ಕಾಂಗ್ರೆಸ್ ಮೇಕೆದಾಟು, ಜೆಡಿಎಸ್ ಜಲಧಾರೆ ನಡುವೆ ವೈರಸ್ ಹುಡುಕಾಟದಲ್ಲಿ ಜನತೆ!
ವರ್ಷದ ಮೊದಲ ತಿಂಗಳು ಹಲವು ರಾಜಕೀಯ ಮೇಲಾಟಕ್ಕೆ ಕರ್ನಾಟಕ ಸಾಕ್ಷಿಯಾಗಬೇಕಾಗಿದೆ. ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎನ್ನುವ ಹಾಗೇ ರಾಜಕೀಯ ನಾಯಕರುಗಳ ಪ್ರತಿಷ್ಠೆಯ ಮೇಲಾಟಕ್ಕೆ ಸಾರ್ವಜನಿಕರಿಗೆ ಕೊರೊನಾ ನಿರ್ಬಂಧದ ಬರೆ.
Recommended Video
ಕೆಪಿಸಿಸಿಯ ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆ ಇದೇ ಬರುವ ಜನವರಿ ಒಂಬತ್ತರಿಂದ ಆರಂಭವಾಗಲಿದೆ. ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿಕೊಂಡೇ ಪಾದಯಾತ್ರೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದರೂ, ಅದನ್ನು ನಂಬಲೂ ಯಾರು ಇಲ್ಲಿ ಮೂರ್ಖರು ಎನ್ನುವುದು ಪ್ರಶ್ನೆ.
ಮೇಕೆದಾಟು ಪಾದಯಾತ್ರೆ ಬಹುತೇಕ ಹಳೇ ಮೈಸೂರು ಭಾಗದಲ್ಲಿ ಹಾದು ಹೋಗುವುದರಿಂದ, ಇದಕ್ಕೆ ಪರ್ಯಾಯವಾಗಿ ತಾವೂ ಒಂದು ಇಂತಹ ಕಾರ್ಯಕ್ರಮ ನಡೆಸಲೇ ಬೇಕಾದ ಅನಿವಾರ್ಯತೆ ಜೆಡಿಎಸ್ ಪಕ್ಷಕ್ಕಿದೆ. ತನ್ನ ಯೋಜನೆ ಏನು ಎನ್ನುವುದನ್ನು ಡಿಕೆಶಿ ಮೇಕೆದಾಟು ಸಂಕಲ್ಪಕ್ಕೆ ಮುನ್ನವೇ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದರು.
ಬೆಂಗಳೂರಿನ ಜೆ.ಪಿ.ಭವನದಲ್ಲಿ ನಡೆದ ಪಕ್ಷದ ಮುಖಂಡರ ಸಭೆಯ ನಂತರ ಜೆಡಿಎಸ್ ತನ್ನ ಯೋಜನೆಯನ್ನು ಪ್ರಕಟಿಸಿದೆ. ಇದೇ ಜನವರಿ 26ರಿಂದ 'ಜನತಾ ಜಲಧಾರೆ' ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅಲ್ಲಿಗೆ, ಇನ್ನೊಂದು ರಾಜಕೀಯ ಪ್ರಹಸನವನ್ನು ರಾಜ್ಯ ನೋಡಬೇಕಿದೆ.

ಯಶಸ್ವಿಗೊಳಿಸಲೇ ಬೇಕೆಂದು ಪ್ರಮುಖವಾಗಿ ಡಿಕೆ ಬ್ರದರ್ಸ್ ಪಣತೊಟ್ಟಂತಿದೆ
ಮೇಕೆದಾಟು ಪಾದಯಾತ್ರೆಯನ್ನು ಶತಾಯುಗತಾಯು ಯಶಸ್ವಿಗೊಳಿಸಲೇ ಬೇಕೆಂದು ಪ್ರಮುಖವಾಗಿ ಡಿಕೆ ಬ್ರದರ್ಸ್ ಪಣತೊಟ್ಟಂತಿದೆ. ಜನತೆಗಾಗಿ ನೀರು ಎನ್ನುವುದು ಈ ಯಾತ್ರೆಯ ಧ್ಯೇಯವಾಖ್ಯವಾಗಿದ್ದರೂ, ಈ ಯಾತ್ರೆಯ ಹಿಂದಿನ ರಾಜಕೀಯ ಗುರಿಗಳು ಏನೆಂಬುದು ಸ್ಪಷ್ಟ. ನೂರು ಬಾರಿ ಸರಕಾರ ನನ್ನನ್ನು ಬಂಧಿಸಿದರೂ ಯಾತ್ರೆ ನಿಲ್ಲದು ಎಂದು ಡಿಕೆಶಿ ಸ್ಪಷ್ಟ ಪಡಿಸಿದ್ದಾರೆ. ಸರಕಾರ ಒಂದು ವೇಳೆ ಯಾತ್ರೆಗೆ ತಡೆಯೊಡ್ಡಿದರೂ ಪ್ಲ್ಯಾನ್ ಬಿ ಅನ್ನು ಕಾಂಗ್ರೆಸ್ ಈಗಾಗಲೇ ಸಿದ್ದಪಡಿಸಿಟ್ಟುಕೊಂಡಿದೆ ಎನ್ನುವ ಮಾಹಿತಿಯಿದೆ.

ಪ್ರತೀದಿನ 20-25ಸಾವಿರ ಜನರು ಪಾದಯಾತ್ರೆಯಲ್ಲಿ
ಕೊರೊನಾ ಮಾರ್ಗಸೂಚಿಯನ್ನು ಪಾಲನೆ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ಈ ಮೇಕೆದಾಟು ಎಫೆಕ್ಟ್ ಕನಿಷ್ಠ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಮೈಲೇಜ್ ಸಿಗುವಂತಾಗಬೇಕು ಎನ್ನುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಹಾಗಾಗಿ, ಪ್ರತೀದಿನ 20-25ಸಾವಿರ ಜನರು ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕೆಂಬ ಅಲಿಖಿತ ಫರ್ಮಾನು ವಿವಿಧ ಜಿಲ್ಲಾ ಘಟಕ, ಮಹಿಳಾ ಸಂಘಟನೆ, ವಿದ್ಯಾರ್ಥಿ ಘಟಕಗಳಿಗೆ ಹೋಗಿದೆ ಎನ್ನುವ ಮಾಹಿತಿಯಿದೆ. ಇಷ್ಟು ಜನ ಸೇರುವಾಗ ಎಲ್ಲಿಯ ಕೋವಿಡ್ ಮಾರ್ಗಸೂಚಿ ಪಾಲನೆ?

'ಜನತಾ ಜಲಧಾರೆ' ಎಂಬ ಕಾರ್ಯಕ್ರಮವನ್ನು ಜೆಡಿಎಸ್ ಆಯೋಜಿಸಿದೆ
ಇನ್ನೊಂದು ಕಡೆ 'ಜನತಾ ಜಲಧಾರೆ' ಎಂಬ ಕಾರ್ಯಕ್ರಮವನ್ನು ಜೆಡಿಎಸ್ ಆಯೋಜಿಸಿದೆ. ರಾಜ್ಯದ 15 ದಿಕ್ಕುಗಳಿಗೆ ಗಂಗಾರಥ ಹೊರಡಲಿದೆ. "51 ಸ್ಥಳಗಳಲ್ಲಿ ಪವಿತ್ರ ನದಿಗಳ ಜಲ ಸಂಗ್ರಹ ಮಾಡಲಾಗುವುದು. ರಾಜ್ಯದ ಉದ್ದಗಲಕ್ಕೂ ಸಾಗಿ ಬರುವ ಈ ಹದಿನೈದೂ ವಾಹನಗಳು 15-20 ದಿನಗಳ ಒಳಗಾಗಿ ಬೆಂಗಳೂರು ತಲುಪುತ್ತವೆ. ಅಂದು ಇಡೀ ಬೆಂಗಳೂರನ್ನು ಪ್ರದಕ್ಷಿಣೆ ಹಾಕುವ ಇಷ್ಟೂ ವಾಹಗಳು ಅದೇ ದಿನ ಸಂಜೆ ಅರಮನೆ ಮೈದಾನದಲ್ಲಿ ಸೇರಲಿವೆ. ನಮಗೆ ಧಾವಂತವಿಲ್ಲ, ವೈರಸ್ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡುವ ಎಲ್ಲಾ ನಿಯಮಗಳಿಗೆ ಬದ್ಧರಾಗಿ ಜಲಧಾರೆ ಕಾರ್ಯಕ್ರಮ ನಡೆಸುತ್ತೇವೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವೈರಸ್ ಕೂಡಾ ಎದುರಾಗದು ಎನ್ನುವುದಕ್ಕೆ ಮೂರು ಪಕ್ಷಗಳೂ ಹೊರತಾಗಿಲ್ಲ
ತಮ್ಮತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವ ವೈರಸ್ ಕೂಡಾ ಎದುರಾಗದು ಎನ್ನುವುದಕ್ಕೆ ಮೂರು ಪಕ್ಷಗಳೂ ಹೊರತಾಗಿಲ್ಲ ಎನ್ನುವುದಕ್ಕೆ ನಿದರ್ಶನಗಳು ಒಂದಾ..ಎರಡಾ.. ಇವರುಗಳಿಗೆ ಒಂದು ಕೊರೊನಾ ಕಾನೂನು, ಜನಸಾಮಾನ್ಯರಿಗೆ ಇನ್ನೊಂದು ಕಾನೂನಾ ಎನ್ನುವ ಧ್ವನಿ ಕ್ಷೀಣಿಸುತ್ತಾ ಬರುತ್ತಿದೆ. ಬೆಂಗಳೂರಿನ ತಗರುಪೇಟೆ ಮಾರುಕಟ್ಟೆಯಲ್ಲಿ, ದಿನಗೂಲಿ ಮಹಿಳೆಯೊಬ್ಬಳು, 'ಈ ರೀತಿ ಕರ್ಫ್ಯೂ ಹಾಕಿದರೆ ಹೇಗೆ? ದಿನದ ಸಂಪಾದನೆಯಲ್ಲಿ ಬದುಕುವವರು ನಾವು. ಒಂದೋ ಸಾಯುತ್ತೇವೆ, ಇಲ್ಲವೇ ಬದುಕುತ್ತೇವೆ. ನಮ್ಮಂತವರ ಶಾಪ ನಿಮಗೆ ತಟ್ಟದೇ ಇರದು' ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಮ್ಮ ರಾಜಕೀಯ ನಾಯಕರುಗಳು ಈ ವಿಡಿಯೋವನ್ನೊಮ್ಮೆ ನೋಡಿದರೆ ಮನಃಪರಿವರ್ತನೆ ಆದರೂ ಆಗಬಹುದು.












Click it and Unblock the Notifications