Vishal: ನಟ ವಿಶಾಲ್ ಅನಾರೋಗ್ಯದ ವದಂತಿಗಳಿಗೆ ಕೊನೆಗೂ ಬಿತ್ತು ತೆರೆ
ತಮಿಳು ನಟ ವಿಶಾಲ್ ಅವರು ವೈರಲ್ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ವಿಶಾಲ್ ಸ್ಥಿತಿ ಕಂಡು ಬಹುತೇಕರು ಮರುಗುತ್ತಿದ್ದರೆ, ಮತ್ತೊಂದೆಡೆ ಅವರ ಬಗ್ಗೆ ಹಲವು ವದಂತಿಗಳು ಕೂಡ ಶರವೇಗದಲ್ಲಿ ಹಬ್ಬುತ್ತಿವೆ. ವಿಶಾಲ್ ಅವರ ಬಗ್ಗೆ ಕೆಲವು ವಿಚಾರಗಳು ಹರಿದಾಡುತ್ತಿದ್ದು, ಇದಕ್ಕೆ ಅವರ ಅಭಿಮಾನಿಗಳು ಹಾಗೂ ವಿಶಾಲ್ ಅವರ ಪಕ್ಷದವರು ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ.
ಖ್ಯಾತ ಗಾಯಕಿ ಸುಚಿತ್ರಾ ಅವರು ವಿಶಾಲ್ ಅವರನ್ನು ಈ ಸ್ಥಿತಿಯನ್ನು ನೋಡಲು ಬಹಳ ಸಂತೋಷವಾಗುತ್ತಿದೆ ಎಂದು ಸಂಚಲನ ಸೃಷ್ಟಿಸಿದ್ದಾರೆ. ಮತ್ತೊಂದೆಡೆ ವಿಶಾಲ್ ಮೊದಲು ದಿನಕ್ಕೆ 20 ಸಿಗರೇಟ್ ಸೇದುತ್ತಿದ್ದ ವಿಚಾರವನ್ನು ಉಲ್ಲೇಖಿಸಿ ಅವರ ಕೈ ನಡುಗುತ್ತಿರಲು ಇದೇ ಕಾರಣ ಎಂದು ಹೇಳುತ್ತಿದ್ದಾರೆ. ಇದಲ್ಲದೆ ವಿಶಾಲ್ ಅವರ ಬಗ್ಗೆ ಹಲವು ವದಂತಿಗಳು ಚಾಲ್ತಿಯಲ್ಲಿವೆ. ಇದನ್ನು ವಿಶಾಲ್ ಅವರ ಪಕ್ಷ ಕೂಡ ಖಂಡಿಸಿದೆ.

ಅಲ್ಲದೆ ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದೆ. ವಿಶಾಲ್ ಅವರ ರಾಜಕೀಯ ಪಕ್ಷ "ಅಖಿಲ ಭಾರತ ಪುರಚಿ ದಳಪತಿ ವಿಶಾಲ್ ಮಕ್ಕಳ್ ನಲ ಇಯಕ್ಕಂ" ಇಂದು ಹೇಳಿಕೆ ಬಿಡುಗಡೆ ಮಾಡಿದೆ. ಇತ್ತೀಚೆಗೆ ಹಲವಾರು ವ್ಯಕ್ತಿಗಳು ದುರುದ್ದೇಶಪೂರಿತ ಉದ್ದೇಶದಿಂದ ನಮ್ಮ ನಾಯಕ, ನಟ ಮತ್ತು ನಿರ್ಮಾಪಕ ವಿಶಾಲ್ ಬಗ್ಗೆ ಸುಳ್ಳು ಮಾಹಿತಿ ಮತ್ತು ಕಾಲ್ಪನಿಕ ಕಥೆಗಳನ್ನು ಹರಡುತ್ತಿದ್ದಾರೆ ಎಂದು ಖಂಡನೆ ವ್ಯಕ್ತಪಡಿಸಿದೆ.
ಕೆಲವರು ಅಗ್ಗದ ಪ್ರಚಾರಕ್ಕಾಗಿ ಮಾಧ್ಯಮಗಳು ಮತ್ತು ಪತ್ರಕರ್ತರಂತೆ ನಟಿಸುತ್ತಿದ್ದಾರೆ. ನಾವು ಅಂತಹ ಜನರಿಗೆ ಪ್ರತಿಕ್ರಿಯಿಸುವ ಉದ್ದೇಶ ಹೊಂದಿಲ್ಲ. ಆದರೂ ನಮ್ಮ ನಟ ವಿಶಾಲ್ ಅವರ ಬಗ್ಗೆ ಕಾಳಜಿ ತೋರಿರುವ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಜನರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ವಿಶಾಲ್ ಅಣ್ಣನ ಅಭಿಮಾನಿಗಳು ಮತ್ತು ಹಿತೈಷಿಗಳ ಬೆಂಬಲ ಮತ್ತು ಪ್ರೀತಿಗಾಗಿ ನಾವು ಚಿರಋಣಿ ಎಂದಿದೆ.

ಈಗಾಗಲೇ ವಿಶಾಲ್ ಅವರಿಗೆ ಜ್ವರ ಇರುವುದು ಅಧಿಕೃತ ವೈದ್ಯಕೀಯ ಹೇಳಿಕೆಯಲ್ಲಿ ದೃಢವಾಗಿದೆ. ಇದರ ಹೊರತಾಗಿಯೂ ಕೆಲವು ಹುಸಿ-ಪತ್ರಕರ್ತರು ಸುಳ್ಳು ಮತ್ತು ಆಧಾರರಹಿತ ಮಾಹಿತಿಯನ್ನು ಹರಡುವುದನ್ನು ಮುಂದುವರಿಸಿದ್ದಾರೆ. ಈ ವಿಚಾರದಲ್ಲಿ ಅವರು ಸತ್ಯ, ನ್ಯಾಯ ಮತ್ತು ನೀತಿಗಳನ್ನು ಕಡೆಗಣಿಸಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದಿದೆ.
ನಮ್ಮ ಗುರಿ ಯಾರನ್ನೂ ವೈಯಕ್ತಿಕವಾಗಿ ಟೀಕಿಸುವುದಲ್ಲ. ಆದರೆ ಭವಿಷ್ಯದಲ್ಲಿ ಇಂತಹ ಸುಳ್ಳು ಮಾಹಿತಿ ಮತ್ತು ಮಾನನಷ್ಟ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ವಿಶಾಲ್ ಅಣ್ಣನ ಬಗ್ಗೆ ಪ್ರೀತಿ, ಕಾಳಜಿ ವ್ಯಕ್ತಪಡಿಸಿದ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಹರಿಕೃಷ್ಣನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಹೆಚ್ಚುತ್ತಿರುವ ಆತಂಕಗಳಿಗೆ ಪ್ರತಿಕ್ರಿಯೆಯಾಗಿ, ಅಪೋಲೋ ಆಸ್ಪತ್ರೆಗಳು ವಿಶಾಲ್ ವೈರಲ್ ಜ್ವರದಿಂದ ಬಳಲುತ್ತಿದ್ದಾರೆ ಎಂದು ದೃಢೀಕರಿಸುವ ವೈದ್ಯಕೀಯ ಪ್ರಮಾಣಪತ್ರವನ್ನು ಬಿಡುಗಡೆ ಮಾಡಿತು. ವಿಶಾಲ್ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ ಮತ್ತು ಸದ್ಯಕ್ಕೆ ಯಾವುದೇ ಶ್ರಮದಾಯಕ ಚಟುವಟಿಕೆಯಿಂದ ದೂರವಿರಲು ಮತ್ತು ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮದಗಜ ರಾಜ ಸಿನಿಮಾದ ಕಾರ್ಯಕ್ರಮದಲ್ಲಿ ವಿಶಾಲ್ ಅವರು ಅಸಹಜ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ಕೈ ಬಹಳ ನಡುಗುತ್ತಿತ್ತು. ಅಲ್ಲದೆ ಮಾತನಾಡಲು ತೊದಲುತ್ತಿದ್ದರು. ಇದನ್ನು ಕಂಡು ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ವಿಶಾಲ್ ಅವರಿಗೆ ಏನಾಯ್ತು? ಎಂದು ಗಾಬರಿಯಾಗಿದ್ದರು. ಬಳಿಕ ಅವರು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ದರು. ಆಸ್ಪತ್ರೆಯವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದರು. ಅದರಲ್ಲಿ ವಿಶಾಲ್ ಅವರಿಗೆ ವೈರಲ್ ಫೀವರ್ ಇದ್ದು, ಹಲವು ದಿನಗಳ ಕಾಲ ಬೆಡ್ ರೆಸ್ಟ್ ಮಾಡಬೇಕು ಎಂದು ತಿಳಿಸಿದ್ದರು. ಇದರ ನಡುವೆಯೂ ವಿಶಾಲ್ ಬಗ್ಗೆ ಹಲವು ಗಾಳಿಸುದ್ದಿಗಳು ಹಾರಾಡುತ್ತಿವೆ.












Click it and Unblock the Notifications