ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರಕಾರಕ್ಕೆ ಮುಂದಿದೆ ದಾಟಲು 5 ಸವಾಲು

Recommended Video

      ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಈ 5 ಸವಾಲುಗಳನ್ನ ಎದುರಿಸಬೇಕಿದೆ | Oneindia Kannada

      ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರಕಾರ ಇನ್ನೇನು ಅಸ್ತಿತ್ವಕ್ಕೆ ಬರಲಿದೆ. ಅಂತೂ ಕುಮಾರಸ್ವಾಮಿ ಮುಖ್ಯಮಂತ್ರಿ ಆದರಲ್ಲಾ ಅನ್ನೋ ಸಮಾಧಾನ- ಸಂತೃಪ್ತಿ ಜೆಡಿಎಸ್ ನಲ್ಲಿ ಕಾಣುತ್ತಿದೆ. ಇಂಥದ್ದೊಂದು ಅವಕಾಶ ಸಿಕ್ಕರೆ ಸಾಕು, ಪಕ್ಷಕ್ಕೆ ಮರು ಜೀವ ನೀಡಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಕುಮಾರಸ್ವಾಮಿಯವರು ಕೂಡ ಹೊಸ ಹುಮ್ಮಸ್ಸಿನಿಂದ ಕಾಣಿಸಿಕೊಳ್ಳುತ್ತಿದ್ದಾರೆ.

      ಇತ್ತ, ಕಾಂಗ್ರೆಸ್ ಗೆ ಅಧಿಕಾರದಿಂದ ಬಿಜೆಪಿಯನ್ನು ದೂರವಿಟ್ಟಂಥ ಆತ್ಮತೃಪ್ತಿ. ಮತ್ತೊಂದು ದೊಡ್ಡ ರಾಜ್ಯ ಕಳೆದುಕೊಳ್ಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಸಮಾಧಾನ. ಜತೆಗೆ ಮೇಲುನೋಟಕ್ಕೆ ಎಲ್ಲ ಕೊಡು-ಕೊಳ್ಳುವ ಲೆಕ್ಕಾಚಾರಗಳು ಸುಲಭವಾಗಿ ಆಗಬಹುದು ಎಂಬ ನಿರೀಕ್ಷೆ ಕಾಣುತ್ತಿದೆ. ಆದರೆ ಇವೆಲ್ಲ ಮೇಲುನೋಟಕ್ಕೆ ಕಾಣುವಷ್ಟು ಸಲೀಸಾಗಿ ಆಗುತ್ತದೆಯೆ?

      ಈ ಮೈತ್ರಿ ಸರಕಾರ ರಚನೆ ಆದ ನಂತರ ಎದುರಾಗುವ ಸವಾಲುಗಳು ಎಂಥದ್ದಿರುತ್ತವೆ ಎಂಬ ಬಗ್ಗೆ ಹೆಚ್ಚಿನ ಕುತೂಹಲವಿಲ್ಲ. ಆದರೆ ಅವುಗಳನ್ನೆಲ್ಲ ಹೇಗೆ ದಾಟುತ್ತಾರೆ ಎಂಬುದೇ ಸದ್ಯದ ಪ್ರಶ್ನೆ. ಕಾರ್ಯಕರ್ತರ ಮಟ್ಟದಲ್ಲಿ ಕಾಂಗ್ರೆಸ್- ಜೆಡಿಎಸ್ ನವರು ಕಿತ್ತಾಡಿಕೊಳ್ಳುವುದು, ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುವುದು ಖಂಡಿತಾ ಹೊಸತಲ್ಲ. ಆದರೆ ಇನ್ನು ಮುಂದೆ ಹಾಗಿರಲು ಸಾಧ್ಯವಾ?

      ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರಕಾರ ರಚನೆ ಆದ ಮೇಲೆ ಎದುರಿಗಿರುವ ಸವಾಲುಗಳ ವಿಶ್ಲೇಷಣೆ ಇಲ್ಲಿದೆ.

      ನಿಗಮ-ಮಂಡಳಿ ನೇಮಕಾತಿ ಹಂಚಿಕೆ ಸವಾಲು

      ನಿಗಮ-ಮಂಡಳಿ ನೇಮಕಾತಿ ಹಂಚಿಕೆ ಸವಾಲು

      ಮೊದಲ ಸವಾಲು ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಎರಡೂ ಪಕ್ಷಗಳಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಸಹಜ. ಲೆಕ್ಕಾಚಾರದ ಪ್ರಕಾರ ಹೇಳಬೇಕು ಅಂದರೆ, ಸಂಖ್ಯಾದೃಷ್ಟಿಯಲ್ಲಿ ಹೆಚ್ಚಿನ ಸ್ಥಾನ ಗಳಿಸಿರುವ ಕಾಂಗ್ರೆಸ್ ಗೆ ಸಹಜವಾಗಿಯೇ ಹೆಚ್ಚು ಪ್ರಾಶಸ್ತ್ಯ ಸಿಗಬೇಕು. ಆದರೆ ಈಗಿನ ಸನ್ನಿವೇಶದಲ್ಲಿ ಈ ವಿಚಾರವನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದೇ ಪ್ರಶ್ನೆ. ಜತೆಗೆ ವಿರೋಧಿಸಿಕೊಂಡು ಬಂದ ಪಕ್ಷದ ಜತೆಗೆ ಸರಕಾರದಲ್ಲಿ ಇದ್ದು, ಸ್ಥಳೀಯವಾಗಿ ತಂತಮ್ಮ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನೂ ಕಾಯ್ದುಕೊಳ್ಳುವುದು ಕೂಡ ಸವಾಲು.

      ಜನರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಹೇಗೆ?

      ಜನರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಹೇಗೆ?

      ಭ್ರಷ್ಟಾಚಾರ ನಿಗ್ರಹ ದಳ ರಚನೆ, ಎತ್ತಿನಹೊಳೆ ಯೋಜನೆ, ಅನ್ನಭಾಗ್ಯ... ಹೀಗೆ ವಿವಿಧ ಯೋಜನೆ, ನೀತಿ- ನಿರೂಪಣೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ವಿರುದ್ಧ ಧ್ರುವಗಳಂತಿದ್ದವು. ಇದೀಗ ಇಬ್ಬರೂ ಸೇರಿ ಸರಕಾರ ಮಾಡುವಾಗ ಪರಸ್ಪರರನ್ನು ಟೀಕಿಸುವುದು ಮೈತ್ರಿ ಧರ್ಮ ಆಗುವುದಿಲ್ಲ. ಹಾಗಂತ ಇಷ್ಟು ಕಾಲ ಆರೋಪ ಮಾಡಿಕೊಂಡು ಬಂದು, ಈಗ ಏಕಾಏಕಿ ಸುಮ್ಮನಾಗಿ ಬಿಟ್ಟರೆ ಜನರೆದುರು ವಿಶ್ವಾಸಾರ್ಹತೆ ಪ್ರಶ್ನೆ ಎದುರಾಗುತ್ತದೆ. ಮುಂಬರುವ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿಯದೇ ಪ್ರತ್ಯೇಕವಾಗಿ ಸ್ಪರ್ಧೆಗಿಳಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವ ವಿಷಯ ಮುಂದಿಟ್ಟುಕೊಂಡು ಜನರೆದುರು ನಿಲ್ಲುತ್ತಾರೆ? ಆಗ ಇದರಿಂದ ಬಿಜೆಪಿಗೆ ಲಾಭ ಆಗುವ ಸಾಧ್ಯತೆ ಹೆಚ್ಚು. ಅಂಥ ಸನ್ನಿವೇಶವನ್ನು ಜೆಡಿಎಸ್ -ಕಾಂಗ್ರೆಸ್ ಹೇಗೆ ಎದುರಿಸುತ್ತವೆ?

      ಯೋಜನೆಗಳ ಜಾರಿಯ ಶ್ರೇಯ ಯಾರಿಗೆ?

      ಯೋಜನೆಗಳ ಜಾರಿಯ ಶ್ರೇಯ ಯಾರಿಗೆ?

      ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಪಾಲಿನ ವೋಟ್ ಬ್ಯಾಂಕ್ ಹೆಚ್ಚುಕಡಿಮೆ ಒಂದೇ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ. ಆ ಮತಗಳನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸುವ ಯೋಜನೆಗಳ ಶ್ರೇಯವನ್ನು ಪಡೆಯಲು ಇಬ್ಬರ ಮಧ್ಯೆ ಪೈಪೋಟಿ ಏರ್ಪಡುತ್ತದೆ. ಜನರ ಮುಂದೆ ಹೋಗುವಾಗ ಸಾಮಾನ್ಯವಾಗಿ ಯೋಜನೆಗಳ ವಿಚಾರವಾಗಿ ಕೀರ್ತಿ ತಲುಪಿದರೆ ಮುಖ್ಯಮಂತ್ರಿಗೇ ದಕ್ಕುತ್ತದೆ. ಆದರೆ ಮೈತ್ರಿ ಸರಕಾರವಾದ್ದರಿಂದ ಹಾಗೆ ಏಕ್ದಂ ಒಂದು ಪಕ್ಷವು ಯೋಜನೆ ಜಾರಿಯ ಶ್ರೇಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾರ್ಯಕರ್ತರ ಮಟ್ಟದಲ್ಲಿ ಇದೇ ವಿಚಾರ ಜಗಳಕ್ಕೆ- ವಾಗ್ವಾದಕ್ಕೆ ಕಾರಣ ಆಗಬಹುದು. ಜತೆಗೆ ಇಂಥ ಸನ್ನಿವೇಶ ನಿಭಾಯಿಸುವುದು ಸಚಿವರು- ಶಾಸಕರು ಯಾರಿಗಾದರೂ ಸವಾಲೇ.

      ಭರವಸೆಗಳ ಜಾರಿಗೆ ಹಣ ಹೇಗೆ ಹೊಂದಿಸುತ್ತಾರೆ?

      ಭರವಸೆಗಳ ಜಾರಿಗೆ ಹಣ ಹೇಗೆ ಹೊಂದಿಸುತ್ತಾರೆ?

      ಕಳೆದ ಅವಧಿಗೆ ಪೂರ್ಣವಾಗಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸಿಕ್ಕಾಪಟ್ಟೆ ಸಾಲ ಮಾಡಿದೆ. ಇದೀಗ ಹೊಸದಾಗಿ ಕುಮಾರಸ್ವಾಮಿ (ಜೆಡಿಎಸ್ ಪಕ್ಷದ ವತಿಯಿಂದ) ಘೋಷಿಸಿರುವ ಯೋಜನೆಗಳು ಮತ್ತು ಕಾಂಗ್ರೆಸ್ ವತಿಯಿಂದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಪೂರೈಸಬೇಕಿದೆ. ಇವುಗಳಿಗೆಲ್ಲ ಸಂಪನ್ಮೂಲ ಕ್ರೋಡೀಕರಣ ಹೇಗೆ ಮಾಡುತ್ತಾರೆ? ಆದಾಯಕ್ಕೆ ಮೂಲವನ್ನು ಹೇಗೆ ಸೃಷ್ಟಿಸುತ್ತಾರೆ? ರಾಷ್ಟ್ರೀಕೃತ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್ ಹೀಗೆ ರೈತರ ಎಲ್ಲ ಸಾಲ ಮನ್ನಾ ಮಾಡುವ ಭರವಸೆ ನೀಡಿರುವ ಕುಮಾರಸ್ವಾಮಿ ಅವರೆದುರು ಐವತ್ತು ಸಾವಿರ ಕೋಟಿಗೆ ಹೆಚ್ಚಿನ ಸವಾಲು ಇದೆ. ಇದೊಂದೇ ಘೋಷಣೆಗೆ ಇಷ್ಟಾದರೆ, ಇನ್ನು ವೃದ್ಧಾಪ್ಯ ವೇತನ, ಗರ್ಭಿಣಿಯರಿಗೆ ನೆರವು, ಉದ್ಯೋಗ ಸೃಷ್ಟಿ...ಇವೆಲ್ಲಕ್ಕೂ ಹೇಗೆ ಹಣ ಹೊಂದಿಸುತ್ತಾರೆ ಎಂಬ ಸವಾಲಿದೆ. ಜತೆಗೆ ಕಾಂಗ್ರೆಸ್ ನಿಂದ ಘೋಷಣೆ ಆಗಿರುವ ಯೋಜನೆಗಳ ಜಾರಿಯೂ ಆಗಬೇಕಾಗುತ್ತದೆ.

      ಪ್ರಬಲವಾದ ವಿರೋಧ ಪಕ್ಷವನ್ನು ಎದುರಿಸುವ ಸವಾಲು

      ಪ್ರಬಲವಾದ ವಿರೋಧ ಪಕ್ಷವನ್ನು ಎದುರಿಸುವ ಸವಾಲು

      ಇತ್ತೀಚಿನ ದಶಕದಲ್ಲೇ ಕರ್ನಾಟಕ ಕಾಣದಂಥ ದೊಡ್ಡ ಪ್ರತಿಪಕ್ಷವನ್ನು ಮೈತ್ರಿ ಸರಕಾರವು ಎದುರಿಸಬೇಕಾಗುತ್ತದೆ. ನೂರಾನಾಲ್ಕು ಸದಸ್ಯ ಬಲದ ಬಿಜೆಪಿ ಪ್ರತಿಪಕ್ಷವಾಗಿ ಎದುರಿಗಿದೆ. ಯಡಿಯೂರಪ್ಪನವರು ಪ್ರತಿಪಕ್ಷದ ನಾಯಕರಾಗಿ ನಿಂತರೆ, ಈಶ್ವರಪ್ಪ, ಅಶೋಕ್, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್ ಹೀಗೆ ಇನ್ನಷ್ಟು ಮಂದಿ ಅವರ ಬೆನ್ನಿಗೆ ನಿಲ್ಲುತ್ತಾರೆ. ಸರಕಾರದ ಒಂದು ಸಣ್ಣ ತಪ್ಪು ಸಿಕ್ಕರೂ ಜನರೆದುರು- ಮಾಧ್ಯಮಗಳೆದುರು ಮಾನ ಹರಾಜು ಹಾಕಲು ಕಾದು ಕೂರುವ ತಂಡವಿದು. ಇದು ವಿಪಕ್ಷಗಳ ಜವಾಬ್ದಾರಿಯೂ ಹೌದು. ಪ್ರಬಲವಾದ ವಿರೋಧ ಪಕ್ಷವನ್ನು ಎದುರಿಸುವ ಸವಾಲು ಈ ಮೈತ್ರಿ ಸರಕಾರಕ್ಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+