ACP ಚಂದನ್ ಬಗ್ಗೆ ವಿನಯ್ ಗೌಡ ಹೇಳಿದ್ದೇನು?
ಮನೋರಂಜನೆಗಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡಗೆ ಈಗಾಗಲೇ ಬಿಡುಗಡೆ ಭಾಗ್ಯ ಸಿಕ್ಕಿದೆ. ಮೂರು ದಿನಗಳ ಜೈಲುವಾಸ ಅನುಭವಿಸಿದ್ದ ರಜತ್ ಹಾಗೂ ವಿನಯ್ ಗೌಡಗೆ ಈ ಪ್ರಕರಣದಲ್ಲಿ ರಿಲೀಫ್ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10ರ ಮಾಜಿ ಸ್ಪರ್ಧಿ ವಿನಯ್ ಗೌಡ ವಿಶೇಷವಾಗಿ ಎಸಿಪಿ ಚಂದನ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ವಿನಯ್ ಗೌಡ, 'ಪೊಲೀಸ್ ಇಲಾಖೆ ಅವರು ಅವರ ತನಿಖೆಯನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಸೆಲೆಬ್ರೆಟಿ ಅಥವಾ ಸಾಮಾನ್ಯ ಮನುಷ್ಯ ಎನ್ನುವ ಭೇದಭಾವ ತೋರಿಸದೇ ಆ ಪ್ರಕರಣದಲ್ಲಿ ಏನೇನು ಇದೆಯೋ ಅದರ ಪ್ರಕಾರವಾಗಿ ಅವರು ತನಿಖೆ ಮಾಡಿದ್ದಾರೆ. ನಮ್ಮನ್ನು ನಡೆಸಿಕೊಂಡಿದ್ದು ಕೂಡ ಹಾಗೇ ಇತ್ತು. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಹೇಗೆ ನಡೆಸಿಕೊಳ್ಳಬೇಕೋ ಹಾಗೇ ನಡೆಸಿಕೊಂಡಿದ್ದಾರೆ. ದಯವಿಟ್ಟು ಅವರ ಮೇಲೆ ಯಾವುದೇ ಆರೋಪ ಮಾಡಬೇಡಿ'.

'ನಮ್ಮಿಂದ ಪೊಲೀಸ್ ಇಲಾಖೆಯವರು ಹಣ ಪಡೆದಿದ್ದಾರೆ ಎನ್ನುವ ವಿಡಿಯೋಗಳನೆಲ್ಲಾ ಈಗ ನೋಡಿದೆ. ಅದೆಲ್ಲಾ ಸುಳ್ಳು. ನಾವು ಅವರಿಗೆ ಯಾವುದೇ ಹಣ ಕೊಟ್ಟಿಲ್ಲ, ಅವರು ನಮ್ಮಿಂದ ಯಾವುದೇ ಹಣ ಪಡೆದಿಲ್ಲ. ಕಾನೂನು ಬದ್ಧವಾಗಿ ಪ್ರತಿಯೊಂದು ತನಿಖೆ ಹೇಗೆ ಮಾಡಬೇಕೋ ಹಾಗೇ ಮಾಡಿದ್ದಾರೆ. ಹಾಗೆಯೇ ಎಸಿಪಿ ಚಂದನ್ ಸರ್ಗೆ, ಚಿಕ್ಕ ಸ್ವಾಮಿ ಸರ್ಗೆ, ಮತ್ತು ತಿಪ್ಪೇ ಸ್ವಾಮಿ ಸರ್ಗೆ ನಾನು ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ'.

'ನಮ್ಮಿಂದ ಗೊತ್ತಿಲ್ಲದೇ ಆಗಿರುವ ತಪ್ಪಿಗೆ ನಮ್ಮನ್ನು ತಿದ್ದಿ ಬುದ್ಧಿ ಹೇಳಿದ್ದೀರಾ. ನನ್ನ ಜೀವನದಲ್ಲಿ ಈ ರೀತಿಯ ತಪ್ಪನ್ನು ಇನ್ನು ಯಾವತ್ತೂ ಮಾಡುವುದಿಲ್ಲ. ಧನ್ಯವಾದಗಳು ಸರ್. ಇನ್ನು ಜೈಲಿನಲ್ಲಿ ನಮ್ಮನ್ನು ಬೇರೆಯವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಹಾಗೇ ನಡೆಸಿಕೊಂಡಿದ್ದಾರೆ. ಅವರು ಎಲ್ಲಿಯೂ ತಪ್ಪಾಗಿ ನಡೆದುಕೊಂಡಿಲ್ಲ. ನನಗೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ನನ್ನ ಅಭಿಮಾನಿಗಳು ದಯವಿಟ್ಟು ಕ್ಷಮಿಸಿ. ನನ್ನ ಜೊತೆಯಲ್ಲಿ ನಿಂತಿರುವುದಕ್ಕೆ ತುಂಬಾ ಧನ್ಯವಾದಗಳು. ತುಂಬಾ ಪ್ರೀತಿ ವಿಶ್ವಾಸ ಕೊಟ್ಟಿದ್ದೀರಾ. ಮುಂದಿನ ದಿನಗಳಲ್ಲಿಯೂ ಪ್ರೀತಿ ವಿಶ್ವಾಸ ಹೀಗೆ ಇರಲಿ' ಎಂದು ನಟ ವಿನಯ್ ಗೌಡ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications