ಹಾನಗಲ್ನಲ್ಲಿ ಬಿಜೆಪಿಗೆ ಮುಖಭಂಗ: ಈ ಇಬ್ಬರನ್ನು ನಂಬಿಕೆಟ್ಟ ಬೊಮ್ಮಾಯಿ?
ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಒಂದು ಕಡೆ ಬೇವು, ಇನ್ನೊಂದು ಕಡೆ ಬೆಲ್ಲ. ಆದರೂ, ತವರು ಜಿಲ್ಲೆಯ ಕ್ಷೇತ್ರವಾದ ಹಾನಗಲ್ನಲ್ಲಿನ ಸೋಲಿನಿಂದಾಗಿ ಕಹಿ ಸ್ವಲ್ಪ ಜಾಸ್ತಿನೇ.
ಸಿಂಧಗಿಯಲ್ಲಿ ಬಿಜೆಪಿಯ ರಮೇಶ ಭೂಸನೂರು ಭಾರೀ ಅಂತರದಿಂದ ಗೆದ್ದರೆ, ಹಾನಗಲ್ ನಲ್ಲಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ್ ಸೋಲುಂಡಿದ್ದಾರೆ. ಹಾನಗಲ್ನಲ್ಲಿ ಬಿಜೆಪಿ ಸೋಲಿಗೆ ಏನು ಕಾರಣ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಯಾಕೆಂದರೆ, ಅಧಿಕಾರದಲ್ಲಿದ್ದರೂ, ಎಲ್ಲಾ ಆಡಳಿತ ಯಂತ್ರ ಕೈಯಲ್ಲಿದ್ದರೂ ಪಕ್ಷಕ್ಕೆ ಸೋಲಾಗಿರುವುದು.
ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು ಬಿಜೆಪಿ ಎಡವಟ್ಟು ಮಾಡಿಕೊಂಡಿದ್ದು ಎಲ್ಲಿ ಎನ್ನುವ ಹಲವಾರು ಅಂಶಗಳನ್ನು ಇಟ್ಟುಕೊಂಡು ಬಿಜೆಪಿ ವಲಯದಲ್ಲಿ, ಈ ಸೋಲನ್ನು ಇನ್ನೊಬ್ಬರ ತಲೆಗೆ ಕಟ್ಟುವ ಕೆಲಸವೂ ಆರಂಭವಾಗಿದೆ.
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ನಂತರ, ಮೂಲ ಮತ್ತು ವಲಸೆ ಬಿಜೆಪಿಗರು ಎನ್ನುವ ಅಂತರ ಪಕ್ಷದಲ್ಲಿ ಹೆಚ್ಚಾಗುತ್ತಿರುವುದು ಗೊತ್ತಿರುವ ವಿಚಾರ. ಈಗ, ಸಿಂಧಗಿಯಲ್ಲಿ ಮೂಲ ಬಿಜೆಪಿಗರಿಗೆ ಮತ್ತು ಹಾನಗಲ್ ನಲ್ಲಿ ವಲಸೆ ಸಚಿವರಿಗೆ ಉಸ್ತುವಾರಿ ನೀಡಿದ ವಿಚಾರ ಮುನ್ನಲೆಗೆ ಬಂದಿದೆ. ಇಬ್ಬರು ಸಚಿವರನ್ನು ನಂಬಿ, ಬೊಮ್ಮಾಯಿ ಕೆಟ್ಟರು ಎನ್ನುವ ಚರ್ಚೆ ಬಿಜೆಪಿ ಪಡಸಾಲೆಯಲ್ಲಿ ಜೋರಾಗಿ ನಡೆಯುತ್ತಿದೆ.

ಸಿಂಧಗಿ ಕ್ಷೇತ್ರದ ಉಸ್ತುವಾರಿ ಲಕ್ಷ್ಮಣ ಸವದಿ, ವಿ.ಸೋಮಣ್ಣ, ಸಿ.ಸಿ.ಪಾಟೀಲ್
ಸಿಂಧಗಿ ಕ್ಷೇತ್ರದ ಉಸ್ತುವಾರಿಯನ್ನು ಲಕ್ಷ್ಮಣ ಸವದಿ, ವಿ.ಸೋಮಣ್ಣ, ಸಿ.ಸಿ.ಪಾಟೀಲ್ ಅವರಿಗೆ ಪ್ರಮುಖವಾಗಿ ವಹಿಸಲಾಗಿತ್ತು, ಇವರಿಬ್ಬರೂ ಮೂಲ ಬಿಜೆಪಿಗರು. ಇವರು ಶಿಸ್ತುಬದ್ದವಾಗಿ ಪ್ರಚಾರ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಭಾರೀ ಅಂತರದಿಂದ ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಬಹಿರಂಗ ಪ್ರಚಾರ ಮುಗಿದ ನಂತರವೂ ಕ್ಷೇತ್ರದ ಹೊರ ವಲಯದಲ್ಲಿ ಬೀಡು ಬಿಟ್ಟಿದ್ದರು. "ಇಷ್ಟು ದಿನ ಕುಮಾರಸ್ವಾಮಿಯವರ ಆಟ, ಇನ್ನು ಮುಂದೆ ನಮ್ಮ ಆಟ ತೋರಿಸುತ್ತೇವೆ"ಎಂದು ಸೋಮಣ್ಣ ಹೇಳಿದ್ದರು. ಸವದಿ, ಪಾಟೀಲ್ ಮತ್ತು ಸೋಮಣ್ಣಗೆ ಬಿಜೆಪಿಯ ಹೈಕಮಾಂಡ್ ಶಹಬ್ಬಾಸ್ ಗಿರಿ ನೀಡಿದೆ.

ಸಚಿವರಾದ ಡಾ.ಸುಧಾಕರ್ ಮತ್ತು ಮುನಿರತ್ನ, ಇವರಿಬ್ಬರೂ ವಲಸೆ ಸಚಿವರು
ಇನ್ನೊಂದು ಕಡೆ, ಹಾನಗಲ್ ನಲ್ಲಿ ಉಸ್ತುವಾರಿಯನ್ನು ಪ್ರಮುಖವಾಗಿ ನೋಡಿಕೊಂಡಿದ್ದು ಸಚಿವರಾದ ಡಾ.ಸುಧಾಕರ್ ಮತ್ತು ಮುನಿರತ್ನ, ಇವರಿಬ್ಬರೂ ವಲಸೆ ಸಚಿವರು. ಕಾವೇರಿ ಜಲಾಯನ ಪ್ರದೇಶದ ಜಿಲ್ಲೆಗಳ ನಾಯಕರನ್ನು ಉತ್ತರ ಕರ್ನಾಟಕದ ಕ್ಷೇತ್ರವೊಂದಕ್ಕೆ ಉಸ್ತುವಾರಿಯನ್ನಾಗಿ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಡವಿದ್ದಾರೆ ಎನ್ನುವ ಮಾತು ಬಿಜೆಪಿಯಲ್ಲಿ ಜೋರಾಗಿದೆ. ಜೊತೆಗೆ, ಮೂಲ ಬಿಜೆಪಿಗರನ್ನು ಹಾನಗಲ್ ಉಸ್ತುವಾರಿಯಿಂದ ದೂರವಿಟ್ಟಿದ್ದೂ ಸೋಲಿಗೆ ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಹಾನಗಲ್ ಸೋಲಿಗೆ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ
ಚಿಕ್ಕಬಳ್ಳಾಪುರದಂತಹ ಬಿಜೆಪಿಗೆ ನೆಲೆಯಿಲ್ಲದ ಕ್ಷೇತ್ರದಲ್ಲೂ ಬಿಜೆಪಿ ಪತಾಕೆ ಹಾರಿಸಿದವನು ನಾನು, ಇನ್ನು ಇಲ್ಲಿ ಟ್ರೆಂಡ್ ಚೇಂಜ್ ಆಗುತ್ತೆ ಎನ್ನುವ ಮಾತನ್ನು ಡಾ.ಸುಧಾಕರ್ ತಮ್ಮಾಪ್ತರ ಬಳಿ ಹೇಳಿಕೊಂಡಿದ್ದರು ಎನ್ನುವ ಮಾತೂ ಕೇಳಿ ಬರುತ್ತಿದೆ. ಇವರಿಬ್ಬರನ್ನು ಹೆಚ್ಚು ನಂಬಿದ ಮುಖ್ಯಮಂತ್ರಿಗಳು ಮೂಲ ಬಿಜೆಪಿಗರನ್ನು ದೂರವಿಟ್ಟಿದ್ದು ಹಾನಗಲ್ ಸೋಲಿಗೆ ಕಾರಣವಾಯಿತೇ ಎನ್ನುವ ಚರ್ಚೆ ಜೋರಾಗಿ ನಡೆದಿದೆ.
Recommended Video

ತವರು ಜಿಲ್ಲೆಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗಲಿಲ್ಲ
ಮುಖ್ಯಮಂತ್ರಿಗಳು, ತಾನು ಅಕ್ಕಿ ಆಲೂರಿನ ಅಳಿಯ ಎಂದು ಪ್ರಚಾರದ ವೇಳೆ ಹೇಳುತ್ತಾ ಬಂದರೂ, ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಏಳೆಂಟು ದಿನ ಕ್ಷೇತ್ರದಲ್ಲೇ ಬೀಡು ಬಿಟ್ಟರೂ ತವರು ಜಿಲ್ಲೆಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಸಿಂಧಗಿಗಿಂತ ಹಾನಗಲ್ ಗೆಲುವು ಸಿಎಂಗೆ ಮುಖ್ಯವಾಗಿತ್ತು. ಆದರೆ, ಮೂಲ ಬಿಜೆಪಿಗರನ್ನು ನಂಬಿ ಸಿಂಧಗಿಯಲ್ಲಿ ಗೆಲುವು, ವಲಸಿಗರನ್ನು ನಂಬಿ ಹಾನಗಲ್ನಲ್ಲಿ ಸೋಲು ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
"ದಿವಂಗತ ಸಿ.ಎಂ.ಉದಾಸಿ ಅವರು ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಕಳೆದ 38 ವರ್ಷಗಳಿಂದ ಹಾನಗಲ್ ಕ್ಷೇತ್ರ ಮಾತ್ರವಲ್ಲದೆ ಇಡೀ ಹಾವೇರಿ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಉದಾಸಿರವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಕಾಂಗ್ರೆಸ್ ಪಕ್ಷಕ್ಕೆ ಜನರು ಒಂದು ಅವಕಾಶ ನೀಡಿದ್ದಾರೆ" ಎಂದು ಸುಧಾಕರ್ ಸೋಲಿಗೆ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications