ಭ್ರಷ್ಟ IAS ಗಳಿಗೆ ಕನಸಲ್ಲೂ ಕಾಡುವ ಕನ್ನಡಿಗ IPS ಅಧಿಕಾರಿ ದಿನೇಶ್ ಎಂ.ಎನ್!
ಬೆಂಗಳೂರು, ಮೇ. 25: ಒಬ್ಬ ಅಧಿಕಾರಿ ಜೈಲಿಗೆ ಹೋಗಿ ವಾಪಸು ಸೇವೆಗೆ ಬಂದರೆ ಜನರಿಂದ ಕಣ್ಮರೆಯಾಗುವುದು ಸಹಜ. ಸೊಹರಾಬುದ್ದೀನ್ ಹಾಗೂ ತುಳಸಿರಾಮ್ ಪ್ರಜಾಪತಿ ಎನ್ಕೌಂಟರ್ ಪ್ರಕರಣದಲ್ಲಿ ಏಳು ವರ್ಷ ಜೈಲು ವಾಸ ಅನುಭವಿಸಿ ಮತ್ತೆ ಖಾಕಿ ತೊಟ್ಟ ಸೇವೆಗೆ ಮರಳಿದ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ದಿನೇಶ್ ಎಂ.ಎನ್ ಎರಡನೇ ಅವಧಿಯ ಪೊಲೀಸ್ ಜರ್ನಿ ರಣ ರೋಚಕವಾಗಿದೆ. ಗ್ಯಾಂಗ್ ಸ್ಟಾರ್ ಗಳನ್ನು ಎನ್ಕೌಂಟರ್ ಮಾಡಿ ಸಮಾಧಿ ಕಟ್ಟಿ ರಾಜಸ್ಥಾನದಲ್ಲಿ ಮಿಂಚಿದ್ದ ಕನ್ನಡಿಗ ದಿನೇಶ್ ಎಂ.ಎನ್. ಇದೀಗ ಕಡು ಭ್ರಷ್ಟ ಐಎಎಸ್ ಐಪಿಎಸ್ ಅಧಿಕಾರಿಗಳನ್ನೇ ಜೈಲಿಗೆ ಕಳುಹಿಸಿ ಸದ್ದು ಮಾಡುತ್ತಿದ್ದಾರೆ. ರಾಜಸ್ತಾನ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿರುವ ದಿನೇಶ್ ಎಂ.ಎನ್. IPS ಅವರ 'Opration curruption' ಕಾರ್ಯ ಶೈಲಿ ನೋಡಿ ರಾಜಸ್ಥಾನಿಗಳೇ ಆರಾಧಿಸುತ್ತಿದ್ದಾರೆ.
ರಾಜಸ್ಥಾನದಲ್ಲಿ ಮಿಂಚುತ್ತಿರುವ ಕನ್ನಡಿಗ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಬಗ್ಗೆ ವಿಕಿಪಿಡಿಯಾ ಪೇಜ್
ಮತ್ತೆ ಪುಟಿದ ನಿಂತ ಎಂ.ಎನ್. ದಿನೇಶ್:
ಸೊಹರಾಬುದ್ದೀನ್ ಹಾಗೂ ತುಳಸಿರಾಮ್ ಪ್ರಜಾಪತಿ ಎನ್ಕೌಂಟರ್ ಪ್ರಕರಣಲ್ಲಿ ಬಂಧನಕ್ಕೆ ಒಳಗಾಗಿದ್ದ ಎಂ.ಎನ್. ದಿನೇಶ್ ಏಳು ವರ್ಷ ಜೈಲಿನಲ್ಲಿದ್ದರು. ಈ ಅಜ್ಞಾತ ವಾಸ ಮುಗಿಸಿ ವಾಪಸು ಪೊಲೀಸ್ ಸೇವೆಗೆ ಮರಳಿದ ಖಡಕ್ ಐಪಿಎಸ್ ಅಧಿಕಾರಿ ಮತ್ತೆ ರಾಜಸ್ತಾನದ ಪೊಲೀಸ್ ಇಲಾಖೆಯಲ್ಲಿ ಉತ್ತುಂಗ ಕೀರ್ತಿ ಗಳಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ರಾಜಸ್ತಾನ ಸಣ್ಣ ಕೈಗಾರಿಕಾ ಕಾರ್ಪೋರೇಷನ್ ಎಂಡಿಯಾಗಿ ಕೆಲ ದಿನ ಕಾರ್ಯ ನಿರ್ವಹಿಸಿದ್ದರು. ಮಾಸಿಕ ಐದು ಲಕ್ಷ ನಷ್ಟದಲ್ಲಿದ್ದ ನಿಗಮ ಮಾಸಿಕ 25 ಲಕ್ಷ ರೂ. ಲಾಭ ಗಳಿಸುವಂತೆ ಬುನಾದಿ ಹಾಕಿದರು. ವಾರ್ಷಿಕ ವಹಿವಾಟು 80 ಕೋಟಿಯಿಂದ 120 ಕೋಟಿ ರೂ. ಹೆಚ್ಚಿಸಿ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದ್ದರು.
