ನಿಮ್ಮ ಡಿಬಾಸ್ ಬೇಗ ಜೈಲಿಂದ ಹೊರಗೆ ಬರ್ತಾರೆ: ಅಭಿಮಾನಿಗಳಿಗೆ ಧೈರ್ಯ ತುಂಬಿದ ವಿಜಯಲಕ್ಷ್ಮಿ ದರ್ಶನ್, ವಿಡಿಯೋ ಇಲ್ಲಿದೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎದ್ದಿರುವ ಕಾನೂನು ಸಂಕಷ್ಟಗಳ ನಡುವೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಸದ್ಯಕ್ಕಂತೂ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಇನ್ನೂ ಒಂದು ವರ್ಷದವರೆಗೆ ಅವರಿಗೆ ಜಾಮೀನು ಸಿಗುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ದರ್ಶನ್ ಕುಟುಂಬ ಹಾಗೂ ಅಭಿಮಾನಿಗಳಿಗೆ ಅವರ ಪತ್ನಿ ವಿಜಯಲಕ್ಷ್ಮಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಜೈಲಿನಲ್ಲಿ ಮದುವೆ ವಾರ್ಷಿಕೋತ್ಸವ ಆಚರಣೆ
ನಿನ್ನೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ವಾರ್ಷಿಕೋತ್ಸವ ಇತ್ತು. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಮಗ ವಿನೀಶ್ ಜೊತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿದ್ದರು. ಜೈಲಿನಲ್ಲೇ ಪತಿಯನ್ನು ಭೇಟಿಯಾಗಿ, ವಾರ್ಷಿಕೋತ್ಸವದ ಶುಭಾಶಯ ಕೋರಿ ಕೆಲಕಾಲ ಮಾತುಕತೆ ನಡೆಸಿ ಖುದ್ದಾಗಿ ಮಾತನಾಡಿ ಬಂದರು.

ಮಾರ್ಗಮಧ್ಯೆ ಭಾವುಕರಾದ ಅಭಿಮಾನಿಗಳು
ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿ ವಿಜಯಲಕ್ಷ್ಮಿ ಮತ್ತು ವಿನೀಶ್ ಕಾರಿನಲ್ಲಿ ವಾಪಸ್ ಮನೆಗೆ ಮರಳುತ್ತಿದ್ದರು. ಈ ವಿಷಯ ತಿಳಿದ ದರ್ಶನ್ ಅಭಿಮಾನಿಗಳು ಮಾರ್ಗಮಧ್ಯೆ ಅವರ ಕಾರನ್ನು ತಡೆದು, ವಿಜಯಲಕ್ಷ್ಮಿ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದರು. ನೆಚ್ಚಿನ ನಟ ಡಿಬಾಸ್ ಜೈಲಿನಲ್ಲಿರುವುದನ್ನು ನೆನೆದು ತೀವ್ರ ಭಾವುಕರಾದರು. ಅಲ್ಲದೆ, ದರ್ಶನ್ ಅವರ ವಿಶೇಷ ಫೋಟೋ ಫ್ರೇಮ್ ಒಂದನ್ನು ವಿಜಯಲಕ್ಷ್ಮಿ ಅವರಿಗೆ ಉಡುಗೊರೆಯಾಗಿ ನೀಡಿದರು.
ಧೈರ್ಯವಾಗಿರಿ ಎಂದ ವಿಜಯಲಕ್ಷ್ಮಿ
ಅಭಿಮಾನಿಗಳ ಪ್ರೀತಿ ಮತ್ತು ಕಣ್ಣೀರನ್ನು ಕಂಡ ವಿಜಯಲಕ್ಷ್ಮಿ ಅವರು ಕಾರಿನ ಗಾಜು ಇಳಿಸಿ ಅತ್ಯಂತ ಪ್ರೀತಿಯಿಂದ ಆ ಫೋಟೋ ಫ್ರೇಮ್ ಅನ್ನು ಸ್ವೀಕರಿಸಿದರು. ಬಳಿಕ ಕಂಗಾಲಾಗಿದ್ದ ಅಭಿಮಾನಿಗಳಿಗೆ ಧೈರ್ಯ ತುಂಬುತ್ತಾ, "ಯಾರೂ ಬೇಸರ ಮಾಡಿಕೊಳ್ಳಬೇಡಿ, ಧೈರ್ಯವಾಗಿರಿ. ನಿಮ್ಮ ಡಿಬಾಸ್ ಖಂಡಿತವಾಗಿಯೂ ಬೇಗ ಜೈಲಿಂದ ಹೊರಗೆ ಬಂದೇ ಬರ್ತಾರೆ" ಎಂದು ಭರವಸೆ ನೀಡಿದರು.
ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಅವರು ಸಾಂತ್ವನ ಹೇಳುತ್ತಿರುವ ಈ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಚ್ಚಿನ ನಟನ ಬಿಡುಗಡೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಮಾತುಗಳು ದೊಡ್ಡ ಆನೆಬಲ ನೀಡಿದೆ.
ಜೈಲಿನಲ್ಲಿ ನಡೆದಿದ್ದೇನು?
ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರನ್ನು ಭೇಟಿಯಾದಾಗ ಜೈಲಿನ ಆವರಣದಲ್ಲಿ ಭಾವುಕ ಸನ್ನಿವೇಶ ಸೃಷ್ಟಿಯಾಗಿತ್ತು. ಬಹಳ ದಿನಗಳ ನಂತರ ಕುಟುಂಬಸ್ಥರನ್ನು ಹತ್ತಿರದಿಂದ ಕಂಡ ನಟ ದರ್ಶನ್ ಕೊಂಚ ಭಾವುಕರಾದರು ಎನ್ನಲಾಗಿದೆ. ಭೇಟಿಯ ವೇಳೆ ಪತ್ನಿ ಮತ್ತು ಮಗನಿಗೆ ಧೈರ್ಯ ತುಂಬಿದ ದರ್ಶನ್, ಧೈರ್ಯವಾಗಿರಿ. ನಾನು ಜೈಲಿನಲ್ಲಿ ಆರಾಮವಾಗಿಯೇ ಇದ್ದೇನೆ. ನಿಮ್ಮಿಬ್ಬರನ್ನು ಇಷ್ಟು ಹತ್ತಿರದಿಂದ ನೋಡಿ ಮಾತನಾಡಿಸಿದ್ದಕ್ಕೆ ನನ್ನ ಮನಸ್ಸು ಹಗುರವಾಯಿತು ಎಂದು ಹೇಳಿದ್ದಾಗಿ ತಿಳಿದುಬಂದಿದೆ.













Click it and Unblock the Notifications