯಲ್ಲಿ ಉಂಟಾಗಿರುವ ಅಪಸ್ವರದ ಲಾಭವನ್ನು ಪಡೆಯಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ.
Recommended Video

ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರು ಲಿಂಗಾಯತ ಸಮುದಾಯದವರು
ಆದರೆ, ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರು ಲಿಂಗಾಯತ ಸಮುದಾಯದವರು. ಅಲ್ಲದೇ, ಇವರು ದಿವಂಗತ ಸಿ.ಎಂ.ಉದಾಸಿ ಕುಟುಂಬಕ್ಕೆ ಆಪ್ತರು. ಅಷ್ಟೇ ಅಲ್ಲದೇ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಶಿಷ್ಯವೃಂದದವರು ಎನ್ನುವುದು ಗಮನಿಸಬೇಕಾದ ವಿಚಾರ. ಹಾಗಾಗಿ, ಕಾಂಗ್ರೆಸ್ಸಿನ ಯಡಿಯೂರಪ್ಪನವರ ಪರವಾದ ಅನುಕಂಪ/ಸಹಾನುಭೂತಿಗೆ ಬಿಜೆಪಿ ತಿರುಗೇಟು ನೀಡದೇ ಇರದು.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕ್ಷೇತ್ರದಲ್ಲಿ ಗೆದ್ದು ತಮ್ಮ ಸಾಮರ್ಥ್ಯವನ್ನು ತೋರಿಸಬೇಕಿದೆ.












Click it and Unblock the Notifications