ಬಿಡದಿ ತಟ್ಟೆ ಇಡ್ಲಿ ಹೋಟೆಲ್ ಉದ್ಯಮಕ್ಕೆ ಕಂಟಕವಾದ ಬೈಪಾಸ್ ಹೆದ್ದಾರಿ
ರಾಮನಗರ, ಸೆಪ್ಟೆಂಬರ್ 20: ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಉತ್ತಮ ಸಂಪರ್ಕ ರಸ್ತೆಗಳು ನಿರ್ಮಾಣ ಮಾಡಲಾಗುತ್ತದೆ. ಅದರೆ ಬೆಂಗಳೂರು ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದಾಗಿ ಬಿಡದಿ ತಟ್ಟೆ ಇಡ್ಲಿ ಹೋಟೆಲ್ಗಳು ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, ಇದನ್ನೇ ನಂಬಿದ್ದ ನೂರಾರು ಕುಟುಂಬಗಳು ಬೀದಿ ಪಾಲಾಗುವ ಭೀತಿಯಲ್ಲಿದ್ದಾರೆ.
ಕಳೆದ 70 ವರ್ಷಗಳಿಂದ ಪ್ರವಾಸಿಗರ ಸಾಂಪ್ರದಾಯಿಕ ತಿಂಡಿ ಎಂದೇ ಖ್ಯಾತಿ ಪಡೆದಿರು ಬಿಡದಿಯ ಮೃದು ತಟ್ಟೆ ಇಡ್ಲಿಯ ಸವಿಗೆ ಮಾರು ಹೋಗದವರೇ ಇಲ್ಲ. ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಹೊರಟ ಪ್ರವಾಸಿಗರು ಬಿಡದಿಯಲ್ಲಿ ತಟ್ಟೆ ಇಡ್ಲಿ ತಿಂಡಿ ತಿಂದು ನಂತರ ತಮ್ಮ ನೆಚ್ಚಿನ ತಾಣಗಳತ್ತ ತೆರಳುವುದು ವಾಡಿಕೆ. ಅದರೆ ಇದೀಗ ಈ ತಟ್ಟೆ ಇಡ್ಲಿ ಉದ್ಯಮದ ಮೇಲೆ ಹೆದ್ದಾರಿಯ ಕರಿನೆರಳು ಬೀರಿದೆ. ತಟ್ಟೆ ಇಡ್ಲಿ ಹೋಟೆಲ್ ಉದ್ಯಮವನ್ನು ನಂಬಿದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ನೀರಿನಲ್ಲಿ ತೇಲುತ್ತಿರುವ ಚನ್ನಪಟ್ಟಣ ಸರ್ಕಾರಿ ಶಾಲೆ: ತರಗತಿಗಳು ದೇವಸ್ಥಾನಕ್ಕೆ ಸ್ಥಳಾಂತರ
ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಿಂದ ಈ ತಟ್ಟೆ ಇಡ್ಲಿ ಉದ್ಯಮದ ಮೇಲೆ ಬಾರಿ ಹೊಡೆತ ಬಿದ್ದಿದೆ. ಬೆಂಗಳೂರಿನಿಂದ ಬರುವ ಪ್ರವಾಸಿಗರು ಬಿಡದಿ ಪಟ್ಟಣ ಪ್ರವೇಶ ಮಾಡದೆ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಬೈಪಾಸ್ ಮೂಲಕ ಮೈಸೂರಿನತ್ತ ತರೆಳುತ್ತಿರುವ ಹಿನ್ನಲೆಯಲ್ಲಿ ಬಿಡದಿಯ ತಟ್ಟೆ ಇಡ್ಲಿ ಹೋಟೆಲ್ ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿ ಕಾಣುತ್ತಿವೆ.
