Get Updates
Get notified of breaking news, exclusive insights, and must-see stories!

ಕಾವೇರಿ ತೀರ್ಥೋದ್ಭವ: ಕುಲದೇವಿಯ ದರ್ಶನಕ್ಕೆ ಹಾತೊರೆಯುತ್ತಿರುವ ಕೊಡವರು!

ಕೊಡಗಿನ ಕುಲದೇವಿ ಕಾವೇರಿ ಸೋಮವಾರ ಸಂಜೆ 7.21ರ ಸಲ್ಲುವ ಮೇಷ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಅವಿರ್ಭವಿಸಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಪ್ರತಿ ವರ್ಷವೂ ತುಲಾ ಸಂಕ್ರಮಣದಂದು ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ.

ಭತ್ತದ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ಕೊಡಗಿನಲ್ಲಿ ಮೂರು ಹಬ್ಬಗಳನ್ನು ಮಾಡಲಾಗುತ್ತಿದ್ದು ಅದರಲ್ಲಿ ಇದು ವರ್ಷದಲ್ಲಿ ನಡೆಯುವ ಎರಡನೇ ಹಬ್ಬವಾಗಿದೆ. ಹೀಗಾಗಿ ಇದು ಕೊಡಗಿನವ ಪಾಲಿಗೆ ಕಾವೇರಿ ಜಾತ್ರೆಯಾಗಿದೆ. ತಲಕಾವೇರಿಯಲ್ಲಿ ತೀರ್ಥೋದ್ಭವದ ಬಳಿಕ ತೀರ್ಥವನ್ನು ಮನೆಗೆ ಕೊಂಡೊಯ್ದು ದೇವರಕೋಣೆಯಲ್ಲಿಟ್ಟು ಪೂಜಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ಭಾಗಮಂಡಲದ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿ ಸೇರುವ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಕಾವೇರಿ ನದಿ ದಡದಲ್ಲಿ ಹಿರಿಯರಿಗೆ ಪಿಂಡಪ್ರದಾನ ಮಾಡುವ ಮತ್ತು ಮುಡಿನೀಡುವ ಸಂಪ್ರದಾಯವಿದೆ.

ಇದೆಲ್ಲದರ ನಡುವೆ ಕಾವೇರಿ ಜಾತ್ರೆಗೂ ಕೊಡಗಿನ ಭತ್ತದ ಕೃಷಿಗೂ ಅವಿನಾಭಾವ ಸಂಬಂಧವಿದೆ. ಭತ್ತದ ಕೃಷಿಯೇ ಬದುಕಾಗಿದ್ದ ಕಾಲದಲ್ಲಿ ಭತ್ತದ ಕೃಷಿಗೆ ಅನುಗುಣವಾಗಿ ಭತ್ತದ ನಾಟಿ ಮತ್ತು ಕೊಯ್ಲು ನಡುವಿನ ಬೆಳವಣಿಗೆಯ ಹಂತದಲ್ಲಿ ತುಲಾಸಂಕ್ರಮಣ ಬರುತ್ತಿದ್ದು, ಈ ಸಮಯದಲ್ಲಿ ಭತ್ತದ ಬೆಳೆ ಹುಲುಸಾಗಿ ಬೆಳೆದಿರುತ್ತದೆ. ಹುಲುಸಾಗಿ ಬೆಳೆದ ಬೆಳೆಯನ್ನು ನೋಡುವುದೇ ಕಣ್ಣಿಗೆ ಆನಂದ.

 ಗದ್ದೆಗೆ ಬೊತ್ತು ನೀಡುವ ಸಂಪ್ರದಾಯ

ಗದ್ದೆಗೆ ಬೊತ್ತು ನೀಡುವ ಸಂಪ್ರದಾಯ

ಹೀಗಾಗಿ ಭತ್ತದ ಕೃಷಿಗೆ ಒತ್ತು ನೀಡುವ ಭತ್ತವನ್ನೇ ಧಾನ್ಯ ಲಕ್ಷ್ಮಿ ಎಂದು ನಂಬಿರುವ ಜನ ತಲಕಾವೇರಿಯಲ್ಲಿ ತೀರ್ಥೋದ್ಭವವಾದ ಮಾರನೆಯ ದಿನ ಅಂದರೆ ಅಕ್ಟೋಬರ್ 18ರಂದು ಗದ್ದೆಗೆ ದೋಸೆಯ ನೈವೇದ್ಯ ಅರ್ಪಿಸುವ ಸಂಪ್ರದಾಯನ್ನು ಆಚರಿಸಿಕೊಂಡು ಬಂದಿರುವುದನ್ನು ಜಿಲ್ಲೆಯ ಕೆಲವೆಡೆ ಅದರಲ್ಲೂ ತಲಕಾವೇರಿ ಸುತ್ತಮುತ್ತಲಲ್ಲಿ ಅದರಲ್ಲೂ ಮಡಿಕೇರಿ ತಾಲೂಕಿನ ವ್ಯಾಪ್ತಿಯಲ್ಲಿ ಕಾಣಬಹುದಾಗಿದೆ.

ಇದು ಹೇಗಿದೆ ಎಂದರೆ ತುಲಾ ಸಂಕ್ರಮಣಕ್ಕೆ ಮುನ್ನವೇ ಕಾಡಿನಲ್ಲಿ, ಅಥವಾ ತೋಟದಲ್ಲಿ ಸಿಗುವ ಬೊತ್ತು ಎಂಬ ಮರದ ಕಾಂಡಗಳನ್ನು ಕಡಿದು ತಂದು ನಾಲ್ಕೈದು ಅಡಿಯಷ್ಟು ಉದ್ದಕ್ಕೆ ಕತ್ತರಿಸಿ ಅದರ ಮೇಲೆ ಮತ್ತು ಕೆಳಭಾಗದ ಸಿಪ್ಪೆಯನ್ನು ತೆಗೆದು ಬಳಿಕ ಕಾಡಿನಲ್ಲೆ ಹಬ್ಬಿ ಬೆಳೆಯುವ ಬೊತ್ತು ಬಳ್ಳಿಯನ್ನು ಸುರುಳಿಯಾಕಾರದಲ್ಲಿ ಸುತ್ತಿ ಕಾಂಡಕ್ಕೆ ಸಿಕ್ಕಿಸಿ ಗದ್ದೆ, ತೋಟ, ಮನೆಯ ಮುಂಭಾಗ, ದನದ ಕೊಟ್ಟಿಗೆ ಹೀಗೆ ಮುಖ್ಯ ಸ್ಥಳಗಳಲ್ಲಿ ನೆಟ್ಟು ಇದಕ್ಕೆ ಹೂವಿನ ಸಿಂಗಾರ ಮಾಡಲಾಗುತ್ತದೆ.

 ದೋಸೆಯಿಟ್ಟು ದೀಪಹಚ್ಚಿ ಪೂಜೆ

ದೋಸೆಯಿಟ್ಟು ದೀಪಹಚ್ಚಿ ಪೂಜೆ

ಇನ್ನು ಗದ್ದೆಗಳ ಪೈಕಿ ದೊಡ್ಡ ಗದ್ದೆಯಲ್ಲಿ ಅಕ್ಕಪಕ್ಕದಲ್ಲಿ ಬೊತ್ತನ್ನು ಚುಚ್ಚಿ ಅದಕ್ಕೆ ಬಳ್ಳಿಯನ್ನು ಸುತ್ತಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗಿನ ಜಾವ ದೋಸೆ, ತುಪ್ಪ, ಬೆಲ್ಲ, ಸಕ್ಕರೆ, ಬಾಳೆಹಣ್ಣು ಮೊದಲಾದವುಗಳನ್ನು ಇಟ್ಟು ದೀಪ ಹಚ್ಚಿ ಕಾವೇರಿ ಮಾತೆಯನ್ನು ಪ್ರಾರ್ಥಿಸಿ ಉತ್ತಮ ಬೆಳೆಯಾಗಲಿ ಎಂದು ಬೇಡಿಕೊಳ್ಳಲಾಗುತ್ತದೆ. ಕೆಲವೆಡೆ ದೋಸೆಯಿಟ್ಟು ದೀಪಹಚ್ಚಿ ಪೂಜೆ ಸಲ್ಲಿಸಿದ ಬಳಿಕ ಕಬ್ಬೆಚ್ಚು ಕಾಯಿಬಳ್ಳಿ ಕಾವೋ ಕಾವೋ ಎಂದು ಜೋರಾಗಿ ಕೂಗಿ ದೇವರನ್ನು ಕರೆಯುವ ಸಂಪ್ರದಾಯವೂ ಇದೆ.

 ಬೊತ್ತು ನೆಡುವ ಸಂಪ್ರದಾಯದ ಬಗ್ಗೆ ಹಲವು ಕಥೆಗಳು

ಬೊತ್ತು ನೆಡುವ ಸಂಪ್ರದಾಯದ ಬಗ್ಗೆ ಹಲವು ಕಥೆಗಳು

ಹಾಗಾದರೆ ಗದ್ದೆಗೆ ಬೊತ್ತು ನೆಡುವ ಸಂಪ್ರದಾಯ ಏಕೆ ಬಂತು ಎಂಬುದನ್ನು ನೋಡಿದ್ದೇ ಆದರೆ ಇದರ ಸುತ್ತಲೂ ದಂತಕಥೆಗಳಿವೆ. ಅದೇನೆಂದರೆ ದ್ವಾಪರಯುಗದಲ್ಲಿ ಪಾಂಡವರು ವನವಾಸಕ್ಕೆ ತೆರಳುವ ಮುನ್ನ ಜಾಗವನ್ನು ಕಾವೇರಮ್ಮನಿಗೆ ನೀಡಿ ಹೋಗಿದ್ದರೆಂದು, ಮರಳಿ ಬಂದಾಗ ಇಲ್ಲಿನ ಕೊಡವರು ಭತ್ತದ ನಾಟಿ ಮಾಡಿ ಬೊತ್ತು ನೆಟ್ಟಿದ್ದರಂತೆ. ಹೀಗಾಗಿ ಈ ಬಾರಿ ಬೊತ್ತು ನೆಟ್ಟಿದ್ದೇವೆ ಮುಂದಿನ ಬಾರಿ ಬನ್ನಿ ಎಂದು ಕಳುಹಿಸಿದ್ದರೆಂದೂ ಅದು ಪ್ರತಿಬಾರಿಯೂ ನಡೆಯುತ್ತಾ ಬಂತೆಂದೂ ಹೇಳುತ್ತಾರೆ ಮತ್ತೆ ಕೆಲವರು ವನವಾಸಕ್ಕೆ ತೆರಳುವ ಮುನ್ನ ಗುರುತಿಗಾಗಿ ಪಾಂಡವರು ಬೊತ್ತು ಚುಚ್ಚಿ ಹೋದರೆಂದೂ ಹೇಳುತ್ತಾರೆ. ಇನ್ನು ಹಬ್ಬದ ದಿನ ದೋಸೆ ಮತ್ತು ಸಿಹಿಕುಂಬಳ ಕಾಯಿ ಸಾರು ಮಾಡುವುದು. ಇಲ್ಲಿನ ವಿಶೇಷತೆಯಾಗಿದೆ.

 ಸಪ್ತಮಹರ್ಷಿಗಳು ಯಜ್ಞ ಮಾಡಿದ ಸ್ಥಳ

ಸಪ್ತಮಹರ್ಷಿಗಳು ಯಜ್ಞ ಮಾಡಿದ ಸ್ಥಳ

ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದ್ದು, ಈ ಸ್ನಾನಕೊಳದಲ್ಲಿ ನೂತನವಾಗಿ ವಿವಾಹವಾದವರು ಕೈಕೈ ಹಿಡಿದುಕೊಂಡು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲವನ್ನು ಹಾಕಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಇನ್ನು ಇಲ್ಲಿ ಗಣಪತಿ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಜ್ಯೋತಿ ಮಂಟಪವಿದೆ.

ಅಗಸ್ತ್ಯೇಶ್ವರ ದೇವಾಲಯದ ಎಡಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಲು ಸುಮಾರು 500 ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಈ ಮೆಟ್ಟಿಲೇರಿದರೆ ಬ್ರಹ್ಮಗಿರಿಯ ಬೆಟ್ಟದ ಮೇಲ್ಭಾಗವನ್ನು ತಲುಪಬಹುದು. ಇಲ್ಲಿ ಹಿಂದೆ ಸಪ್ತಮಹರ್ಷಿಗಳು ಯಜ್ಞ ಮಾಡಿದ್ದರು ಎಂದು ಹೇಳಲಾಗುವ ಯಜ್ಞ ಕುಂಡಗಳು ಕಂಡು ಬರುತ್ತವೆ. ಇಲ್ಲಿನ ಕುಂಡದಲ್ಲಿ ನೀರು ಕಂಡು ಬರುತ್ತದೆ. ಇಲ್ಲಿಂದ ನಿಂತು ನೋಡಿದರೆ ಕಂಡು ಬರುವ ನಿಸರ್ಗದ ಸುಂದರ ದೃಶ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೆ ಎದುರಿನ ಬಾಪುರೆ ಬೆಟ್ಟದಲ್ಲಿ ಕೆಟ್ಟು ನಿಂತ ಬೃಹತ್ ಗಾಳಿಯಂತ್ರಗಳು ಸೋಜಿಗವನ್ನುಂಟು ಮಾಡುತ್ತವೆ.

 ದಕ್ಷಿಣ ಕಾಶಿಯಾಗಿರುವ ಭಾಗಮಂಡಲ

ದಕ್ಷಿಣ ಕಾಶಿಯಾಗಿರುವ ಭಾಗಮಂಡಲ

ತಲಕಾವೇರಿಗೆ ಹೋಗುವವರು ಭಾಗಮಂಡಲಕ್ಕೆ ತೆರಳಿ ಭಗಂಡೇಶ್ವರನಿಗೆ ಪೂಜೆ ಮಾಡಿ ಬಳಿಕ ತಲಕಾವೇರಿಗೆ ತೆರಳುವುದು ಸಂಪ್ರದಾಯವಾಗಿದೆ. ಭಾಗಮಂಡಲವು ತ್ರಿವೇಣಿ ಸಂಗಮವಾಗಿದ್ದು, ಇಲ್ಲಿ ಭಗಂಡೇಶ್ವರ, ಶಿವ, ಸುಬ್ರಹ್ಮಣ್ಯ, ವಿಷ್ಣು, ಗಣಪತಿ ದೇವಾಲಯಗಳಿವೆ. ಭಗಂಡ ಮಹರ್ಷಿ ತಪಸ್ಸು ಮಾಡಿದ ಸ್ಥಳವಾದುದರಿಂದ ಭಾಗಮಂಡಲ ಎಂಬ ಹೆಸರು ಬಂತು ಎನ್ನಲಾಗಿದೆ.

ಭಾಗಮಂಡಲವನ್ನು ದಕ್ಷಿಣದ ಕಾಶಿ ಎಂಬುವುದಾಗಿಯೂ ಕರೆಯುತ್ತಾರೆ. ಕಾವೇರಿ ತೀರ್ಥೋದ್ಭವದ ಸಮಯದಲ್ಲಿ ಭಾಗಮಂಡಲ ಜನಸಂದಣಿಯಿಂದ ಕೂಡಿರುತ್ತದೆ. ಈ ಸಂದರ್ಭ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ಕಾರ್ಯವೂ ನಡೆಯುತ್ತದೆ. ತುಲಾಸಂಕ್ರಮಣದ ಒಂದು ತಿಂಗಳ ಕಾಲ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ನಂದಾದೀಪ ಉರಿಸಲಾಗುತ್ತದೆ. ಭಕ್ತರು ತಾವು ತರುವ ತುಪ್ಪವನ್ನು ಈ ದೀಪಕ್ಕೆ ಹಾಕುತ್ತಾರೆ. ಹಾಗೆಯೇ ಅಕ್ಕಿಯನ್ನು ಕೂಡ ಇಲ್ಲಿನ ಅಕ್ಷಯ ಭಂಡಾರಕ್ಕೆ ಹಾಕಿ ತಮ್ಮ ಮನೆಯ ಕಣಜದಲ್ಲಿ ಸದಾ ಭತ್ತ ತುಂಬಿರುವಂತೆ ಬೇಡಿಕೊಳ್ಳುತ್ತಾರೆ.

 ಇತಿಹಾಸದ ಕಥೆ ಹೇಳುವ ಭೀಮನಕಲ್ಲು, ಸಲಾಂಕಟ್ಟೆ

ಇತಿಹಾಸದ ಕಥೆ ಹೇಳುವ ಭೀಮನಕಲ್ಲು, ಸಲಾಂಕಟ್ಟೆ

ಇನ್ನು ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಸಿಗುವ ವ್ಯೂ ಪಾಯಿಂಟ್, ಭೀಮನಕಲ್ಲು, ಸಲಾಂಕಟ್ಟೆ ಎಲ್ಲವೂ ಇತಿಹಾಸದ ಕಥೆ ಹೇಳುತ್ತವೆ. ತಲಕಾವೇರಿಗೆ ದಂಡೆತ್ತಿ ಬಂದಿದ್ದ ಟಿಪ್ಪು ಸುಲ್ತಾನನ ಸೈನಿಕರ ಮೇಲೆ ಜೇಜುನೊಣಗಳು ದಾಳಿ ಮಾಡಿ ಹಿಮ್ಮೆಟ್ಟಿಸಿದ್ದವಂತೆ. ಹೀಗಾಗಿ ಅಲ್ಲಿನ ಕಲ್ಲಿಗೆ ಸಲಾಂ ಮಾಡಿ ಹಿಂತಿರುಗಿದನಂತೆ. ಅದುವೇ ಸಲಾಂ ಕಟ್ಟೆಯಾಗಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಎಲ್ಲರಿಗೂ ತಲಕಾವೇರಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗಮಂಡಲ ತಲಕಾವೇರಿಗೆ ಆಗಮಿಸುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+