ಸೆಲ್ಗಳಿಂದ ಕಿರುಚಾಡುವ ಸದ್ದು: ಜೈಲಿನ ಕರಾಳ ಅನುಭವ ಬಿಚ್ಚಿಟ್ಟ ವಿನಯ್ ಗೌಡ
ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಕಾಲ ಜೈಲು ಸೇರಿದ್ದರು. ಪರಪ್ಪನ ಅಗ್ರಹಾರದಲ್ಲಿ ಎರಡು ದಿನಗಳ ಜೈಲುವಾಸ ಅನುಭವಿಸಿದ್ದ ರಜತ್ ಹಾಗೂ ವಿನಯ್ ಗೌಡಗೆ ಈ ಪ್ರಕರಣದಲ್ಲಿ ಸದ್ಯ ರಿಲೀಫ್ ಸಿಕ್ಕಿದೆ. ಸೆಲೆಬ್ರೆಟಿಯಾಗಿದ್ದವರಿಗೆ ಜೈಲಿನ ಅನುಭವ ಹೇಗಿತ್ತು ಎನ್ನುವುದರ ಬಗ್ಗೆ ವಿನಯ್ ಗೌಡ ಮಾತನಾಡಿದ್ದಾರೆ.
ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ ಅವರು ಪರಪ್ಪನ ಅಗ್ರಹಾರದಲ್ಲಿ ಎರಡು ದಿನ ಕಳೆದ ಅನುಭವವನ್ನು ಹಂಚಿಕೊಂಡಿದ್ದಾರೆ. 'ನಾನು ರಜತ್ ಒಟ್ಟಿಗೆ ಇದ್ದರೂ ಮಾತನಾಡಲು ಅಂತಹದ್ದೇನು ಇರುತ್ತಿರಲಿಲ್ಲ. ಇಬ್ಬರಿಗೂ ಅದು ಹೊಸ ವಾತಾವರಣ. ಅಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ ಇರುತ್ತಿತ್ತು. ಬೇರೆ ಬೇರೆ ಕಂಬಿಯ ಹಿಂದೆ ಬೇರೆ ಬೇರೆ ಕಥೆ ಇತ್ತು' ಎಂದರು.

'ಅಲ್ಲಿರುವ ಹಳೆಬರನ್ನು ಮಾತನಾಡಿಸಿ, ಯಾಕೆ ಅಲ್ಲಿದ್ದಾರೆ? ಏನು ಕಥೆ? ಅವರ ಪರಿಸ್ಥಿತಿ ಏನು? ಮಾಡಿರುವ ಅಪರಾಧವೇನು? ಎಂತೆಥಹ ಅಪರಾಧಿಗಳಿದ್ದಾರೆ ಎಂದೆಲ್ಲಾ ಚರ್ಚೆ ಮಾಡಿದೆವು. ಮುಂದೆ ನನ್ನ ಸಿನಿಮಾಗಳಲ್ಲಿ ಯಾವತ್ತಾದರೂ ಅಲ್ಲಿನ ಪಾತ್ರ ಮಾಡಬೇಕು ಅಂದರೆ ಅಲ್ಲಿನ ಕೆಲವು ಮಾಹಿತಿಗಳನ್ನು ಪಡೆದಿದ್ದೇನೆ. ಆ ಜಾಗಕ್ಕೆ ಮುಂದಿನ ಸಲ ಹೋಗಲು ಕೂಡ ಇಷ್ಟಪಡುವುದಿಲ್ಲ. ಆದರೆ ಸಿಕ್ಕ ಸಮಯದಲ್ಲೇ ಅಲ್ಲಿ ಏನು ಕಲಿಯಬಹುದು ಅನ್ನು ಕಲಿತಿದ್ದೇನೆ' ಎಂದು ಹೇಳಿದರು.
'ನಾನು ಮಾಡಿದ ರೀಲ್ಸ್ ಯಾವಾಗ ತಪ್ಪು ಅಂತಾ ಅನಿಸಿತು ಅಂದರೆ ಅಲ್ಲಿಗೆ ಹೋದಾಗ ನನಗೆ ಅರಿವಾಯ್ತು. ಏಕೆಂದರೆ ಈ ಹದಿನೆಂಟು- ಹತ್ತೊಂಬತ್ತು ವರ್ಷದ ಹುಡುಗರು ತುಂಬಾ ಫಾಲೋ ಮಾಡುತ್ತಾರೆ. ಇಂತಹ ವಿಡಿಯೋಗಳನ್ನು, ಸೆಲೆಬ್ರೆಟಿಗಳನ್ನು, ಅವರು ಮಾಡುವ ವಿಡಿಯೋಗಳನ್ನು ತುಂಬಾ ಫಾಲೋ ಮಾಡುತ್ತಾರೆ'.

'ಪರಪ್ಪನ ಅಗ್ರಹಾರದಲ್ಲಿ ಚಿಕ್ಕ ವಯಸ್ಸಿನ ಹುಡುಗರನ್ನು ತುಂಬಾ ನೋಡಿದೆ. ಜಾಸ್ತಿ ದಿನ ಉಳಿಯಲ್ಲ ಅವರು ಅಷ್ಟು ಸಣ್ಣ ಆಗಿದ್ದಾರೆ. ಅವರೆಲ್ಲಾ ಡ್ರಗ್ ವ್ಯಸನಿಗಳು. ನಾನು ಅವರ ಕೈಗಳನ್ನು ಗಮನಿಸಿದೆ ಎಲ್ಲಾ ಕಡೆ ಕಪ್ಪು ಕಲೆ ಇದೆ. ಒಬ್ಬ ಹುಡುಗ ಹೇಳಿದ ಮೂರು ಸೂಜಿಗಳು ಅವನ ಕೈಯಲ್ಲೇ ಮುರಿದು ಹೋಗಿದೆ ಅಂತೆ. ಆದರೂ ಅವನಿಗೆ ಡ್ರಗ್ ತೆಗೆದುಕೊಳ್ಳದೇ ಇದ್ದರೆ ನಿದ್ದೆ ಬರುವುದಿಲ್ಲ ಅಂತಾ ಹೇಳುತ್ತಾನೆ. ಈ ಬಗ್ಗೆ ಯಾಕೆ ಹೇಳುತ್ತಿದ್ದೇನೆ ಅಂದರೆ ಈಗಿನ ಯುವಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಕ್ಷಣಿಕ ಸುಖಕ್ಕಾಗಿ ಅಂತಾ ಶುರು ಮಾಡುತ್ತಾರೆ. ಅದು ಹವ್ಯಾಸವಾದಾಗ ತುಂಬಾ ಕಷ್ಟ ಇದೆ' ಎಂದರು.
'ಜೈಲಿನ ಸೆಲ್ಗಳಿಂದ ಕಿರುಚಾಡುವುದು ಕೇಳಿಸುತ್ತದೆ. ನನಗೆ ಆ ಜಾಗಾನೂ ಹೊಸದು, ಆ ಅನುಭವನೂ ಹೊಸದು. ಅದನೆಲ್ಲಾ ನೋಡಿದ ಅನುಭವಾಯ್ತು. ಜೊತೆ ಅರಿವಾಯ್ತು ಕೂಡ. ಇಂದಿನ ಯುವಕರು ಏನೆಲ್ಲಾ ತಪ್ಪು ದಾರಿ ಹಿಡಿಯುತ್ತಿದ್ದಾರೆ. ನಾನು ಕೇಳಿಕೊಳ್ಳುವುದು ಏನು ಎಂದರೆ ತಪ್ಪೇ ಮಾಡಬೇಡಿ, ಅದರಲ್ಲೂ ಜೈಲಿಗೆ ಹೋಗುವ ತಪ್ಪು ಮಾಡಬೇಡಿ. ಜೊತೆಗೆ ಈ ಡ್ರಗ್ಸ್ ಎನ್ನುವುದು ಸಮಾಜವನ್ನು ತುಂಬಾ ಕೆಡಿಸುತ್ತಿದ್ದೆ. ಇದರಿಂದ ದೂರ ಇರಿ' ಎಂದು ವಿನಯ್ ಗೌಡ ಮನವಿ ಮಾಡಿಕೊಂಡರು.












Click it and Unblock the Notifications