ಸತ್ಯನಾರಾಯಣ ಪೇಟೆಯಿಂದ ಸುಪಾರಿವರೆಗೆ ರವಿ ಬೆಳಗೆರೆ ಏಳು-ಬೀಳು
Recommended Video
"ಯಾರಾದರೂ ನನ್ನ ಬರವಣಿಗೆಯನ್ನು ನಿರಾಕರಿಸಬಹುದು, ತಿರಸ್ಕರಿಸಬಹುದು. ಆದರೆ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ" ಎಂಬುದು ಪತ್ರಕರ್ತ ರವಿ ಬೆಳಗೆರೆಯವರ ಮಾತು. ಅವರೇ ಹೇಳಿಕೊಳ್ಳುವಂತೆ ಬೀದಿ ಬದಿಯ ಇಪ್ಪತ್ತು ರುಪಾಯಿಯ ಬಿರಿಯಾನಿ ತಿನ್ನುತ್ತಿದ್ದ ದಿನದಿಂದ ಮೂರು ಸಾವಿರಕ್ಕೆ ಒಂದು ಪ್ಲೇಟ್ ಬಿರಿಯಾನಿ ತಿನ್ನುವಷ್ಟು ಬೆಳೆದ ಬೆಳಗೆರೆ ಅವರ ಪ್ರಯಾಣವನ್ನು ನೆನಪಿಸಿಕೊಳ್ಳುವ ಲೇಖನವಿದು.
ಜ್ಯೋತಿಷ್ಯ: ರವಿಯನ್ನು ಬಿಟ್ಟೂಬಿಡದೆ ಕಾಡಲಿದೆ ಗುರುಚಾಂಡಾಲ ಯೋಗ
ಬಳ್ಳಾರಿ ಸತ್ಯನಾರಾಯಣ ಪೇಟೆಯ ಬಿ.ರವಿ ಎಂಬ ಎಸ್ಸೆಸ್ಸೆಲ್ಸಿ ಫೇಲಾದ ಹುಡುಗ ಏರಿದ ಎತ್ತರ, ಕಂಡ ಪಾತಾಳ ಕಡಿಮೆ ಏನಲ್ಲ. 1995ರಲ್ಲಿ ವಿದ್ಯಾಪೀಠ ಸರ್ಕಲ್ ನ ಒಂದು ಪುಟ್ಟ ಅಂಗಡಿಯೊಂದರಲ್ಲಿ ಶುರುವಾದ ಹಾಯ್ ಬೆಂಗಳೂರ್ ವಾರಪತ್ರಿಕೆಯನ್ನು ಬೆಂಗಳೂರಿನ ಗಡಿ ಕೂಡ ದಾಟಿಸುವ ಉದ್ದೇಶ ರವಿ ಬೆಳಗೆರೆ ಅವರಿಗೆ ಇರಲಿಲ್ಲ. ಆದರೆ ಆ ಪತ್ರಿಕೆ ಕರ್ನಾಟಕದಲ್ಲಿ ಮನೆ ಮಾತಾಯಿತು. ರವಿ ಬೆಳಗೆರೆ ಎಂಬ ಪತ್ರಕರ್ತ ಅದೆಷ್ಟೋ ಸಾವಿರ ಮಂದಿಯ ಕಣ್ಣಿಗೆ ಬೆರಗಿನಂತೆ ಕಂಡರು.
ರವಿ ಬೆಳಗೆರೆ ವಿರುದ್ಧದ ಕೇಸ್ ಬಲವಾಗಿದೆ : ಸಂಗ್ರಾಮ್ ಸಿಂಗ್
ಇಪ್ಪತ್ತೆರಡು ವರ್ಷದ ಪ್ರಯಾಣದಲ್ಲಿ ಹಾಯ್ ಬೆಂಗಳೂರ್, ಓ ಮನಸೇ, ಎಂದೂ ಮರೆಯದ ಹಾಡು, ಪ್ರಾರ್ಥನಾ ಶಾಲೆ, ಕ್ರೈಂ ಡೈರಿ... ಎಲ್ಲ ಮುಗಿದು ಇದೀಗ ಸಿಸಿಬಿ ಪೊಲೀಸರಿಂದ ಬಂಧನದವರೆಗೆ ಬಂದು ನಿಂತಿದೆ. "ನನ್ನನ್ನು ನೀವು ಏನು ಮಾಡಬಲ್ಲಿರಿ? ಬೀದಿಗೆ ತರ್ತೀರಾ? ನಾನು ಎದ್ದು ಬಂದಿದ್ದೇ ಅಲ್ಲಿಂದ. ಅದಕ್ಕಿಂತ ಇನ್ನೇನು ಹೆಚ್ಚು ಮಾಡಿಕೊಳ್ಳಲು ಸಾಧ್ಯ?" ಎಂಬುದು ಕೂಡ ಅವರದೇ ಮಾತು.
ರೂಪಿಣಿ ಪ್ರಕರಣ ಮೊದಲ ಹೊಡೆತ
ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆಯನ್ನು ಆರಂಭಿಸಿದ ನಂತರ ಅಪಾರ ಯಶಸ್ಸು ಕಂಡ ಅವರಿಗೆ ಎದುರಾದ ಮೊದಲ ಹೊಡೆತ ರೂಪಿಣಿ ಬಗ್ಗೆ ಬರೆದ ಲೇಖನ. ಆಕೆ ಬಗ್ಗೆ ಬರೆದಿದ್ದ ವರದಿಯೊಂದರಿಂದ ರವಿ ಬೆಳಗೆರೆ ಅವರ ಮೇಲೆ ದೊಡ್ಡ ವಿರೋಧ ವ್ಯಕ್ತವಾಯಿತು. ಆ ವರದಿ ಬಗ್ಗೆ ಸ್ಪಷ್ಟನೆ ನೀಡುವುದಕ್ಕೆ ಸ್ವತಃ ರವಿ ಬೆಳಗೆರೆ ಮುಂಬೈಗೆ ಹೋಗಿ ನಟಿ ರೂಪಿಣಿ ಜತೆ ಮಾತನಾಡಿ- ಸಂಧಾನ ಮಾಡಿಕೊಂಡು ಬಂದರು.
ಆ ಪರಿ ಕೀರ್ತಿ ಸಂಪಾದಿಸಿದರು
ಆ ನಂತರ ಕಾರ್ಗಿಲ್ ಯುದ್ಧದ ವರದಿ ಮಾಡಿದರು. ಅಫಘಾನಿಸ್ತಾನದ ಯುದ್ಧ, ಗುಜರಾತ್ ಭೂಕಂಪ, ಒರಿಸ್ಸಾ ಚಂಡಮಾರುತದ ವರದಿ ಮಾಡಿಕೊಂಡು ಬಂದರು. ಕನ್ನಡ ವಾರಪತ್ರಿಕೆಯ ಸಂಪಾದಕರಿಗೆ ಈ ಪರಿಯ ಯಶಸ್ಸು, ಕೀರ್ತಿ ಆವರಿಸಿಕೊಂಡಿದ್ದಕ್ಕೆ ಎರಡನೇ ಉದಾಹರಣೆಯಾಗಿ (ಮೊದಲ ಸಾಲಿನಲ್ಲಿ- ಮೇಲ್ಪಂಕ್ತಿಯಲ್ಲಿ ನಿಲ್ಲುವವರು ಪಿ.ಲಂಕೇಶ್) ರವಿ ಬೆಳಗೆರೆ ನಿಂತರು.
ನನ್ನ ಸ್ಥಿತೀಲಿ ಬೇರೆ ಹೆಂಗಸಿದ್ದಿದ್ದರೆ ಎಷ್ಟು ರಾದ್ಧಾಂತ ಆಗ್ತಿತ್ತು?
ಹರಪನಹಳ್ಳಿ ಶೂಟೌಟ್
ಹರಪನಹಳ್ಳಿಯಲ್ಲಿ ನಡೆದ ಶೂಟೌಟ್ ಪ್ರಕರಣವೊಂದು ರವಿ ಬೆಳಗೆರೆ ಅವರ ಪಾಲಿಗೆ ಎದುರಾದ ಮತ್ತೊಂದು ಅಗ್ನಿಪರೀಕ್ಷೆ. ಆ ಅಗ್ನಿ ದಿವ್ಯದಿಂದ ಎದ್ದು ಬಂದು ಮತ್ತೆ ಬರೆಯಲು ಕೂತ ಬೆಳಗೆರೆ ಅವರಿಗೆ ಈ ವಿಚಾರದಲ್ಲಿ ಗೋಪಾಲಕೃಷ್ಣ ಅಡಿಗರು ಬರೆದ ಸಾಲು "ಕತ್ತಲಲ್ಲಿ ಬೆಳೆಯುವುದೊಂದೇ ಕೆಲಸ" ಎಂಬುದು ಬಹಳ ಅಚ್ಚುಮೆಚ್ಚು.
ದೈತ್ಯ ದುಡಿಮೆ
ಕ್ರೈಂ ಡೈರಿ ಎಂಬುದನ್ನು ಈಟಿವಿ ಅವರಿಗಾಗಿ ನಡೆಸಿಕೊಡುತ್ತಿದ್ದ ರವಿ ಬೆಳಗೆರೆ ಅವರ ನಾಲ್ಕೈದು ವರ್ಷಕ್ಕಿಂತ ಹೆಚ್ಚು ಕಾಲ ಗಡಿಯಾರ ನೋಡದೆ ಬರೆದಿದ್ದಾರೆ, ಮಾತನಾಡಿದ್ದಾರೆ. ಹಾಯ್ ಬೆಂಗಳೂರ್ ವಾರ ಪತ್ರಿಕೆ, ಓ ಮನಸೇ ಪಾಕ್ಷಿಕ, ಕ್ರೈಂ ಡೈರಿ ಕಾರ್ಯಕ್ರಮ, ಪ್ರಾರ್ಥನಾ ಶಾಲೆಯ ಕೆಲಸಗಳನ್ನು ಒಂದೇ ಸಲಕ್ಕೆ ಮೈ ಮೇಲೆ ಎಳೆದುಕೊಂಡು ಮಾಡಿದವರು.
ಗೌರಿ ಲಂಕೇಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರವಿ ಬೆಳಗೆರೆ
ಇಮೇಜು ಬದಲಿಸಿದ ಎಂದೂ ಮರೆಯದ ಹಾಡು
ರವಿ ಬೆಳಗೆರೆ ಅವರ ಇಮೇಜ್ ಬದಲಾಯಿಸಿದ್ದು ಓ ಮನಸೇ ಪಾಕ್ಷಿಕ ಹಾಗೂ ಎಂದೂ ಮರೆಯದ ಹಾಡು ಕಾರ್ಯಕ್ರಮ. ಅವರನ್ನು ಜನಪ್ರಿಯತೆಯ ತುತ್ತ ತುದಿಗೆ ಕೂರಿಸಿದ್ದು ಕ್ರೈಂ ಡೈರಿ ಕಾರ್ಯಕ್ರಮ. ಅವರ ಧ್ವನಿ- ಭಾಷೆಯನ್ನು ಮನೆಮನೆಗೆ ತಲುಪಿಸಿದ ಕಾರ್ಯಕ್ರಮವಿದು.
ಯುವ ಜನರ ಪಾಲಿಗೆ ಪ್ರಿಯ, ಜನಪ್ರಿಯ
ಸಿನಿಮಾದಲ್ಲಿನ ನಟನೆ, ಚಿತ್ರರಂಗದಲ್ಲಿನ ಕೆಲಸ, ಬೆಳಗ್ಗೆ ಹೊತ್ತು ಬರುತ್ತಿದ್ದ ರೇಡಿಯೋ ಕಾರ್ಯಕ್ರಮ ಬೆಳ್ ಬೆಳಗ್ಗೆ ರವಿ ಬೆಳಗೆರೆ, 'ಮುಖ್ಯಮಂತ್ರಿ ಐ ಲವ್ ಯೂ' ಸಿನಿಮಾ ನಿರ್ದೇಶನ, ಪರ್ಸನಾಲಿಟಿ ಡೆವಲಪ್ ಮೆಂಟ್ ಹಾಗೂ ಪ್ರೀತಿ-ಪ್ರೇಮಕ್ಕೆ ಸಂಬಂಧಿಸಿದ ಆಡಿಯೋ ಸಿಡಿಗಳು ಇವೆಲ್ಲದರಿಂದ ಬೆಳಗೆರೆ ಯುವಜನರ ಪಾಲಿಗೆ ಪ್ರಿಯರಾದರು, ಜನಪ್ರಿಯರಾದರು.
ಹಾಯ್ ಬೆಂಗಳೂರನ್ನು ಮುಚ್ಚಲಿದ್ದಾರೆ ರವಿ, ಕಾರಣಗಳು 5
ನಾನು ರಾಜಕೀಯಕ್ಕೆ ಏಕೆ ಬರಬೇಕು
2008ರಲ್ಲಿ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ರವಿ ಬೆಳಗೆರೆ ಅವರ ಮಾತಿನ ಪ್ರಭಾವದ ಉಚ್ಛ್ರಾಯ ಸ್ಥಿತಿಯದು. ಅವರ ಫಸ್ಟ್ ಹಾಫ್ (ಐವತ್ತನೇ ವರ್ಷ ತುಂಬಿದ್ದಕ್ಕಾಗಿ ಹೊರಬಂದ ಅಭಿನಂದನಾ ಗ್ರಂಥ) ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀರಾಮುಲು ಅವರನ್ನು, ವೇದಿಕೆಯಲ್ಲಿ "ನಿಲ್ಲಬೇಕು, ಮುಂದೆ ಬರಬೇಕು, ಈಗ ಹೋಗಿ ಕೂತುಕೊಳ್ಳಿ" ಎಂದು ಹೇಳಿದ ನಂತರ, ಹೇಳಿದಂತೆ ಕೇಳಿದ ಸಚಿವರನ್ನು ತೋರಿಸಿ, ಇಷ್ಟಾದರೂ ಸಾಕಲ್ಲವಾ? ನಾನು ರಾಜಕೀಯಕ್ಕೆ ಬರುವ ಅಗತ್ಯ ಏನಿದೆ ಎಂದಿದ್ದರು.
ಭೀಮಾ ತೀರದ ಹಂತಕರು ಸಿನಿಮಾದಿಂದ ಇಳಿಜಾರಿನ ಹಾದಿ
ಭೀಮಾ ತೀರದ ಹಂತಕರು ಬಿಡುಗಡೆ ಆದ ವೇಳೆಯಲ್ಲಿ ಆ ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲಿಂದ ಆಚೆಗೆ ನಿಧಾನವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಯಿತು. ಅನಾರೋಗ್ಯ ಸಮಸ್ಯೆ ಎದುರಾಯಿತು. ಇದೀಗ ಅವರ ಮೇಲೆ ಸಹೋದ್ಯೋಗಿ ಸುಪಾರಿ ನೀಡಿದ ಆರೋಪ ಎದುರಾಗಿ, ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಪತ್ರಿಕೆ ನಿಲ್ಲಿಸಲಿರುವ ರವಿ ಬೆಳಗೆರೆ ಮುಂದಿನ ನಡೆಗಳೇನು?
ವಿವಾದ-ಜನಪ್ರಿಯತೆ ಉಯ್ಯಾಲೆ
ರವಿ ಬೆಳಗೆರೆ ಅವರು ಬರೆದ ಕವಿರಾಜಮಾರ್ಗವಲ್ಲ ಇದು ಕಾಮರಾಜ ಮಾರ್ಗ, ರಾಜ್ ಲೀಲಾ ವಿನೋದ, ರಾಜ ರಹಸ್ಯ ಬಹು ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾದವು. ಬಾಟಮ್ ಐಟಮ್, ಹಿಮಾಲಯನ್ ಬ್ಲಂಡರ್, ಹೇಳಿ ಹೋಗು ಕಾರಣ, ಸರ್ಪ ಸಂಬಂಧ, ಮಾಟಗಾತಿ, ಪಾಪಿಗಳ ಲೋಕದಲ್ಲಿ ಅಂಥ ಪುಸ್ತಕಗಳು ಅವರ ಬೆಸ್ಟ್ ಸೆಲ್ಲರ್ ಪುಸ್ತಕಗಳು.
ಅದ್ಭುತ ಕಥೆಗಾರರಾಗಿ ಹೆಸರು ಪಡೆದ ರವಿ ಬೆಳಗೆರೆ ತುಂಬ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದವರು.