ಓವೈಸಿ ಕರ್ನಾಟಕ ಎಂಟ್ರಿ ಸಮಾಚಾರ ಮತ್ತು ಗೌಡ್ರ ಲೆಕ್ಕಾಚಾರ

Recommended Video

      ಕರ್ನಾಟಕ ಚುನಾವಣೆ 2018 : ಮುಸ್ಲಿಂ ನಾಯಕ ಅಕ್ಬರುದ್ದೀನ್ ಓವೈಸಿ ಕರ್ನಾಟಕಕ್ಕೆ | Oneindia Kannada

      ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ವೋಟ್ ಬ್ಯಾಂಕಿನ ನೈಂಟಿ ಪರ್ಸೆಂಟ್ ಷೇರುಗಳು ತಮಗೇ ಗ್ಯಾರಂಟಿ ಎಂಬ ಕಾಂಗ್ರೆಸ್ ನಂಬಿಕೆಯನ್ನು ಅಲುಗಾಡಿಸಲು ಅಕ್ಬರುದ್ದೀನ್ ಓವೈಸಿ ಕರ್ನಾಟಕಕ್ಕೆ ಬರುತ್ತಿದ್ದಾರಾ?

      ದಕ್ಷಿಣ ಭಾರತದ ಮುಸ್ಲಿಂ ನಾಯಕ, ಎ.ಐ.ಎಂ.ಐ.ಎಂ ಪಕ್ಷದ ವರಿಷ್ಠ, ಅಕ್ಬರುದ್ದೀನ್ ಓವೈಸಿ ಈಗಾಗಲೇ ಕರ್ನಾಟಕದ ರಾಜಕಾರಣಕ್ಕೆ ಅಡಿ ಇಡುವ ಸಂಬಂಧ ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಎರಡು ಸುತ್ತಿನ ಮಾತುಕತೆ ನಡೆಸಿರುವುದು ಬಹುತೇಕರಿಗೆ ಗೊತ್ತಿಲ್ಲ.

      ಅಂದ ಹಾಗೆ ರಾಷ್ಟ್ರ ರಾಜಕಾರಣದ ವಿಷಯ ಬಂದಾಗ ಹಿಂದೊಮ್ಮೆ ದೆಹಲಿಯ ಜಾಮಾ ಮಸೀದಿಯ ಷಾಹಿ ಇಮಾಮ್ ಹೊರಡಿಸುವ ಆದೇಶಗಳಿಗೆ ಹೆಚ್ಚು ಶಕ್ತಿ ಇರುತ್ತಿತ್ತು. ದೆಹಲಿಯ ಜಾಮಾ ಮಸೀದಿಗೆ ಷಾಹಿ ಇಮಾಮ್ ಗಳನ್ನು ನೇಮಕ ಮಾಡುವ ಪರಂಪರೆ ಶುರುವಾಗಿದ್ದು ಮುಘಲ್ ದೊರೆ ಷಹಜಹಾನ್ ಕಾಲದಲ್ಲಿ.
      ಈಗಿರುವ ಷಾಹಿ ಇಮಾಮ್ ಹದಿಮೂರನೆಯವರು. ಹೆಸರು ಬುಕಾರಿ.

      ತಮ್ಮ ಬೆಂಕಿಯುಂಡೆಯಂತಹ ಮಾತುಗಳಿಂದಲೇ ಕೆಲ ವರ್ಷಗಳ ಹಿಂದೆ ಮುಸ್ಲಿಂ ಮತದಾರರ ಮೇಲೆ ಅಪಾರ ಪ್ರಭಾವ ಬೀರಿದ್ದ ಬುಕಾರಿ ಅವರಿಗೀಗ ಮುಂಚಿನ ಪವರ್ ಇಲ್ಲ. ಆದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಅವರು ನಿಂತಿರುವುದು ರಹಸ್ಯವೇನೂ ಅಲ್ಲ.

      ಹಾಗಂತಲೇ ಅವರು ಕರ್ನಾಟಕಕ್ಕೆ ಒಂದು ತಂಡವನ್ನು ಕಳಿಸಿ, ಯಾವ ಕಾರಣಕ್ಕೂ ಮುಸ್ಲಿಂ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಿ ಎಂದು ಸ್ಥಳೀಯ ಮುಸ್ಲಿಂ ಪ್ರಮುಖರಿಗೆ ಬುಕಾರಿ ಸಂದೇಶ ರವಾನಿಸಿದ್ದಾರೆ. ಹೀಗೆ ಮುಸ್ಲಿಂ ಮತಗಳು ವಿಭಜನೆಯಾದ ಪರಿಣಾಮವಾಗಿಯೇ ಉತ್ತರಪ್ರದೇಶದಂತಹ ರಾಜ್ಯದಲ್ಲಿ ಬಿಜೆಪಿಗೆ ಅಂತಹ ಪ್ರಚಂಡ ಗೆಲುವು ದಕ್ಕಿದ್ದು.

      ಕರ್ನಾಟಕದಲ್ಲಿ ಅದು ಕಮಲ ಪಾಳೆಯದ ಟೆಕ್ನಿಕ್ಕು ಸಫಲವಾಗದಂತೆ ನೋಡಿಕೊಳ್ಳಿ. ಅರ್ಥಾತ್, ಮುಸ್ಲಿಂ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಿ. ಒಬ್ಬ ವ್ಯಕ್ತಿಯಾಗಿ, ಸಂಘಟನೆಯ ಪರವಾಗಿ ಅಥವಾ ಕಾಂಗ್ರೆಸ್ ವಿರುದ್ಧವಾಗಿ ಬೇರೆ ಯಾವ ಪಕ್ಷದಿಂದ ಮುಸ್ಲಿಮರು ಸ್ಪರ್ಧಿಸಿದರೂ ಅವರಿಗೆ ಮತ ಹಾಕಬೇಡಿ. ಕಾಂಗ್ರೆಸ್ ಪಕ್ಷವೊಂದೇ ನಿಮ್ಮ ಆಯ್ಕೆಯಾಗಿರಲಿ ಎಂದು ಬುಕಾರಿ ಕಳಿಸಿದ ಸಂದೇಶದ ವಾಸನೆ ರಾಜಕೀಯ ವಲಯಗಳಿಗೆ ಬಡಿದು ಹಲ ದಿನಗಳು ಕಳೆದಿವೆ.

      ಕುತೂಹಲ ಹುಟ್ಟಿಸಿರುವ ಗೌಡ-ಓವೈಸಿ ಮೈತ್ರಿ

      ಕುತೂಹಲ ಹುಟ್ಟಿಸಿರುವ ಗೌಡ-ಓವೈಸಿ ಮೈತ್ರಿ

      ಬುಕಾರಿ ಈ ಸೂಚನೆ ರವಾನಿಸುತ್ತಿದ್ದ ಕಾಲದಲ್ಲೇ ಅಕ್ಬರುದ್ದೀನ್ ಓವೈಸಿ ಅವರು ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿತು. ಆದರೆ ಈ ವದಂತಿಯನ್ನು ಬಿಜೆಪಿಯೂ ತಳ್ಳಿ ಹಾಕಿತು. ಅಕ್ಬರುದ್ದೀನ್ ಓವೈಸಿ ಕೂಡಾ ತಳ್ಳಿ ಹಾಕಿದರು.
      ಯಾರೇನೇ ಹೇಳಿದರೂ ದಕ್ಷಿಣ ಭಾರತದಲ್ಲೀಗ ಸದ್ಯದ ಮಟ್ಟಿಗೆ ಅಕ್ಬರುದ್ದೀನ್ ಓವೈಸಿ ಅವರಂತಹ ಪ್ರಭಾವಿ ಮುಸ್ಲಿಂ ನಾಯಕರಿಲ್ಲ. ಅಂತಹ ನಾಯಕ ಈಗ ಕರ್ನಾಟಕದ ರಾಜಕಾರಣಕ್ಕೆ ಅಡಿ ಇಡಲು ಬಯಸಿರುವುದು ಮತ್ತು ಅದಕ್ಕೆ ಪೂರಕವಾಗಿ ಮಾಜಿ ಪ್ರಧಾನಿ ದೇವೇಗೌಡರ ಜತೆ ಮಾತನಾಡಿರುವುದು ನಿಜಕ್ಕೂ ಕುತೂಹಲಕಾರಿ ವಿಷಯ.

      ಜೆಡಿಎಸ್ ಜೊತೆ ಓವೈಸಿ ಏಕೆ ಮೈತ್ರಿ?

      ಜೆಡಿಎಸ್ ಜೊತೆ ಓವೈಸಿ ಏಕೆ ಮೈತ್ರಿ?

      ಅಕ್ಬರುದ್ದೀನ್ ಓವೈಸಿ ಹೀಗೆ ಏಕಾಏಕಿಯಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಏಕೆ ಮುಂದಾದರು? ಅನ್ನುವುದು ಪ್ರಶ್ನೆಯಾದರೂ, ಅವರು ಜೆಡಿಎಸ್ ಜತೆ ಒಪ್ಪಂದ ಮಾಡಿಕೊಂಡರೆ ಕಾಂಗ್ರೆಸ್ ಪಾಲಿಗೆ ಭದ್ರವಾಗಿ ಕಾಣುತ್ತಿರುವ ಮುಸ್ಲಿಂ ಮತ ಬ್ಯಾಂಕ್, ಸಣ್ಣ ಪ್ರಮಾಣದಲ್ಲಾದರೂ ತನ್ನ ಷೇರುಗಳನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಕಾಗಿ ಬರುತ್ತದೆ ಎನ್ನುವುದು ಮಾತ್ರ ನಿಜ.

      ಅಪನಗದೀಕರಣ, ಜಿಎಸ್ಟಿ ಮತ್ತು ಅಕ್ಬರುದ್ದಿನ್

      ಅಪನಗದೀಕರಣ, ಜಿಎಸ್ಟಿ ಮತ್ತು ಅಕ್ಬರುದ್ದಿನ್

      ಯಾಕೆಂದರೆ ಕೇಂದ್ರ ಸರ್ಕಾರದ ಡಿಮಾನಿಟೈಸೇಷನ್ ಮತ್ತು ಜಿ.ಎಸ್.ಟಿ ತೆರಿಗೆ ಪದ್ಧತಿಯಿಂದ ಮುಸ್ಲಿಮರಿಗೆ ದೊಡ್ಡ ಹೊಡೆತ ಬಿತ್ತು ಎಂದು ಅಕ್ಬರುದ್ದೀನ್ ಓವೈಸಿಯಷ್ಟು ಪರಿಣಾಮಕಾರಿಯಾಗಿ ಹೇಳಿದವರು ಮತ್ತು ಮುಂದೆ ಹೇಳುವವರು ರಾಜ್ಯ ಕಾಂಗ್ರೆಸ್ ನಲ್ಲಿಲ್ಲ.
      ಇದ್ದುದರಲ್ಲಿ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ನ ಸ್ಟಾರ್ ಕ್ಯಾಂಪೇನರ್ ಆದರೂ ಮುಸ್ಲಿಂ ಮತದಾರರ ಮೇಲೆ ಅವರು ಅಕ್ಬರುದ್ದೀನ್ ಓವೈಸಿ ಅವರಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುವುದು ಕಷ್ಟ.

      ಜಮೀರ್ ಗೆ ಪ್ರಾಧಾನ್ಯತೆ, ಕೆರಳಿದ ಇಬ್ರಾಹಿಂ

      ಜಮೀರ್ ಗೆ ಪ್ರಾಧಾನ್ಯತೆ, ಕೆರಳಿದ ಇಬ್ರಾಹಿಂ

      ಸಾಲದೆಂಬಂತೆ,ಕಾಂಗ್ರೆಸ್ ಕೋಟೆಯೊಳಗೆ ಈಗಾಗಲೇ ನುಗ್ಗಿರುವ ಶಾಸಕ ಜಮೀರ್ ಅಹ್ಮದ್ ಅವರಂತವರಿಗೆ ಸಿಎಂ ಸಿದ್ದರಾಮಯ್ಯ ನೀಡುತ್ತಿರುವ ಪ್ರಾಧಾನ್ಯ ಸಹಜವಾಗಿಯೇ ಇಬ್ರಾಹಿಂ ಅವರನ್ನು ಕೆರಳಿಸಿದೆ.
      ಹೀಗಾಗಿಯೇ ಅವರು ಇತ್ತೀಚೆಗೆ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭವಿಷ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲದ ಮಾತು ಎಂದು ಗೊತ್ತಿದ್ದ ಮೇಲೂ ಸಿ.ಎಂ.ಇಬ್ರಾಹಿಂ ಅವರು ಈ ಉದ್ದೇಶಕ್ಕಾಗಿಯೇ ದೇವೇಗೌಡರನ್ನು ಭೇಟಿ ಮಾಡಿದ್ದರು ಎಂದರೆ ನಂಬುವುದು ಕಷ್ಟ.

      ಸಿಎಂ ಇಬ್ರಾಹಿಂ ಮನದಲ್ಲಿ ಏನಿದೆಯೋ?

      ಸಿಎಂ ಇಬ್ರಾಹಿಂ ಮನದಲ್ಲಿ ಏನಿದೆಯೋ?

      ಅರ್ಥಾತ್, ಅಗತ್ಯ ಬಿದ್ದರೆ ಸಿ.ಎಂ.ಇಬ್ರಾಹಿಂ ಅವರೂ ಜೆಡಿಎಸ್ ಕಡೆ ವಾಲಬಹುದು. ಒಂದು ವೇಳೆ ವಾಲದಿದ್ದರೂ ಕಾಂಗ್ರೆಸ್ ನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡದೆ ತಟಸ್ಥರಾಗಿಬಿಡಬಹುದು.
      ಇಂತಹ ಕಾಲಘಟ್ಟದಲ್ಲಿ ಅಕ್ಬರುದ್ದೀನ್ ಓವೈಸಿ ಬಂದು ತಮ್ಮ ಬೆಂಕಿಯುಂಡೆಯಂತಹ ಮಾತುಗಳಿಂದ ಕರ್ನಾಟಕದ ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರಿದರೆ ಸಹಜವಾಗಿಯೇ ಇಪ್ಪತ್ತು ಪರ್ಸೆಂಟಿನಷ್ಟಾದರೂ ಮುಸ್ಲಿಂ ವೋಟುಗಳು ಜೆಡಿಎಸ್ ಗೆ ಬರಬಹುದು ಎಂದು ದೇವೇಗೌಡ-ಕುಮಾರಸ್ವಾಮಿ ಲೆಕ್ಕ ಹಾಕಿದ್ದಾರೆ.

      ತೃತೀಯ ಶಕ್ತಿಯಾಗಿ ನಿಂತಿದೆ ಜೆಡಿಎಸ್

      ತೃತೀಯ ಶಕ್ತಿಯಾಗಿ ನಿಂತಿದೆ ಜೆಡಿಎಸ್

      ಈಗಾಗಲೇ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಜತೆ, ಶರದ್ ಪವಾರ್ ನೇತೃತ್ವದ ಎನ್.ಸಿ.ಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಜತೆಗೆ ಅಕ್ಬರುದ್ದೀನ್ ಓವೈಸಿ ನೇತೃತ್ವದ ಎ.ಐ.ಎಂ.ಐ.ಎಂ ಕೂಡಾ ಮೈತ್ರಿ ಮಾಡಿಕೊಂಡರೆ ಅದು ಮತ್ತಷ್ಟು ಬಲಿಷ್ಟ ಶಕ್ತಿಯಾಗುವುದು ಗ್ಯಾರಂಟಿ.
      ಅಂದ ಹಾಗೆ ಶುರುವಿನಲ್ಲಿ ಜೆಡಿಎಸ್ ಅಸ್ತಿತ್ವ ಎಲ್ಲಿದೆ? ಅಂತ ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದರು. ಆದರೆ ಫೆಬ್ರವರಿ ಹದಿನೇಳರಂದು ಜೆಡಿಎಸ್ ನಡೆಸಿದ ಸಮಾವೇಶಕ್ಕೆ ಲಕ್ಷಾಂತರ ಜನ ಬಂದದ್ದನ್ನು ನೋಡಿದ ಮೇಲೆ, ಇಲ್ಲ, ಜೆಡಿಎಸ್ ತೃತೀಯ ಶಕ್ತಿಯಾಗಿ ಮೇಲೆದ್ದು ನಿಲ್ಲಲಿದೆ ಎಂಬ ಮಾತುಗಳು ಕೇಳಿ ಬರತೊಡಗಿದವು.

      ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಎರಡನೇ ಸ್ಥಾನಕ್ಕೆ

      ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಎರಡನೇ ಸ್ಥಾನಕ್ಕೆ

      ಈಗ ಅಕ್ಬರುದ್ದೀನ್ ಓವೈಸಿ ಜತೆಗಿನ ಜೆಡಿಎಸ್ ಮೈತ್ರಿಯ ಕುರಿತು ಯಾರೇನೇ ಹೇಳಿದರೂ, ಮೈತ್ರಿ ಸಾಧಿತವಾಗಿ ಅವರು ಕರ್ನಾಟಕಕ್ಕೆ ಕಾಲಿಟ್ಟರೆ ನೋ ಡೌಟ್, ಒಂದಷ್ಟು ಪ್ರಮಾಣದ ಮುಸ್ಲಿಂ ಮತಗಳು ಜೆಡಿಎಸ್ ಕಡೆ ವಾಲುತ್ತವೆ.
      ಹೀಗಾಗಿ ಶಕ್ತಿಯ ದೃಷ್ಟಿಯಿಂದ ಇದುವರೆಗೆ ಮೂರನೇ ಸ್ಥಾನದಲ್ಲಿದ್ದಂತೆ ಕಾಣುತ್ತಿದ್ದ ಜೆಡಿಎಸ್ ಈಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಿದರೂ ಅಚ್ಚರಿಯಿಲ್ಲ ಎಂಬ ಮಾತು ಹಲವು ಕಾಂಗ್ರೆಸ್ ನಾಯಕರಿಂದಲೇ ಕೇಳಿ ಬರುತ್ತಿದೆ.

      ತ್ರಿಕೋನ ಸ್ಪರ್ಧೆ ನಡೆಯುವುದು ನಿಶ್ಚಿತ

      ತ್ರಿಕೋನ ಸ್ಪರ್ಧೆ ನಡೆಯುವುದು ನಿಶ್ಚಿತ

      ಈ ಮುಂಚೆ ಜೆಡಿಎಸ್ ಎಂದರೆ ಅದು ಅಪ್ಪ-ಮಕ್ಕಳ ಪಕ್ಷ ಎಂದು ಬೇರೆ ಪಕ್ಷದವರು ವ್ಯಂಗ್ಯವಾಡುತ್ತಿದ್ದರು. ಆದರೆ ಕಾಂಗ್ರೆಸ್ ನಲ್ಲೀಗ ಸಿದ್ದರಾಮಯ್ಯ ತೆಗೆದುಕೊಂಡಿದ್ದೇ ತೀರ್ಮಾನ ಎಂಬಂತಾಗಿ ಹೋಗಿದೆ. ಬಿಜೆಪಿಯ ಕಡೆ ನೋಡಿದರೆ ಅಲ್ಲೂ ಯಡಿಯೂರಪ್ಪ ಅವರದೇ ಪಾರಮ್ಯ ಎಂಬ ಕಾರಣಕ್ಕಾಗಿ ದೊಡ್ಡ ಗುಂಪೊಂದು ಮುನಿಸಿಕೊಂಡಿದೆ.
      ಪರಿಣಾಮ? ಮುಂದಿನ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಗಳ ನೇರ ಹಣಾಹಣಿಗೆ ವೇದಿಕೆ ಎಂಬ ಮಾತು ಮಾಯವಾಗಿ, ತ್ರಿಕೋನ ಸ್ಪರ್ಧೆ ನಡೆಯುವುದು ನಿಶ್ಚಿತ ಎಂಬ ಅಭಿಪ್ರಾಯ ದಟ್ಟವಾಗತೊಡಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+