7th Pay Commission; ವೇತನ ಶ್ರೇಣಿ, ತುಟ್ಟಿ ಭತ್ಯೆಯ ವಿವರಗಳು
ಕರ್ನಾಟಕ ಸರ್ಕಾರ ರಚನೆ ಮಾಡಿರುವ 7ನೇ ರಾಜ್ಯ ವೇತನ ಆಯೋಗ ಹಲವು ಅಂಶಗಳ ಪರಿಶೀಲನೆ ನಡೆಸುತ್ತಿದೆ. ಇದಕ್ಕಾಗಿ ಸರ್ಕಾರಿ ನೌಕರರು ಸೇರಿದಂತೆ ಜನರಿಂದಲೂ ಸಹ ಅಭಿಪ್ರಾಯಗಳನ್ನು ಸಂಗ್ರಹ ಮಾಡುತ್ತಿದೆ. ವೇತನ ಶ್ರೇಣಿ, ತುಟ್ಟಿ ಭತ್ಯೆಯ ವಿವರಗಳು ಇಲ್ಲಿವೆ.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ರಚನೆ ಮಾಡಿರುವ 7ನೇ ರಾಜ್ಯ ವೇತನ ಆಯೋಗ ಹಲವು ಅಂಶಗಳ ಪರಿಶೀಲನೆ ನಡೆಸುತ್ತಿದೆ. ಇದಕ್ಕಾಗಿ ಸರ್ಕಾರಿ ನೌಕರರು ಸೇರಿದಂತೆ ಜನರಿಂದಲೂ ಸಹ ಅಭಿಪ್ರಾಯಗಳನ್ನು ಸಂಗ್ರಹ ಮಾಡುತ್ತಿದೆ.
ಅಭಿಪ್ರಾಯ ಸಂಗ್ರಹ ಮಾಡಲು ಮೊದಲ ಹಂತದಲ್ಲಿ ಸಾರ್ವಜನಿಕರು, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಮಾನ್ಯತೆ ಪಡೆದ ನೌಕರರ ಸಂಘಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿ ಪ್ರಶ್ನಾವಳಿಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
7th Pay Commission; ಭತ್ಯೆ, ನಿವೃತ್ತಿ ವಯಸ್ಸು, ಪಿಂಚಣಿ ಪರಿಶೀಲನೆ
ಈ ಪ್ರಶ್ನಾವಳಿಗಳಿಗೆ ಅಭಿಪ್ರಾಯಗಳನ್ನು, ಮನವಿಯನ್ನು ಸದಸ್ಯ ಕಾರ್ಯದರ್ಶಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಔಷಧ ನಿಯಂತ್ರಣ ಇಲಾಖೆಯ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು - 560001 ವಿಳಾಸಕ್ಕೆ 10/02/2023 ಅಥವಾ ಅದಕ್ಕೂ ಮುನ್ನ ತಲುಪುವಂತೆ ಕಳುಹಿಸಲು ಮನವಿ ಮಾಡಲಾಗಿದೆ.
Karnataka 7th pay commission; ಸರ್ಕಾರಿ ನೌಕರರಿಗೆ ಪ್ರಶ್ನಾವಳಿಗಳು
ಈ ಪ್ರಶ್ನಾವಳಿಗಳಲ್ಲಿ ವೇತನ ಆಯೋಗ ಯಾವ-ಯಾವ ಅಂಶಗಳನ್ನು ಪರಿಶೀಲನೆ ಮಾಡಲಿದೆ. ಪ್ರಸ್ತುತ ಇರುವ ನಿಯಮಗಳೇನು? ಎಂದು ವಿವರ ನೀಡಲಾಗಿದೆ. ವಿವಿಧ ಹಂತದ ಅಧಿಕಾರಿಗಳು ಇವುಗಳಿಗೆ ಅಭಿಪ್ರಾಯಗಳನ್ನು ತಿಳಿಸಬಹುದು, ಜನರು ಸಹ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
ಇನ್ನು ಈ ಪ್ರಶ್ನಾವಳಿ ರಾಜ್ಯಪತ್ರದ ಅನ್ವಯ ಸರ್ಕಾರದ ಒಟ್ಟು ಇಲಾಖೆಗಳು 43. ಮಂಜೂರಾದ ಹುದ್ದೆಗಳು 7,69,981. ಕಾರ್ಯ ನಿರ್ವಹಣೆ ಮಾಡುತ್ತಿರುವ ಹುದ್ದೆಗಳು 5,11,272 ಮತ್ತು ಖಾಲಿ ಇರುವ ಹುದ್ದೆಗಳು 2,58,709 ಆಗಿದೆ.
ಪ್ರಸ್ತುತ ಜಾರಿಯಲ್ಲಿರುವ ವೇತನ ಶ್ರೇಣಿ
7ನೇ ರಾಜ್ಯ ವೇತನ ಆಯೋಗದ ಪ್ರಶ್ನಾವಳಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ವೇತನ ಶ್ರೇಣಿಗಳನ್ನು, 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಹಂತ (AIACPI)(IW 2001 ಶ್ರೇಣಿ) 276.9 ಬಿಂದುವಿಗೆ ಅನುಗುಣವಾದ ಜೀವನ ನಿರ್ವಹಣ ವೆಚ್ಚವನ್ನು ಆಧರಿಸಿ ಹಾಗೂ ದಿನಾಂಕ 01/07/2017 ರಂದು ಲಭ್ಯವಾಗುವ ತುಟ್ಟಿ ಭತ್ಯೆಯನ್ನು ವಿಲೀನಗೊಳಿಸಿ ರೂಪಿಸಲಾಗಿದೆ. ಈ ವೇತನ ಶ್ರೇಣಿಗಳು ದಿನಾಂಕ 01/07/2017 ರಿಂದ ಜಾರಿಯಲ್ಲಿವೆ. 92 ಹಂತಗಳನ್ನು ಒಳಗೊಂಡ 25 ಪ್ರತ್ಯೇಕ ವೇತನ ಶ್ರೇಣಿಗಳುಳ್ಳ ಮುಖ್ಯ ವೇತನ ಶ್ರೇಣಿಯನ್ನು ರಾಜ್ಯ ಸರ್ಕಾರವು ಅಳವಡಿಸಿಕೊಂಡಿದೆ ಎಂದು ಮಾಹಿತಿ ನೀಡಲಾಗಿದೆ.
ವಿಕಲಚೇತನ ಸರ್ಕಾರಿ ನೌಕರರು ಹಾಗೂ ವಿಕಲಚೇತನ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರರು ಕೆಲವು ವಿಶೇಷ ಭತ್ಯೆಗಳಿಗೆ ಅರ್ಹರಿದ್ದಾರೆ. ಇದರಲ್ಲಿ ವಿಕಲಚೇತನ ಸರ್ಕಾರಿ ನೌಕರರಿಗೆ ದೊರೆಯುವ ಮೂಲ ವೇತನದ ಶೇ. 6ರಷ್ಟು ವಾಹನ ಭತ್ಯೆ ಮತ್ತು ಯಾಂತ್ರಿಕ/ ಮೋಟಾರ್ ಚಾಲಿತ ವಾಹನಗಳನ್ನು ನೌಕರರು ಖರೀದಿಸಲು ವಾಹನದ ಬೆಲೆಯ ಶೇ. 30 ರಷ್ಟು ಸಹಾಯಧನ, ಗರಿಷ್ಟ ರೂ. 40,000 ಮಿತಿಗೆ ಒಳಪಟ್ಟು ಮೊತ್ತವು ಸೇರಿದೆ. ಸರ್ಕಾರಿ ನೌಕರರು ಹೊಂದಿರುವ ವಿಕಲಚೇತನ ಮಕ್ಕಳಿಗೆ ಇಬ್ಬರು ವಿಕಲಚೇತನ ಮಕ್ಕಳ ಮಿತಿಗೆ ಒಳಪಟ್ಟು ಮಾಸಿಕ ಒಬ್ಬರಿಗೆ ರೂ. 1000 ರಂತೆ ಶಿಕ್ಷಣ ಭತ್ಯೆ ಮತ್ತು ನಿರ್ವಹಣಾ ಭತ್ಯೆಯನ್ನು ನೀಡಲಾಗುತ್ತಿದೆ.
ಪ್ರಶ್ನಾವಳಿಯಲ್ಲಿ ಕನಿಷ್ಠ ಸಂಬಳದ ಮಾಹಿತಿ
ಪ್ರಸ್ತುತ ನೌಕರರಿಗೆ ನೀಡುತ್ತಿರುವ ಒಟ್ಟು ಕನಿಷ್ಟ ಸಂಬಳವು ಬೆಂಗಳೂರಿನಲ್ಲಿ ಮಾಸಿಕ ರೂ. 26,850 ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸಿಕ ರೂ. 23,630 ಇದೆ. ಈ ಮೊತ್ತವು ಅವರಿಗೆ ಲಭ್ಯವಿರುವ ತುಟ್ಟಿ ಭತ್ಯ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯನ್ನು ಒಳಗೊಂಡಿದೆ.
ಅತ್ಯಂತ ಕೆಳಗಿನ ವೇತನ ಶ್ರೇಣಿಯ ಕನಿಷ್ಟ ವೇತನ ಮತ್ತು ಅತ್ಯಂತ ಮೇಲಿನ ವೇತನ ಶ್ರೇಣಿಯ ಕನಿಷ್ಟ ವೇತನಗಳ ಅನುಪಾತವು 1:8.86 ಇರುತ್ತದೆ. ಅತ್ಯಂತ ಕೆಳಗಿನ ವೇತನ ಶ್ರೇಣಿಯ ಗರಿಷ್ಟ ವೇತನ ಮತ್ತು ಅತ್ಯಂತ ಮೇಲಿನ ವೇತನ ಶ್ರೇಣಿಯ ಗರಿಷ್ಟ ವೇತನಗಳ ಅನುಪಾತವು 1:5.20 ಇರುತ್ತದೆ.
ವಾರ್ಷಿಕ ವೇತನ ಬಡ್ತಿಯ ದರಗಳು ವಿವಿಧ ವೇತನ ಶ್ರೇಣಿಗಳಿಗೆ ಅನುಗುಣವಾಗಿ ರೂ. 400ರಿಂದ ರೂ. 3,100 ರವರೆಗೆ ಇರುತ್ತವೆ. ಸರ್ಕಾರಿ ನೌಕರನು ಯಾವುದೇ ಮುಂಬಡ್ತಿ ಇಲ್ಲದೇ 20, 25 ಅಥವಾ 30 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂದರ್ಭಗಳಲ್ಲಿ ಹೆಚ್ಚುವರಿ ವೇತನ ಭತ್ಯೆಗಳನ್ನು ನೀಡಲಾಗುತ್ತದೆ. ಯಾವುದೇ ವೇತನ ಶ್ರೇಣಿಯ ಗರಿಷ್ಟ ಹಂತವನ್ನು ತಲುಪಿದ ಸರ್ಕಾರಿ ನೌಕರರಿಗೆ ಗರಿಷ್ಟ 8 ವಾರ್ಷಿಕ ಸ್ಥಗಿತ ವೇತನ ಬಡ್ತಿ ನೀಡಲಾಗುತ್ತದೆ.
ತುಟ್ಟಿ ಭತ್ಯೆ 2 ಬಾರಿ ಪರಿಷ್ಕರಣೆ
ಜೀವನ ನಿರ್ವಹಣಾ ವೆಚ್ಚದ ಏರಿಕೆಯಿಂದ ಉಂಟಾಗುವ ಪರಿಣಾಮದಿಂದ ನೌಕರರಿಗೆ ಆಗುವ ತೊಂದರೆಗೆ ಪರಿಹಾರ ನೀಡಲು, 12 ತಿಂಗಳ ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕವನ್ನು (AIACPI)ಆಧರಿಸಿ ತುಟ್ಟಿ ಭತ್ಯೆಯನ್ನು ವರ್ಷದಲ್ಲಿ 2 ಬಾರಿ ಪರಿಷ್ಕರಿಸಿ, ಮಂಜೂರು ಮಾಡಲಾಗುತ್ತಿದೆ.
ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯಗಳ ನೀಡಿಕೆಯು ನೌಕರರ ಮೂಲ ವೇತನ ಮತ್ತು ಜನ ಸಂಖ್ಯೆಯ ಆಧಾರದ ಮೇಲೆ ನಗರಗಳ/ ಇತರ ಸ್ಥಳಗಳ ವರ್ಗೀಕರಣಕ್ಕೆ ಅನುಸಾರವಾಗಿ ಅವರು ಕೆಲಸ ಮಾಡುವ ಸ್ಥಳದ ಮೇಲೆ ಬದಲಾಗುತ್ತದೆ. ಪ್ರಸ್ತುತ ದರದಂತೆ ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾದ ಸ್ಥಳಗಳಲ್ಲಿ ಅನುಕ್ರಮವಾಗಿ ಶೇ 24, 16 ಮತ್ತು 8 ಮನೆ ಬಾಡಿಗೆ ಭತ್ಯೆಯು ದೊರೆಯುತ್ತದೆ.
ಬೆಂಗಳೂರಿನಲ್ಲಿ (ಬಿಬಿಎಂಪಿ ಪ್ರದೇಶ) ಕರ್ತವ್ಯ ನಿರ್ವಹಿಸುವ ಗ್ರೂಪ್-ಸಿ ಮತ್ತು ಡಿ ನೌಕರರು ರೂ.500 ಮತ್ತು ಗ್ರೂಪ್-ಬಿ ಮತ್ತು ಎ ಅಧಿಕಾರಿಗಳು ರೂ. 600 ನಗರ ಪರಿಹಾರ ಭತ್ಯೆಗೆ ಅರ್ಹರು, ಬೆಳಗಾವಿ, ಮಂಗಳೂರು, ಮೈಸೂರು ಮತ್ತು ಕಲಬುರ್ಗಿ ನಗರಗಳ ನಗರ ಸಮುಚ್ಛಯದಲ್ಲಿ ಮತ್ತು ಹುಬ್ಬಳ್ಳಿ ಧಾರವಾಡದಲ್ಲಿ ಲಭ್ಯವಾಗುವ ನಗರ ಪರಿಹಾರ ಭತ್ಯೆ ದರವು ರೂ. 400 ರಿಂದ ರೂ .450 ರವರೆಗೆ ಇರುತ್ತದೆ ಎಂದು ಪ್ರಶ್ನಾವಳಿ ಹೇಳಿದೆ.
ಚಿಕಿತ್ಸೆಯ ವೆಚ್ಚವು ಹೇಗೆ ಸಿಗುತ್ತದೆ?
ಇನ್ನು ಪ್ರಶ್ನಾವಳಿಗಳಲ್ಲಿ ನಿರ್ದಿಷ್ಟಪಡಿಸಲಾದ ಖಾಸಗಿ ವೈದ್ಯಕೀಯ ಸಂಸ್ಥೆಗಳ/ ಆಸ್ಪತ್ರೆಗಳಲ್ಲಿ ಪಡೆಯಲಾದ ಚಿಕಿತ್ಸೆಯ ವೆಚ್ಚವು ಸೇರಿದಂತೆ ವಿವಿಧ ತರಹದ ಖಾಯಿಲೆಗಳಿಗೆ ತಗಲುವ ವೈದ್ಯಕೀಯ ವೆಚ್ಚದ ಮರುಪಾವತಿಯ ದರವನ್ನು ಕ್ರಮಬದ್ಧಗೊಳಿಸಿ, ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಸರ್ಕಾರವು ಸರಳೀಕರಿಸಿದೆ.
ಇದರ ಜೊತೆಗೆ ಗ್ರೂಪ್-ಸಿ ಮತ್ತು ಡಿ ನೌಕರರು ಮಾಸಿಕ ರೂ. 200 ವೈದ್ಯಕೀಯ ಭತ್ಯೆಗೆ ಅರ್ಹರು. ಸರ್ಕಾರವು ದಿನಾಂಕ 05/09/2022 ರ ಆದೇಶದಲ್ಲಿ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' ಎಂಬ ನಗದು ರಹಿತ ಯೋಜನೆಯನ್ನು ಜಾರಿಗೊಳಿಸಿದೆ. ಇದು ನೌಕರರು ಮತ್ತು ಅವರ ಕುಟುಂಬದ ಅನುಕೂಲಕ್ಕಾಗಿ ಅನೇಕ ಚಿಕಿತ್ಸಾ ವಿಧಾನಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ಒಳಗೊಂಡಿದೆ.