2015 ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಐಜಿಯಾಗಿ ಜಯಪುರದಲ್ಲಿ ಕಾರ್ಯ ಆರಂಭಿಸಿದರು. ಎಸಿಬಿಗೆ ಎಂಟ್ರಿಯಾಗಿದ್ದೇ ಕೈ ಹಾಕಿದ್ದು ರಾಜಸ್ಥಾನ ಗಣಿ ಇಲಾಖೆ ಅಕ್ರಮಕ್ಕೆ. ಗಣಿ ಗುತ್ತಿಗೆದಾರ ಸಂಜಯ್ ಸೇತಿ ಎಂಬಾತನ ಅಣತಿಯಂತೆ ಗಣಿಗಾರಿಕೆ ಇಲಾಖೆ ಕಾರ್ಯ ನಿರ್ವಹಿಸುತ್ತಿತ್ತು. ತನ್ನ ಸಂಬಂಧಿ ಐಎಎಸ್ ಅಧಿಕಾರಿ ಈ ಸೇತಿ ಜತೆ ಕೈ ಜೋಡಿಸಿದ್ದ. ಗಣಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಈ ಸಂಜಯ್ ಸೇತಿಯ ಬೆನ್ನಿಗೆ ಬಿದ್ದ ಎಂ.ಎನ್. ದಿನೇಶ್ , ಗಣಿ ಇಲಾಖೆಯ ಕಾರ್ಯದರ್ಶಿ ಅಶೋಕ್ ಸಿಂಘ್ವಿ ಹಾಗೂ ಸೇತಿ ನಡುವಿನ ರಹಸ್ಯ ಮಾತುಕತೆಯ ವಿವರಗಳನ್ನು ಸಂಗ್ರಹಿಸಿದ್ದರು. ರಾಜಸ್ಥಾನದಲ್ಲಿ ಹೆಚ್ಚು ಆದಾಯ ಗಳಿಸುತ್ತಿರುವ ಮೈನಿಂಗ್ ಕಂಪನಿಗಳ ಬ್ಯಾಲೆನ್ಸ ಶೀಟ್ ಪಡೆದು ನಿಯಮ ಉಲ್ಲಂಘನೆ ನೆಪದಲ್ಲಿ ಸೇತಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಐಎಎಸ್ ಅಧಿಕಾರಿಯ ನೆರವಿನಿಂದ 20 ಗಣಿಗಳನ್ನು ನಿಯಮ ಉಲ್ಲಂಘನೆ ಹೆಸರಿನಲ್ಲಿ ಮುಚ್ಚಿಸಿದ್ದ. ಐಎಎಸ್ ಅಧಿಕಾರಿಯ ಪಾತ್ರದ ಬಗ್ಗೆ ದಾಖಲೆಗಳನ್ನು ಕಲೆ ಹಾಕಿಸಿದ್ದ ಎಂ ಎನ್.ದಿನೇಶ್, ಗಣಿ ಅಕ್ರಮದ ಬುಡಕ್ಕೆ ಕೈ ಹಾಕಿದರು.
ಪವರ್ ಫುಲ್ ಐಎಎಸ್ ಅಧಿಕಾರಿಗೆ ಬೇಡಿ:
ಚಿತ್ತಾರ್ ಗರ್ ಜಿಲ್ಲೆಯಲ್ಲಿ ಗಣಿಗಾರಿಕೆ ಅವಕಾಶ ಕೊಡುವ ಡೀಲ್ ನನ್ನು ಐಎಎಸ್ ಅಧಿಕಾರಿ ಸಿಂಘ್ವಿ ಹೆಸರಿನಲ್ಲಿ ಸೇತಿ ಕುದುರಿಸಿದ್ದ. 2.5 ಕೋಟಿ ರೂ. ಹಣವನ್ನು ಗಣಿ ಇಲಾಖೆ ಅಧಿಕಾರಿಗಳ ಹೆಸರಿನಲ್ಲಿ ಲಂಚ ಪಡೆದಿದ್ದ ಸಂಜಯ್ ಸೇತಿ, ಆತನ ಸಿಎ, ಗಣಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸೇರಿದಂತೆ ಹಲವರನ್ನು ಎಂ.ಎನ್. ದಿನೇಶ್ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಲಂಚದ ಹಣ 2.5 ಕೋಟಿ ರೂ.ಗಳನ್ನು ಉದಯಪುರದಲ್ಲಿ ರೀಕವರಿ ಮಾಡಿದರು. ಗಣಿ ಇಲಾಖೆಯ ಕಾರ್ಯದರ್ಶಿ ಅಶೋಕ್ ಸಿಂಘ್ವಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ರಾಜಸ್ಥಾನ ಸಿಎಂಗೆ ಮಾಹಿತಿ ನೀಡಿ ಹಿರಿಯ ಐಪಿಎಸ್ ಅಧಿಕಾರಿ ಅಶೋಕ್ ಸಿಂಘ್ವಿಯನ್ನು ಅವರ ಕಚೇರಿಯಲ್ಲಿಯೇ ಎಂಎನ್. ದಿನೇಶ್ ನೇತೃತ್ವದ ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆತನ ಮನೆಯಲ್ಲಿ ನಾಲ್ಕು ಕೋಟಿ ಹಣವನ್ನು ಜಪ್ತಿ ಮಾಡಿದರು. ಈ ಅಶೋಕ್ ಸಿಂಘ್ವಿ ಅವಧಿಯಲ್ಲಿ ಮಂಜೂರಾಗಿದ್ದ 650 ಗಣಿ ಗುತ್ತಿಗೆಗಳನ್ನು ಸರ್ಕಾರ ರದ್ದು ಮಾಡಿತ್ತು. ಎಸಿಬಿಗೆ ಮರಳಿದ ಕೂಡಲೇ ಪವರ್ ಪುಲ್ ಐಎಎಸ್ ಅಧಿಕಾರಿಯನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ರವಾನಿಸಿ ದಿನೇಶ್ ಮತ್ತೆ ಸದ್ದು ಮಾಡಿದರು. ಈ ಐಎಎಸ್ ಅಧಿಕಾರಿ ಅಕ್ರಮಗಳನ್ನು ತನಿಖೆ ಮಾಡಲು ಸರ್ಕಾರ ವಿಶೇಷ ತನಿಖಾ ತಂಡವೇ ರಚನೆ ಮಾಡಿತ್ತು. ಸಿಂಘ್ವಿ ಇಡಿ ತನಿಖೆಗೂ ಒಳಪಡಬೇಕಾಯಿತು. ಇದೇ ವೇಳೆ ನೀರಜ್ ಪವನ್ ಎಂಬ ಐಎಎಸ್ ಅಧಿಕಾರಿಯನ್ನು ಲಂಚ ಪ್ರಕರಣದಲ್ಲಿ ದಿನೇಶ್ ಬಂಧಿಸಿದರು.
ಗ್ಯಾಂಗ್ ಸ್ಟಾರ್ ಆನಂದಪಾಲ್ ಸಿಂಗ್ ಎನ್ಕೌಂಟರ್:
ಐಎಎಸ್ ಅಧಿಕಾರಿ ಅಶೋಕ್ ಸಿಂಘ್ವಿಯನ್ನು ಬಂಧಿಸಿದ ಬಳಿಕ ಸ್ಪೆಷಲ್ ಆಪರೇಷನ್ ಗ್ರೂಪ್ ನ ಐಜಿಯಾಗಿ ವರ್ಗಾವಣೆಯಾದ ಎಂ.ಎನ್. ದಿನೇಶ್ ಪುನಃ ಪಿಸ್ತೂಲನ್ನು ಪ್ರೀತಿಸತೊಡಗಿದರು. ಅದಾಗಲೇ ವೃತ್ತಿ ಜೀವನದಲ್ಲಿ ಎಂಟು ಎನ್ ಕೌಂಟರ್ ಮಾಡಿ ಗ್ಯಾಂಗ್ ಸ್ಟರ್ ಗಳನ್ನು ಮಣ್ಣು ಮಾಡಿದ್ದರು. ಎಸ್ಓಜಿಗೆ ಎಂಟ್ರಿಯಾದ ದಿನೇಶ್ ಬುಲೆಟ್ ಗುರಿ ಇಟ್ಟಿದ್ದು ಆನಂದ್ ಪಾಲ್ ಸಿಂಗ್ ಎಂಬ ನಟೋರಿಯಸ್ ಕ್ರಿಮಿನಲ್ ಮೇಲೆ. 40 ವರ್ಷದ ಆನಂದಪಾಲ್ ಸಿಂಗ್ ರಾಜಸ್ಥಾನ ಸರ್ಕಾರಕ್ಕೆ ತಲೆ ನೋವು ಆಗಿದ್ದ. ಲಿಕ್ಕರ್ ಸ್ಮಗ್ಲಿಂಗ್ ಮೂಲಕ ಅಕ್ರಮ ಕೋಟೆ ಕಟ್ಟಿದ್ದ ಆನಂದ ಪಾಲ್ ಸಿಂಗ್ ರಾಜಸ್ತಾನದಲ್ಲಿ ದೊಡ್ಡ ಗ್ಯಾಂಗ್ ಸ್ಟಾರ್ ಆಗಿ ರೂಪಾಂತರಗೊಂಡಿದ್ದ. 2006 ರಲ್ಲಿ ಸರಣಿ ಕೊಲೆ ಮಾಡಿ ರಕ್ತದ ಕೋಡಿ ಹರಿಸಿದ್ದ. ಸಿಕ್ಕ ಸಿಕ್ಕಲ್ಲಿ ಲೂಟ್ ಮಾಡಿಸಿದ್ದ. ಕೊಲೆ ಮಾಡಿದ ಬಳಿಕ ಸಾಕ್ಷಿ ಸಿಗಬಾರದು ಎಂದು ಆಸಿಡ್ ಹಾಕಿ ಸುಟ್ಟು ಹಾಕಿ ಆನಂದ್ ಪಾಲ್ ಸಿಂಗ್ ವಿಕೃತಿ ಮೆರೆಯುತ್ತಿದ್ದ. ಈತ ತನ್ನ ಸಮುದಾಯದ ಪಾಲಿಗೆ ರಾಬಿನ್ ವುಡ್ ಆಗಿದ್ದ. 2012 ರಲ್ಲಿ ಆನಂದಪಾಲ್ ಸಿಂಗ್ ಮತ್ತು ಆತನ ಎದುರಾಳಿ ಗ್ಯಾಂಗ್ ಸದಸ್ಯರು ಬಂಧನಕ್ಕೆ ಒಳಗಾಗಿದ್ದರು. ಜೈಲಿನಲ್ಲಿ ಕೂಡ ಆನಂದ್ ಪಾಲ್ ಸಿಂಗ್ ಗ್ಯಾಂಗ್ ವಾರ್ ಮಾಡುತ್ತಿದ್ದ. 2015 ರಲ್ಲಿ ನ್ಯಾಯಾಲಯದ ವಿಚಾರಣೆ ಎದುರಿಸಿ ಬರುವಾಗ ಆನಂದ್ ಪಾಲ್ ಸಿಂಗ್ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ. ಆನಂದಪಾಲ್ ಸಹಚರರು ಗುಂಡು ಹಾರಿಸಿದ್ದರು. 2016 ರಲ್ಲಿ ಎಕೆ 47 ನಿಂದ ಆನಂದ್ ಪಾಲ್ ಸಿಂಗ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಇಂತಹ ನಟೋರಿಯ್ ಪಾತಕಿ ಆನಂದ ಸಿಂಗ್ ಪಾಲ್ ನನ್ನು 2017 ರಲ್ಲಿ ಎನ್ಕೌಂಟರ್ ಮಾಡುವಲ್ಲಿ ಎಂ.ಎನ್. ದಿನಶ್ ಯಶಸ್ವಿಯಾಗಿದ್ದರು. ಆನಂದ್ ಪಾಲ್ ಎನ್ಕೌಂಟರ್ ವಿರೊಧಿಸಿ ರಜಪೂತ್ ಸಮುದಾಯ ದೊಡ್ಡ ಹೋರಾಟ ಆರಂಭಿಸಿತ್ತು. ಎನ್ಕೌಂಟರ್ ಸಂಬಂಧ ಎಂ.ನ್. ದಿನೇಶ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಕೇಸು ದಾಖಲಾಗಿತ್ತು. ಆನಂದ್ ಪಾಲ್ ದೇಹವನ್ನು 17 ದಿನ ಮಣ್ಣು ಮಾಡಿರಲಿಲ್ಲ. 1 ಲಕ್ಷ ಜನ ಪ್ರತಿಭಟನೆ ಮಾಡಿದ್ದರು. ಆನಂದಪಾಲ್ ಎನ್ಕೌಂಟರ್ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಕ್ಲೀನ್ ಚಿಟ್ ಕೊಟ್ಟಿತ್ತು.
