'ನಾನು ಬಿಗ್ ಬಾಸ್ನಿಂದ ಬಂದ ಮೇಲೆ ಯಾರ ಮನಸ್ಥಿತಿನೂ ಸರಿ ಇರಲಿಲ್ಲ'
ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ನಟಿ ಸಾನ್ಯ ಐಯ್ಯರ್ ಬಿಗ್ ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ ಮೂಲಕ ಜನರ ಪ್ರೀತಿ ಗಳಿಸಿದ್ದ ಸಾನ್ಯ ಐಯ್ಯರ್, ಬಿಗ್ ಬಾಸ್ನಿಂದ ಬಂದ ಮೇಲೆ ಏನಾಯ್ತು? ಬಿಗ್ ಬಾಸ್ ಮನೆಯಲ್ಲಿ ತಮಗೆ ಆದ ಅನುಭವ ಏನು ಎನ್ನುವುದರ ಬಗ್ಗೆ ಸವಿವರವಾಗಿ ಮಾತನಾಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಬಿಗ್ ಬಾಸ್ ಅನುಭವ ಚೆನ್ನಾಗಿತ್ತು. ಆದರೆ ಬಿಗ್ ಬಾಸ್ನಲ್ಲಿ ಕಲಿಯುವಂತಹದ್ದು ಏನೂ ಇಲ್ಲ. ಇದು ನನ್ನ ಅಹಂಕಾರವಲ್ಲ. ನನಗೆ ಅನಿಸಿದ್ದು. ನನ್ನ ಪ್ರಕಾರ ಬಿಗ್ ಬಾಸ್ ಅಂದರೆ ಮೂರು ತಿಂಗಳ ಅನುಭವವನ್ನು ಒಂದು ಪ್ಯಾಕೇಜ್ ರೀತಿ ತೋರಿಸುವುದು. ಮೂರು ತಿಂಗಳ ಅನುಭವ ಬೇಗ ಬೇಗ ಆಗಿ ಹೋಗಿ ಬಿಡುತ್ತದೆ ಅಷ್ಟೇ. ಅದಾಗಿ ಮುಗಿದು ಹೋಗುತ್ತದೆ. ಒಬ್ಬ ಸ್ಪರ್ಧಿಯಾಗಿ ನಿಮ್ಮ ಹೈಪ್ ಮುಂದಿನ ಸೀಸನ್ ಬರುವವರೆಗೂ ಇರುತ್ತದೆ'.

'ಮುಂದಿನ ಸೀಸನ್ ಬರುವರೆಗೂ ನಿಮ್ಮ ಕೆಲಸ ಕಾರ್ಯ ಏನಿರುತ್ತದೆ ಅದನ್ನು ಮಾಡಿಕೊಳ್ಳಬೇಕು. ನಿಮ್ಮನ್ನು ನೀವು ಎಷ್ಟು ಪ್ರಮೋಟ್ ಮಾಡಿಕೊಳ್ಳಬೇಕು ಅಷ್ಟು ಮಾಡಿಕೊಳ್ಳಬೇಕು. ಅದಾದ ಮೇಲೆ ನೀವು ಏನೇ ಮಾಡಿದರೂ ಅದು ನಿಮ್ಮ ಶ್ರಮ. ಅಲ್ಲಿಯವರೆಗೂ ನಿಮಗೆ ಬಿಗ್ ಬಾಸ್ನಿಂದ ಬಂದ ಖ್ಯಾತಿ ಇರುತ್ತದೆ. ಜನ ನಿಮಗೆ ಒಂದು ಪಟ್ಟ ಒಂದು ಸ್ಥಾನ ಕೊಟ್ಟಿರುತ್ತಾರೆ. ಅದನ್ನು ನೀವು ಕಾಪಾಡಿಕೊಳ್ಳಬೇಕು. ಅದಾದ ಮೇಲೆ ನಿಮ್ಮ ಹೆಸರಿನ ಮೇಲೆ ನೀವು ಸೊನ್ನೆಯಿಂದ ಮತ್ತೆ ಕೆಲಸ ಮಾಡಲೇಬೇಕು' ಎಂದರು.
ರೂಪೇಶ್ ಶೆಟ್ಟಿ ಜೊತೆಗಿನ ಗಾಸಿಪ್ ಬಗ್ಗೆ ಮಾತನಾಡಿದ ಅವರು, ಬಿಗ್ ಬಾಸ್ನಲ್ಲಿ ಸಿಕ್ಕ ರೂಪೇಶ್ ಶೆಟ್ಟಿ ನನಗೆ ತುಂಬಾ ಒಳ್ಳೆಯ ಸ್ನೇಹಿತ. ಇದನ್ನು ಸಾವಿರ ಸಲ ಹೇಳಿದ್ದೇನೆ. ಇವತ್ತಿಗೂ ನನಗೆ ರೂಪೇಶ್ ಒಳ್ಳೆಯ ಸ್ನೇಹಿತ. ನನ್ನ ಪರ ಅವನು ನಿಂತುಕೊಂಡಿದ್ದ, ಅವನ ಪರ ನಾನು ನಿಂತುಕೊಂಡಿದ್ದೆ. ಅದನ್ನು ಮೀರಿ ಆ ಮನೆಯಲ್ಲಿ ಒಬ್ಬ ಒಳ್ಳೆಯ ಸ್ನೇಹಿತ ಇರುವುದು ಮುಖ್ಯವಾಗಿರುತ್ತದೆ. ಅಲ್ಲಿಗೆ ಬರುವವರು ಒಂದೇ ಕಪ್ ಗೆಲ್ಲಬೇಕು, ಇಲ್ಲ ಹೆಸರು ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡೇ ಬಂದಿರುತ್ತಾರೆ. ಆ ಮಧ್ಯೆದಲ್ಲಿ ನೈಜತೆ ಒಬ್ಬರಲ್ಲಿ ಕಂಡಾಗ ಅವರನ್ನು ಕಾಪಾಡಿಕೊಳ್ಳಬೇಕಾಗುತ್ತದೆ' ಎಂದರು.
'ನಾನು ಮಾನಸಿಕವಾಗಿ ಏನೂ ತಯಾರಿ ಮಾಡಿಕೊಳ್ಳದೇ ಆ ಮನೆಗೆ ಹೋದೆ. ಒಂದಿಷ್ಟು ವರ್ಷಗಳಿಂದ ಬಿಗ್ ಬಾಸ್ ನೋಡಿಕೊಂಡು ಬಂದಿದ್ದೆ. ಮೊದಲು ನಾನೇ ಟಿವಿ ಮುಂದೆ ಕೂತು ಕಮೆಂಟ್ ಮಾಡುತ್ತಿದ್ದೆ. ಆದರೆ ಅಲ್ಲಿಗೆ ಹೋದ ಮೇಲೆ ಅದೇ ವಿಭಿನ್ನ ಅನುಭವ. ಬಿಗ್ ಬಾಸ್ ಮನೆಯಲ್ಲಿ ಕಷ್ಟ ಅಂದರೆ ಅಸಮಾಧಾನ ಬೇಗ ಆಗುತ್ತದೆ. ಇನ್ನೊಂದು ಏನು ಅಂದರೆ ನೀವು ನೂರು ಮಾಡಿರುತ್ತೀರಾ ಅವರು ಎರಡು ತೋರಿಸುತ್ತಾರೆ ಅಷ್ಟೇ. ಅಲ್ಲಿದಾಗ ಹೊರಗಿನ ಪ್ರಪಂಚದ ಬಗ್ಗೆ ಏನೂ ಅರಿವೇ ಇರುವುದಿಲ್ಲ. ಸುದೀಪ್ ಸರ್ ಬಂದು ವೀಕೆಂಡ್ನಲ್ಲಿ ಹೇಳಿದರೆ ಮಾತ್ರ ಗೊತ್ತಾಗುವುದು. ಅದು ಅವರು ಕೂಡ ಸೀದಾ ಸೀದಾ ಹೇಳುವುದಿಲ್ಲ' ಎಂದು ಹೇಳಿದರು.
ಇನ್ನು ಬಿಗ್ ಬಾಸ್ ಮುಗಿದ ಬಳಿಕ ಎದುರಿಸಿದ ಸಂದರ್ಭಗಳ ಬಗ್ಗೆ ಮಾತನಾಡಿದ ಸಾನ್ಯ ಐಯ್ಯರ್, 'ನಾನು ಬಿಗ್ ಬಾಸ್ನಿಂದ ಬಂದ ಮೇಲೆ ಮನೆಯಲ್ಲಿ ಯಾರ ಮನಸ್ಥಿತಿನೂ ಸರಿ ಇರಲಿಲ್ಲ. ಎಂಟು ವರ್ಷಗಳ ಬಳಿಕ ಮತ್ತೆ ನಾನು ಟಿವಿಗೆ ವಾಪಸ್ ಆಗಿದ್ದೆ. ಹೀಗಾಗಿ ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಒತ್ತಡ ಆಯ್ತು. ನನ್ನ ಸುತ್ತಲಿನ ಎಲ್ಲರಿಗೂ ಮಾನಸಿಕ ಒತ್ತಡ ಆಯ್ತು. ಅಮ್ಮ ಡಿಪ್ರೆಷನ್ಗೆ ಹೋಗಿದ್ದರು. ಹೀಗಾಗಿ ಕಾಮಾಕ್ಯ ದೇವಾಲಯಕ್ಕೆ ಹೋದೆವು. ಬಿಗ್ ಬಾಸ್ ಅಧ್ಯಾಯ ಮುಗಿದ ಬಳಿಕ ನನ್ನ ಜೀವನದಲ್ಲಿ ಕಾಮಾಕ್ಯ ದೇವಾಲಯ ಅಧ್ಯಾಯ ಆರಂಭವಾಯಿತು' ಎಂದರು.












Click it and Unblock the Notifications