PMO ಕಚೇರಿಗೆ ಹೊಸ ಸೇರ್ಪಡೆ ಆಮ್ರಪಾಲಿ ಐಎಎಸ್
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವ ನೇಮಕಾತಿ ಸಮಿತಿ (ಎಸಿಸಿ) ಇತ್ತೀಚೆಗೆ ಮೂವರು ಐಎಎಸ್ ಅಧಿಕಾರಿಗಳನ್ನು ಪ್ರಧಾನಿ ಸಚಿವಾಲಯಕ್ಕೆ ನೇಮಿಸಿದೆ. ನೇಮಕಾತಿ ಪತ್ರ ಸಿಕ್ಕಿದ ಮೂರು ವಾರಗಳಲ್ಲಿ ದೆಹಲಿಗೆ ತೆರಳಿ ಅಧಿಕಾರ ಸ್ವೀಕರಿಸಲು ಸೂಚಿಸಲಾಗಿದೆ.
ಮೂವರು ಅಧಿಕಾರಿಗಳ ಪೈಕಿ ಆಂಧ್ರಪ್ರದೇಶ ಕೆಡರ್ನ 2010ರ ಬ್ಯಾಚಿನ ಐಎಎಸ್ ಅಧಿಕಾರಿ ಆಮ್ರಪಾಲಿ ಕಾಟ ಅವರ ಆಯ್ಕೆ ಕುತೂಹಲಕಾರಿಯಾಗಿದೆ. ವಿಕಾರಾಬಾದ್ ಸಬ್ ಕಲೆಕ್ಟರ್, ರಂಗಾರೆಡ್ಡಿ ಜಿಲ್ಲೆಯಲ್ಲಿ ಜಂಟಿ ಕಲೆಕ್ಟರ್, ವಾರಂಗಲ್ ನಗರ ಜಿಲ್ಲಾಧಿಕಾರಿ, ರಾಜ್ಯ ಚುನಾವಣಾ ಆಯೋಗ ಸಿಇಒ ಆಗಿ ಅನುಭವ ಹೊಂದಿದ್ದಾರೆ. ಇದಲ್ಲದೆ ಕೇಂದ್ರ ರಾಜ್ಯಸಚಿವ ಜಿ ಕಿಶನ್ ರೆಡ್ಡಿ ಅವರ ಖಾಸಗಿ ಕಾರ್ಯದರ್ಶಿಯಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ಸದ್ಯಕ್ಕೆ ಕ್ಯಾಬಿನೆಟ್ ಸೆಕ್ರೆಟರಿಯಟ್ ನಲ್ಲಿ ಉಪಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ.
ಜನಪ್ರಿಯ ಐಎಎಎಸ್ ಅಧಿಕಾರಿಗಳ ಪೈಕಿ ಆಮ್ರಪಾಲಿ ಹೆಸರು ಮುಂಚೂಣಿಯಲ್ಲಿರುತ್ತದೆ. ಹಲವು ಬಾರಿ ಮಾಧ್ಯಮಗಳಲ್ಲಿ ಕೇಳಿ ಬಂದಿದೆ. ಅದು ಪಾಸಿಟಿವ್, ನೆಗಟಿವ್ ಇರಬಹುದು.
ಪ್ರಕಾಶಂ ಜಿಲ್ಲೆ ರೈಲ್ವೆ ಗೇಟ್ ಅಗ್ರಹಾರ ಆಮ್ರು
ಪ್ರಕಾಶಂ ಜಿಲ್ಲೆ ರೈಲ್ವೆ ಗೇಟ್ ಅಗ್ರಹಾರದಲ್ಲಿ ಜನಿಸಿದ ಆಮ್ರಪಾಲಿ ಅವರ ತಂದೆ ಆಂಧ್ರಪ್ರದೇಶ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ವೆಂಕಟ ರೆಡ್ಡಿ ಕಾಟ. ವೆಂಕಟ ರೆಡ್ಡಿ ಅವರು ತಮ್ಮ ಅಕ್ಕನ ಮಗಳು ಪದ್ಮಾವತಿಯನ್ನೇ ಮದುವೆಯಾದರು. ತಾವು ಓದಿದ ಕಾಲೇಜು-ವಿವಿಯಲ್ಲೇ ಪ್ರೊಫೆಸರ್ ಆದವರು.
ಆಮ್ರಪಾಲಿ ಅವರ ಅಕ್ಕ 2002 ಬ್ಯಾಚಿನ ಐಎಎಸ್ ಅಧಿಕಾರಿ ಮಾನಸ ಗಂಗೋತ್ರಿ(202ನೇ Rank) ಸದ್ಯ ಕರ್ನಾಟಕದ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಮಾನಸ ಪತಿ ತಮಿಳುನಾಡು ಕೆಡರ್ ಐಎಎಸ್ ಅಧಿಕಾರಿಯಾಗಿದ್ದು ತಮಿಳುನಾಡಿನಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಐಐಎಂ ಬೆಂಗಳೂರಿನಲ್ಲೂ ವ್ಯಾಸಂಗ
ಆಮ್ರಪಾಲಿ ಐಐಟಿ ಮದ್ರಾಸ್(ಸಿವಿಎಲ್ ಇಂಜಿನಿಯರಿಂಗ್) ನಿಂದ ಬಿ.ಟೆಕ್, ಐಐಎಂ ಬೆಂಗಳೂರು(2000-2004)ಸಂಸ್ಥೆಯಿಂದ ಪಿ.ಜಿ ಎಂಬಿಎಗಳಿಸಿದ್ದಾರೆ. ಯುಪಿಎಸ್ಸಿ ಬರೆದು ಭಾರತದಲ್ಲಿ 39ನೇ ಶ್ರೇಯಾಂಕ ಗಳಿಸಿ, ಪರೀಕ್ಷೆ ಕ್ಲಿಯರ್ ಮಾಡಿ ಐಎಎಸ್ 2009 ಬ್ಯಾಚಿನಿಂದ ತೇರ್ಗಡೆಯಾದರು. 1982ರಲ್ಲಿ ಜನಿಸಿದ ಆಮ್ರಪಾಲಿ ಅವರು ಐಪಿಎಸ್ ಅಧಿಕಾರಿ ಸಮೀರ್ ಶರ್ಮ ಅವರನ್ನು ವರಿಸಿದರು.
ತಂತ್ರಜ್ಞಾನದ ಮೂಲಕ ಬದಲಾವಣೆ ತಂದರು
ಮಸ್ಸೌರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಮೊದಲ ತರಬೇತಿ ಪಡೆದು ಪ್ರೊಬೆಷನರಿ ದಿನಗಳನ್ನು ಕಳೆದ ಬಳಿಕ ಎಬಿಎನ್ ಅಮ್ರೋದಲ್ಲಿ ಜ್ಯೂನಿಯರ್ ರಿಲೇಷನ್ ಶಿಪ್ ಬ್ಯಾಂಕರ್ ಆಗಿ ವೃತ್ತಿ ಆರಂಭಿಸಿದರು. ವಿಕಾರಾಬಾದ್ ಉಪ ಜಿಲ್ಲಾಧಿಕಾರಿಯಾದ ಬಳಿಕ ಸಾರ್ವಜನಿಕ ಸೇವಾ ಬದುಕಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ತಂತ್ರಜ್ಞಾನದ ಮೂಲಕ ಕಂದಾಯ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆ ಆಡಳಿತ ಸುಧಾರಿಸಿದರು.
ಆಮ್ರಪಾಲಿಗೆ ಜನಪ್ರಿಯತೆಯೇ ಮುಳುವಾಗಿತ್ತು
2017ರಲ್ಲಿ ಬಾಹುಬಲಿ 2 ಚಿತ್ರವನ್ನು ತನ್ನ ಸಿಬ್ಬಂದಿಗಳಿಗೆ ತೋರಿಸಲು ಇಡೀ ಚಿತ್ರಮಂದಿರವನ್ನು ಬುಕ್ ಮಾಡಿದ್ದರು. ಆದರೆ, ಇಡೀ ಚಿತ್ರಮಂದಿರದ ಟಿಕೆಟ್ ಕಾಯ್ದಿರಿಸಲು ಆಡಳಿತ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
2018ರಲ್ಲಿ ಗಣತಂತ್ರ ದಿನಾಚರಣೆಯಂದು ವಾರಂಗಲ್ ಅರ್ಬನ್ ಕಲೆಕ್ಟರ್ ಆಗಿದ್ದ ಕಾಲದಲ್ಲಿ ಗಣತಂತ್ರದಿನ ಭಾಷಣದ ವೇಳೆ ತೆಲುಗು ಪದ ಉಚ್ಚಾರಣೆ ತಿಳಿಯದೆ ನಕ್ಕು ಮಾತು ಮುಂದುವರೆಸಿದ್ದರಿಂದ ಕೆಟ್ಟದಾಗಿ ಕಾಮೆಂಟ್, ಟ್ರಾಲ್ಸ್ ಎದುರಿಸಬೇಕಾಯಿತು.
ವಾರಂಗಲ್ ನಲ್ಲಿ ನೀಡಿದ್ದ ಸರ್ಕಾರಿ ಬಂಗಲೆ(ಸುಮಾರು 133 ವರ್ಷ ಹಳೆಯದು)ಯಲ್ಲಿ ಭೂತಚೇಷ್ಟೆ ಎಂದು ಆಮ್ರಪಾಲಿ ದೆವ್ವದ ಕಥೆ ಹೇಳಿದ್ದರು.
Recommended Video
ಪ್ರಧಾನಿ ಸಚಿವಾಲಯಕ್ಕೆ ಹೊಸಬರ ನೇಮಕ
ರಘುರಾಜ್ ರಾಜೇಂದ್ರನ್, 2004ರ ಮಧ್ಯಪ್ರದೇಶ ಕೆಡರ್ ಅಧಿಕಾರಿ ಪಿಎಂಒ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಕೇಂದ್ರ ಉಕ್ಕು ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಕಾರ್ಯದರ್ಶಿಯಾಗಿದ್ದರು. ಮತ್ತೊಬ್ಬ ಅಧಿಕಾರಿ ಮಂಗೇಶ್ ಘಿಲ್ಡಿಯಾಲ್ 2012ರ ಉತ್ತರಾಖಂಡ್ ಕೆಡರ್ ಐಎಎಸ್ ಅಧಿಕಾರಿಯಾಗಿದ್ದು ಪಿಎಂಒನಲ್ಲಿ ಅಂಡರ್ ಸೆಕ್ರೆಟರಿಯಾಗಿ ನೇಮಕವಾಗಿದ್ದಾರೆ.