ದೇಶ ಸ್ವಾತಂತ್ರ್ಯ ಪಡೆದದ್ದು ಆಗಸ್ಟ್ 15ಕ್ಕೆ, ಆದರೆ ಮೈಸೂರಿನ ಲೆಕ್ಕ ಬೇರೆ!
Recommended Video

ಇಡೀ ದೇಶಕ್ಕೆ ಸ್ವಾತಂತ್ರ್ಯದ ದಿನ ಆಗಸ್ಟ್ 15, 1947 ಎಂದರೆ ಮೈಸೂರಿಗರಿಗೆ ಅಲ್ಲ. ಹೌದು, ಇದು ಅಚ್ಚರಿಯೇ ಸರಿ. ಇಡೀ ದೇಶ 1947ರ ಆಗಸ್ಟ್ 15ರಂದು ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ಮಾಡುತ್ತಾ, ಸಿಹಿ ಹಂಚಿ ಸಂಭ್ರಮಿಸಿದರೆ, ಮೈಸೂರು ರಾಜ್ಯದಲ್ಲಿ ನಿರಾಶೆ, ಆತಂಕದ ಕಾರ್ಮೋಡ ತುಂಬಿತ್ತು. ಅಂದು ನಮ್ಮ ರಾಜ್ಯಕ್ಕೆ ಸ್ವಾತಂತ್ರ್ಯದ ಸಂಭ್ರಮ ಇರಲೇ ಇಲ್ಲ.
ಪ್ರಜೆಗಳ ಕೈಗೆ ಅಧಿಕಾರ ಕೊಡಲು ಹಾಗೂ ಭಾರತ ಒಕ್ಕೂಟಕ್ಕೆ ಸೇರಲು ಒಪ್ಪದ ಪ್ರಮುಖರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಒಬ್ಬರು. ಮಹಾರಾಜರ ನಿಲುವಿಗೆ ಬೆಂಬಲಕ್ಕೆ ನಿಂತವರು ದಿವಾನರಾಗಿದ್ದ ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್.
1947ರ ಆಗಸ್ಟ್ 15ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಕೆಲವು ದೇಶೀಯ ಸಂಸ್ಥಾನಗಳು ಸ್ವತಂತ್ರ ಭಾರತ ಒಕ್ಕೂಟಕ್ಕೆ ಸೇರಲು ಒಪ್ಪಲಿಲ್ಲ. ಅದಕ್ಕಾಗಿ ಜನ ಉಗ್ರ ಹೋರಾಟವನ್ನೇ ನಡೆಸಿದ್ದರಿಂದ ಹಲವಾರು ಹೋರಾಟಗಾರರ ಬಲಿದಾನವೂ ಆಯಿತು.

ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರರ ಬಿಸಿರಕ್ತಕ್ಕೆ ಅರ್ಥ ಬರಬೇಕಾದರೆ, ಮಹಾತ್ಮ ಗಾಂಧೀಜಿ ಶಾಂತಿಯುತ ಸತ್ಯಾಗ್ರಹಕ್ಕೆ ಬೆಲೆ ಬರಬೇಕಾದರೆ ಮೈಸೂರು ರಾಜ್ಯ ಸ್ವತಂತ್ರ ಭಾರತದ ಭಾಗವಾಗಲೇ ಬೇಕು ಎಂದು ಹೋರಾಟಗಾರರು ಬಯಸಿದರು. ಆಗ ಹುಟ್ಟಿಕೊಂಡಿದ್ದೇ 'ಮೈಸೂರು ಚಲೋ' ಹೋರಾಟ.
ಮೈಸೂರು ಆಜಾದ್ ಕಾಂಗ್ರೆಸ್ ಅನ್ನು ರಚಿಸಿಕೊಂಡ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಎಚ್.ಸಿ. ದಾಸಪ್ಪ, ಟಿ. ಮರಿಯಪ್ಪ, ತಾಳೆಕೆರೆ ಸುಬ್ರಹ್ಮಣ್ಯ ಮುಂತಾದ ನಾಯಕರು 1947ರ ಆಗಸ್ಟ್ 21 ರಂದು ಮೈಸೂರು ಚಳವಳಿಗೆ ಕರೆ ನೀಡಿದರು. ನಾಯಕರ ಕರೆ ಹೊರಬಿದ್ದ ಕೂಡಲೇ ಇಡೀ ಸಂಸ್ಥಾನದಲ್ಲಿ ಮೈಸೂರು ಚಲೋ ಚಳವಳಿ ದಿನದಿನಕ್ಕೆ ಉಗ್ರರೂಪ ತಾಳುತ್ತಾ ಹೋಯಿತು.
ಈ ಮಧ್ಯೆ ಕೆಲವು ದೇಸಿ ಸಂಸ್ಥಾನಗಳ ರಾಜರು, ತಿರುವನಂತಪುರದ ದಿವಾನರಾಗಿದ್ದ ಸರ್ ಸಿ.ಪಿ. ರಾಮಸ್ವಾಮಿ ಅಯ್ಯರ್ ಅವರ ನೆರವಿನಿಂದ ಸ್ವತಂತ್ರವಾಗಿಯೇ ಉಳಿಯಲು ಹೋರಾಟಕ್ಕೆ ಅಣಿಯಾದರು. ಮೈಸೂರು ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಸಹ ಅವರೊಂದಿಗೆ ಇದ್ದು, ಚಳವಳಿಯನ್ನು ಹತ್ತಿಕ್ಕಲು ಉಗ್ರ ಕ್ರಮವನ್ನು ತೆಗೆದುಕೊಂಡರು.
ಮುಖಂಡರ ಬಂಧನ, ಎಲ್ಲ ಕಡೆ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಸಾಮಾನ್ಯವಾಯಿತು. ಕೆಲವು ಕಡೆ ಗೋಲಿಬಾರ್ ಸಹ ನಡೆಯಿತು. ಮೈಸೂರಿನಲ್ಲಿ ವಿದ್ಯಾರ್ಥಿ ರಾಮಸ್ವಾಮಿ ಪೊಲೀಸರ ಗುಂಡೇಟಿಗೆ ಬಲಿಯಾದರೆ, ತುಮಕೂರಿನಲ್ಲಿ ಸ್ವಾತಂತ್ರ್ಯ ಯೋಧ, ಹೆಸರಾಂತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪುತ್ರ ಗುಂಡಿಗೆ ತುತ್ತಾದರು.
ಮೈಸೂರಿನ ಒಂದು ವೃತ್ತಕ್ಕೆ ರಾಮಸ್ವಾಮಿ ಹೆಸರನ್ನು ಇಡಲಾಗಿದೆ. ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಮೈಸೂರು ಚಳವಳಿಗೆ ಧುಮುಕಿದರು. ಹಲವರ ಬಂಧನವೂ ಆಯಿತು. ಸರಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ವಿದ್ಯಾರ್ಥಿಗಳು ಮುನ್ನುಗ್ಗಿ ಬಂಧನಕ್ಕೆ ಒಳಗಾಗುತ್ತಿದ್ದರು.
ಮೈಸೂರು ಸಂಸ್ಥಾನದ ಎಲ್ಲ ಜೈಲುಗಳೂ ತುಂಬಿ, ಜೈಲಿನಲ್ಲಿ ಜಾಗವಿಲ್ಲದ ಕಾರಣ ಬಂಧಿತರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡು, ಮಧ್ಯರಾತ್ರಿ ಬಿಡುಗಡೆ ಮಾಡುತ್ತಿದ್ದರು. ಮುಂದೆ ಹೋರಾಟ ಪ್ರಬಲಗೊಂಡು ಮಹಾರಾಜರು ಬೇರೆ ದಾರಿಯಿಲ್ಲದೆ ಭಾರತ ಗಣರಾಜ್ಯದಲ್ಲಿ ಮೈಸೂರು ರಾಜ್ಯವನ್ನು ಸೇರಿಸಲು ಒಪ್ಪಿಕೊಂಡರು. ಹಾಗಾಗಿ 1947ರ ಅಕ್ಟೋಬರ್ 24ರಂದು ಮೈಸೂರು ರಾಜ್ಯಕ್ಕೆ ಸ್ವಾತಂತ್ರ್ಯ ಬಂತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications