ಕಾಂಗ್ರೆಸ್ಗೆ ಬಗೆಹರಿಯದ ಪಿಕೆ ಕಗ್ಗಂಟು: ಮತ್ತೊಂದು ತಂಡ ರಚನೆ ಗುಟ್ಟು
ನವದೆಹಲಿ, ಏ. 26: ಚುನಾವಣಾ ರಣತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪುನಶ್ಚೇತನಕ್ಕೆ ಕೊಟ್ಟಿರುವ ಸಲಹೆಗಳು ಹಾಗೂ ತಾನೇ ಖುದ್ದಾಗಿ ಕಾಂಗ್ರೆಸ್ ಸೇರಬಯಸುವುದಾಗಿ ಮಾಡಿರುವ ಪ್ರಸ್ತಾವ ವಿಚಾರದಲ್ಲಿ ಕಾಂಗ್ರೆಸ್ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಪಿಕೆ ಯೋಜನೆಗಳನ್ನ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲೆಂದೇ ಕಾಂಗ್ರೆಸ್ ಈ ಹಿಂದೆ ಒಂದು ಸಮಿತಿ ರಚಿಸಿತ್ತು. ಈಗ ಕಾಂಗ್ರೆಸ್ಗೆ ಎದುರಾಗಿರುವ ರಾಜಕೀಯ ಸವಾಲುಗಳನ್ನ ಎದುರಿಸುವ ಬಗೆ ಹೇಗೆ ಎಂದು ಚರ್ಚಿಸಲು ಒಂದು ಕ್ರಿಯಾ ಗುಂಪನ್ನು ರಚಿಸುತ್ತಿದೆ. ಈ ತಂಡದಲ್ಲಿ ಯಾರ್ಯಾರು ಇರಲಿದ್ದಾರೆ ಎಂಬುದನ್ನು ಇನ್ನೂ ಪ್ರಕಟಿಸಿಲ್ಲ.
ಇನ್ನು, ಪ್ರಶಾಂತ್ ಕಿಶೋರ್ ಸಲಹೆಗಳ ಬಗ್ಗೆ ಚರ್ಚಿಸಲೆಂದು ರಚಿಸಲಾಗಿದ್ದ ಸಮಿತಿಯಲ್ಲಿ ಪಿ ಚಿದಂಬರಂ, ಅಂಬಿಕಾ ಸೋನಿ, ಪ್ರಿಯಾಂಕಾ ಗಾಂಧಿ ವಾದ್ರಾ, ದಿಗ್ವಿಜಯ ಸಿಂಗ್, ಜೈರಾಮ್ ರಮೇಶ್ ಮುಕುಲ್ ವಾಸ್ನಿಕ್, ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲ ಅವರಿದ್ದಾರೆ. ಈ ಎಂಟು ಮಂದಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿ ಮಾತನಾಡಿರುವುದು ತಿಳಿದುಬಂದಿದೆ. ಆದರೆ ಈ ಭೇಟಿ ವೇಳೆ ಏನು ನಿರ್ಧಾರ ತೆಗೆದುಕೊಳ್ಳಲಾಯಿತು ಎಂಬುದು ಗೊತ್ತಾಗಿಲ್ಲ. ಹಿರಿಯ ನಾಯಕರಿರುವ ಈ ತಂಡವು ಹಲವು ಬಾರಿ ಪ್ರಶಾಂತ್ ಕಿಶೋರ್ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದೆ. ಪಿಕೆ ಕೊಟ್ಟಿರುವ ಬಹುತೇಕ ಸಲಹೆಗಳು ಸ್ವೀಕಾರಾರ್ಹವಾಗಿವೆ ಎಂಬುದು ಈ ತಂಡದ ಸರ್ವಸಮ್ಮತ ಅನಿಸಿಕೆ.
ಆದರೆ, ಪ್ರಶಾಂತ್ ಕಿಶೋರ್ ಅವರನ್ನ ಕಾಂಗ್ರೆಸ್ ಪಕ್ಷದೊಳಗೆ ಸೇರಿಸಿಕೊಳ್ಳುವುದು ಮತ್ತು ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡುವುದು ಈ ವಿಚಾರಗಳ ಬಗ್ಗೆ ಅಭಿಪ್ರಾಯಭೇದಗಳಿವೆ. ಪ್ರಿಯಾಂಕಾ ಗಾಂಧಿ ಮತ್ತು ಅಂಬಿಕಾ ಸೋನಿ ಅವರು ಪಿಕೆಗೆ ಮುಕ್ತ ಹಸ್ತ ಕೊಡಲು ಒಪ್ಪಿದ್ದಾರೆ. ಆದರೆ, ಹಿರಿಯರಾದ ದಿಗ್ವಿಜಯ್ ಸಿಂಗ್, ರಣದೀಪ್ ಸುರ್ಜೆವಾಲ, ಜೈರಾಮ್ ರಮೇಶ್, ಮುಕುಲ್ ವಾಸ್ನಿಕ್ ಅವರು ಇದಕ್ಕೆ ವಿರೋಧವಾಗಿದ್ದಾರೆ.

ಟಿಆರ್ಎಸ್ ಜೊತೆ ಐ-ಪ್ಯಾಕ್ ಒಪ್ಪಂದದಿಂದ ಕೈ ಕಸಿವಿಸಿ:
ನಿನ್ನೆ ಆಂಧ್ರದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷವು ಮುಂಬರುವ ಚುನಾವಣೆಗಾಗಿ ಐ-ಪ್ಯಾಕ್ (I-PAC) ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಐ-ಪ್ಯಾಕ್ ಕಂಪನಿಯನ್ನ ಸ್ಥಾಪಿಸಿದ್ದು ಪ್ರಶಾಂತ್ ಕಿಶೋರ್. ಈಗ ಅವರು ಅದರಲ್ಲಿ ಇಲ್ಲದಿದ್ದರೂ ಅದರ ಮುಖ್ಯ ನಿರ್ಧಾರಗಳಲ್ಲಿ ಪಿಕೆ ಪಾತ್ರ ಇರುತ್ತದೆ ಎನ್ನಲಾಗುತ್ತಿದೆ. ಅಲ್ಲದೇ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಆಂಧ್ರದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೂ ಪ್ರಶಾಂತ್ ಕಿಶೋರ್ ಸಲಹೆಗಾರರಾಗಿದ್ದಾರೆ. ಈಗ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬೇಕೆಂದು ಹೇಳುತ್ತಿರುವ ಹೊತ್ತಲ್ಲೇ ಅವರು ಬೇರೊಂದು ಪಕ್ಷದ ಜೊತೆ ಕೆಲಸ ಮಾಡುತ್ತಿರುವುದು ಕೈ ವರಿಷ್ಠರಿಗೆ ಇರಿಸುಮುರುಸು ತಂದಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲೂ ಚರ್ಚೆಗಳಾಗಿವೆ.
ನವ ಸಂಕಲ್ಪ ಚಿಂತನ್ ಶಿಬಿರ್:
ಇದೇ ವೇಳೆ, ಮೇ 12ರಿಂದ ಮೂರು ದಿನಗಳ ಕಾಲ ರಾಜಸ್ಥಾನದ ಉದಯಪುರ್ನಲ್ಲಿ ಪಕ್ಷದ ಹಲವು ವಿಚಾರಗಳನ್ನ ಚರ್ಚಿಸಲು "ನವ್ ಸಂಕಲ್ಪ್ ಚಿಂತನ್ ಶಿಬಿರ್" ಕಾರ್ಯಕ್ರಮ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ದೇಶಾದ್ಯಂತ 400 ಕಾಂಗ್ರೆಸ್ ನಾಯಕರು ಈ ಬೌದ್ಧಿಕ ಕಸರತ್ತಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಸದ್ಯದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಮತ್ತು ಸವಾಲುಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ವಿಚಾರವಿನಿಮಯ ಆಗಲಿದೆ. ರೈತರು, ಕಾರ್ಮಿಕರು, ಪರಿಶಿಷ್ಟ ಜಾತಿ ಪಂಗಡಗಳವರು, ಮಹಿಳೆಯರು, ಉವ ಸಮುದಾಯದವರು ಇವರ ಸಂಬಂಧಿತ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಗುತ್ತದೆ. ಹಾಗೆಯೇ ಕಾಂಗ್ರೆಸ್ ಪಕ್ಷದ ರೂಪುರೇಖೆಯ ಪುನಾರಚನೆ ಹೇಗೆ ಮಾಡಬಹುದು, 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ನ ವ್ಯಾಪಕ ರಣತಂತ್ರ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳನ್ನ ಚಿಂತನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.
ಮಲ್ಲಿಕಾರ್ಜುನ ಖರ್ಗೆ ಮೊದಲಾದವರಿರುವ ಆರು ಸಮಿತಿಗಳ ರಚನೆ:
ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆ ಮತ್ತು ಮುಂಬರುವ ಅಧಿವೇಶನಗಳಲ್ಲಿ ಕಾಂಗ್ರೆಸ್ ರಣತಂತ್ರ ಹೇಗಿರಬೇಕೆಂದು ದೃಷ್ಟಿಯಲ್ಲಿಟ್ಟುಕೊಂಡು ಆರು ಸಮಿತಿಗಳನ್ನ ರಚಿಸಿದೆ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಒಂದು ಸಮಿತಿಯು ರಾಜಕೀಯ ನಿರ್ಣಯದ ಕರಡನ್ನು ಸಿದ್ಧಪಡಿಸಲಿದೆ. ಹೀಗೆ ಬೇರೆ ಬೇರೆ ವಿಚಾರಗಳಿಗೆ ನಿರ್ಣಯ ಸಿದ್ಧಪಡಿಸಲು ಪ್ರತ್ಯೇಕ ಸಮಿತಿಗಳನ್ನ ಮಾಡಲಾಗಿದೆ.

ಖರ್ಗೆ ನೇತೃತ್ವದ ತಂಡದಲ್ಲಿ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಶಶಿ ತರೂರ್, ಅಶೋಕ್ ಚವ್ಹಾಣ್, ಉತ್ತಮ್ ಕುಮಾರ್ ರೆಡ್ಡಿ, ಗೌರವ್ ಗೊಗೋಯ್, ಸಪ್ತಗಿರಿ ಶಂಕರ್ ಉಲಕ ಮತ್ತು ರಾಗಿಣಿ ನಾಯಕ್ ಅವರಿದ್ದಾರೆ.
ಪಿ ಚಿದಂಬರಂ ನೇತೃತ್ವದಲ್ಲಿ ಮಾಡಲಾಗಿರುವ ಮತ್ತೊಂದು ತಂಡದಲ್ಲಿ ಸಿದ್ದರಾಮಯ್ಯ, ರಾಜೀವ್ ಗೌಡ ಅವರಿದ್ದಾರೆ. ಸಚಿನ್ ಪೈಲಟ್, ಮನೀಶ್ ತಿವಾರಿ, ಪ್ರಣಿತಿ ಶಿಂಧೆ, ಗೌರವ್ ವಲ್ಲಭ್, ಸುಪ್ರಿಯಾ ಶ್ರೀನಾತೆ ಅವರೂ ಈ ತಂಡದಲ್ಲಿದ್ದಾರೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications