ನಟಿ ಶರ್ಮಿಳಾ ಮಾಂಡ್ರೆ ಮದುವೆಗೆ ಗ್ರೀನ್ ಸಿಗ್ನಲ್ ನೀಡಲು ಕಾರಣ ಮತ್ತೊಬ್ಬ ಸ್ಟಾರ್ ನಟಿ, ಯಾರಾಕೆ?
ಸ್ಯಾಂಡಲ್ವುಡ್ನ ಗ್ಲಾಮರಸ್ ನಟಿ ಶರ್ಮಿಳಾ ಮಾಂಡ್ರೆ ಅವರ ಮದುವೆ ಸುದ್ದಿ ಇತ್ತೀಚೆಗೆ ಸಿನಿಮಾ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸದ್ಯದಲ್ಲೇ ಅವರು ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ಸುಧನ್ ಸುಂದರಮ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಈ ಇಬ್ಬರ ಪ್ರೇಮಕಥೆ ಮತ್ತು ಮದುವೆಯ ನಿರ್ಧಾರದ ಹಿಂದೆ ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ನಟಿಯ ಪಾತ್ರವಿದೆ. ಈ ವಿಚಾರವನ್ನು ಶರ್ಮಿಳಾ ಅವರೇ ಸ್ವತಃ ರಿವೀಲ್ ಮಾಡಿದ್ದಾರೆ.
ಅದ್ಧೂರಿ ಮದುವೆಗಿಂತ 'ಕೂಡಿ ಬಾಳುವುದು' ಮುಖ್ಯ
ಇದೇ ವರ್ಷ ವಿವಾಹವಾಗಲು ನಿರ್ಧರಿಸಿರುವ ಶರ್ಮಿಳಾ, ನಿಶ್ಚಿತಾರ್ಥದ ಬಳಿಕ ಹೆಚ್ಚು ದಿನ ಕಾಯಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಮದುವೆಯ ದಿನಾಂಕ ನಿಗದಿಯಾದ ನಂತರ ಉಳಿದ ಪ್ಲ್ಯಾನಿಂಗ್ ಮಾಡುವುದಾಗಿ ತಿಳಿಸಿರುವ ಅವರು, ತಮ್ಮ ಕನಸಿನ ಮದುವೆಯ ಬಗ್ಗೆ ವಿಶಿಷ್ಟ ಆಲೋಚನೆ ಹಂಚಿಕೊಂಡಿದ್ದಾರೆ. "ಮದುವೆ ಎಷ್ಟು ಅದ್ಧೂರಿಯಾಗಿ, ಗ್ರ್ಯಾಂಡ್ ಆಗಿ ನಡೆಯುತ್ತದೆ ಎನ್ನುವುದಕ್ಕಿಂತ ಮದುವೆಯಾದ ಬಳಿಕ ದಂಪತಿ ಹೇಗೆ ಒಟ್ಟಿಗೆ ಕೂಡಿ ಬಾಳುತ್ತಾರೆ ಎನ್ನುವುದು ಮುಖ್ಯ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಮದುವೆಯಾಗಿ ಆಮೇಲೆ ಬೇರೆಯಾಗುವುದನ್ನು ನೋಡುತ್ತಿದ್ದೇವೆ. ಆ ರೀತಿ ಆಗಬಾರದು. ಅದ್ಧೂರಿತನಕ್ಕಿಂತ ಪರಸ್ಪರ ಅರಿತು ಬಾಳುವುದು ಅವಶ್ಯಕ ಎಂದಿದ್ದಾರೆ. ಅಲ್ಲದೆ, ಸಿನಿಮೀಯ ಶೈಲಿಯಲ್ಲಿ ಯಾರೂ ಪ್ರಪೋಸ್ ಮಾಡಿಲ್ಲ ಎಂದು ಹೇಳಿರುವ ಶರ್ಮಿಳಾ, ಇಬ್ಬರ ನಡುವೆ ಪರಸ್ಪರ ಮಾತುಕತೆಯ ಮೂಲಕವೇ ಈ ನಿರ್ಧಾರಕ್ಕೆ ಬರಲಾಗಿದೆ ಮತ್ತು ಸದ್ಯದಲ್ಲೇ ನಡೆಯಲಿರುವ ನಿಶ್ಚಿತಾರ್ಥದ ಸಮಯದಲ್ಲಿ ಅಧಿಕೃತ ಪ್ರಪೋಸ್ ನಡೆಯಬಹುದು ಎಂದಿದ್ದಾರೆ.
ಶರ್ಮಿಳಾ ಮತ್ತು ಸುಧನ್ ಒಂದಾಗಲು ಕಾರಣ ಆ ನಟಿ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗಾಳಿಪಟ-2' ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಮಲಯಾಳಂ ನಟಿ ಸಂಯುಕ್ತಾ ಮೆನನ್ ಒಟ್ಟಿಗೆ ನಟಿಸಿದ್ದರು. ಈ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಮದುವೆಯ ವಿಷಯವಾಗಿ ಚರ್ಚೆಗಳು ನಡೆಯುತ್ತಿದ್ದವು ಎಂದಿದ್ದಾರೆ. "ನಾನು ಸಿನಿಮಾ ಶೂಟಿಂಗ್ ಸಮಯದಲ್ಲಿ ಮದುವೆಯಾಗುವ ಆಲೋಚನೆಗಳ ಬಗ್ಗೆ ಸಂಯುಕ್ತಾ ಬಳಿ ಮಾತನಾಡುತ್ತಿದ್ದೆ. ಇದೇ ಸಮಯದಲ್ಲಿ ಸಂಯುಕ್ತಾ ಅವರು ಸುಧನ್ ಸುಂದರಮ್ ನಿರ್ಮಾಣದ 'ರಾಮ್' ಎಂಬ ಚಿತ್ರದಲ್ಲೂ ನಟಿಸುತ್ತಿದ್ದರು. ಅಲ್ಲಿ ನಿರ್ಮಾಪಕ ಸುಧನ್ ಕೂಡ ತಮ್ಮ ಮದುವೆಯ ಆಲೋಚನೆಗಳನ್ನು ಸಂಯುಕ್ತಾ ಎದುರು ಹಂಚಿಕೊಳ್ಳುತ್ತಿದ್ದರು. ಇಬ್ಬರೂ ಮದುವೆಯ ಬಗ್ಗೆಯೇ ಯೋಚಿಸುತ್ತಿರುವುದನ್ನು ಗಮನಿಸಿದ ಸಂಯುಕ್ತಾ ಮೆನನ್, ನನ್ನ ಹಾಗೂ ಸುಧನ್ ನಡುವೆ ಪರಿಚಯ ಮಾಡಿಸಿದರು. ಆ ಪರಿಚಯ ಸ್ನೇಹವಾಗಿ ತಿರುಗಿ, ಈಗ ಮದುವೆಯ ನಿರ್ಧಾರದವರೆಗೆ ಬಂದು ನಿಂತಿದೆ" ಎಂದು ಶರ್ಮಿಳಾ ಮದುವೆ ಕಥೆ ಬಿಚ್ಚಿಟ್ಟಿದ್ದಾರೆ.
ಮದುವೆ ನಂತರ ಸಿನಿಮಾಗೆ ಬ್ರೇಕ್?
ಇನ್ನು ವಿವಾಹದ ನಂತರ ನಟನೆಯಿಂದ ದೂರ ಉಳಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶರ್ಮಿಳಾ, "ಅಷ್ಟೆಲ್ಲ ದೂರದ ಆಲೋಚನೆ ನಾನು ಮಾಡಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಮುಂದಿನ ಆರು ತಿಂಗಳ ಯೋಜನೆಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಮದುವೆಯ ಸಿದ್ಧತೆಗಳ ನಡುವೆಯೂ ಶರ್ಮಿಳಾ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಚಿತ್ರದ ಬಳಿಕ, ಶರ್ಮಿಳಾ ಪ್ರಸ್ತುತ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಜೊತೆ 'ಡ್ಯಾಡ್' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ. ಕನ್ನಡದಲ್ಲಿ ತಮ್ಮದೇ ಸ್ವಂತ ಬ್ಯಾನರ್ ಅಡಿಯಲ್ಲಿ 'ದಸರಾ' ಎಂಬ ಚಿತ್ರವನ್ನು ಶರ್ಮಿಳಾ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಇದೇ ವರ್ಷ ತೆರೆಗೆ ಬರಲಿದೆ.













Click it and Unblock the Notifications