Shine Shetty: ಜೀವನದ ಬಹುಮುಖ್ಯ ಅಧ್ಯಾಯಕ್ಕೆ ಗುಡ್ಬೈ ಹೇಳಿದ ಶೈನ್ ಶೆಟ್ಟಿ
ಬಿಗ್ ಬಾಸ್ ಕನ್ನಡ ಸೀಜನ್ 7ರ ವಿನ್ನರ್ ಕನ್ನಡ ಕಿರುತೆರೆ ಮತ್ತು ಹಿರಿತೆರೆ ನಟ ಶೈನ್ ಶೆಟ್ಟಿ ತಮ್ಮ ಜೀವನದ ಬಹುಮುಖ್ಯ ಅಧ್ಯಾಯವೊಂದನ್ನು ಅಂತ್ಯಗೊಳಿಸುತ್ತಿದ್ದಾರೆ. ತಮಗೆ ಜೀವನ ಕೊಟ್ಟು ಈವರೆಗೂ ಕೈ ಹಿಡಿದು ನಡೆಸಿದ ವ್ಯವಹಾರಕ್ಕೆ ಶೈನ್ ಶೆಟ್ಟಿ ಪೂರ್ಣ ವಿರಾಮ ಹಾಕಿದ್ದಾರೆ. ಇದರಿಂದ ಶೈನ್ ಶೆಟ್ಟಿ ಅವರಷ್ಟೇ ಅವರ ಅಭಿಮಾನಿಗಳಿಗೂ ಬೇಸರವಾಗಿದೆ.
ಹೌದು, ನಟನಾಗಬೇಕು ಎನ್ನುವ ಆಸೆಯಿಂದ ಹುಟ್ಟೂರು ತೊರೆದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದ ನಟ ಶೈನ್ ಶೆಟ್ಟಿ, ನಟನೆಯ ಅವಕಾಶ ಸಿಗದೇ ಇದ್ದಾಗ ಗಲ್ಲಿ ಕಿಚನ್ ಎನ್ನುವ ಫುಡ್ ಟ್ರಕ್ ಆರಂಭಿಸಿದ್ದರು. ಒಂದೆಡೆ ನಟನಾಗಿ ಶೈನ್ ಶೆಟ್ಟಿ ಬದುಕು ಕಟ್ಟಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಗಲ್ಲಿ ಕಿಚನ್ ಬೆಂಗಳೂರಿನಲ್ಲಿ ಶೈನ್ ಶೆಟ್ಟಿ ಬದುಕನ್ನು ಗಟ್ಟಿಗೊಳಿಸಿತ್ತು.

ಶೈನ್ ಶೆಟ್ಟಿ ಬೆಂಗಳೂರಿನ ಬನಶಂಕರಿಯಲ್ಲಿ ಮೊದಲು ಗಲ್ಲಿ ಕಿಚನ್ ಫುಡ್ ಟ್ರಕ್ ಆರಂಭಿಸಿದ್ದರು. ಬಳಿಕ ಶೈನ್ ಬಿಗ್ ಬಾಸ್ಗೆ ಹೋಗಿದ್ದು ಈ ಸಮಯದಲ್ಲಿ ಅವರ ತಾಯಿ ಅದನ್ನು ನಡೆಸಿಕೊಂಡು ಹೋಗುತ್ತಿದ್ದರು. ಬಿಗ್ ಬಾಸ್ ಗೆಲುವಿನ ಬಳಿಕ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಹೊಸ ಲುಕ್ನಲ್ಲಿ ಮತ್ತೊಂದು ಗಲ್ಲಿ ಕಿಚನ್ ಆರಂಭಿಸಿದ್ದರು. ಶುಚಿ-ರುಚಿಯಿಂದ ಈಗಾಗಲೇ ಜನರ ಮನಸ್ಸು ಗೆದ್ದಿರುವ ಗಲ್ಲಿ ಕಿಚನ್ ಅಧ್ಯಾಯಕ್ಕೆ ಶೈನ್ ಪೂರ್ಣ ವಿರಾಮ ಹಾಕಲು ಮುಂದಾಗಿದ್ದಾರೆ.
ಹೌದು ಶೈನ್ ಶೆಟ್ಟಿ ತಮ್ಮ ಫುಡ್ ಟ್ರಕ್ ಗಲ್ಲಿ ಕಿಚನ್ಅನ್ನು ಬೇರೆಯವರಿಗೆ ಹಸ್ತಾಂತರಿಸಿದ್ದು, ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಗಲ್ಲಿ ಕಿಚನ್ ಎಂಬ ಕನಸನ್ನು ಬೆಳಸಿದ ಎಲ್ಲರಿಗೂ, ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವನ ತೋರಿಸಿ ನಮ್ಮ ವ್ಯಕ್ತಿತ್ವನ ಎತ್ತಿ ಹಿಡಿಯುತ್ತದೆ. ನನ್ನ ಜೀವನದಲ್ಲಿ ಅದು ಗಲ್ಲಿ ಕಿಚನ್.

ಜೀವನ ಸಾಗಿಸಲು ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲಾ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದಿರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರರುಣಿ. ಆದರೆ ಬೆಳೆಯುತ್ತಾ ಬೆಳೆಸುತ್ತಾ ಮುಂದಕ್ಕೆ ಸಾಗೋದೆ ಜೀವನ ಅಲ್ವಾ. ಹೀಗಾಗಿ ಮುಂದೊಂದಿಷ್ಟು ಕೆಲಸ ಮಾಡುವುದಿದೆ. ಅದಕ್ಕಾಗಿ ಹೊಸದೊಂದು ಪ್ರಯಾಣ ಶುರು ಮಾಡಬೇಕಾಗಿದೆ. ಹಾಗಾಗಿ 6 ವರ್ಷಗಳ ಗಲ್ಲಿ ಕಿಚನ್ ಪ್ರಯಾಣಕ್ಕೆ ವಿದಾಯ ಹೇಳುವ ಸಮಯ. ವಿದಾಯ ಹೇಳೋದು ಇಲ್ಲಿ ಬರದಷ್ಟು ಸುಲಭ ಅಲ್ಲ ನಿಮಗೂ ಗೊತ್ತು ಆದರೆ ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ ಅದಕ್ಕೆ ಹೊಂದಿಕೊಂಡು ಹೋಗುವುದು ಅನಿವಾರ್ಯ.
ಗಲ್ಲಿ ಕಿಚನ್ಅನ್ನು ನನ್ನಂತೆ ಆಸಕ್ತಿ ಇರುವ ಪ್ರತಿಭೆಗೆ ಹಸ್ತಾಂತರ ಮಾಡಿದ್ದೇನೆ. ಈ ಕನಸಿಗೆ ಹೊತ್ತಿದ್ದ ಜ್ವಾಲೆ ಇನ್ನು ಮುಂದೆ ಹೊಸ ಪಾಲುದಾರನ ಕೈಯಲ್ಲಿ ಹೊಸ ರೀತಿಯಲ್ಲಿ ಮುಂದುವರಿಯಲಿದೆ. ಶ್ರದ್ಧೆ ಇಂದ ಜನರ ಪ್ರೀತಿನ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲಿ ಅಂತ ಆಶಿಸುತ್ತೇನೆ.
ತಿಂದುಂಡು ಹೊಗಳಿದ, ತಪ್ಪಿದ್ದಲ್ಲಿ ತಿದ್ದಿದ ನನ್ನೆಲ್ಲಾ ಅಭಿಮಾನಿಗಳೇ, ಭೋಜನ ಪ್ರಿಯರೇ, ಗಲ್ಲಿ ಕಿಚನ್ ಕುಟುಂಬಸ್ಥರೇ, ಮತ್ತೊಂದು ಪ್ರಯತ್ನದೊಂದಿಗೆ ಮರಳಿ ಬರುವೆ, ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಡುವೆ ಎಂದು ಶೈನ್ ಶರತ್ ಶೆಟ್ಟಿ ಹಂಚಿಕೊಂಡಿದ್ದಾರೆ.












Click it and Unblock the Notifications