ಎಂ ಎನ್. ದಿನೇಶ್ ಆಪರೇಷನ್ :
ಎಂ.ಎನ್. ದಿನೇಶ್ ಸ್ಪೆಷಲ್ ಆಪರೇಷನ್ ಗ್ರೂಪ್ ಐಜಿಯಾಗಿ ರಾಜಸ್ಥಾನದ ಜಯಪುರದಲ್ಲಿ ದಾಖಲಾಗುತ್ತಿದ್ದ ನಕಲಿ ರೇಪ್ ಕೇಸುಗಳ ಬೆನ್ನಿಗೆ ಬಿದ್ದು ಬ್ಲಾಕ್ ಮೇಲಿಂಗ್ ರಾಕೆಟ್ ಬಯಲಿಗೆ ಎಳೆದಿದ್ದರು. ಹುಡುಗಿಯರನ್ನು ಶ್ರೀಮಂತರ ಬಳಿ ಕಳುಹಿಸಿ ರೆಕಾರ್ಡ್ ಮಾಡಿಕೊಂಡು ವಸೂಲಿ ಮಾಡುತ್ತಿದ್ದ ವಕೀಲರ, ಮಾಧ್ಯಮದವರ ಒಳಗೊಂಡಂತೆ 45 ಮಂದಿಯನ್ನು ಬಂಧಿಸಿದ್ದರು. 36 ಮಂದಿಯಿಂದ ಸುಲಿಗೆ ಮಾಡಿದ್ದ 25 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಗ್ಯಾಂಗ್ ಹುಟ್ಟಡಿಗಿಸುವಲ್ಲಿ ಯಶಸ್ವಿಯಾಗಿದ್ದರು.
ಸರಣಿ ಐಎಎಸ್ ಐಪಿಎಸ್ ಜೈಲಿಗೆ ಕಳುಹಿಸಿದ ದಿನೇಶ್ :
ದಕ್ಷ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದು ಇದೀಗ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುನಃ ಭ್ರಷ್ಟರ ಭೇಟೆ ಆರಂಭಿಸಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ಐಆರ್ಎಸ್ ಅಧಿಕಾರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. 75 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿಬಿಐ ಇನ್ಸ್ಪೆಕ್ಟರ್ ನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. 2019 ರಲ್ಲಿ ಲಂಚ ಸ್ವೀಕಾರ ಪ್ರಕರಣಗಳಲ್ಲಿ 300 ಮಂದಿಯನ್ನು ಬಂಧಿಸಿ ಜೈಲಿಗೆ ರವಾನಿಸಿದ್ದಾರೆ. 2020 ರಲ್ಲಿ ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದು ಎಸಿಬಿಯಲ್ಲಿ ಕಾರ್ಯಾ ನಿರ್ವಹಿಸುತ್ತಿರುವ ಎಂ.ಎನ್. ದಿನೇಶ್, ಎಂಡಿಎಸ್ ವಿವಿಯ ಉಪ ಕುಲಪತಿ ಅಜ್ಮೀರ್ ಆರ್. ಪಿ ಸಿಂಗ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇಂಡಿಯನ್ ಟೆಲಿಕಾಂ ಸರ್ವೀಸ್ ನ ಎಡಿಜಿಯಾಗಿದ್ದ ( ಆಧಾರ್ ) ಪಂಕಜ್ ಗೋಯಲ್ ನನ್ನು ಲಂಚ ಕೇಸಲ್ಲಿ ಬಂಧಿಸಿದ್ದಾರೆ. 2020 ರಲ್ಲಿ ಬಾರನ್ ಜಿಲ್ಲಾಧಿಕಾರಿ ಇಂದರ್ ಸಿಂಗ್ ರಾವ್ ನನ್ನು ಬಂಧಿಸಿದ್ದಾರೆ. ಇದಲ್ಲದೇ ಇಬ್ಬರು ಎಸ್ಪಿ ದರ್ಜೆಯ ಅಧಿಕಾರಿಗಳು, ಸೇರಿದಂತೆ ದೊಡ್ಡ ದೊಡ್ಡ ಕುಳಗಳ ಬಂಧನ ಸರಣಿ ಮುಂದುವರೆದಿದೆ.