ಬೆಂಗಳೂರಿನ ಸನಿಹದಲ್ಲಿದರುವ ಬಿಡದಿ ಎಂದರೆ ಥಟ್ ಅಂತಾ ನೆನಪಿಗೆ ಬರೋದು ಇಲ್ಲಿನ ಮೃದವಾದ ತಟ್ಟೆ ಇಡ್ಲಿ. ಬಿಡದಿಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು 40 ಹೆಚ್ಚು ತಟ್ಟೆ ಇಡ್ಲಿ ಹೋಟೆಲ್ಗಳಿದ್ದು ಕೆಲವೊಂದು ತಾತಾ ಮುತ್ತಾತರ ಕಾಲದಿಂದ ತಟ್ಟೆ ಇಡ್ಲಿ ಹೋಟೆಲ್ ಉದ್ಯಮ ಮಾಡಿಕೊಂಡು ಬರುತ್ತಿದ್ದಾರೆ. 40 ಹೋಟೆಲ್ಗಳಲ್ಲಿ ನೂರಾರು ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದರು. ಇದೀಗ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ.
ಬಿಕೋ ಎನ್ನುತ್ತಿರುವ ಹೋಟೆಲ್ಗಳು
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹೆಚ್ಚಾಲ ದಾಟಿದ ನಂತರ ವಂಡರಲಾ ಗೇಟ್ ನಿಂದ ಹಿಡಿದು ಜನತಾ ಸೈಟ್ ವರೆಗೆ ಹೆದ್ದಾರಿ ಪಕ್ಕದಲ್ಲಿ ವಂಡರ್ಲಾ ಗೇಟ್, ಕಡುಮನೆ, ಬೈರಮಂಗಲ, ಕೆಂಚನಕುಪ್ಪೆ ಹಾಗೂ ಬಿಡದಿ ಪಟ್ಟಣ ಸೇರಿದಂತೆ ಹಲವು ಕಡೆ ಸುಮಾರು 40 ಕ್ಕೂ ಹೆಚ್ಚು ತಟ್ಟೆಇಡ್ಲಿ ಹೋಟೆಲ್ಗಳಿವೆ. ನೂತನ ಬೈಪಾಸ್ ಬಿಡದಿಯ ಹೊರ ವಲಯದಲ್ಲಿ ಹಾದು ಹೋಗಿರುವುದರಿಂದ ಹೋಟೆಲ್ಗಳ ವ್ಯವಹಾರ ಕುಸಿಯಲಾರಂಭಿಸಿದೆ.
ಹಿಂದೆಯಿದ್ದ ಬೆಂಗಳೂರು ಮೈಸೂರು ಹೆದ್ದಾರಿ ಬಿಡದಿ ಪಟ್ಟಣದ ಮಧ್ಯಬಾಗದಲ್ಲಿ ಹಾದು ಹೋಗುತ್ತಿತ್ತತ್ತು. ಪ್ರವಾಸಿಗರು ಬಿಡದಿ ಮೂಲಕ ಹಾದು ಹೋಗುವಾಗ ತಟ್ಟೆ ಇಡ್ಲಿ ಸವಿಯುತ್ತಿದ್ದರು ಹಾಗಾಗಿ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಇದೀಗ ನೂತನ ಬೆಂಗಳೂರು- ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಮಾರ್ಗ ಬಿಡದಿ ಪಟ್ಟಣದ ಹೊರ ಹೊಲಯದಲ್ಲಿನಲ್ಲಿ ಹಾದು ಹೋಗಿದೆ. ಇದರಿಂದಾಗಿ ವಾಹನಗಳು ಬೈಪಾಸ್ ಮೂಲಕ ಹೋಗುತ್ತಿರುವ ಕಾರಣ ಹಳೆಯ ಹೆದ್ದಾರಿ ಖಾಲಿಯಾಗಿದೆ.
ಪ್ರವಾಸಿಗರ ಮನಗೆದ್ದಿದ್ದ ಬಿಡದಿ ಇಡ್ಲಿ
ಬಿಡದಿಯ ತಟ್ಟೆ ಇಡ್ಲಿಯ ಸವಿ ರುಚಿಯನ್ನ ಸವಿಯಲು ಕೇವಲ ರಾಜ್ಯ ಪ್ರವಾಸಿಗರಷ್ಟೇ ಅಲ್ಲದೇ ಹೊರ ರಾಜ್ಯ ಪ್ರವಸಿಗರು ಕೂಡ ಬಂದು ಬಿಡದಿಯ ತಟ್ಟೆ ಇಡ್ಲಿ ಬೆಣ್ಣೆ ಸವಿಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಬಿಡದಿಯ ತಟ್ಟೆ ಇಡ್ಲಿ ಸವಿಗೆ ತಮಿಳುನಾಡು, ಆಂದ್ರಪ್ರದೇಶ, ಕೇರಳ, ದೆಹಲಿ ಸೇರಿದಂತೆ ಇನ್ನಿತರ ಹಲವು ಹೊರ ರಾಜ್ಯದ ಪ್ರವಾಸಿಗರು ಮಾರು ಹೋಗಿದ್ದರು.
ಬಿಡದಿ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಬೈಪಾಸ್ ಹೆದ್ದಾರಿಯನ್ನು ವಾಹನಗಳ ಸಂಚಾರಕ್ಕೆ ಕಳೆದ 15 ದಿನಗಳಿಂದ ಮುಕ್ತವಾಗಿದೆ. ಬಹುತೇಕ ವಾಹನಗಳು ಸುಗಮ ಸಂಚಾರದ ಹಿನ್ನಲೆಯಲ್ಲಿ ಹೊಸ ಬೈಪಾಸ್ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಹಿನ್ನಲೆಯಲ್ಲಿ ಹಳೆ ಪಟ್ಟಣದ ಮಧ್ಯಬಾಗದಲ್ಲಿರುವ ಬೀಕೂ ಎನ್ನುತ್ತಿವೆ . ಅಲ್ಲದೇ ಹೆದ್ದಾರಿ ಪಕ್ಷದಲ್ಲಿದ್ದ ತಟ್ಟೆ ಇಡ್ಲಿ ಹೋಟೆಲ್ ಸೇರಿದಂತೆ ಸಣ್ಣಸಣ್ಣ ಅಂಗಡಿಗಳು, ಪೆಟ್ರೋಲ್ ಬಂಕ್ ವ್ಯಾಪಾರ ಇಲ್ಲದೇ ನಷ್ಟ ಅನುಭವಿಸುತ್ತಿವೆ.
ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಹತ್ತಾರು ಕಾರ್ಮಿಕರು
ಬಿಡದಿ ತಟ್ಟೆ ಇಡ್ಲಿ ಉದ್ಯಮವನ್ನು 5 ತಲೆಮಾರುಗಳಿಂದ ನಡೆಸುತ್ತಿದ್ದೇವೆ. ಹೆದ್ದಾರಿ ಪಕ್ಕದಲ್ಲಿ 40 ಕ್ಕೂ ಹೆಚ್ಚು ಹೋಟೆಲ್ ಇದ್ದು ಬೈಪಾಸ್ ಸಂಚಾರ ಆರಂಭವಾದ ಕಳೆದ 15 ದಿನಗಳಲ್ಲಿ 4 ಹೋಟೆಲ್ಗಳು ಬಾಗಿಲು ಮುಚ್ಚಿದ್ದಾರೆ. ಪ್ರತಿಯೊಂದು ಹೋಟೆಲ್ ನಲ್ಲಿ ಅಡುಗೆ ಮಾಡುವ ಭಟ್ಟರು, ಜನರಿಗೆ ತಂಡಿ ಸರಬರಾಜು ಮಾಡುವ ಸಿಬ್ಬಂದಿ, ಕ್ಲೀನಿಂಗ್ ಮಾಡುವ ಮಹಿಳೆಯರು ಹೀಗೆ ಸರಾಸರಿ ಒಂದು ಹೋಟೆಲ್ ನಲ್ಲಿ 15 ಮಂದಿ ಕಾರ್ಮಿಕರು ಕೆಲಸ ಕಳೆದು ಕೊಂಡು ನಿರುದ್ಯೋಗಿಗಳಾಗಿದ್ದಾರೆ.
ಇನ್ನೂ ಹೋಟೆಲ್ಗಳ ವ್ಯಾಪಾರ 90% ಕುಸಿದ ಪರಿಣಾಮ ಕಾರ್ಮಿಕರ ಕೆಲಸಕ್ಕೆ ಸಂಚಕಾರ ಬಂದಿದ್ದು. ಹೋಟೆಲ್ ಮಾಲೀಕರು ವ್ಯಾಪಾರ ಇಲ್ಲದ ಕಾರಣ ನೀಡಿ ಅರ್ಧಕ್ಕೆ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತಗೆದು ಹಾಕಿದ್ದಾರೆ. ಬೈಪಾಸ್ ಹೆದ್ದಾರಿಯಿಂದಾಗಿ ಕೇವಲ ಹೋಟೆಲ್ ಕಾರ್ಮಿಕರಿಗೆ ಮಾತ್ರವಲ್ಲದೆ ಪಟ್ಟಣದ ದಿನಸಿ ಅಂಗಡಿಗಳು, ಗ್ಯಾಸ್ ಏಜೆನ್ಸಿಗಳು, ತರಕಾರಿ ಅಂಗಡಿಗಳು, ಹಾಲಿನ ಬೂತ್ಗಳಿಗೂ ಸಹ ನಷ್ಟದ ಬಿಸಿ ತಟ್ಟಿದೆ.
ಹೋಟೆಲ್ ಉದ್ಯಮವನ್ನೇ ನಂಬಿ ಜೀವನ
ತಟ್ಟೆ ಇಡ್ಲಿ ಹೋಟೆಲ್ ಉದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ನಾವಷ್ಟೆ ಅಲ್ಲದೇ ಇಡ್ಲಿ ವ್ಯಾಪಾರವನ್ನೆ ನಂಬಿ ಹಲವು ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ನಮಗೆ ಈ ವೃತ್ತಿಯನ್ನ ಬಿಟ್ಟು ದಿಢೀರ್ ಬೇರೆ ವೃತ್ತಿಯ ಕಡೆಗೆ ಹೋಗುವುದು ಕಷ್ಟ. ತಾತ ಮುತ್ತಾತರ ಕಾಲದಿಂದ ಬೇರೆ ವೃತ್ತಿ ಕಾಣದೆ ಇದನ್ನೇ ಕುಲ ಕಸುಬಾಗಿದೆ ಮಾಡಿಕೊಂಡಿದ್ದೆವು ಎಂದು ಆತಂಕ ವ್ಯಕ್ತಪಡಿಸಿದರು.
ಅಭಿವೃದ್ಧಿ ದೃಷ್ಟಿಯಿಂದ ಹೆದ್ದಾರಿ ನಿರ್ಮಾಣವನ್ನು ನಾವು ವಿರೋಧಿಸುವುದಿಲ್ಲ, ಅದರೆ ಬೈಪಾಸ್ ಅನ್ನು ಬಿಡದಿ ಪಟ್ಟಣದಲ್ಲಿ ನಿರ್ಮಾಣ ಮಾಡಿದ್ದರೆ ಯಾವುದೇ ಸಮಸ್ಯೆ ಬರುತ್ತಿರಲ್ಲಿ. ಅದರೆ ಇದಾವುದನ್ನು ಚಿಂತಿಸದೆ ನಮ್ಮ ಬದುಕಿನ ಮೇಲೆ ಸರಕಾರ ಬರೆ ಎಳೆದಿದೆ. ಇನ್ನಾದರೂ ದಶಪಥ ಹೆದ್ದಾರಿಯಿಂದ ಸುಗಮವಾಗಿ ಪ್ರವಾಸಿಗರು ಬಿಡದಿ ಪಟ್ಟಣ ಮಧ್ಯೆ ಹಾದುಹೋಗುವ ರೀತಿ ವ್ಯವಸ್ಥೆ ಮಾಡಿದರೆ ಎಲ್ಲಾ ರೀತಿಯ ಉದ್ಯಮಗಳು ಚೇತರಿಸಿಕೊಳ್ಳುತ್ತವೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.