ನಟ ದರ್ಶನ್ಗೆ ಇಂದು ಜಾಮೀನು ಸಿಗೋದು ಇದರಿಂದ ಮಾತ್ರ..!
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಕೇಸ್ನಲ್ಲಿ ಜಾಮೀನು ಕೋರಿ ನಟ ದರ್ಶನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಈಗಾಗಲೇ ವಿಚಾರಣೆ ಪೂರ್ಣಗೊಂಡಿದೆ. ಹಾಗಾಗಿ ಇಂದು ಕೋರ್ಟ್ ಆದೇಶ ಪ್ರಕಟಿಸಲಿದೆ.
ನಟ ದರ್ಶನ್ ಅವರಿಗೆ ಜಾಮೀನು ಸಿಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದ್ದು, ಜೈಲು ಅಥವಾ ಬೇಲು ಎನ್ನುವ ಸುಳಿಯಲ್ಲಿ ದರ್ಶನ್ ಬಂದು ನಿಂತಿದ್ದಾರೆ. ಕಳೆದ ವಾರ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಎಚ್ ಕೋರ್ಟ್ ಪೂರ್ಣಗೊಳಿಸಿತ್ತು.

ಕಳೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು ಮಾಡಿರುವ ವಾದವು ಜಾಮೀನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಳೆದ ವಿಚಾರಣೆ ನಡೆಸಿದ ಕೋರ್ಟ್, ಸೋಮವಾರ ಆದೇಶ ಪ್ರಕಟಿಸುವುದಾಗಿ ಹೇಳಿತ್ತು. ಹಾಗಾಗಿ ಇಷ್ಟು ತಿಂಗಳ ಬಳಿಕ ದರ್ಶನ್ ಜಾಮೀನು ಪಡೆದು ಹೊರಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಕೇಸ್ನಲ್ಲಿ ದರ್ಶನ್ ಆಪ್ತರಾದ ಪವಿತ್ರಾ ಗೌಡ, ರವಿಶಂಕರ್, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಅವರ ಜಾಮೀನು ಅರ್ಜಿಗಳ ವಿಚಾರಣೆ ಕೂಡ ನಡೆದಿದ್ದು, ಇವುಗಳ ಆದೇಶವೂ ಇಂದೇ ಹೊರಬೀಳಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್, ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರನ್ನು ಜೂನ್ 11ರಂದು ಪೊಲೀಸರು ಮೈಸೂರಿನಿಂದ ಬಂಧಿಸಿ ಕರೆತಂದಿದ್ದರು. ಮೊದಲಿಗೆ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಇದ್ದರು. ಬಳಿಕ ಅಲ್ಲಿ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗಿದೆ ಎನ್ನುವ ಫೋಟೋವೊಂದು ಹರಿದಾಡಿದ ಕಾರಣ, ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಈ ಮಧ್ಯೆ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯು ಹಲವು ಬಾರಿ ನಡೆದು, ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾಗಿತ್ತು. ಅಂತೂ ವಿಚಾರಣೆ ಅಂತಿಮ ಹಂತ ತಲುಪಿದ್ದು, ದರ್ಶನ್ ಅವರು ಜಾಮೀನಿನ ಮೇಲೆ ಹೊರಬರುತ್ತಾರಾ? ಅಥವಾ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಪಡುತ್ತಾರಾ? ಎನ್ನುವುದು ಇಂದು ನಿರ್ಧಾರವಾಗಲಿದೆ.
ಬೆನ್ನುನೋವು ಪ್ಲಸ್ ಪಾಯಿಂಟ್: ಸದ್ಯ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ಇತ್ತೀಚಿಗೆ ಬೆನ್ನುನೋವಿನ ಸಮಸ್ಯೆಯಿಂದಲೂ ತೀವ್ರವಾಗಿ ಬಳಲುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ವೈದ್ಯರು ತಪಾಸಣೆಗೆ ಒಳಪಡುವಂತೆ ಸೂಚನೆ ನೀಡಿದ್ದರೂ, ದರ್ಶನ್ ನಿರಾಕರಿಸಿದ್ದಾರೆ. ನಾನು ಬೆಂಗಳೂರಿನಲ್ಲಿ ಮಾತ್ರವೇ ಚಿಕಿತ್ಸೆ ಪಡೆಯುತ್ತೇನೆ ಎಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಇಂದು ವಿಚಾರಣೆಯಲ್ಲಿ ದರ್ಶನ್ ಅವರಿಗೆ ಜಾಮೀನು ಸಿಗದಿದ್ದರೆ, ಬೆನ್ನು ನೋವಿನ ಸಮಸ್ಯೆ ಪ್ರಸ್ತಾಪಿಸಿ, ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಆಗುವ ಸಾಧ್ಯತೆಯೂ ಇದೆ. ಹಾಗಾಗಿ ಇಂದು ಎಲ್ಲರ ಚಿತ್ತ ಕೋರ್ಟ್ ತೀರ್ಪಿನತ್ತ ಇದೆ.
ಮತ್ತೊಂದೆಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಇಂದು ಜಾಮೀನು ಸಿಗುವುದು ಬಹುತೇಕ ಪಕ್ಕಾ ಎನ್ನುವ ಸುಳಿವು ಕೊಟ್ಟಿದ್ದಾರೆ. ಮೊನ್ನೆ ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ದರ್ಶನ್ ಹಾಕಿದ್ದ ಪೋಸ್ಟ್ ಕೂಡ ದರ್ಶನ್ ಅವರಿಗೆ ಜಾಮೀನು ಸಿಗುವುದನ್ನೇ ಸೂಚಕ ಎಂಬಂತೆ ಇತ್ತು.












Click it and Unblock the Notifications