Get Updates
Get notified of breaking news, exclusive insights, and must-see stories!

ಸಂಭ್ರಮದ ಹಣತೆ ಬೆಳಗಿದ ಕೊಳಚಗಾರಿನ 'ದೀಪಾವಳಿ ಮಿಲನ'

ಮನೆಯ ಜಗುಲಿ ಮೇಲೆಲ್ಲ ಬೆಳಕು ಚೆಲ್ಲುತ್ತಿರುವ ಹಣತೆಯ ಸಾಲು; ಕಾರ್ತಿಕದ ಕಗ್ಗತ್ತಲು, ಒಂಟಿ ಮನೆಯ ಭಯವನ್ನು ಮೀರಿ ನಿಂತ ಸಂಭ್ರಮದ ಕೇಕೆ; ಸಾಂಸ್ಕೃತಿಕ ಕಾರ್ಯಕ್ರಮಕ್ಕೆಂದು ಸಜ್ಜಾಗುತ್ತಿರುವ ವೇದಿಕೆ; ಯಾವ ಪಟಾಕಿ, ಆಡಂಬರದ ಹಂಗಿಲ್ಲದೆಯೂ ನಡೆವ ಸುಂದರ ದೀಪಾವಳಿ...

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೊಳಚಗಾರಿನಲ್ಲಿ ಪ್ರತಿ ವರ್ಷವೂ ದೀಪಾವಳಿ ನಡೆಯುವುದೇ ಹೀಗೆ. ಬೆಳಗ್ಗೆ ಗೋಪೂಜೆ, ಮಧ್ಯಾಹ್ನ ಹಬ್ಬದೂಟ, ಸಂಜೆ ಶರಾವತಿ ಹಿನ್ನೀರಿನ ಬಳಿ ಆಟ, ಓಟ... ರಾತ್ರಿಯಾಗುತ್ತಿದ್ದಂತೆಯೇ ಸಾಂಸ್ಕೃತಿಕ ಕಾರ್ಯಕ್ರಮ, ಕ್ಯಾಂಪ್ ಫೈಯರ್, ಅಂತ್ಯಾಕ್ಷರಿ, ಕುಣಿತ...

ಈ ವರ್ಷವೂ ಇಂಥದೇ ದೀಪಾವಳಿಯನ್ನು ಕುಟುಂಬದ 25 ಕ್ಕೂ ಹೆಚ್ಚು ಜನರು ಕಣ್ತುಂಬಿಸಿಕೊಂಡರು. ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಬೆರೆತು, ದೀಪಾವಳಿಯ ಸೊಬಗನ್ನು ಸವಿದರು.

ತುಂಬು ಕುಟುಂಬದ ಸುಂದರ ಅನುಭೂತಿ

ತುಂಬು ಕುಟುಂಬದ ಸುಂದರ ಅನುಭೂತಿ

ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಜೊತೆಗೆ, ತುಂಬು ಕುಟುಂಬದ ಅನುಭೂತಿಯನ್ನು, ಹಬ್ಬಗಳ ಸಂಭ್ರಮವನ್ನು ಈ ತಲೆಮಾರಿನ ಮಕ್ಕಳೂ ಪಡೆಯುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದಿದ್ದು ಸಾಮಾಜಿಕ ಕಾರ್ಯಕರ್ತರೂ ಆದ ಕುಟುಂಬದ ಸದಸ್ಯ ಜಯಂತ್ ಕೆ.ಎಸ್ ಅವರು. ಕೆಲಸದ ನಿಮಿತ್ತ ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ಬೇರೆ ಬೇರೆ ಊರುಗಳಲ್ಲಿ ಬದುಕು ಕಂಡುಕೊಂಡವರನ್ನು ಹೀಗೆ ಒಮ್ಮೆಯಾದರೂ ಒಟ್ಟಾಗಿ ಸೇರಿಸಬೇಕು, ಸಂಬಂಧಗಳ ನಡುವಿನ ಬಾಂಧವ್ಯವನ್ನು ಉಳಿಸಬೇಕು ಎಂಬುದು ಜಯಂತ್ ಅವರ ಉದ್ದೇಶ.

ಹಸಿರ ಒಡಲಲ್ಲಿ ಸುಂದರ ಊರು

ಹಸಿರ ಒಡಲಲ್ಲಿ ಸುಂದರ ಊರು

ಸುತ್ತಲೂ ಬೆಟ್ಟ-ಗುಡ್ಡ, ಎದುರಲ್ಲಿ ತೋಟ, ಹಸಿರಿನ ಒಡಲಲ್ಲೇ ಇರುವ ಊರು ಕೊಳಚಗಾರು. ಈ ಒಂಟಿ ಮನೆಯಲ್ಲಿ ಬದುಕುವ ರಾಜಾರಾಂ ಅವರಿಗೆ ಮನೆ ಜನರೆಲ್ಲ ಹಬ್ಬಕ್ಕೆ ಊರಿಗೆ ಬರುತ್ತಾರೆಂದರೆ ಎಲ್ಲಿಲ್ಲದ ಸಂಭ್ರಮದಲ್ಲೇ ಹಬ್ಬದ ತಯಾರಿ ನಡೆಸುವುದಕ್ಕೆ ಆರಂಭಿಸುತ್ತಾರೆ. ದೀಪಾವಳಿಗೂ ಎರಡು ಮೂರು ತಿಂಗಳ ಮೊದಲೇ 'ದೀಪಾವಳಿಗೆ ಎಲ್ಲರೂ ಕಡ್ಡಾಯವಾಗಿ ಆಗಮಿಸಲೇಬೇಕೆಂದು' ಪ್ರೀತಿ ತುಂಬಿದ ಆಜ್ಞೆಯ ಧಾಟಿಯಲ್ಲೇ ಹೇಳಿಬಿಡುತ್ತಾರೆ ಜಯಂತ್.

ದೀಪಾವಳಿ ಮಿಲನದ ಸಂಭ್ರಮ

ದೀಪಾವಳಿ ಮಿಲನದ ಸಂಭ್ರಮ

ಸುಮಾರು 25 ಕ್ಕೂ ಹೆಚ್ಚು ಜನರ ಈ ತುಂಬು ಕುಟುಂಬ 'ದೀಪಾವಳಿ ಮಿಲನ'ದಲ್ಲಿ ಸುಮಾರು ಮೂರು ದಿನಗಳ ಕಾಲ ಯಾಂತ್ರಿಕ ಬದುಕಿನ ಎಲ್ಲ ತಲೆಬಿಸಿಯನ್ನೂ ಮರೆತು ಸಂಭ್ರಮಿಸುತ್ತದೆ. ಈ ವರ್ಷವೂ ಅಂಥದೇ ಸಂಭ್ರಮಕ್ಕೆ ಕುಟುಂಬದ ಸದಸ್ಯರು ಸಾಕ್ಷಿಯಯಾದರು. ಪುಟ್ಟ ಶ್ರೀಧರ, ನಿಹಾರಿಕಾ, ಅಥರ್ವ ರಿಂದ ಹಿಡಿದು ಹಿರಿಯರಾದ ಸುಮನಾ, ರಾಧಾ, ಪುಷ್ಪಾ ಎಲ್ಲರೂ ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ನಡೆದ ಕ್ಯಾಂಪ್ ಫೈಯರ್, ಮರುದಿನದ ಹೊಳೆಯೂಟ ಕಾರಣಾಂತರಗಳಿಂದ ರೆಸಾರ್ಟ್ ಊಟವಾಗಿ ಬದಲಾಗಿದ್ದು...ಪ್ರತಿ ಕ್ಷಣವೂ ಕೆಲಸದ ತಲೆಬಿಸಿಯಿಂದ ಕೊಂಚ ಕಾಲವದರೂ ಮನಸ್ಸನ್ನು ಸಂಭ್ರಮದಲ್ಲಿಡುವಲ್ಲಿ ನೆರವಾಯಿತು.

ಮತ್ತೆ ಯಾಂತ್ರಿಕ ಬದುಕಿನತ್ತ...

ಮತ್ತೆ ಯಾಂತ್ರಿಕ ಬದುಕಿನತ್ತ...

ಮೂರು ದಿನ ಮೂರು ಕ್ಷಣದಂತೆ ಕಳೆದು ಮತ್ತೆ ಉದ್ಯಾನ ನಗರಿ ಬೆಂಗಳೂರಿಗೆ ಹೊರಟಾಗ ಭಾರವಾಗಿತ್ತು ಮನಸ್ಸು. ಮೂರು ದಿನದ ಸಂಭ್ರಮದ ನೆನಪನ್ನು ಜೋಳಿಗೆಯಲ್ಲಿ ತುಂಬಿಕೊಂಡು ಹೊರಡಲೇಬೇಕಿತ್ತು... ಬದುಕಿನ ತುತ್ತಿನ ಚೀಲ ತುಂಬಿಕೊಳ್ಳುವ ಅನಿವಾರ್ಯತೆಯಿಂದ! ಮುಂದಿನ ದೀಪಾವಳಿ ಬೇಗ ಬರಲಿ ಎಂಬ ನಮ್ಮ ಮನದ ಹಾರೈಕೆಯನ್ನು ಕೇಳಿಸಿಕೊಂಡಂತೆ ಜಗುಲಿಯ ಮೇಲಿನ ಹಣತೆ ಜೋರಾಗಿ ಉರಿಯುತ್ತಿತ್ತು!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+